ಪ್ರಗತಿ ಅಥವಾ ದಾಸ್ಯವಿಮೋಚನೆ – ೭ನೆಯ ಖಂಡ – ಅನನ್ಯಗತಿಕತ್ವವೂ, ಸಂಕಲ್ಪಶಕ್ತಿಯೂ

ಪ್ರಗತಿ ಅಥವಾ ದಾಸ್ಯವಿಮೋಚನೆ – ೭ನೆಯ ಖಂಡ – ಅನನ್ಯಗತಿಕತ್ವವೂ, ಸಂಕಲ್ಪಶಕ್ತಿಯೂ

ಮಾಘವದ್ಯನವಮಿಯ ದಿವಸ ಸಿಂಹಗಡವನ್ನು ಹಸ್ತಗತಮಾಡಿ ಕೊಳ್ಳುವೆನೆಂದು ಶಿವಾಜಿಯ ಬಳಿಯಲ್ಲಿ ಪ್ರತಿಜ್ಞೆ ಮಾಡಿ ಹೋದ ತಾನಾಜಿಮಾಲಸುರೆ ಎಂಬ ಸರದಾರನು ಸಿಂಹಗಡದ ಕಿಲ್ಲೇದಾರನಾದ ಉದಯಭಾನುವಿನಿಂದ ಮರಣಹೊಂದಿದ ಬಳಿಕ ಗಾಬರಿಗೊಂಡು ಓಡಿಹೋಗಲುದ್ಯುಕ್ತರಾದ ಅವನ ದಂಡಿನ ಮಾವಳೆ ಜನರು ಗಡದಿಂದ ಇಳಿದು ಹೋಗಲಿಕ್ಕೆ ಒಂದೇ ಒಂದಾಗಿದ್ದ ಸಾಧನವಾದ ಹಗ್ಗವನ್ನು ಆಶ್ರಯರಜ್ಜುವನ್ನು ತಾನಾಜಿಯ ತಮ್ಮನಾದ ವೀರಶಿರೋಮಣಿ ಸೂರ್‍ಯಾಜಿಯು ಈ ಮೊದಲೆ ಕೊಯ್ದು ಚೆಲ್ಲಿರುವನೆಂಬದನ್ನು ಕೇಳಿ, ಇನ್ನು ಓಡಿಹೋಗಿ ಕಂದಕದಲ್ಲಿ ಬಿದ್ದು ಹೇಡಿಗಳಂತೆ ಪ್ರಾಣಕಳಕೊಳ್ಳುವದಕ್ಕಿಂತ ಜೀವವಿರುವವರೆಗೆ ಶಕ್ತಿಮೀರಿ ಶತ್ರುಗಳೊಡನೆ ಕಾಡಿ ಧಾರಾತೀರ್‍ಥದಲ್ಲಿ ಬಿದ್ದು ವೀರಸ್ವರ್‍ಗವನ್ನು ಹೊಂದುವದು ಶ್ರೇಯಸ್ಕರವೆಂದು ತಿಳಿದು ಅವರು ತಾನಾಜಿಯ ಮರಣದಿಂದ ಅತ್ಯಂತವಾದ ದುಃಖ-ಸಂತಾಪಗಳಿಂದ ಪೀಡಿತರಾಗಿ ಪ್ರಸಂಗದಲ್ಲಿ ತಾವು ಓಡಿಹೋಗುವ ಪ್ರಯತ್ನಮಾಡಿದ್ದಕ್ಕೆ ಬಹಳವಾಗಿ ನಾಚಿ ಯುದ್ಧಮಾಡಿದ್ದು ಅಪೂರ್‍ವವಾಯಿತು. ಕಡೆಗೆ ಕಿಲ್ಲೆಯು ಮರಾಟರ ಕೈಸೇರಿ ತಾನಾಜಿಯ ಪ್ರತಿಜ್ಞೆಯು ಈಡೇರಿತು! ಇದು ಯಾತರ ಫಲವೆಂದು ನಾವು ಭಾವಿಸಬೇಕು? ತಾನಾಜಿಯ ಪ್ರತಿಜ್ಞೆಯ ಫಲವೋ, ಶಿವಾಜಿಯ ಪುಣ್ಯವೋ, ಸೂರ್‍ಯಾಜಿಯ ಸಮಯಾನುವರ್‍ತನದ ಫಲವೋ, ಅಥವಾ ಮಾವಳರ ಶೌರ್‍ಯದ ಫಲವೋ? ಸಿಂಹ ಗಡವು ಕೈಸೇರುವದಕ್ಕಾಗಿ ಇವೆಲ್ಲ ಸಾಧನಗಳ ಸಹಾಯವಾಗಿದ್ದರೂ ಆ ಎಲ್ಲ ಸಾಧನಗಳನ್ನು ಏಕಸಮಯಾವಚ್ಛೇದದಿಂದ ಉಪಯೋಗಕ್ಕೆ ತಂದ ಮುಖ್ಯ ಸಾಧನವು ಆಶ್ರೆಯರಜ್ಜು ಛೇದನವಾಗಿದೆ. ಸೂರ್‍ಯಾಜಿಯು ಗಡದಿಂದ ಇಳಿದು ಹೋಗುವ ಹಗ್ಗವೊಂದನ್ನು ಕೊಯ್ಯದಿದ್ದರೆ, ದುರ್‍ಗವು ಕೈಸೇರುವದೊತ್ತಟ್ಟಿಗೇ ಇರಲಿ, ಶಿವಾಜಿಯ ವಿಷಯಕ್ಕೆ ಈಗ ಉಪಲಬ್ಧವಾಗಿದ್ದ ಇತಿಹಾಸವು ಕೂಡ ಬೇರೆ ರೀತಿಯಾಗಿಯೇ ನಮಗೆ ದೊರೆಯಬಹುದಾಗಿತ್ತು. ಆಶ್ರಯ ರಜ್ಜುಛೇದನದಿಂದ ಪ್ರಗತಿಮಾರ್ಗದಲ್ಲಿ ಎಷ್ಟು ಬೇಗ ಕ್ರಾಂತಿಯಾಗುವದೆಂದು ಮೇಲಿನ ಉದಾಹರಣೆಯಿಂದ ಬಹು ಸ್ಪಷ್ಟವಾಗಿ ತಿಳಿಯಬರುವಂತಿದೆ.

