Home / ಕವನ / ಕವಿತೆ / ಧರ್ಮಯುದ್ದ

ಧರ್ಮಯುದ್ದ

(ಮಯಿ ಸಂನ್ಯಸ್ಯ ಯುದ್ಧ್ಯಸ್ವ)

ಮಂಗಳಂಗಳನಿಳೆಯ ಸರ್‍ವ ಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಕೃಪೆಯ, ಮುಕ್ತರ ಬೀಡೆ, ಕಾಪಾಡು.
ಕಂಗೆಡುವ ಮದದುಬ್ಬಿನಲಿ ರಣ
ದಂಗಣದ ಕಾಳ್ಗಿಚ್ಚನೆಬ್ಬಿಸಿ
ಭಂಗಪಡುವ ದುರಾಸೆಯಡಗಿಸಿ ನಡಸು ಮಕ್ಕಳನು.

ಹಿಂದೆ ಅಸುರರು ಕೊಬ್ಬಿ, ಸುರನರ
ರಂದಬಾಳನು ಮೆಟ್ಟಿ, ಹಿಂಸಾ
ನಂದ ಯೋಗಿಗಳಾಗಿ ಭೂಮಿಗೆ ಭಾರವೆನಿಸಿರಲು,
ತಂದೆ, ನೀ ಮಾಧವನುಮಾಧವ
ನೆಂದು ಪರಿಪರಿ ಪೊಗಳೆ, ಕರಗಿದೆ,
ನೊಂದೆ, ಬಿಡಿಸಿದೆ ಲೋಕಕಂಟಕರಿಂದ ಭಕ್ತರನು.

ಯುದ್ಧವೆಂಬ ಪಿಶಾಚ ಯಜ್ಞಕೆ
ಬದ್ಧರಹ ರಾಕ್ಷಸರ ಸಾಹಸ
ಬುದ್ದಿ ಕೌಶಲವೇಕೆ? ಐಸಿರಿಯೇಕೆ? ಬಿಸುಡು, ಸುಡು!
ಯುದ್ಧವೇ ತಂದೊಡ್ಡೆ, ಯುದ್ಧವ
ಯುದ್ಧದಿಂದಲೆ ಯಜ್ಞಮಾಡುವ
ಸಿದ್ದಿಯನು ನೀ, ದೇವ, ಬೆಸಸಿದೆ ಜಗವನುದ್ಧರಿಸೆ.

ಬೇಡುವೆವು, ಬಾ, ಸುಜನಪಾಲಕ.
ಹೂಡು ಧರ್‍ಮವ, ಧರ್‍ಮರಕ್ಷಕ,
ನಾಡ ಕಾವಲ ದಳಕೆ ಕೂಡಲಿ ನಾಡ ಬಲವೆಲ್ಲಾ.
ಓಡಿಹೋಗಲಿ ಭಯದ ನುಡಿಗಳು,
ಮೂಡಿ ತೂಗಲಿ ನಗುತ ಬೆಳೆಗಳು,
ನೀಡು ದಯವನು ದಣಿಗೆ, ನೆಮ್ಮದಿ ಬದುಕ ಬಡವನಿಗೆ.

ಕೆಣಕಿದರೆ ಬಿಡದೆತ್ತಿಕೊಂಡೆವು-
ಮಣಿವೆವೇ ನಾವಿನ್ನು ? ಕಾಳಗ
ದಣಿಗೆ ಮುಡಿಪಾಗಿಟ್ಟು ತನುಮನಧನವ ತೇಯುವೆವು!
ಋಣವಿದಲ್ಲವೆ ಭರತಮಾತೆಯ?
ಋಣವಿದಲ್ಲವೆ ದೇವಪಿತೃ‌ಋಷಿ
ಗಣದ ? ಮಡಿದಾ ಸತ್ಯಧರ್ಮ ಸ್ವತಂತ್ರ ಸಾಧಕರ ?

ಗೆದ್ದು ಬಿಟ್ಟೆವು! ಹುಬ್ಬ ಹಾರಿಸಿ-
ಮದ್ದು ಗುಂಡನು ಸುರಿಸಿ, ಹೊಸ ಹುಸಿ
ಸುದ್ದಿಗಳ ತೂರಾಡಿ, ನಂಬಿಸಿ, ಕೆಂಡಮಳೆಗರೆದು,
ಬಿದ್ದು ಹೆಣ್ಗಳ ಮೇಲೆ, ಹಸುಳೆಯ
ಗುದ್ದಿ, ದಾಸ್ಯವ ಹೊರಿಸಿ-ನಲಿವಿರ
ಗೆದ್ದು ಬಿಟ್ಟೆವು! ಎನುತ?-ಗೆಲುವಿರ ನೀವು ದೇವರನು!

ಗೆಲವು ನಮ್ಮದು, ಮಾಯಕಾರರೆ!
ಗೆಲವು ನಮ್ಮದು, ದ್ರೋಹಿಗಳೆ! ಕಡೆ
ಗೆಲವು ನಮ್ಮದು, ನಮ್ಮ ದಿವ್ಯ ಜ್ಯೋತಿ ನಮಗಿಹನು;
ಗೆಲವು ಶ್ರೀ ಜಯಚಾಮರಾಜಗೆ!
ಗೆಲವು ಬಿಡುತೆಗೆ, ಸಾಧು ಜನತೆಗೆ,
ಗೆಲವು ಶಾಂತಿಯ ಸರ್ವಸಮತೆಯ ಸುಖದ ಜೀವನಕೆ!

ಮಂಗಳಂಗಳನಿಳೆಯ ಸರ್‍ವ ಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಒಲವೆ, ಮುಕ್ತರ ನಲಿವೆ, ಕಾಪಾಡು.
ಕಂಗೆಡುವ ಮದದುಬ್ಬಿನಲಿ ರಣ
ದಂಗಣದ ಕಾಳ್ಕಿಚ್ಚನೆಬ್ಬಿಸಿ
ಭಂಗಪಡುವ ದುರಾಸೆಯನ್ನು ಮುರಿ, ಗೆಲಿಸು ಶಾಂತಿಯನು.

ಓಂ ಶಾಂತಿಶ್ಶಾಂತಿ ಶಾಂತಿಃ
*****
೧೯೪೩

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...