Home / ಕವನ / ಕವಿತೆ / ಬೆಳೆಯಗೊಡಲಿಲ್ಲವೇನಮ್ಮ?

ಬೆಳೆಯಗೊಡಲಿಲ್ಲವೇನಮ್ಮ?

ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ?
ಬೆಳೆಯ ಗೊಡಲಿಲ್ಲವೇ ಅವರು ನಮ್ಮ-
ನಾವಿಂದು ಇರುವ ಹಾಗೆ?

ಇರಲಿಲ್ಲವೇ ಲಕ್ಷ್ಮೀಬಾಯಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ದೇಶಕ್ಕಾಗಿ ಜೀವತೆತ್ತು
ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳಯಲಿಲ್ಲವೇ ಅವಳು ಕಟ್ಟಿಕೊಂಡವನ ಬಿಟ್ಟು
ಉಳ್ಳಾಲದ ಉಕ್ಕಿನ ರಾಣಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಕಟ್ಟಿಕೊಂಡವನ ತೊರೆದು
ಅಕ್ಕ ಮಹಾದೇವಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಇಂದಿರಾ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಗಂಡಸರಲ್ಲಿ ಗಂಡಸಾಗಿ
ಯುಗಕ್ಕೊಬ್ಬಳೇ ರಾಜಕಾರಣಿಯಾಗಿ
ನಮಗಿಂತ ಭಿನ್ನವಾಗಿ?

ಬೆಳೆಯಲಿಲ್ಲವೇ ಇವರೆಲ್ಲ
ನಮ್ಮ ಹಾಗಿದ್ದೂ ನಮಗಿಂತ ಭಿನ್ನವಾಗಿ
ಹೆಣ್ಣಾಗಿದ್ದೂ ಗಂಡಿನಂತಾಗಿ
ಚರಿತ್ರೆಯ ಪುಟಗಳಲ್ಲಿ ದಾಖಲಾಗಿ?

ಮತ್ತೇಕೆ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ,
ಬೆಳೆಯ ಗೊಡಲಿಲ್ಲವೇ ಅವರು, ನಮ್
ನಾವಿಂದು ಇರುವಹಾಗೆ?

ಗರ್ಭದೊಳಗೆ ಆಗ ತಾನೇ ಮೊಳಕೆಯೊಡೆದ
ಕುಡಿ ಹೆಣ್ಣೆಂದು ಭ್ರೂಣ ಹತ್ಯೆಗೆ ಒಪ್ಪುವವರು ನಾವು;
ಹೆತ್ತ ಮಗು ಹೆಣ್ಣೆಂದು ಜರಿಯುವವರು ನಾವು;
ಬಂದ ಹೆಣ್ಣು ವರದಕ್ಷಿಣೆ ತರಲಿಲ್ಲವೆಂದು
ಸುಟ್ಟು ಹಾಕಲು ಸಹಕರಿಸುವವರು ನಾವು;
ಒಂಟಿ ಹೆಣ್ಣು ತನಗಾಗಿ ಬದುಕುತ್ತಿರುವಾಗ
ಅವಳ ಚಾರಿತ್ರ್ಯ ವಧೆ ಮಾಡುವವರು ನಾವು;
ಜಾಹೀರಾತಿಗೆಂದು ಮೈ ಚಳಿ ಬಿಟ್ಟು
ಎಲ್ಲ ತೆರೆದು ಬರಿದಾಗಿ ನಿಲ್ಲುವವರು ನಾವು;
ಬೆಳೆಯ ಗೊಡಲಿಲ್ಲವೇ ಅವರು, ನಮ್ಮ
ನಮಗೆ ಬೇಕೆನಿಸಿದ ಹಾಗೆ?

ಈಗ ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ
ಬೆಳೆಯಗೊಡಲಿಲ್ಲವೇ ಅವರು, ನಮ್ಮ-
ನಾವಿಂದು ಇರುವ ಹಾಗೆ?

ನಾವೇಕೆ ನಮ್ಮತನವ ಕಾಯ್ದು ಕೊಳ್ಳಲಿಲ್ಲ?
ನಾವೇಕೆ ನಮ್ಮ ಶೋಷಿಸುವವರ ಪ್ರತಿಭಟಿಸಲಿಲ್ಲ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...