Home / ಕವನ / ಕವಿತೆ / ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯ ಹೇಳಿದ, ಮೈತ್ರೇಯಿಯ ಕರೆದು :
“ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ
ತಲೆಯೆಂದರೆ ನಿನ್ನದೆ ! ಆದ್ದರಿಂದ
ಆತ್ಮವಿದ್ಯೆ ನಿನಗೇ
ಕಲಿಸುವೆ ನಾನು ಪ್ರತ್ಯಕ್ಷ.”

ನಗಾರಿಯೊಂದ ತರಿಸಿದ.
ಅದಕ್ಕೆ ಸರೀ ಬಾರಿಸಿದ.
ಅದರ ಸದ್ದು ಸುತ್ತಲೂ
ಗಿರಿಕಂದರ ವ್ಯಾಪಿಸಿತು.
ಹಕ್ಕಿಗಳೂ ಹಾರಿದುವು
ಕೋತಿಗಳೂ ಓಡಿದವು.
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:
“ಎಲ್ಲಿಂದ ಹೊರಟಿತು, ಎಲ್ಲಿಗೆ ಹೋಯ್ತು ?
ಹಿಡಿವಂತಿಲ್ಲ ಕೈಯಲ್ಲಿ
ಕರೆವಂತಿಲ್ಲ ವಾಪಸು
ಆದರೂ-
ನಗಾರಿ ನಮ್ಮ ಕೈಯೊಳಗೆ !”
**

ಬೆಂಕಿಯೊಂದ ಮಾಡಿದ-ಅದಕ್ಕೆ
ಹಸೀ ಉರುವಲು ಹಾಕಿದ.
ಹೊಗೆ!

ಕಪ್ಪು, ಕಂದು, ನೀಲಿ
ಎಲ್ಲಾ ಕಡೆ ಹೊರಳಿ
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:

“ಹೇಗೆ ಹಸೀ ಸೌದೆಯಿಂದ
ಹುಟ್ಟುತ್ತದೆ ಹೊಗೆ-ಹಾಗೆ
ಆತ್ಮದಿಂದ ಎಲ್ಲವೂ !”
**

ದೋಣಿಯೊಂದ ತರಿಸಿದ-ತಳಕ್ಕೆ
ಎರಡು ತೂತು ಕೊರೆಸಿದ.
ನೀರು ಒಳಕ್ಕೆ ಧಾವಿಸಿತು
ಮೊಗೆದಷ್ಟೂ ಮುಗಿಯದೆ.
ಈಜಿ ದಡ ಸೇರಿದರು.
“ನೋಡಿದಿಯಾ !” ಎಂದ ಯಾಜ್ಞವಲ್ಕ್ಯ
“ದೇಹವೆಂದವರೆ ಒಡಕು ದೋಣಿ
ನಂಬಿದವಗೆ ಗತಿಯಿಲ್ಲ–
ಆತ್ಮಜ್ಞಾನವೆಂದರೆ
ಅದು ಈಜಿನ ಹಾಗೆ !”
**

ಆರಗಿಣಿಯೊಂದ ತರಿಸಿದ
ಪಂಚವರ್ಣದ ಗಿಣಿ, ಸಣ್ಣ ಕಣ್ಣಿನ ಗಿಣಿ
ನೋಡಿದರೆ ಇನ್ನೂ
ನೋಡವೇಕೆಂಬ ಗಿಣಿ
ಹಾಡುವುದಕ್ಕೆ ಕಲಿಯಿತು
ವೇದಗಳ ಪಠಿಸಿತು
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಹಾಡುತ್ತದೆ, ನುಡಿಯುತ್ತದೆ
ಮಾತ್ರ-
ಯಾಕೆ ಏನು ತಿಳಿಯದು.
ಆತ್ಮಜ್ಞಾನ ಇರದ ಹೊರತು
ಏನು ಹೇಳಿ ಏನು !”
**

ಹೇಂಟೆಯೊಂದ ತರಿಸಿದ
ಪ್ರತಿದಿನವೂ ತಿನಿಸಿದ.
ಬೆಳಗಿಂಜಾಮ ಕೂಗುತಿತ್ತು
ಎಲ್ಲರ ಎಬ್ಬಿಸುತಿತ್ತು
ಮಾತ್ರ-ಎಷ್ಟೇ ದಿನ ಕಳೆದರೂ
ಇಡಲಿಲ್ಲ ತತ್ತಿ
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಆತ್ಮಕ್ಕೆ ಬೇಕು ಪರಮಾತ್ಮ
ಇಲ್ಲದೇ-
ದಕ್ಕಲಾರದು ಬ್ರಹ್ಮಾಂಡ !
**

ಮುಗಿಯಿತೇ ಎಂದಳು ಮೈತ್ರೇಯಿ
ಹೂಂ ಎಂದ ಯಾಜ್ಞವಲ್ಕ್ಯ.
ಒಂದು ಮಾತ್ರ ಮರೆತಿರೆಂದು
ಸೀರೆ ರವಿಕೆ ಬಿಚ್ಚಿದಳು
ಲಂಗ ಒದ್ದು ಜಾಡಿಸಿದಳು.
“ನೋಡಿದಿರಾ!” ಎಂದಳು ಮೈತ್ರೇಯಿ :
“ಸೀರೆಯೆಂದರಹಂಕಾರ
ರವಿಕೆ ತಪ್ಪು ಗ್ರಹಿಕೆ
ಬಾಡಿಯೆಂದರೆ ಕಿಲಾಡಿ
ಲಂಗ ಆಶಾಭಂಗ-ಇನ್ನು
ನೂರಕ್ಕೆ ನೂರು ಸಾಚಾ
ಆಗಬೇಕೆಂದರೆ ಇದೋ !” ಎಂದು
ಕಿತ್ಕೆಸೆದಳು ಕಾಚ !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...