ಪರಾಜಯಕ್ಕೆ ಆಸ್ಪದವೇ ಉಳಿಯಬಾರದೆಂದು, ತನ್ನ ಸೈನ್ಯವೆಲ್ಲ ಇಂಗ್ಲಂಡದ ದಡಕ್ಕೆ ಇಳಿದ ಕೂಡಲೆ ಜುಲಿಸಸೀಝರನೆಂಬ ಪ್ರಸಿದ್ಧ ಸೇನಾನಾಯಕನು ತನ್ನ ಎಲ್ಲ ಹಡಗಗಳನ್ನು ಶಿಪಾಯಿಗಳ ಸಮಕ್ಷ ಒಮ್ಮೆಲೆ ಸುಟ್ಟುಬಿಟ್ಟನು. ಇದರಂತೆ ಸದ್ಯದ ಮಹಾಯುದ್ಧದಲ್ಲಿ ಜರ್‍ಮನ್ನರೂ, ದೋಸ್ತ ರಾಷ್ಟ್ರದವರೂ ತಮ್ಮ ತಮ್ಮ ಸೈನ್ಯವು ನಿಕರದಿಂದ ಕಾಡುವದಕ್ಕಾಗಿ, ಹೊಳೆ-ಹಳ್ಳಗಳನ್ನು ದಾಟಿದ ನಂತರ ತಾವು ಕಟ್ಟಿದ ಪೂಲುಗಳನ್ನು ತಾವೇ ನಾಶಮಾಡಿ ಮುಂದಕ್ಕೆ ಸಾಗುತ್ತಿರುವರು. ಹೀಗೆ ಮಾಡವದು ಸಾಮಾನ್ಯರ ದೃಷ್ಟಿಯಿಂದ ಹಾಸ್ಯಾಸ್ಪದವಾಗಿದ್ದರೂ, ಅದರಲ್ಲಿ ಬಹಳ ಮಹತ್ವವಿರುವದೆಂದು ಪ್ರಗತಿಪರ ಮನುಷ್ಯನು ಭಾವಿಸುವನು. ನಿರ್‍ವಾಣದ ಪ್ರಸಂಗದಲ್ಲಿ ಕೂಡ ಸ್ವಲ್ಪಾದರೂ ಆಶ್ರಯವಿರುವವರೆಗೆ ಹಿಂದಕ್ಕೆ ಸರಿಯುವದು ಮನುಷ್ಯನ ಸ್ವಾಭಾವಿಕ ಪ್ರವರ್‍ತಿಯಾಗಿದೆ. ಅಶ್ರಯ ರಜ್ಜುವಿನಛೇದನವಾದ ಹೊರೆತು ಜೀವದ ಮೇಲೆ ಉದಾರನಾಗಿ ಕಾದದೆ, ಮೋಹಪರವಶನಾಗಿ ಹಿಂದೆಗೆಯ ಹತ್ತುತ್ತಾನೆ. ಖರೇ ಶೌರ್‍ಯವೂ, ನಿಜವಾದ ಪ್ರಯತ್ನವೂ, ಯೋಗ್ಯ ಸಾಹಸವೂ ಆಶ್ರಯ ರಜ್ಜು ವಿನಛೇದನವಾದ ಹೊರತು ಪ್ರಕಾಶಿತವಾಗುವದಿಲ್ಲ. ಆಶ್ರಯ ರಜ್ಜುವಿನ ಮಹತ್ವವು ತಿಳಿಯದ್ದರಿಂದಲೇ ಸದಾಶಿವರಾವ ಪೇಶವೆಯು ಪಾನಿಪತದ ಕಡೆಯ ಕಾಳಗದಲ್ಲಿ ಸೋತು ಮರಾಟರ ನಾಶಕ್ಕೆ ಕಾರಣನಾದನು.

ಒಂದು ಮಹತ್ಕಾರ್ಯವನ್ನು ಆರಂಭಿಸಿದ ಬಳಿಕ ಅದರಲ್ಲಿ ಯಶಃಪ್ರಾಪ್ತಿಯಾಗದೆ, ಮೇಲಿಂದ ಮೇಲೆ ಸಂಕಟೆಗಳುದ್‌ಭವಿಸಹತ್ತಿದರೆ ಅವನ್ನು ನೀಗಿಕೊಂಡು ಯೋಗ್ಯರೀತಿಯಿಂದ ಪ್ರಗತಿಹೊಂದುವ ಮಾರ್‍ಗವು ನಮ್ಮಲ್ಲಿಯ ಬಹುಜನರಿಗೆ ಸಿಗುವದಿಲ್ಲ. ಕಠಿಣ ಪ್ರಸಂಗದೊಳಗಿಂದ ಸಹಜವಾಗಿ ಪಾರಾಗಲಿಕ್ಕೆ ಎಲ್ಲಿಯವರೆಗೆ ನಮಗೆ ಸಾಧ್ಯವಿರುತ್ತದೋ ಅಲ್ಲಿಯವರೆಗೆ ನಾವು ಅತಿಸಾಹಸದ ಪ್ರಯತ್ನ ಮಾಡಲಿಕ್ಕೆ ಸಹಸಾ ಮುಂದುವರಿಯುವದಿಲ್ಲ. ಇದಕ್ಕೆ ಒಂದು ಸಣ್ಣ ಉದಾಹರಣೆಯನ್ನು ಕೊಡುವಾ. ಬೆಕ್ಕನ್ನು ಪ್ರತಿಬಂಧಿಸಬೇಕೆಂದು ನಾವು ಪ್ರಯತ್ನಪಡಹತ್ತಿದರೆ, ಓಡಿಹೋಗಲಿಕ್ಕೆ ಬಾಗಿಲು ಕಿಟಿಕಿ ಬೆಳಕಿಂಡಿಗಳು ಎಲ್ಲಿಯವರಗೆ ತೆರವಿರುವವೋ ಅಲ್ಲಯವರೆಗೆ ಆ ಬೆಕ್ಕು ನಮಗೆ ವಿರೋಧಮಾಡದೆ ಸಿಕ್ಕಮಾರ್ಗದಿಂದ ಬೇಗನೆ ಓಡಿಹೋಗುವದು. ಆದರೆ ಯಾವಾಗ ಓಡಿಹೋಗಲಿಕ್ಕೆ ಮಾರ್ಗವು ಸಿಗುವದಿಲ್ಲವೋ ಆವಾಗ ಆ ಕ್ಷುಲ್ಲಕ ಬೆಕ್ಕು ಕೂಡ ಹುಲಿಯಂತೆ ಉಗ್ರಸ್ವರೂಪತಾಳಿ ಗಟ್ಟಿ ಗಟ್ಟಿಯಾಗಿ ಒದರುತ್ತ ತನ್ನ ನಖಪಂಜರಗಳಿಂದ ಪ್ರತಿಬಂಧಮಾಡುವ ನಮ್ಮನ್ನು ಹೊಡೆಯ ಬಂದು ಪಾರಾಗಿ ಹೋಗುವದು. ಆಶ್ರಯರಜ್ಜುಛೇದನದಿಂದ ಜೀವದ ಹಂಗು ಇಲ್ಲದೆ ಕಾರ್ಯಸಾಧಿಸುವದಕ್ಕೂ, ಇಷ್ಟಮನೋರಧಕ್ಕಾಗಿ ಹೃದಯ ಸರ್‍ವಸ್ವವನ್ನು ಅರ್ಪಿಸುವದಕ್ಕೂ ಸಾಧನವಾಗುವದು.

