ಬೀಳ್ದ ಕುಸುಮ

ಆವದೇವನ ಬನವೋ! ದೇವದೇವನ
ಬನವೋ! ದೇವನಾಡಿದ ಬನವೋ! ಮತ್ತೆ
ದೇವಾನುದೇವತೆಗಳೆಲ್ಲ ಕೂಡಿದ
ಬನವೋ! ಇದು ಇಂದ್ರವನ! ಸಗ್ಗವನ!
ಆವುದಾದರು ಇರಲಿ; ನಾನಿರ್ಪ
ಒನವಿದೇಂ ದಿವ್ಯ ಬನವೋ!
ಪೂರ್ವಜನ್ಮದ ಫಲವೋ! ಪುಣ್ಯ
ಪೆಚ್ಚಿದ ಫಲವೋ! ದೇವನೊಲುಮೆಯ
ಫಲವೋ! ಏನಿರ್ದೊಡೇನಿಂದು
ಸುಪ್ರಭಾತದ ಸಮಯ! ಏವೇಳ್ವೆ
ಬನಸಿರಿಯನೆಡೆವಿಡದಲೀಕ್ಷಿಸುವ
ಕಂಗಳಿವು ನಿಜ ಧನ್ಯ! ಧನ್ಯ!!

ಬನದಸುತ್ತಲು ಮತ್ತೆ ಬೆಟ್ಟಗಳು!
ಬೆಟ್ಟದೊಳು ಅಲ್ನೋಡು ದಿವ್ಯ ಬೆಟ್ಟ!
ಹಿಂಜಿದರಳೆಯಬೆಟ್ಟ! ಹಿಮದಬೆಟ್ಟ!
ಮುಗಿಲರಸಿಯನ್ನೊಮ್ಮೆ ಮುದ್ದಿಡುವಬೆಟ್ಟ!
ಆರವರು? ಬೆಟ್ಟವಂ ಅಡರಿಹರು?
ಅಡರಿ ಇಳಿಯುತಲಿಹರು ಇತ್ತ ಕಡೆ
ಮೇಲುನಡಿಗೆಯಿಂ ಬರುತಿಹರು. ಓ, ನನ್ನ
ಗಂಗೆ, ಯಮುನೆಯರು! ಸಂಚರಿಸಿ ಅಲ್ಲಲ್ಲಿ
ಏವೇಳ್ವರೇನೊ, ಎಂತೊ, ಮನೆಗಂತು
ಬರಲಿ. ಅಯ್ಯೊ, ಏಂ ಪ್ರಮಾದವನರಿಯೆ
ಸಾಗರದಿ ಧುಮುಕಿದರು ಎಂದೇಳ್ವರೋ!
ಇದನೋಡು ಇತ್ತಲೂ ಸಮದೃಶ್ಯ!
ಭೀಮೆ, ಕೃಷ್ಣೆ, ಕಾವೇರಿಯರು ಅತ್ತಿಂದ
ಬಂದೊಡನೆ ಸಾಗರದಿ ಧುಮುಕಿದರು ಸುಳಿವಿಲ್ಲ.
ವಿಧವೆಯರೆ ಅವರೆಲ್ಲರೂ? ಅಲ್ಲಲ್ಲ!
ಅವರ ನಲ್ಲರ ನೆನಹು ನನಗಿರ್ಪುದೈ!
ಏಂ ಕಾರಣವೊ ನಾನರಿಯೆನಲ್ಲಾ!
ಅಯ್ಯೋ, ನಾನೆಂಥ ಜಾಣೆ? ಎನಗಿರ್ಪ
ಉದಯದಾನಂದದಲಿ ಕಾಳತಾಪವ ಮತ್ತೆ
ಬೆರೆಸಲೆತ್ನಿಸುತಿರ್ಪೆ, ಹುಚ್ಚು! ಹುಚ್ಚು!
ಸುಪ್ರಭಾತದಲೇಳ್ದು, ಸೃಷ್ಟಿ ಸೊಬಗಂ ಕಾಣ್ದು
ಅವರೆಲ್ಲರೂ ಜಲಕ್ರೀಡೆಯಾಡುತಿರ್ಪರ್,

