Home / ಕವನ / ಕವಿತೆ / ಧರ್ಮಯುದ್ದ

ಧರ್ಮಯುದ್ದ

(ಮಯಿ ಸಂನ್ಯಸ್ಯ ಯುದ್ಧ್ಯಸ್ವ)

ಮಂಗಳಂಗಳನಿಳೆಯ ಸರ್‍ವ ಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಕೃಪೆಯ, ಮುಕ್ತರ ಬೀಡೆ, ಕಾಪಾಡು.
ಕಂಗೆಡುವ ಮದದುಬ್ಬಿನಲಿ ರಣ
ದಂಗಣದ ಕಾಳ್ಗಿಚ್ಚನೆಬ್ಬಿಸಿ
ಭಂಗಪಡುವ ದುರಾಸೆಯಡಗಿಸಿ ನಡಸು ಮಕ್ಕಳನು.

ಹಿಂದೆ ಅಸುರರು ಕೊಬ್ಬಿ, ಸುರನರ
ರಂದಬಾಳನು ಮೆಟ್ಟಿ, ಹಿಂಸಾ
ನಂದ ಯೋಗಿಗಳಾಗಿ ಭೂಮಿಗೆ ಭಾರವೆನಿಸಿರಲು,
ತಂದೆ, ನೀ ಮಾಧವನುಮಾಧವ
ನೆಂದು ಪರಿಪರಿ ಪೊಗಳೆ, ಕರಗಿದೆ,
ನೊಂದೆ, ಬಿಡಿಸಿದೆ ಲೋಕಕಂಟಕರಿಂದ ಭಕ್ತರನು.

ಯುದ್ಧವೆಂಬ ಪಿಶಾಚ ಯಜ್ಞಕೆ
ಬದ್ಧರಹ ರಾಕ್ಷಸರ ಸಾಹಸ
ಬುದ್ದಿ ಕೌಶಲವೇಕೆ? ಐಸಿರಿಯೇಕೆ? ಬಿಸುಡು, ಸುಡು!
ಯುದ್ಧವೇ ತಂದೊಡ್ಡೆ, ಯುದ್ಧವ
ಯುದ್ಧದಿಂದಲೆ ಯಜ್ಞಮಾಡುವ
ಸಿದ್ದಿಯನು ನೀ, ದೇವ, ಬೆಸಸಿದೆ ಜಗವನುದ್ಧರಿಸೆ.

ಬೇಡುವೆವು, ಬಾ, ಸುಜನಪಾಲಕ.
ಹೂಡು ಧರ್‍ಮವ, ಧರ್‍ಮರಕ್ಷಕ,
ನಾಡ ಕಾವಲ ದಳಕೆ ಕೂಡಲಿ ನಾಡ ಬಲವೆಲ್ಲಾ.
ಓಡಿಹೋಗಲಿ ಭಯದ ನುಡಿಗಳು,
ಮೂಡಿ ತೂಗಲಿ ನಗುತ ಬೆಳೆಗಳು,
ನೀಡು ದಯವನು ದಣಿಗೆ, ನೆಮ್ಮದಿ ಬದುಕ ಬಡವನಿಗೆ.

ಕೆಣಕಿದರೆ ಬಿಡದೆತ್ತಿಕೊಂಡೆವು-
ಮಣಿವೆವೇ ನಾವಿನ್ನು ? ಕಾಳಗ
ದಣಿಗೆ ಮುಡಿಪಾಗಿಟ್ಟು ತನುಮನಧನವ ತೇಯುವೆವು!
ಋಣವಿದಲ್ಲವೆ ಭರತಮಾತೆಯ?
ಋಣವಿದಲ್ಲವೆ ದೇವಪಿತೃ‌ಋಷಿ
ಗಣದ ? ಮಡಿದಾ ಸತ್ಯಧರ್ಮ ಸ್ವತಂತ್ರ ಸಾಧಕರ ?

ಗೆದ್ದು ಬಿಟ್ಟೆವು! ಹುಬ್ಬ ಹಾರಿಸಿ-
ಮದ್ದು ಗುಂಡನು ಸುರಿಸಿ, ಹೊಸ ಹುಸಿ
ಸುದ್ದಿಗಳ ತೂರಾಡಿ, ನಂಬಿಸಿ, ಕೆಂಡಮಳೆಗರೆದು,
ಬಿದ್ದು ಹೆಣ್ಗಳ ಮೇಲೆ, ಹಸುಳೆಯ
ಗುದ್ದಿ, ದಾಸ್ಯವ ಹೊರಿಸಿ-ನಲಿವಿರ
ಗೆದ್ದು ಬಿಟ್ಟೆವು! ಎನುತ?-ಗೆಲುವಿರ ನೀವು ದೇವರನು!

ಗೆಲವು ನಮ್ಮದು, ಮಾಯಕಾರರೆ!
ಗೆಲವು ನಮ್ಮದು, ದ್ರೋಹಿಗಳೆ! ಕಡೆ
ಗೆಲವು ನಮ್ಮದು, ನಮ್ಮ ದಿವ್ಯ ಜ್ಯೋತಿ ನಮಗಿಹನು;
ಗೆಲವು ಶ್ರೀ ಜಯಚಾಮರಾಜಗೆ!
ಗೆಲವು ಬಿಡುತೆಗೆ, ಸಾಧು ಜನತೆಗೆ,
ಗೆಲವು ಶಾಂತಿಯ ಸರ್ವಸಮತೆಯ ಸುಖದ ಜೀವನಕೆ!

ಮಂಗಳಂಗಳನಿಳೆಯ ಸರ್‍ವ ಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಒಲವೆ, ಮುಕ್ತರ ನಲಿವೆ, ಕಾಪಾಡು.
ಕಂಗೆಡುವ ಮದದುಬ್ಬಿನಲಿ ರಣ
ದಂಗಣದ ಕಾಳ್ಕಿಚ್ಚನೆಬ್ಬಿಸಿ
ಭಂಗಪಡುವ ದುರಾಸೆಯನ್ನು ಮುರಿ, ಗೆಲಿಸು ಶಾಂತಿಯನು.

ಓಂ ಶಾಂತಿಶ್ಶಾಂತಿ ಶಾಂತಿಃ
*****
೧೯೪೩

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...