ಎಷ್ಟೋ ಜನರ ಪುಗತಿಯ ಅವನತಿಗೆ ಕಾರಣವೇನಂದರೆ, ಅವರಲ್ಲಿ ಹಿಡಿದ ಕಾರ್ಯದಲ್ಲಿ ತಮಗೆ ಯಶಃಪ್ರಾಪ್ತಿಯು ಆಗಿಯೇ ತೀರುವದೆಂಬ ದೃಢರಿಶ್ಚಯವಿಲ್ಲದಿರುವದು. ನಾವು ಎಂಥ ಪ್ರಕಾರದ ಹಾಗು ಎಷ್ಟು ಪ್ರಗತಿಯನ್ನು ಹೊಂದಬೇಕೆಂದು ಬಯಸುವೆವೋ ಅಂಥ ಪ್ರಕಾರದ ಹಾಗು ಅಷ್ಟತರದ ಪ್ರಯತ್ನಗಳನ್ನು ಮಾಡಲಿಕ್ಕೆ ಮಾತ್ರ ನಾವು ಹತ್ತುವದಿಲ್ಲ. ಶಿಕ್ಷಣಪ್ರೀತ್ಯರ್ಧವಾಗಿ ಸದಾಚಾರದಿಂದ ನಡೆದು ತಪಗಟ್ಟಲೆ ಕಷ್ಟಪಡಲು ಮನಸ್ಸು ಮಾಡದಾಗುವೆವು. ಕ್ಷಣಿಕ ಹಾಗು ಕ್ಷುಲ್ಲಕವಾದ ಸುಖವನ್ನು ತ್ಯಜಿಸಲಿಕ್ಕೂ, ಶ್ರೇಷ್ಠವಾದ ಪ್ರಗತಿಯ ಸಲುವಾಗಿ ಖುಷಿಮೋಜುಗಳನ್ನು ಕಡಿಮೆ ಮಾಡಲಕ್ಕೂ ಒಪ್ಪದಾಗುವೆವು.

ಕಿರುಕಳ ವೇಳಯನ್ನು ಆತ್ಮಸುಧಾರಣೆಗಾಗಿ ಉಪಯೋಗಿಸುವದಕ್ಕೂ, ಸಾಮರ್‍ಥ್ಯವನ್ನು ಆರೋಗ್ಯಾದಿ ಸಾಧನಗಳಿಂದ ಬೆಳಿಸಿ ಸುಖಪಡಲಿಕ್ಕೂ ನಮಗೆ ಇಚ್ಚೆಯುಂಟಾಗುವದಿಲ್ಲ. ಯಾರು ಸಂಕಲ್ಪ ಶಕ್ತಿಯುಳ್ಳವರಿಲ್ಲವೋ, ದೃಢಮನಸ್ಕರಿಲ್ಲವೋ, ಅಪೂರ್‍ವತೆಯ ಗುಣಗಳುಳ್ಳವರಿಲ್ಲವೋ, ಯಾರು ಶ್ರಮವಹಿಸಲಾರರೋ, ಸ್ವಾವಲಂಬಿಗಳಲ್ಲವೋ, ಸಮಯಾನುವರ್ತಿಗಳಲ್ಲವೋ, ಪ್ರಯತ್ನವಾದಿಗಳಲ್ಲವೋ ಅವರು ಪ್ರಗತಿಹೊಂದಬಯಸುವದು ನಿರರ್‍ಥಕವು. ‘ಉದ್ಯೋಗಿನಾಂ ಪುರುಷಸಿಂಹ ಮುಪೈತಿಲಕ್ಷ್ಮೀಃ ದೈವೇನದೇವಮಿತಿಕಾಪುರುಷಾವದಂತಿ || ದೈವಂನಿಹತ್ಯಕುರು ಪೌರುಷಮಾತ್ಮಶಕ್ತ್ಯಾ| ಯತ್ನೇಕೃತೇಯದಿನಸಿದ್ಧ್ಯತಿ ಕೋತ್ರದೋಷಃ||” ಎಂಬ ಕವಿಯ ಉಕ್ತಿಯಂತೆ ಕೇವಲ ದೈವದ ಮೇಲೆ ಹವಾಲಕೊಟ್ಟು ಕೂಡ್ರುವ ನಿಂದ್ಯಪುರುಷರಾಗದೆ, ಪ್ರಯತ್ನಪೂರ್‍ವಕ ಕೆಲಸಮಾಡಿ ಅಖಂಡ ಲಕ್ಷ್ಮಿಯನ್ನೂ, ಆರೋಗ್ಯವನ್ನೂ ಹೊಂದಿ ಪ್ರಗತಿಹೊಂದಬೇಕು.

