Home / ಕವನ / ಕವಿತೆ / ಸಾಮಾಜಿಕ ನ್ಯಾಯ

ಸಾಮಾಜಿಕ ನ್ಯಾಯ

ನನ್ನ ಹರಿದ ಅಂಗಿಯ ಮಧ್ಯದ
ತುಂಡು ಬಟ್ಟೆಯನ್ನೇ ತೆಗೆದು ಅವ್ವ
ಹೊಲಿದಳು ನನಗೊಂದು ನಮಾಜಿನ ಟೋಪಿ
ನನ್ನ ಬಣ್ಣಗೆಟ್ಟ ಟೊಪ್ಪಿಗೆ ನೋಡಿ
ಚಂದದ ಕಸೂತಿ ಹೆಣೆದ ಟೊಪ್ಪಿಗೆ
ಜಂಭದಿಂದ ಭಿಮ್ಮನೆ ಬೀಗುತ್ತ
ಅಹಮ್ಮಿನ ನೋಟ ಬೀರಿ
ನನ್ನವ್ವನ ಬಡತನವನು
ಅಣಕಿಸಿ ನಗುತ್ತಿದೆ ನೋಡು!

ಬೀಡಿ ಕಟ್ಟುವ ನನ್ನವ್ವನ
ನಾಜೂಕು ಎಸಳು ಬೆರಳುಗಳು
ಮೀನಾರಿನ ಅಜಾಹ್‌ನ ಕರೆಗೆ
ತಲೆಮೇಲೆ ಸೆರೆಗೆಳೆದು
ಹರಿದ ಬಟ್ಟೆಯನ್ನೇ ಹಾಸಿ
ನಮಾಜು ಮಡುತ್ತಿರುವುದ ಕಂಡು
ನೆರೆಯವಳ ಬಹುಮಹಡಿ ಬಂಗಲೆಯಿಂದ
ಮಖಮಲ್ಲಿನ ಜಾನಿಮಾಜು
ಧಿಮಾಕಿನಿಂದ ನಗುತ್ತಿದೆ ನೋಡು!
ಶ್ರಮಜೀವಿ ನನ್ನಪ್ಪ
ದಿನವೆಲ್ಲ ರಿಕ್ಷಾ ಹೊಡೆದು
ಗಳಿಸಿದ ಪುಡಿಗಾಸಿನ ಲೆಕ್ಕ
ದಣಿದ ನನ್ನವ್ವನ ಕೈಗಿಟ್ಟು
ದೈನ್ಯತೆಯ ನೋಟ ಬೀರಿ
ಕಣ್ಣೆತ್ತಿ ನೋಡಿದಾಗ
ಮಹಡಿ ಮನೆ ಸಾಹುಕಾರನ
ಕೆಂಪು ನೋಟಿನ ಕಟ್ಟುಗಳು
ನನ್ನವ್ವನ ಕೈಯಲ್ಲಿದ್ದ
ಪುಡಿಗಾಸು ನೋಡಿ
ಕಿಸಕ್ಕನೆ ನಗುತ್ತಿವೆ ನೋಡು!

ನನ್ನವ್ವನ ಹರಿದ ಸೀರೆಗೆ
ಜೋಡಿಸಿದ ನೂರೆಂಟು ತೇಪೆ
ದುಡಿದು ದುಡಿದು ಸವೆದ
ನನ್ನಪ್ಪನ ಅಂಗೈ ರೇಖೆ
ಸವೆದು ಶಿಥಿಲವಾದ ಪಂಚೆ
ಹರಿದ ಬನಿಯನ್ನುಗಳ ನೋಡಿ
ಸೂಟುಬೂಟು ಪಿತಾಂಬರ
ಕಟುಕಿಯಾಡಿ ನಗುವಾಗ ವ್ಯವಸ್ಥೆಯ ಎದೆಗೆ
ಝಾಡಿಸಿ ಒದ್ದು ಕೇಳಬೇಕೆನಿಸುತ್ತದೆ
ಹೇಳು ಎಲ್ಲಿ ಬಚ್ಚಿಟ್ಟಿರುವೆ
ನಿನ್ನ ಸಾಮಾಜಿಕ ನ್ಯಾಯ?
*****
ಅಜಾಹ್‌ನ – ನಮಾಜಿನ ಕರೆ

ಜಾನಿಮಾಜು – ನಮಾಜ್ ಮಾಡುವಾಗ ಕೆಳಗೆ ಹಾಸಿಕೊಳ್ಳುವ ಬಟ್ಟೆ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...