`ನಾನು’ ಹೋದರೆ…

ವ್ಯಾಸಮಠದ ಶ್ರೀವ್ಯಾಸರಾಯರು
ಹಲವು ಶಿಷ್ಯರನು ಹೊಂದಿದ್ದವರು
ದಾಸಕೂಟದ ಕನಕ ಪುರಂದರ
ದಾಸರ ಹೆಚ್ಚಿಗೆ ಮೆಚ್ಚಿದ್ದವರು
ಶಿಷ್ಯ ಸಮೂಹದ ಗೊಷ್ಠಿಯಲೊಮ್ಮೆ
ಪ್ರಶ್ನೆ ಕೇಳಿದರು ನಗೆ ಚೆಲ್ಲಿ-
’ಮೋಕ್ಷ ಹೊಂದಿ ವೈಕುಂಠಕೆ ಹೋಗುವ
ವ್ಯಕ್ತಿ ಯಾರಿಹರು ನಮ್ಮಲ್ಲಿ?’

ಸಭೆಯಲಿ ಹೆಚ್ಚಿನ ಬ್ರಾಹ್ಮಣರಿದ್ದರು
ಬೆರಳೆಣಿಕೆಯ ಜನ ಶೂದ್ರರಿದ್ದರು
ಪಂಡಿತರಿದ್ದರು ಪಾಮರರಿದ್ದರು
ಯಾರೂ ಉತ್ತರ ಕೊಡಲಿಲ್ಲ
ಗುರುಗಳ ಎದುರಲಿ
ನುಡಿಯುವ ಧೈರ್ಯವು
ತುಂಬಿದ ಸಭೆಯಲಿ ನಿಲ್ಲುವ ಸ್ಥೈರ್ಯವು
ಯಾರಿಗೂ ಇಲ್ಲದೆ ಕುಳಿತಿರೆ ಸುಮ್ಮನೆ
ವ್ಯಾಸರಾಯರೂ ಬಿಡಲಿಲ್ಲ!

ವ್ಯಾಸರು ಎಲ್ಲೆಡೆ ತಿರುಗಿ ನೋಡಿದರು
ಕನಕದಾಸನನು ಕರೆದು ಕೇಳಿದರು-
’ಕನಕನೆ ಉತ್ತರ ಕೊಡು ನೀನು’
ಕನಕನು ಎಲ್ಲರ ಒಮ್ಮೆ ನೋಡಿರಲು
ಪಂಡಿತರೆಲ್ಲರೂ ಕೊಂಕು ಬೀರಿರಲು
ಉತ್ತರ ಕೊಡುವುದು ಹಿತವೇನು?

ಬ್ರಾಹ್ಮಣ ಪಂಡಿತರೆಲ್ಲರು ಕೂಡಿ
ಒಬ್ಬರ ಮುಖವನ್ನೊಬ್ಬರು ನೋಡಿ
ಶೂದ್ರನಾದವನು ಮೋಕ್ಷದ ಬಗ್ಗೆ
ಉತ್ತರ ಕೊಡುವುದು ಸಾಧ್ಯವೆ? ಹೇಗೆ?
ಕನಕದಾಸರೆಡೆ ನಕ್ಕು ನೋಡಿದರು
’ಹೇಳಬಾರದೆ?’ ಕುಹಕವಾಡಿದರು
ಮುಸಿಮುಸಿ ನಗುತ್ತ ಮನದಲ್ಲಿ
ನುಡಿಯಲಾಗದೆ ಎದುರಲ್ಲಿ!

ಕನಕದಾಸರು ನಮಿಸಿ ವ್ಯಾಸರಿಗೆ
ನಗುತ ಹೇಳಿದರು ಅವರಿಗೆ ಹೀಗೆ-
’ಗುರುಗಳೆ, ಬಲ್ಲವರೆಲ್ಲರು ಇರುವರು
ಆದರೆ ಇವರಲಿ ಯಾರೂ ಹೋಗರು
ನಾನು ಹೋದರೆ ಹೋಗಲುಬಹುದು
ವೈಕುಂಠವನು ಸೇರಲುಬಹುದು
ತಮ್ಮ ಅನುಗ್ರಹವೆನಗಿರಲಿ
ತಪ್ಪಾಗಿದ್ದರೆ ಕ್ಷಮೆ ಇರಲಿ’

ಪಂಡಿತರೆಲ್ಲರು ಉರಿದು ಬಿದ್ದರು
ಕನಕನ ಮಾತನು ಖಂಡಿಸಿ ನುಡಿದರು
ದುರಹಂಕಾರದ ಮಾತಿದು ಎಂದರು
ಶೂದ್ರನ ಬುದ್ಧಿಯು ಲದ್ದಿಯು ಅಂದರು
ಎದ್ದು ನಿಂತು ತೋಳ್ತಟ್ಟಿದರು
ಕೋಪದಿಂದ ಬುಸುಗುಟ್ಟಿದರು

ಗುರುಗಳು ಎಲ್ಲರ ಕೂರಲು ಹೇಳಿ
ನುಡಿದರು- ’ಕೇಳಿರಿ ಸಂಯಮ ತಾಳಿ
ಕನಕನು ಹೇಳುವ ಮಾತನು ಕೇಳಿ’
ಪಂಡಿತರಿಗೆ ತಿಳಿಹೇಳಿದರು
ನಂತರ ಕನಕನ ಹತ್ತಿರ ಬಂದು
ಕೇಳಿದರವನನು- ’ಹೇಗಿದು?’ ಎಂದು
ವಿವರಿಸಿ ಹೇಳಲು ಕೇಳಿದರು!

ಗುರುಗಳೆ, ’ನಾನು’ ನನ್ನದು ಎನ್ನುವ
ಅಹಂಕಾರದಲಿ ಮುಳುಗಿದ ಮಾನವ
ಇರುವನು ಮೋಕ್ಷಕೆ ಬಲು ದೂರ
ಈ ಮಮಕಾರವ ಜಯಿಸಿದ ಒಡನೆ
ಮೋಕ್ಷವು ದೊರೆವುದು ತಂತಾನೆ
ಎಂಬುದೆನ್ನ ಮಾತಿನ ಸಾರ

ಗುರುಗಳು ಶಿಷ್ಯನ ಮಾತನು ಕೇಳಿ
ತುಂಬಿದ ಮನದಲಿ ಸಂತಸ ತಾಳಿ
ಪಂಡಿತರೆಡೆಗೆ ನೋಡಿದರು
ಪಂಡಿತರೆಲ್ಲ ಅಹಮ್ಮಿನ ನುಡಿಗೆ
ಮಾತಿನ ಮರ್ಮವ ಅರಿಯದ ಪರಿಗೆ
ನಾಚುತ ತಲೆಯನು ಬಾಗಿದರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆರಳ ಕೇಳಿದರೆ ಕೈಯ ಕೊಡುವವನು
Next post ಪಾಪ ಮತ್ತು ಪ್ರಾಯಶ್ಚಿತ್ತದ ಸುತ್ತ – ಎಸ್ ಟಿ. ಕೋಲೆರಿಡ್ಜ್ ನ The Rime of the Ancient Mariner

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…