ಹೊರೆಸ ಮೆನಾರ್‍ಡನೆಂಬ ಸುಪ್ರಸಿದ್ಧ ಅಮೇರಿಕನ್‌ ಗೃಹಸ್ಥನು ಕಾಲೇಜದಲ್ಲ ಕಲಿಯುತ್ತಿದ್ದಾಗ ತನ್ನ ವಸತಿಯ ಕೋಣೆಯ ಬಾಗಿಲ ಮೇಲೆ “V”ಎಂಬ ಅಕ್ಷರವನ್ನು ಕೆಂಪುಬಣ್ಣದಿಂದ ಬರೆದು ಸ್ಪಷ್ಟವಾಗಿ ಕಾಣುವಂತೆ ಮಾಡಿದ್ದನು. ಸಂಗಡಿಗರಾದ ವಿದ್ಯಾರ್‍ಥಿಗಳಲ್ಲೊಬ್ಬರಿಗೂ ಮೆನಾರ್‍ಡನು ಬರೆದಿದ್ದ “V”ಯ ಅರ್‍ಥವು ತಿಳಿಯಲಿಲ್ಲ. ಆದ್ದರಿಂದ ಅವರು ಮೆನಾರ್‍ಡನನ್ನು ವಿಕ್ಷಿಪ್ತನೆಂದು ಭಾವಿಸಿ, ಅವನಿಗೆ “V” ಯನ್ನೇ ಸಂಬೋಧನವಾಗಿ ಉಪಯೋಗಿಸ ಹತ್ತಿದರು. ಕಾಲೇಜ ಪರೀಕ್ಷೆಯಾಗಿ ಯಾವಾಗ ಅವನು “ವ್ಹಲಿಡಿ ಕ್ಟೋರಿ‌ಅನ” (ಫೇಲೋ) ನಾಗಿ ಆರಿಸಲ್ಪಟ್ಟನೋ, ಆವಾಗ ಅವನು ಸಂಗಡಿಗರಿಂದ ವಿದ್ಯಾರ್ಥಿಗಳನ್ನು ಕುರಿತು-“ಮಿತ್ರರೇ, ನಾನು ಕೋಣೆಯ ಬಾಗಿಲ ಮೇಲೆ ಬರೆದಿಟ್ಟಿದ್ದ “V” ಈಗ ನಿಮಗೆ ತಿಳಿದಿರಬಹುದು. ಕಾಲೇಜದಲ್ಲಿ ಸೇರಿದಾಗಿನಿಂದ “ವ್ಹಲಿಡಿ ಕ್ಟೋರಿ‌ಅನ” ನಾಗಬೇಕೆಂದು ನನ್ನ ಇಚ್ಛೆಯಿತ್ತು? ಎಂದು ಹೇಳಿದನು… ಪ್ರಬಲವಾದ ಇಚ್ಛಾಶಕ್ತಿಯ ಹಾಗು ಸಂಕಲ್ಪಬಲದ ಸಾಮರ್‍ಥ್ಯದಿಂದ ಯಾವದು ತಾನೆ ಅಸಾಧ್ಯವು?

ಹೊರೆಸ ಮನಾರ್‍ಡ ಇವರ ಉದಾಹರಣೆಯಿಂದ ಪ್ರಗತಿಗಾಮಿಗೆ ಬಹಳ ಸಂಗತಿಗಳ ಬೋಧವಾಗಬಹುದಾಗಿದೆ. ತನ್ನ ಸಂಗಡಿಗರಾದ ವಿದ್ಯಾರ್‍ಥಿಗಳಲ್ಲಿ, ಎಷ್ಟೋ ಜನರು ಬುದ್ಧಿಯಿಂದಲೂ, ಪಾರಶಕ್ತಿಯಿಂದಲೂ ತನ್ನನ್ನು ತರಮೆಟ್ಟಿ ಹಾರುವರಿರುತ್ತಿರಲಿಕ್ಕೆ, ತನ್ನಂಥ ಸಾಧಾರಣ ವಿದ್ಯಾರ್ಥಿಗೆ “ವ್ಹಲಿಡಿಕ್ಟೋರಿ‌ಅನ” ಪದವಿಯು ಸಿಗುವದು ಅಸಾಧ್ಯವೆಂದು ಅವನು ತಿಳಿದಿದ್ದರೆ, “ವ್ಹಲಿಡಿಕ್ಟೋರಿ‌ಅನ”ಕ್ಕಾಗಿ ಪ್ರಯತ್ನಿಸುವ ಪೂರ್ವದಲ್ಲಿಯೇ ಅದರಲ್ಲಿ ಪರಾಜಯವು ಖಾತ್ರಿಯಿಂದಾಗುವದೆಂದು ಭಾವಿಸಿದಂತಾಗುತ್ತಿತ್ತು. ಈ ತರದ ಹೇಡಿಭಾವನೆಗಳೇ ಸಾಮರ್‍ಥ್ಯವಿ ಹೀನತೆಯ ಹಾಗು ದೃಢನಿಶ್ಚಯದ ಆಭಾವದ ದ್ಯೋತಕಗಳಾಗಿರುವವು. ಆದರೆ ಮೆನಾರ್‍ಡನು ಈ ಭಾವನೆಯುಳ್ಳವನಾಗಲಿಲ್ಲ: ಅವನು ಮೊದಲಿನಿಂದಲೇ ತನಗೆ ಯಶಃಪ್ರಾಪ್ತಿಯಾಗುವದೆಂದು ಭಾವಿಸಿಕೊಂಡನು. ಹಾಗು ಆ ಭಾವನೆಯನ್ನು ಕಾರ್ಯರೂಪನಾಗಿ ಪರಿಣಮಿಸುವದಳ್ಕೆ ಅವನು ಮನ ಮುಟ್ಚಿ ದೀರ್‍ಘಪ್ರಯೆತ್ನ ಮಾಡಹತ್ತಿದನು. ಯಾವಾಗಲೂ ತನ್ನ ಭಾವನೆಯು ಜಾಗ್ರತವಾಗಿದ್ದು ಪ್ರಯತ್ನಮಾಡಲಿಕ್ಕೆ ಉತ್ಸುಹವು ಬೆಳೆಯಬೇಕೆಂದು ಅವನು “ವ್ಹಲಿಡಿಕ್ಟೋರಿ‌ಅನ” ದ ಮೊದಲಿನ ಅಕ್ಷರವಾದ “ವಿ” “V”ಯೌ ಸದಾ ಕಣ್ಣಿಗೆ ಗೋಚರವಾಗುವದಕ್ಕಾಗಿ ಬಾಗಿಲ ಮೇಲೆ ಕೆಂಪುಬಣ್ಣದಿಂದ ಒಡೆದುಕಾಣುವಂತೆ ಬರೆದಿಟ್ಟು ಕೊಂಡಿದ್ದನು.

