Home / ಬಾಲ ಚಿಲುಮೆ / ಕವಿತೆ / `ನಾನು’ ಹೋದರೆ…

`ನಾನು’ ಹೋದರೆ…

ವ್ಯಾಸಮಠದ ಶ್ರೀವ್ಯಾಸರಾಯರು
ಹಲವು ಶಿಷ್ಯರನು ಹೊಂದಿದ್ದವರು
ದಾಸಕೂಟದ ಕನಕ ಪುರಂದರ
ದಾಸರ ಹೆಚ್ಚಿಗೆ ಮೆಚ್ಚಿದ್ದವರು
ಶಿಷ್ಯ ಸಮೂಹದ ಗೊಷ್ಠಿಯಲೊಮ್ಮೆ
ಪ್ರಶ್ನೆ ಕೇಳಿದರು ನಗೆ ಚೆಲ್ಲಿ-
’ಮೋಕ್ಷ ಹೊಂದಿ ವೈಕುಂಠಕೆ ಹೋಗುವ
ವ್ಯಕ್ತಿ ಯಾರಿಹರು ನಮ್ಮಲ್ಲಿ?’

ಸಭೆಯಲಿ ಹೆಚ್ಚಿನ ಬ್ರಾಹ್ಮಣರಿದ್ದರು
ಬೆರಳೆಣಿಕೆಯ ಜನ ಶೂದ್ರರಿದ್ದರು
ಪಂಡಿತರಿದ್ದರು ಪಾಮರರಿದ್ದರು
ಯಾರೂ ಉತ್ತರ ಕೊಡಲಿಲ್ಲ
ಗುರುಗಳ ಎದುರಲಿ
ನುಡಿಯುವ ಧೈರ್ಯವು
ತುಂಬಿದ ಸಭೆಯಲಿ ನಿಲ್ಲುವ ಸ್ಥೈರ್ಯವು
ಯಾರಿಗೂ ಇಲ್ಲದೆ ಕುಳಿತಿರೆ ಸುಮ್ಮನೆ
ವ್ಯಾಸರಾಯರೂ ಬಿಡಲಿಲ್ಲ!

ವ್ಯಾಸರು ಎಲ್ಲೆಡೆ ತಿರುಗಿ ನೋಡಿದರು
ಕನಕದಾಸನನು ಕರೆದು ಕೇಳಿದರು-
’ಕನಕನೆ ಉತ್ತರ ಕೊಡು ನೀನು’
ಕನಕನು ಎಲ್ಲರ ಒಮ್ಮೆ ನೋಡಿರಲು
ಪಂಡಿತರೆಲ್ಲರೂ ಕೊಂಕು ಬೀರಿರಲು
ಉತ್ತರ ಕೊಡುವುದು ಹಿತವೇನು?

ಬ್ರಾಹ್ಮಣ ಪಂಡಿತರೆಲ್ಲರು ಕೂಡಿ
ಒಬ್ಬರ ಮುಖವನ್ನೊಬ್ಬರು ನೋಡಿ
ಶೂದ್ರನಾದವನು ಮೋಕ್ಷದ ಬಗ್ಗೆ
ಉತ್ತರ ಕೊಡುವುದು ಸಾಧ್ಯವೆ? ಹೇಗೆ?
ಕನಕದಾಸರೆಡೆ ನಕ್ಕು ನೋಡಿದರು
’ಹೇಳಬಾರದೆ?’ ಕುಹಕವಾಡಿದರು
ಮುಸಿಮುಸಿ ನಗುತ್ತ ಮನದಲ್ಲಿ
ನುಡಿಯಲಾಗದೆ ಎದುರಲ್ಲಿ!

ಕನಕದಾಸರು ನಮಿಸಿ ವ್ಯಾಸರಿಗೆ
ನಗುತ ಹೇಳಿದರು ಅವರಿಗೆ ಹೀಗೆ-
’ಗುರುಗಳೆ, ಬಲ್ಲವರೆಲ್ಲರು ಇರುವರು
ಆದರೆ ಇವರಲಿ ಯಾರೂ ಹೋಗರು
ನಾನು ಹೋದರೆ ಹೋಗಲುಬಹುದು
ವೈಕುಂಠವನು ಸೇರಲುಬಹುದು
ತಮ್ಮ ಅನುಗ್ರಹವೆನಗಿರಲಿ
ತಪ್ಪಾಗಿದ್ದರೆ ಕ್ಷಮೆ ಇರಲಿ’

ಪಂಡಿತರೆಲ್ಲರು ಉರಿದು ಬಿದ್ದರು
ಕನಕನ ಮಾತನು ಖಂಡಿಸಿ ನುಡಿದರು
ದುರಹಂಕಾರದ ಮಾತಿದು ಎಂದರು
ಶೂದ್ರನ ಬುದ್ಧಿಯು ಲದ್ದಿಯು ಅಂದರು
ಎದ್ದು ನಿಂತು ತೋಳ್ತಟ್ಟಿದರು
ಕೋಪದಿಂದ ಬುಸುಗುಟ್ಟಿದರು

ಗುರುಗಳು ಎಲ್ಲರ ಕೂರಲು ಹೇಳಿ
ನುಡಿದರು- ’ಕೇಳಿರಿ ಸಂಯಮ ತಾಳಿ
ಕನಕನು ಹೇಳುವ ಮಾತನು ಕೇಳಿ’
ಪಂಡಿತರಿಗೆ ತಿಳಿಹೇಳಿದರು
ನಂತರ ಕನಕನ ಹತ್ತಿರ ಬಂದು
ಕೇಳಿದರವನನು- ’ಹೇಗಿದು?’ ಎಂದು
ವಿವರಿಸಿ ಹೇಳಲು ಕೇಳಿದರು!

ಗುರುಗಳೆ, ’ನಾನು’ ನನ್ನದು ಎನ್ನುವ
ಅಹಂಕಾರದಲಿ ಮುಳುಗಿದ ಮಾನವ
ಇರುವನು ಮೋಕ್ಷಕೆ ಬಲು ದೂರ
ಈ ಮಮಕಾರವ ಜಯಿಸಿದ ಒಡನೆ
ಮೋಕ್ಷವು ದೊರೆವುದು ತಂತಾನೆ
ಎಂಬುದೆನ್ನ ಮಾತಿನ ಸಾರ

ಗುರುಗಳು ಶಿಷ್ಯನ ಮಾತನು ಕೇಳಿ
ತುಂಬಿದ ಮನದಲಿ ಸಂತಸ ತಾಳಿ
ಪಂಡಿತರೆಡೆಗೆ ನೋಡಿದರು
ಪಂಡಿತರೆಲ್ಲ ಅಹಮ್ಮಿನ ನುಡಿಗೆ
ಮಾತಿನ ಮರ್ಮವ ಅರಿಯದ ಪರಿಗೆ
ನಾಚುತ ತಲೆಯನು ಬಾಗಿದರು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...