Home / ಕವನ / ಕವಿತೆ / ಧರ್ಮಯುದ್ದ

ಧರ್ಮಯುದ್ದ

(ಮಯಿ ಸಂನ್ಯಸ್ಯ ಯುದ್ಧ್ಯಸ್ವ)

ಮಂಗಳಂಗಳನಿಳೆಯ ಸರ್‍ವ ಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಕೃಪೆಯ, ಮುಕ್ತರ ಬೀಡೆ, ಕಾಪಾಡು.
ಕಂಗೆಡುವ ಮದದುಬ್ಬಿನಲಿ ರಣ
ದಂಗಣದ ಕಾಳ್ಗಿಚ್ಚನೆಬ್ಬಿಸಿ
ಭಂಗಪಡುವ ದುರಾಸೆಯಡಗಿಸಿ ನಡಸು ಮಕ್ಕಳನು.

ಹಿಂದೆ ಅಸುರರು ಕೊಬ್ಬಿ, ಸುರನರ
ರಂದಬಾಳನು ಮೆಟ್ಟಿ, ಹಿಂಸಾ
ನಂದ ಯೋಗಿಗಳಾಗಿ ಭೂಮಿಗೆ ಭಾರವೆನಿಸಿರಲು,
ತಂದೆ, ನೀ ಮಾಧವನುಮಾಧವ
ನೆಂದು ಪರಿಪರಿ ಪೊಗಳೆ, ಕರಗಿದೆ,
ನೊಂದೆ, ಬಿಡಿಸಿದೆ ಲೋಕಕಂಟಕರಿಂದ ಭಕ್ತರನು.

ಯುದ್ಧವೆಂಬ ಪಿಶಾಚ ಯಜ್ಞಕೆ
ಬದ್ಧರಹ ರಾಕ್ಷಸರ ಸಾಹಸ
ಬುದ್ದಿ ಕೌಶಲವೇಕೆ? ಐಸಿರಿಯೇಕೆ? ಬಿಸುಡು, ಸುಡು!
ಯುದ್ಧವೇ ತಂದೊಡ್ಡೆ, ಯುದ್ಧವ
ಯುದ್ಧದಿಂದಲೆ ಯಜ್ಞಮಾಡುವ
ಸಿದ್ದಿಯನು ನೀ, ದೇವ, ಬೆಸಸಿದೆ ಜಗವನುದ್ಧರಿಸೆ.

ಬೇಡುವೆವು, ಬಾ, ಸುಜನಪಾಲಕ.
ಹೂಡು ಧರ್‍ಮವ, ಧರ್‍ಮರಕ್ಷಕ,
ನಾಡ ಕಾವಲ ದಳಕೆ ಕೂಡಲಿ ನಾಡ ಬಲವೆಲ್ಲಾ.
ಓಡಿಹೋಗಲಿ ಭಯದ ನುಡಿಗಳು,
ಮೂಡಿ ತೂಗಲಿ ನಗುತ ಬೆಳೆಗಳು,
ನೀಡು ದಯವನು ದಣಿಗೆ, ನೆಮ್ಮದಿ ಬದುಕ ಬಡವನಿಗೆ.

ಕೆಣಕಿದರೆ ಬಿಡದೆತ್ತಿಕೊಂಡೆವು-
ಮಣಿವೆವೇ ನಾವಿನ್ನು ? ಕಾಳಗ
ದಣಿಗೆ ಮುಡಿಪಾಗಿಟ್ಟು ತನುಮನಧನವ ತೇಯುವೆವು!
ಋಣವಿದಲ್ಲವೆ ಭರತಮಾತೆಯ?
ಋಣವಿದಲ್ಲವೆ ದೇವಪಿತೃ‌ಋಷಿ
ಗಣದ ? ಮಡಿದಾ ಸತ್ಯಧರ್ಮ ಸ್ವತಂತ್ರ ಸಾಧಕರ ?

ಗೆದ್ದು ಬಿಟ್ಟೆವು! ಹುಬ್ಬ ಹಾರಿಸಿ-
ಮದ್ದು ಗುಂಡನು ಸುರಿಸಿ, ಹೊಸ ಹುಸಿ
ಸುದ್ದಿಗಳ ತೂರಾಡಿ, ನಂಬಿಸಿ, ಕೆಂಡಮಳೆಗರೆದು,
ಬಿದ್ದು ಹೆಣ್ಗಳ ಮೇಲೆ, ಹಸುಳೆಯ
ಗುದ್ದಿ, ದಾಸ್ಯವ ಹೊರಿಸಿ-ನಲಿವಿರ
ಗೆದ್ದು ಬಿಟ್ಟೆವು! ಎನುತ?-ಗೆಲುವಿರ ನೀವು ದೇವರನು!

ಗೆಲವು ನಮ್ಮದು, ಮಾಯಕಾರರೆ!
ಗೆಲವು ನಮ್ಮದು, ದ್ರೋಹಿಗಳೆ! ಕಡೆ
ಗೆಲವು ನಮ್ಮದು, ನಮ್ಮ ದಿವ್ಯ ಜ್ಯೋತಿ ನಮಗಿಹನು;
ಗೆಲವು ಶ್ರೀ ಜಯಚಾಮರಾಜಗೆ!
ಗೆಲವು ಬಿಡುತೆಗೆ, ಸಾಧು ಜನತೆಗೆ,
ಗೆಲವು ಶಾಂತಿಯ ಸರ್ವಸಮತೆಯ ಸುಖದ ಜೀವನಕೆ!

ಮಂಗಳಂಗಳನಿಳೆಯ ಸರ್‍ವ ಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಒಲವೆ, ಮುಕ್ತರ ನಲಿವೆ, ಕಾಪಾಡು.
ಕಂಗೆಡುವ ಮದದುಬ್ಬಿನಲಿ ರಣ
ದಂಗಣದ ಕಾಳ್ಕಿಚ್ಚನೆಬ್ಬಿಸಿ
ಭಂಗಪಡುವ ದುರಾಸೆಯನ್ನು ಮುರಿ, ಗೆಲಿಸು ಶಾಂತಿಯನು.

ಓಂ ಶಾಂತಿಶ್ಶಾಂತಿ ಶಾಂತಿಃ
*****
೧೯೪೩

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...