ಇನ್ನು “V” ಯನ್ನು ಬರೆದಿಡುವದರಿಂದ ಮೆನಾರ್‍ಡನಿಗೆ ಮತ್ತೂ ಒಂದು ಪ್ರಕಾರದ ಆತರ್‍ಕ್ಯ ಸಹಾಯವಾಯಿತೆಂದು ನಮ್ಮ ಭಾವನೆಯಾಗಿದೆ. ಅದಾವದೆಂದರೆ, ಮೆನಾರ್‍ಡನು “V” ಯನ್ನು ಒಡೆದು ಕಾಣುವಂತೆ ಬರೆದು, ತಾನು ಹೊಂದಬೇಕಾಗಿದ್ದ ಪ್ರಗತಿಯಿಂದ ಪರಾವೃತ್ತನಾಗಲಿಕ್ಕೆ ಬರೆದಂತೆ ಬಂಧನಮಾಡಿಕೊಂಡನು, ಅಥವಾ ಮನುಷ್ಯನ ಸ್ವಭಾವಧರ್‍ಮದಂತೆ ವಿಶೇಷ ಸಂಕಟಗಳು ಬಂದಾಗ ಹಿಡಿದೆ ಕಾರ್‍ಯದಿಂದ ಹಿಂತಿರುಗಲು ಆಸ್ಪದ‌ಉಳಿಯ ಬಾರದೆಂದು “V” ಯನ್ನು ಬರೆದಿಟ್ಟು ಆಶ್ರಯರಜ್ಜುವನ್ನು ಛೇದನಮಾಡಿಕೊಂಡನು. “V” ಯನ್ನು ಎಲ್ಲರಿಗೂ ಒಡೆದುಕಾಣಿಸುವಂತೆ ಬರೆದಿಡದೆ, ಬರೇ ಮನಸ್ಸಿನಲ್ಲಿ “ವ್ಹಲಿಡಿಕ್ಟೋರಿ‌ಅನ” ನಾಗಬೇಕೆಂದು ಬಯಸಿ ಪ್ರಯತ್ನಮಾಡ ಹತ್ತಿದರೆ ಅವನಿಗೆ ಯಶಃಪ್ರಾಪ್ತಿಯಾಗುವದು. ಸಂಶಯಾಸ್ಸದವಾಗುತ್ತಿತ್ತು. ಒಂದು ವೇಳೆ ಅವನು ಯಶವನ್ನು ಹೊಂದದಿದ್ದರೆ “V” ಯನ್ನು ಬರೆದಿಟ್ಟಾಗ ಆಗುವ ಮನಸ್ತಾಪಕ್ಕಿಂತ, ಬರೆದಿಡದೆ ಹಾಗೇ ಪ್ರಯಶ ಮಾಡಿದಾಗಿನ ಮನಸ್ತಾಪವು ಕಡಿಮೆಯತರದ್ದಾಗುತ್ತಿತ್ತು. ಆದ್ದರಿಂದ ಪ್ರಗತಿಹೊಂದಬಯಸುವವನು ಆ ಪಥದಿಂದ ಹಿಂದಿರುಗಲಿಕ್ಕೆ ಆಸ್ಪದವುಳಿಯದಂತೆ ಅಶ್ರಯರಜ್ಜುವನ್ನು ತನ್ನ ಕೈಯಿಂದ ತಾನೇ ಛೇದಿಸಿಕೊಳ್ಳಬೇಕು. ಅಂದರೆ ಅಧಃಪತನವಾಗದೆ ತೀವ್ರವಾಗಿ ಹೆಚ್ಚು ಹೆಚ್ಚು ‘ಶ್ರೇಯಸ್ಸನ್ನು” ಪಡೆಯುತ್ತ ಹೋಗುವನು.