ಇದು ನೋಡು, ಇಲ್ಲಿರ್ಪ ಸೋಜಿಗದ ಕಾರಂಜಿ!
ಪೂರ್ವಜರ ಕೌಶಲ್ಯ ಹೊರಹೊಮ್ಮುತಿದೆ! ಮತ್ತೆ
ಪುಟಿಯುತಿದೆ! ಎಂಪೋಲ್ವರಾರೆಂದೇನೊ
ಅಂದಂದು, ಜಿಗಿಜಿಗಿದು, ಪುಟಿಯುತಿದೆ!
ಇಂದೇಕೊ ಕಾರಂಜಿ ಜಲದಿ ತುಂಬಿಲ್ಲವೇನೋ!
ಜಲವಿರ್ದರೂ ಪುಟಿವ ಶಕ್ತಿಯಿಲ್ಲೇನೋ!
ಶಕುತಿಯಿರುತಿರ್ದರೂ ಮಾರ್ಗವಿಲ್ಲೇನೋ!

ಇರಲಿ, ಇದುನೋಡು ಕುಸುಮಗಳ ಉದ್ಯಾನ!
ಅಲ್ಲಿ ಸೇವಂತಿಗೆಯು! ಇಲ್ಲಿ ಸಂಪಿಗೆಯು!
ಎಲ್ಲೆಲ್ಲು ಮಲ್ಲಿಗೆ ಪಾರಿಜಾತಗಳು!
ಎಲ್ಲವೂ ಎಲ್ಲರಿಗೆ ಸೌಗಂಧ ಪೂಸುತಿವೆ!
ಮಂದಮಾರುತಗಂತು ಕೇಳ್ವರಾರೊಬ್ಬರಿಲ್ಲ!
ಕುಸುಮ ಬೇಡದ ಕುವರಿಯಿರುತಿರ್ಪಳೇ?
ಮತ್ತೆ ದೇವನಿರ್ಪನೆ ಪೇಳಿ ಪೇಳಿ!
ಕೆಲರು ತಮ್ಮಯ ನಲುಮೆಗೋಸುಗ ಕುಸುಮ-
ಗಳನಾಯುತಿಹರಲ್ಲಿ! ಕೆಲರು ದೇವನಪೂಜೆ-
ದಾಯುತಿಹರದದೊ! ಕೆಲರು ತಮ್ಮಯ
ನಲ್ಲೆ ಯರಿಗಾಗಿ? ಏಂ ಕುಸುಮಗಳೋ! ಎಷ್ಟು
ಜನಕೀವವೋ! ಮೊದಲೆಷ್ಟು ಅರಳಿದವೋ!
ಮುಂದೆಷ್ಟು ಅರಳುವವೋ! ಇಂದೆಷ್ಟು ನಾನರಿಯೆ!

ಏನಿದೀ ಅನ್ಯಾಯ! ಘೋರತರ ಅನ್ಯಾಯ!!
ಈ ಬೀಳ್ದ ಕುಸುಮವಂ ಆಯ್ದರಾರೊಬ್ಬರಿಲ್ಲ.
ನನ್ನ ನಲ್ಲನೆ ಅಂದು ಎಂದೋ ಒಮ್ಮೆ
ಕೆಡಹಿದಂತೆಯೊ ಏನೊ ಭಾಸವಾಗುತಿದೆ;
ಅಥವಾ ಅವರಪ್ಪ ತಾತ ಮುತ್ತಾತ
ಕೆಡಹಿರಬಹುದು. ಆದೊಡೇನದನೊಮ್ಮೆ
ಕಣ್ಣೆರೆದು ನೋಡದಿರ್ಪುದೆ ನಲ್ಲ?
ಅದದೊ ನನ್ನಯ ನಲ್ಲ ನಿದ್ರೆಯಿಂದೆಚ್ಚತ್ತು
ಈಗೀಗ ಕಣ್ಣೊರಿಸಿಕೊಳ್ಳುತ್ತ ಮೆಲ್ಲನೆ
ಆಗಮಿಸುತ್ತಿರುವಂತೆ ತೋರುತಿದೆ!

