Home / ಕವನ / ಕವಿತೆ / ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯ ಹೇಳಿದ, ಮೈತ್ರೇಯಿಯ ಕರೆದು :
“ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ
ತಲೆಯೆಂದರೆ ನಿನ್ನದೆ ! ಆದ್ದರಿಂದ
ಆತ್ಮವಿದ್ಯೆ ನಿನಗೇ
ಕಲಿಸುವೆ ನಾನು ಪ್ರತ್ಯಕ್ಷ.”

ನಗಾರಿಯೊಂದ ತರಿಸಿದ.
ಅದಕ್ಕೆ ಸರೀ ಬಾರಿಸಿದ.
ಅದರ ಸದ್ದು ಸುತ್ತಲೂ
ಗಿರಿಕಂದರ ವ್ಯಾಪಿಸಿತು.
ಹಕ್ಕಿಗಳೂ ಹಾರಿದುವು
ಕೋತಿಗಳೂ ಓಡಿದವು.
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:
“ಎಲ್ಲಿಂದ ಹೊರಟಿತು, ಎಲ್ಲಿಗೆ ಹೋಯ್ತು ?
ಹಿಡಿವಂತಿಲ್ಲ ಕೈಯಲ್ಲಿ
ಕರೆವಂತಿಲ್ಲ ವಾಪಸು
ಆದರೂ-
ನಗಾರಿ ನಮ್ಮ ಕೈಯೊಳಗೆ !”
**

ಬೆಂಕಿಯೊಂದ ಮಾಡಿದ-ಅದಕ್ಕೆ
ಹಸೀ ಉರುವಲು ಹಾಕಿದ.
ಹೊಗೆ!

ಕಪ್ಪು, ಕಂದು, ನೀಲಿ
ಎಲ್ಲಾ ಕಡೆ ಹೊರಳಿ
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:

“ಹೇಗೆ ಹಸೀ ಸೌದೆಯಿಂದ
ಹುಟ್ಟುತ್ತದೆ ಹೊಗೆ-ಹಾಗೆ
ಆತ್ಮದಿಂದ ಎಲ್ಲವೂ !”
**

ದೋಣಿಯೊಂದ ತರಿಸಿದ-ತಳಕ್ಕೆ
ಎರಡು ತೂತು ಕೊರೆಸಿದ.
ನೀರು ಒಳಕ್ಕೆ ಧಾವಿಸಿತು
ಮೊಗೆದಷ್ಟೂ ಮುಗಿಯದೆ.
ಈಜಿ ದಡ ಸೇರಿದರು.
“ನೋಡಿದಿಯಾ !” ಎಂದ ಯಾಜ್ಞವಲ್ಕ್ಯ
“ದೇಹವೆಂದವರೆ ಒಡಕು ದೋಣಿ
ನಂಬಿದವಗೆ ಗತಿಯಿಲ್ಲ–
ಆತ್ಮಜ್ಞಾನವೆಂದರೆ
ಅದು ಈಜಿನ ಹಾಗೆ !”
**

ಆರಗಿಣಿಯೊಂದ ತರಿಸಿದ
ಪಂಚವರ್ಣದ ಗಿಣಿ, ಸಣ್ಣ ಕಣ್ಣಿನ ಗಿಣಿ
ನೋಡಿದರೆ ಇನ್ನೂ
ನೋಡವೇಕೆಂಬ ಗಿಣಿ
ಹಾಡುವುದಕ್ಕೆ ಕಲಿಯಿತು
ವೇದಗಳ ಪಠಿಸಿತು
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಹಾಡುತ್ತದೆ, ನುಡಿಯುತ್ತದೆ
ಮಾತ್ರ-
ಯಾಕೆ ಏನು ತಿಳಿಯದು.
ಆತ್ಮಜ್ಞಾನ ಇರದ ಹೊರತು
ಏನು ಹೇಳಿ ಏನು !”
**

ಹೇಂಟೆಯೊಂದ ತರಿಸಿದ
ಪ್ರತಿದಿನವೂ ತಿನಿಸಿದ.
ಬೆಳಗಿಂಜಾಮ ಕೂಗುತಿತ್ತು
ಎಲ್ಲರ ಎಬ್ಬಿಸುತಿತ್ತು
ಮಾತ್ರ-ಎಷ್ಟೇ ದಿನ ಕಳೆದರೂ
ಇಡಲಿಲ್ಲ ತತ್ತಿ
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಆತ್ಮಕ್ಕೆ ಬೇಕು ಪರಮಾತ್ಮ
ಇಲ್ಲದೇ-
ದಕ್ಕಲಾರದು ಬ್ರಹ್ಮಾಂಡ !
**

ಮುಗಿಯಿತೇ ಎಂದಳು ಮೈತ್ರೇಯಿ
ಹೂಂ ಎಂದ ಯಾಜ್ಞವಲ್ಕ್ಯ.
ಒಂದು ಮಾತ್ರ ಮರೆತಿರೆಂದು
ಸೀರೆ ರವಿಕೆ ಬಿಚ್ಚಿದಳು
ಲಂಗ ಒದ್ದು ಜಾಡಿಸಿದಳು.
“ನೋಡಿದಿರಾ!” ಎಂದಳು ಮೈತ್ರೇಯಿ :
“ಸೀರೆಯೆಂದರಹಂಕಾರ
ರವಿಕೆ ತಪ್ಪು ಗ್ರಹಿಕೆ
ಬಾಡಿಯೆಂದರೆ ಕಿಲಾಡಿ
ಲಂಗ ಆಶಾಭಂಗ-ಇನ್ನು
ನೂರಕ್ಕೆ ನೂರು ಸಾಚಾ
ಆಗಬೇಕೆಂದರೆ ಇದೋ !” ಎಂದು
ಕಿತ್ಕೆಸೆದಳು ಕಾಚ !
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...