ಆಶ್ರೆಯ ರಜ್ಜುಛೇದನಕ್ಕೆ ಸತ್ಯಸಂಕಲ್ಪವೆಂದು ಸಾಧಾರಣವಾಗಿ ಹೇಳಬಹುದು. ನಮ್ಮ ಪೂರ್‍ವಜರು ಸಂಕಲ್ಪಕ್ಕೆ ಬಹಳವಾಗಿ ಮಹತ್ವಕೊಡುತ್ತಿದ್ದರು. ಸಂಣ ಸಂಣ ಸಂಗತಿಗಳನು ಕೂಡ ಸಂಕಲ್ಪ ಮಾಡದೆ ಅವರು ಮಾಡಲುದ್ಯುಕ್ತರಾಗುತ್ತಿದ್ದಿಲ್ಲ. ಆ ಪರಿಪಾರವು ಬ್ರಾಹ್ಮಣರಕ್ರಿಯಾಕರ್‍ಮಗಳಲ್ಲಿ ಈಗ್ಯೂ ಕಂಡುಬರುವದು; ಆದರೆ ಸಂಕಲ್ಪ ಶಕ್ತಿಯ ಮಹತ್ವವನ್ನರಿಯದ ನಾವು, ಹಿರಿಯರ ಅನುಕರಣವನ್ನು ಶಬ್ದಮಾತ್ರದಲ್ಲಿ ಮಾಡಿ ಲೌಕಿಕರ ಹಾಸ್ಯಕ್ಕೆ ಕಾರಣರಾಗುತ್ತಿದ್ದೇವೆ. ಯಾವ ಕೆಲಸದ ಸಲುವಾಗಿಯಾದರೂ ದೇವ-ಬ್ರಾಹ್ಮಣರ, ಗುರುಹಿರಿಯರ, ಅಗ್ನಿ-ಸೂರ್‍ಯರ ಸಮಕ್ಷಮ ಸಂಕಲ್ಪಮಾಡಿ ಅಂದರೆ ನಾನು ಇಂಥ ಅಂಥ ಕೆಲಸವನ್ನು ಹೀಗೆಯೇ ಮಾಡುತ್ತೇನೆಂದು ಸಾಕ್ಷಿಯಿಟ್ಟು ಹೇಳಿ, ಕೆಲಸ ಪ್ರಾರಂಭಿಸಿ ಯಥಾ ಯೋಗ್ಯವಾಗಿ ಮುಗಿಸಬೇಕಾಗುತ್ತದೆ. ಸಂಕಲ್ಪವು ಸತ್ಯವಾಗುವಂತೆ ಯತ್ನಿಸದಿದ್ದರೆ ನಮಗೆ ಅಧೋಗತಿಯು ತಪ್ಪದೆ ಅಗುವದು. ಸಂಕಲ್ಪಮಾಡಿ ಕೆಲಸಪ್ರಾರಂಭಿಸುವದರಿಂದ ಆ ಕೆಲಸ ಮುಗಿಸದೆ ಹಿಂದಿರುಗಲು ಮಾರ್‍ಗವಿದ್ದ ಆಶ್ರಯವನ್ನು ಛೇದನಮಾಡಿ ಕೆಲಸ ಪ್ರಾರಂಭಿಸಿದಂತಾಗುವದು. ಕೆಲಸಮಾಡದೆ ಹಿಂತಿರುಗಲು ಮಾರ್‍ಗವೇ ಇಲ್ಲದಾಗಲು ಎಂಥ ಸಂಕಟಗಳು ಆಡ್ಡಬಂದರೂ ಅವಕ್ಕೆ ಅಂಜದೆ ಕೆಲಸವನ್ನು ಪೂರ್‍ಣಮಾಡುವದರಲ್ಲಿ ತತ್ಪರನಾಗುವನು. ಈ ಸಂಕಲ್ಪವನ್ನು ಪಾಲಿಸಲಿಕ್ಕೆ ಅಚಲವಾದ ಭಾವನೆಯಿರಬೇಕಾಗುವದು: “ಭಾವನಾಯದಿಭವೇತ್‌ಫಲದಾತ್ರಿ” ಇಲ್ಲವೆ “ಭಾವಿಕಸ್ಯತಪೋಬಲಂ” ಎಂಬಂತೆ ಭಾವನೆಯುಳ್ಳವರೇ, ಸಂಕಲ್ಪಶಕ್ತಿಯುಳ್ಳವರೇ ಆಶ್ರಯ ರಜ್ಜುಛೇದನಮಾಡಿಕೊಳ್ಳುವವರೇ ಲೋಕದಲ್ಲಿ ಏನಾದರೂ ಕೆಲಸ ಮಾಡಿ ಪ್ರಖ್ಯಾತರಾಗುವರು. ಪ್ರಣ್ಯಶಾಲಿ ರಾಮಚಂದ್ರನು ಭಾವನಾಪೂರ್‍ವಕವಾಗಿ, ಸಂಕಲ್ಪಪೂರ್‍ವಕವಾಗಿ ತಂದೆಯಮಾತನ್ನು ಕೇಳಿದ್ದರಿಂದಲೇ ಅವನು ಲೋಕವಂದ್ಯನಾದನು. ಸತ್ಯಪ್ರತಿಜ್ಞ ಹರಿಶ್ಚಂದ್ರರಾಯನು ಸತ್ಯಸಂಕಲ್ಪ ಕಾಯ್ದುಕೊಂಡದ್ದರಿಂದಲೇ ಕೀರ್ತಿಶೇಷನಾಗಿರುವನು. ಶ್ರೀಯಾಳಭೂಪಾಲನೂ, ಧರ್‍ಮರಾಜನೂ ಲೋಕವಿಖ್ಯಾತರಾದದ್ದಾದರೂ ಸಂಕಲ್ಪ ಶಕ್ತಿಯಿಂದಲೇ.

ಸಂಕಲ್ಪಕ್ಕೆ ಈಗಿನ ಮನ್ವಂತರದಲ್ಲಿ ಕಾರ್‍ಯಕ್ರಮ (Programme) ಎಂದೆನ್ನುವರು. ಕಾರ್‍ಯನಿಷ್ಟ ಪ್ರತಿಯೊಬ್ಬನೂ ವಿಶೇಷವಾಗಿ ಆಂಗ್ಲೇಯರು ಕಾರ್‍ಯಕ್ರಮದ ಹೊರೆತು ಕೆಲಸಕ್ಕೆ ಪ್ರಾರೆಂಭಿಸುವದಿಲ್ಲ. ಕಾರ್‍ಯಕ್ರಮವು ತನ್ನ ಮನಸ್ಸಿನಂತೆ ಮೊದಲು ಗೊತ್ತುಮಾಡಲ್ಪಡುವದರಿಂದ, ಅದರಂತೆ ನಡೆಯುವದರಿಂದ ಸ್ಪಾತಂತ್ರ್ಯ ಪ್ರೀತಿ, ದೃಢನಿಶ್ಚಯ, ಕಾರ್ಯದಕ್ಷತೆ, ಸಾಧನೆಗಳನ್ನು ಒದಗಿಸಿ ಕೊಳ್ಳುವಿಕೆ, ಸಮಯಸಾಫಲ್ಯಮಾಡುವಿಕೆ ಇನ್ನೂ ಅನೇಕ ಗುಣಗಳ ಪೋಷಣಮಾಡಿಕೊಂಡಂತಾಗುವದು. ಆದ್ದರಿಂದ ಪ್ರತಿಯೊಬ್ಬ ಮನುಷ್ಯನೂ ಮೊದಲು ತಾನು ಯಾವ ಹಾಗು ಎಷ್ಟು ಕೆಲಸವನ್ನು ಮಾಡಿ ಪ್ರಗತಿಯನ್ನು ಹೊಂದಬೇಕೆಂಬದನ್ನು ಗೊತ್ತುಮಾಡಿಕೊಂಡು ಇಡಿ ಆಯುಷ್ಯದ ಕಾರ್ಯಕ್ರಮವನ್ನು ತಯಾರುಮಾಡಿಕೊಳ್ಳಬೇಕು. ಹಾಗು ಆ ಕಾರ್‍ಯಕ್ರಮದಂತೆ ನಡೆಯುವದರಿಂದ ನಿಜವಾಗಿ ಪ್ರಗತಿ ಯಾಗುವದೆಂದು ದೃಢಭಾವನೆಯನ್ನು ಮಾಡಿಕೊಳ್ಳಬೇಕು. ಅಂದರೆ ಯಶಃಪ್ರಾಪ್ತಿಯ ಕಾರ್‍ಯದಲ್ಲಿ ಬರಬಹುದಾದ ವಿಘ್ನಗಳಿಗೆ ಅಸ್ಪದ ವುಳಿಯದೆ ಪ್ರಗತಿಯು ಭರಾಟೆಯಿಂದ ಆಗಹತ್ತುವದು.

“ದೇಹಂವಾಪಾತಯಾಮಿ ಕಾರ್‍ಯಂವಾಸಾಧಯಾಮಿ” ಎಂಬಂತೆ ಸಾಂಕಲ್ಪಿಕದೃಢನಿಶ್ಚಯ ಮಾಡಿಕೊಂಡು, ಪ್ರಗತಿಗಾಗಿ ಪ್ರಯತ್ನ ಮಾಡಬೇಕು. ಅಂದರೆ ತಾನಾಜಿಯಂತೆ ಕಾರ್‍ಯಸಾಧನದಲ್ಲಿ ದೇಹದ ಪಾತವಾದರೂ ಇಷ್ಟಾವು ಸಾಧಿಸದೆ ಇರುವದಿಲ್ಲ. ಶಿವಪ್ರಭುಗಳು ತಾನಾಬಿಯಂಥ ಸಾಂಕಲ್ಪಿಕ ದೃಢಮನಸ್ಸಿನ ಸಾಹಸಿಗನೊಬ್ಬನ ಹೊರತು ಬೇರೆ ಸರದಾರರಲ್ಲೊಬ್ಬನಿಂದಲೂ ಸಿಂಹಗಡವನ್ನು ತಕ್ಕೊಳ್ಳು ವದಾಗುವದಿಲ್ಲವೆಂದು ಚೆನ್ನಾಗಿ ತಿಳಿದಿದ್ದರು. ಅಂತೇ ಅವರು ಆ ಆತ್ಯಂತಕಠಿಣಕಾರ್‍ಯವನ್ನು ತಾನಾಜಿಗೆ ಒಪ್ಪಿಸಿದ್ದರು.

ಏನು ಮಾಡುತ್ತೇವೆ, ಹಾಗು ಮುಂದೆ ಏನನ್ನು ಮಾಡಬೇಕಾಗಿದೆ ಎಂಬದಾವದನ್ನೂ ಅರಿಯದ ನಾವು, ಸದಾ ಸಂಶಯಪಿಶಾಚಿಯಿಂದ ಗೃಹಸ್ತರಾಗಿ ಆಯುರ್ಗಲಿತರಾಗುವೆವು. ಕೆಲಸ ಆರಂಬಿಸುವ ಮೊದಲೂ, ಕೆಲಸಮಾಡಹತ್ತಿದಾಗಲೂ ನಾವು ಆ ಬಗ್ಗೆ ವಿಚಾರಮಾಡುವದರಲ್ಲಿ ವೇಳೆಯನ್ನು ಮಿತಿಮೀರಿ ಕಳೆಯುವೆವು. ಅನುಕರಣ ಪ್ರಿಯರಾದ, ಅಪೂರ್‍ವಗುಣಗಳಿಲ್ಲದ ನಾವು ಮಂದಿಯ ಅನುಕರಣ ಮಾಡಬೇಕೆಂದು ಆಲೋಚಿಸುವಾಗ ವಿಚಾರದಲ್ಲಿ ಹೀಗೆ ಬಹಳ ವೇಳೆ ಹಾಳುಮಾಡಿಕೊಳ್ಳುವೆವು. ಅದರಿಂದ ಪರಿಣಾಮದಲ್ಲಿ ನಮ್ಮ ಆತ್ಮ ವಿಶ್ವಾಸದ, ಸ್ವಾತಂತ್ರ್ಯದ ಹ್ರಾಸವಾಗುವದು, ಪ್ರಸಂಗದಲ್ಲಿ ಸಹಾಯವಾದೀತೆಂಬ ಮರುಳು ವಿಶ್ವಾಸವು ಕೆಲಸದ್ದಲ್ಲ. ನಾವು ಪ್ರಗತಿ ಕಾರ್ಯಕ್ಕೆ ಮಹತ್ವ ಕೊಡದೆ ಕ್ಷುಲ್ಲಕ ಜನರ ಮಾತನ್ನು ನಡಿಸುವಭರಕ್ಕೂ, ಅವರ ಪ್ರೇರಣೆಯಿಂದ ಹೊಲ್ಲದ ಕೆಲಸಮಾಡಲಿಕ್ಕೂ ಪ್ರವೃತ್ತರುಗುತ್ತೇವೆ. ಇದರಿಂದ ಪ್ರಗತಿಯಾಗದೆ ಕಾರ್ಯಸಾಧನವಾಗದೆ ದುಷ್ಟ ಜನರ ಸಂಗತಿಯಿಂದ ಹೊಲ್ಲದ ಕೆಲಸಮಾಡಿದ್ದರಿಂದ ಲೋಕೋತ್ತರ ಅಪಕೀರ್‍ತಿಯು ಮಾತ್ರ ನಮ್ಮ ಉಡಿಯಲ್ಲಿ ಬೀಳುವದು. ಆದ್ದರಿಂದ ಪ್ರಗತಿಗಾಮಿಯು ಪುನಃ ಪುನಃ ವಿಚಾರಮಾಡದೆ, ದುಷ್ಟ ಜನರ ಮಾತು ಕೇಳದೆ, ಕೇವಲ ತನ್ನ ಸದಸದ್ವಿವೇಕ ಬುದ್ಧಿಗೆ-ಅಂತಃಕರಣಕ್ಕೆ ಸ್ಫೂರ್ತಿಯಾಗುವ ಮಾರ್‍ಗದಿಂದ ಪ್ರಗತಿಮಾರ್‍ಗವನ್ನು ಹಿಡಿಯಬೇಕು. ಹೀಗೆ ಮಾಡುವದರಿಂದ ಪ್ರಸಂಗದಲ್ಲಿ ಸಹಾಯವಾದೀತೆಂಬ ಸಂಗತಿಗಳ ಆಶ್ರಯಗಳ ಛೇದನವನ್ನು ಮಾಡಿಕೊಳ್ಳುವದರಿಂದ ಮುಂದೆ ಪ್ರಗತಿಗೆ ಯಾವ ಬಾಧಕಗಳೂ ಉಳಿಯಲಾರವು;