ಕಲ್ಲುದೇವನ ಕಂಠ ಪೂಮಾಲೆಯಿಂ
ಶೋಭಿಸುತಿರ್ತಾದೋಡೇಂ ಬೀಳ್ದ ಕುಸುಮಕೆ
ಆ ಮಾಲೆಯೋಳ್ ತಾಣವಿರಲಿಲ್ಲ. ಮತ್ತೊಮ್ಮೆ
ಕೆರೆಗೆ ನಾನೈತಂದೆ. ಕುವರಿಯರ ಮುಡಿಗಳಲಿ
ಮಲ್ಲಿಗೆಗಳೆಷ್ಟಿರ್ದೊಡೇಂ ಬೀಳ್ದ ಕುಸುಮ
ಆರೊಬ್ಬರಲ್ಲಿಯು ಕಾಣೆ! ಎಲ್ಲಿಯೂ ಕಾಣೆ ಕಾಣೆ!

ನಾನಾರೆ ಮುಡಿಯಲಾ? ನನ್ನ ನಲ್ಲನ ಭಯವು!
ಕೇಳದಲೆ ಮುಡಿದಳೆಂದೆಲ್ಲಿ ಮುನಿಯುವನೋ!
ಬಿಟ್ಟುಬಿಡಲಾ? ಮತ್ತೆ ಮರುಕ ಬಪ್ಪುದು!
ಬರಲಿ ಎನ್ನೊಡೆಯ ಕೇಳಿಯೆ ಬಿಡುವೆ!
`ಬತ್ತಿಹುದು ಬಾಡಿಹುದು ಬಿಸುಡೆ’ ನ್ನುವನು!
`ಅದಕೆಲ್ಲ ಕಾರಣರು ನೀವೆಂ’ ದು ನಾನುಡಿವೆ.

ಸ್ವಾಗತವು ಸ್ವಾಗತವು ಓ, ನನ್ನನಲ್ಲ!
ಬೀಳ್ದ ಕುಸುಮವನ್ನಿಲ್ಲಿ ಬಿಟ್ಟು ಬಿಡುವುದೇ?
ಆವಕರ್ಮದ ಫಲವೋ! ಏಂ ನಿಮ್ಮ ಛಲವೋ!
ಬೀಳ್ದ ಕುಸುಮವೆ ಇರಲಿ; ಏಳ್ದುದಿರಲಿ;
ಏನಾದೊಡೇಂ ಕುಸುಮ! ಕುಸುಮ!
ನನ್ನೊಡೆಯ, ನನ್ನೊಡೆಯ, ಓ ನನ್ನ ಒಡೆಯ
ಮೆಯ್ಯೊಳಿಹ ಬಿಸಿರಕ್ತ ತಣ್ಣಗಾಗುವ ಮುನ್ನ,

ಶಕುತಿಯದು ಕುಗ್ಗಿ ಕುಂದದ ಮುನ್ನ,
ಕಪ್ಪಿನೀ ಕೇಶಗಳು ಬಿಳಿಯವಾಗುವ ಮುನ್ನ
ನನ್ನೊಡೆಯ, ನನ್ನೊಡೆಯ, ಓ ನನ್ನ ಒಡೆಯ
ಬೀಳ್ದ ಕುಸುಮವನೆನ್ನ ಮುಡಿಯೊಳಿಡು!
ಬಿಟ್ಟ ಹೊಲೆಯರನೊಮ್ಮೆ ಮುಟ್ಟಿ ಬಿಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಳಿದ ಸಂಜೆ
Next post ವಚನ ವಿಚಾರ – ಯಾರೂ ಇಲ್ಲವೆಂದು

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys