ಪಥಿಕ

ನಡೆದಿಹೆನು ನಡೆದಿಹೆನು ಅಡವಿಯ ಅರಣ್ಯದಲಿ
ಮುಂಜಾನದಲ್ಲಿ ನಿನಗೆ ಕಾಣದೇನು?
ಕಡುಕತ್ತಲೆಯ ಸುತ್ತು ಬಿತ್ತರಿಸಿ ಮುತ್ತುತಿಹ
ಮೊದಲೆ ಬೆಳಕು ಕೊಡಲುಬಾರದೇನು?

ಕಂಟಿಕಲ್ಲಗಳೆಡವುತೆಡವುತ್ತ ಮುಗ್ಗರಿಸು –
ತಿರೆ ಎತ್ತಿ ನೀ ಹಿಡಿಯಬಾರದೇನು?
ಕುಂಠಿಸಿತು ಅಸುಶಕ್ತಿ ಸೋತು ಸಣ್ಣಾಗಿರಲು
ಕೈ ನೀಡಿ ನೀ ಕರೆಯಬಾರದೇನು?

ನಿರ್ವಾಣ ಸವಿಸುಖದ ಗೀರ್ವಾಣವಾಣಿಯನು
ಕೇಳ ಬಯಸುವೆ ಹೇಳಬಾರದೇನು?
ಸರ್ವ ಸಂಜೀವನದ ಸುಧೆಯ ಬಿಂದುವನೊಂದ
ಸುರಿದಮರನನು ಮಾಡಬಾರದೇನು?

ವಿಶ್ವಯಾತ್ರೆಗೆ ಹೊರಟ ದಾರಿಗನು ನಿನ್ನಲ್ಲಿ
ಶ್ರದ್ದೆಯಿಟ್ಟರೆ ತಿಳಿಯಬಾರದೇನು?
ವಿಶ್ವಮೂರ್ತಿಯೆ ಸಕಲ ನಾನೆಂದು ಹೊರಟಿರುವೆ
ಸರ್ವ ನೀನಾಗಿ ಬರಬಾರದೇನು?

ಬೆಳಕುಕತ್ತಲೆಗಳಾ ಗುರುತು ಹತ್ತದು ಇಲ್ಲಿ
ನೆಲೆಗೆಟ್ಟು ನನ್ನನ್ನೆ ಮರೆತೆ ನಾನು
ಸುಳಿವು ದೋರದೆ ನೀನು ನನ್ನಲ್ಲೆ ಅವಿತಿದ್ದು
ನನ್ನ ಮರೆವುದು ನಿನಗೆ ಉಚಿತವೇನು?

ಮರಬಳ್ಳಿ ಬಳಕುವವು ತುಳುಕುವವು ತೂಗುವವು
ನೀ ಕಣ್ಣು ತೆರೆದಿರಲು ಮಕರಂದವು
ಸ್ವರಸಂಪು ಇಂಪು ಇಂಚರ ಹಕ್ಕಿಗಳ ಹಾಡು
ಎಲ್ಲೆಲ್ಲಿ ಹೊಮ್ಮುವದು ಆನಂದವು.

ನಡೆನಡೆದು ದುಡಿದುಡಿದು ನಿನ್ನಿಂದ ಪಡೆಪಡೆದು
ನಿರ್ಮಿಸುವ ಉಪವನವ ನೋಡು ನೀನು
ಸಡಗರದ ನಂದನದ ಬನಸಿರಿಯ ಸೌರಭವ
ಸವಿಸವಿದು ಹರಕೆ ಕೊಡಬಾರದೇನು?

ಅಲೆದಲೆದು ಅರಸಿದರು ಲಭಿಸಲಾರದ ಕುಸುಮ
ನೀನಾಯ್ದು ನನಗೆ ಕೊಡಬಾರದೇನು?
ನಲಿನಲಿದು ಆ ಹೂವ ಹಾರ ಮಾಡುವೆ ನಿನಗೆ
ನಿನ್ನ ಹೂ ನೀ ಮುಡಿಯಬಾರದೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೈಚಿತ್ರ್‍ಯ
Next post ರುದಾಕಿ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…