ಅನಿಶ್ಚಿತಥ್ಯೇಯದ ಹಾಗು ಅಂಜುಬುರುಕನಾದ ಮನುಷ್ಯನು ಕಂಡ ಕಂಡವರ ಮಾತಿನಂತೆ ನಡೆಯಹತ್ತುತ್ತಾನೆ. ಪ್ರತಿಯೊಬ್ಬರ ಅನುಕೂಲ ಹಾಗು ಪ್ರತಿಕೂಲ ಅಭಿಪ್ರಾಯಗಳಿಂದ ಅವನ ಮನಸ್ಸು ಚೆಂಚಲವಾಗುವದು. ಧ್ಯೇಯವು ಗೊತ್ತಾಗದ್ದರಿಂದ, ಅಭಿಪ್ರಾಯ ಕೊಡುವ ಪ್ರತಿಯೊಬ್ಬನ ಮತಕ್ಕೆ ಅವನು ಸಮ್ಮತಿಪಡಬೇಕಾಗುತ್ತದೆ. ಒಂದು ಕಾರ್‍ಯವನ್ನು ಮಾಡಿಯೇ ತೀರೆಬೇಕೆಂದು ಎಷ್ಟು ನಿಶ್ಚಯಸಿದ್ದರೂ, ಅವನ ನಿಶ್ಚಯವನ್ನು ತಿರುಗಿಸಲಿಕ್ಕೆ ಒಬ್ಬ ಸಾಮಾನ್ಯ ಹುಡುಗನೂ ಸಮರ್‍ಥನಾಗುವನು. ಇಂಥ ಮನುಷ್ಯನು ಇಂದು ಒಬ್ಬನಂತೆಯೂ ನಾಳೆ ಮತ್ತೊಬ್ಬನಂತೆಯೂ ನಡೆಯಹತ್ತಿ ಮಂದಿಯ ಕೈಯೊಳಗಿನ ಆಟಿಗೆಯಾಗಿ ಕೂಡ್ರುವನು. ಈ ತರದ ಹುಚ್ಚು ಜನರು ಹೆಚ್ಚಾಗಿ ದುರಾಶೆ ಪ್ರೇರಿತರಾಗಿರುವದರಿಂದ ಇಂದು ಮಾಡತಕ್ಕ ಕೆಲಸವನ್ನು ಇನ್ನೊಮ್ಮೆ ವಿಚಾರಮಾಡಿ ನಾಳೆಮಾಡಿದರೆ ಅಷ್ಟರಲ್ಲಿ ದೇವರು ಯಾವರೂಪದಿಂದ ಸಹಾಯಮಾಡಿ ತಮ್ಮ ಕೆಲಸದಲ್ಲಿ ಹೆಚ್ಚು ಲಾಭವಾಗುವಂತೆ ಮಾಡುವನೋ ಎಂದು ತಿಳೆಯುವರು “Do not put off till tomorrow what you can do to-day” ಎಂಬ ಆಂಗ್ಲ ನಾಣ್ಣುಡಿಯ ಗರ್‍ಭಿತಾರ್‍ಥವನ್ನು ವಿಚಾರಿಸಿದರೆ ಈ ಹೊತ್ತು ಆಗಬಹುದಾದ ಕೆಲಸವನ್ನು ಯಾವಕಾರಣದ ಸಲುವಾಗಿಯೂ ನಾಳೆಗೆ ಹಾಕಬಾರದು. ಹೇಳುವದೇನಂದರೆ, ಮನಸ್ಸು ಬಹು ಚೆಂಚಲವಾಗಿರುವದರಿಂದ ಕಾಲಾತಿಕ್ರಮಣದಿಂದ ಕೃತನಿಶ್ಚಯವು ಸಡಿಲಾಗುವ ಸಂಭವವಿರುತ್ತದೆ. ಹಾಗು ಇಂದಿನ ಕಾರ್‍ಯವು ನಾಳೆ ಆಗದಾಗುತ್ತದೆ. ಆದ್ದರಿಂದ, “ವ್ಯವಸಾಯಾತ್ಮಿ ಕಾಬುದ್ಧಿರೇತೇಹಕುರುನಂದನ | ಬಹುಶಾಖಾಹ್ಯನಂತಶ್ಚ ಬುದ್ಧ ಯೋಽವ್ಯವಸಾಯಿನಾಮ್” ಎಂಬಂತೆ ಪ್ರ್ರ್‍ಅಗತಿಹೊಂದುವ ಬಲವಾನ್‌ ಮನುಷ್ಯನು ಹಿಡಿದಕೆಲಸಕ್ಕಾಗಿ ಸಂಪೂರ್ಣ ಶಕ್ತಿಯನ್ನು ಪಯೋಗಿಸುವದರಲ್ಲಿ ಸ್ವಲ್ಪವೂ ಹಿಂಜರಿಯುವದಿಲ್ಲ. ಇದರಿಂದ ಅವನಲ್ಲಿ ಕರ್ತೃತ್ವಶಕ್ತಿ ಬೆಳಯುವದಲ್ಲದೆ ವಿಚಾರಶಕ್ತಿಯೂ ಬೆಳೆಯುವದು. ಆಚಾರ ವಿಚಾರಗಳ ಐಕ್ಯದಿಂದ ಮಾಡುವ ಕೆಲಸಗಳಲ್ಲಿ ಯಶವು ದೊರೆತೇದೊರೆಯುವದು. ಹೀಗೆ ಮಾಡದೆ ಒಬ್ಬನ ವಿಚಾರ ಇನ್ನೊಬ್ಬನ ಆಚಾರ ಇವುಗಳಿಂದ ಪ್ರಗತಿಯಾಗುವ ಬಗೆ ಹ್ಯಾಗೆ? ಮೇಲಿಂದ ಮೇಲೆ ವಿಜಾರಮಾಡುವವನ ಕಡೆಯಿಂದ ಯಾವ ಕೆಲಸವೂ ಅಗುವದಿಲ್ಲ.
******
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನರಜನ್ಮ
Next post ಝುಳು ಝುಳು

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys