Home / ಕವನ / ಕವಿತೆ / ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯ ಹೇಳಿದ, ಮೈತ್ರೇಯಿಯ ಕರೆದು :
“ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ
ತಲೆಯೆಂದರೆ ನಿನ್ನದೆ ! ಆದ್ದರಿಂದ
ಆತ್ಮವಿದ್ಯೆ ನಿನಗೇ
ಕಲಿಸುವೆ ನಾನು ಪ್ರತ್ಯಕ್ಷ.”

ನಗಾರಿಯೊಂದ ತರಿಸಿದ.
ಅದಕ್ಕೆ ಸರೀ ಬಾರಿಸಿದ.
ಅದರ ಸದ್ದು ಸುತ್ತಲೂ
ಗಿರಿಕಂದರ ವ್ಯಾಪಿಸಿತು.
ಹಕ್ಕಿಗಳೂ ಹಾರಿದುವು
ಕೋತಿಗಳೂ ಓಡಿದವು.
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:
“ಎಲ್ಲಿಂದ ಹೊರಟಿತು, ಎಲ್ಲಿಗೆ ಹೋಯ್ತು ?
ಹಿಡಿವಂತಿಲ್ಲ ಕೈಯಲ್ಲಿ
ಕರೆವಂತಿಲ್ಲ ವಾಪಸು
ಆದರೂ-
ನಗಾರಿ ನಮ್ಮ ಕೈಯೊಳಗೆ !”
**

ಬೆಂಕಿಯೊಂದ ಮಾಡಿದ-ಅದಕ್ಕೆ
ಹಸೀ ಉರುವಲು ಹಾಕಿದ.
ಹೊಗೆ!

ಕಪ್ಪು, ಕಂದು, ನೀಲಿ
ಎಲ್ಲಾ ಕಡೆ ಹೊರಳಿ
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:

“ಹೇಗೆ ಹಸೀ ಸೌದೆಯಿಂದ
ಹುಟ್ಟುತ್ತದೆ ಹೊಗೆ-ಹಾಗೆ
ಆತ್ಮದಿಂದ ಎಲ್ಲವೂ !”
**

ದೋಣಿಯೊಂದ ತರಿಸಿದ-ತಳಕ್ಕೆ
ಎರಡು ತೂತು ಕೊರೆಸಿದ.
ನೀರು ಒಳಕ್ಕೆ ಧಾವಿಸಿತು
ಮೊಗೆದಷ್ಟೂ ಮುಗಿಯದೆ.
ಈಜಿ ದಡ ಸೇರಿದರು.
“ನೋಡಿದಿಯಾ !” ಎಂದ ಯಾಜ್ಞವಲ್ಕ್ಯ
“ದೇಹವೆಂದವರೆ ಒಡಕು ದೋಣಿ
ನಂಬಿದವಗೆ ಗತಿಯಿಲ್ಲ–
ಆತ್ಮಜ್ಞಾನವೆಂದರೆ
ಅದು ಈಜಿನ ಹಾಗೆ !”
**

ಆರಗಿಣಿಯೊಂದ ತರಿಸಿದ
ಪಂಚವರ್ಣದ ಗಿಣಿ, ಸಣ್ಣ ಕಣ್ಣಿನ ಗಿಣಿ
ನೋಡಿದರೆ ಇನ್ನೂ
ನೋಡವೇಕೆಂಬ ಗಿಣಿ
ಹಾಡುವುದಕ್ಕೆ ಕಲಿಯಿತು
ವೇದಗಳ ಪಠಿಸಿತು
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಹಾಡುತ್ತದೆ, ನುಡಿಯುತ್ತದೆ
ಮಾತ್ರ-
ಯಾಕೆ ಏನು ತಿಳಿಯದು.
ಆತ್ಮಜ್ಞಾನ ಇರದ ಹೊರತು
ಏನು ಹೇಳಿ ಏನು !”
**

ಹೇಂಟೆಯೊಂದ ತರಿಸಿದ
ಪ್ರತಿದಿನವೂ ತಿನಿಸಿದ.
ಬೆಳಗಿಂಜಾಮ ಕೂಗುತಿತ್ತು
ಎಲ್ಲರ ಎಬ್ಬಿಸುತಿತ್ತು
ಮಾತ್ರ-ಎಷ್ಟೇ ದಿನ ಕಳೆದರೂ
ಇಡಲಿಲ್ಲ ತತ್ತಿ
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಆತ್ಮಕ್ಕೆ ಬೇಕು ಪರಮಾತ್ಮ
ಇಲ್ಲದೇ-
ದಕ್ಕಲಾರದು ಬ್ರಹ್ಮಾಂಡ !
**

ಮುಗಿಯಿತೇ ಎಂದಳು ಮೈತ್ರೇಯಿ
ಹೂಂ ಎಂದ ಯಾಜ್ಞವಲ್ಕ್ಯ.
ಒಂದು ಮಾತ್ರ ಮರೆತಿರೆಂದು
ಸೀರೆ ರವಿಕೆ ಬಿಚ್ಚಿದಳು
ಲಂಗ ಒದ್ದು ಜಾಡಿಸಿದಳು.
“ನೋಡಿದಿರಾ!” ಎಂದಳು ಮೈತ್ರೇಯಿ :
“ಸೀರೆಯೆಂದರಹಂಕಾರ
ರವಿಕೆ ತಪ್ಪು ಗ್ರಹಿಕೆ
ಬಾಡಿಯೆಂದರೆ ಕಿಲಾಡಿ
ಲಂಗ ಆಶಾಭಂಗ-ಇನ್ನು
ನೂರಕ್ಕೆ ನೂರು ಸಾಚಾ
ಆಗಬೇಕೆಂದರೆ ಇದೋ !” ಎಂದು
ಕಿತ್ಕೆಸೆದಳು ಕಾಚ !
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...