ಯಾಜ್ಞವಲ್ಕ್ಯನೂ ಮೃತ್ರೇಯಿಯೂ

ಯಾಜ್ಞವಲ್ಕ್ಯ ಹೇಳಿದ, ಮೈತ್ರೇಯಿಯ ಕರೆದು :
“ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ
ತಲೆಯೆಂದರೆ ನಿನ್ನದೆ ! ಆದ್ದರಿಂದ
ಆತ್ಮವಿದ್ಯೆ ನಿನಗೇ
ಕಲಿಸುವೆ ನಾನು ಪ್ರತ್ಯಕ್ಷ.”

ನಗಾರಿಯೊಂದ ತರಿಸಿದ.
ಅದಕ್ಕೆ ಸರೀ ಬಾರಿಸಿದ.
ಅದರ ಸದ್ದು ಸುತ್ತಲೂ
ಗಿರಿಕಂದರ ವ್ಯಾಪಿಸಿತು.
ಹಕ್ಕಿಗಳೂ ಹಾರಿದುವು
ಕೋತಿಗಳೂ ಓಡಿದವು.
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:
“ಎಲ್ಲಿಂದ ಹೊರಟಿತು, ಎಲ್ಲಿಗೆ ಹೋಯ್ತು ?
ಹಿಡಿವಂತಿಲ್ಲ ಕೈಯಲ್ಲಿ
ಕರೆವಂತಿಲ್ಲ ವಾಪಸು
ಆದರೂ-
ನಗಾರಿ ನಮ್ಮ ಕೈಯೊಳಗೆ !”
**

ಬೆಂಕಿಯೊಂದ ಮಾಡಿದ-ಅದಕ್ಕೆ
ಹಸೀ ಉರುವಲು ಹಾಕಿದ.
ಹೊಗೆ!

ಕಪ್ಪು, ಕಂದು, ನೀಲಿ
ಎಲ್ಲಾ ಕಡೆ ಹೊರಳಿ
“ನೋಡಿದಿಯಾ!” ಎಂದ ಯಾಜ್ಞವಲ್ಕ್ಯ:

“ಹೇಗೆ ಹಸೀ ಸೌದೆಯಿಂದ
ಹುಟ್ಟುತ್ತದೆ ಹೊಗೆ-ಹಾಗೆ
ಆತ್ಮದಿಂದ ಎಲ್ಲವೂ !”
**

ದೋಣಿಯೊಂದ ತರಿಸಿದ-ತಳಕ್ಕೆ
ಎರಡು ತೂತು ಕೊರೆಸಿದ.
ನೀರು ಒಳಕ್ಕೆ ಧಾವಿಸಿತು
ಮೊಗೆದಷ್ಟೂ ಮುಗಿಯದೆ.
ಈಜಿ ದಡ ಸೇರಿದರು.
“ನೋಡಿದಿಯಾ !” ಎಂದ ಯಾಜ್ಞವಲ್ಕ್ಯ
“ದೇಹವೆಂದವರೆ ಒಡಕು ದೋಣಿ
ನಂಬಿದವಗೆ ಗತಿಯಿಲ್ಲ–
ಆತ್ಮಜ್ಞಾನವೆಂದರೆ
ಅದು ಈಜಿನ ಹಾಗೆ !”
**

ಆರಗಿಣಿಯೊಂದ ತರಿಸಿದ
ಪಂಚವರ್ಣದ ಗಿಣಿ, ಸಣ್ಣ ಕಣ್ಣಿನ ಗಿಣಿ
ನೋಡಿದರೆ ಇನ್ನೂ
ನೋಡವೇಕೆಂಬ ಗಿಣಿ
ಹಾಡುವುದಕ್ಕೆ ಕಲಿಯಿತು
ವೇದಗಳ ಪಠಿಸಿತು
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಹಾಡುತ್ತದೆ, ನುಡಿಯುತ್ತದೆ
ಮಾತ್ರ-
ಯಾಕೆ ಏನು ತಿಳಿಯದು.
ಆತ್ಮಜ್ಞಾನ ಇರದ ಹೊರತು
ಏನು ಹೇಳಿ ಏನು !”
**

ಹೇಂಟೆಯೊಂದ ತರಿಸಿದ
ಪ್ರತಿದಿನವೂ ತಿನಿಸಿದ.
ಬೆಳಗಿಂಜಾಮ ಕೂಗುತಿತ್ತು
ಎಲ್ಲರ ಎಬ್ಬಿಸುತಿತ್ತು
ಮಾತ್ರ-ಎಷ್ಟೇ ದಿನ ಕಳೆದರೂ
ಇಡಲಿಲ್ಲ ತತ್ತಿ
“ನೋಡಿದೆಯಾ!” ಎಂದ ಯಾಜ್ಞವಲ್ಕ್ಯ:
“ಆತ್ಮಕ್ಕೆ ಬೇಕು ಪರಮಾತ್ಮ
ಇಲ್ಲದೇ-
ದಕ್ಕಲಾರದು ಬ್ರಹ್ಮಾಂಡ !
**

ಮುಗಿಯಿತೇ ಎಂದಳು ಮೈತ್ರೇಯಿ
ಹೂಂ ಎಂದ ಯಾಜ್ಞವಲ್ಕ್ಯ.
ಒಂದು ಮಾತ್ರ ಮರೆತಿರೆಂದು
ಸೀರೆ ರವಿಕೆ ಬಿಚ್ಚಿದಳು
ಲಂಗ ಒದ್ದು ಜಾಡಿಸಿದಳು.
“ನೋಡಿದಿರಾ!” ಎಂದಳು ಮೈತ್ರೇಯಿ :
“ಸೀರೆಯೆಂದರಹಂಕಾರ
ರವಿಕೆ ತಪ್ಪು ಗ್ರಹಿಕೆ
ಬಾಡಿಯೆಂದರೆ ಕಿಲಾಡಿ
ಲಂಗ ಆಶಾಭಂಗ-ಇನ್ನು
ನೂರಕ್ಕೆ ನೂರು ಸಾಚಾ
ಆಗಬೇಕೆಂದರೆ ಇದೋ !” ಎಂದು
ಕಿತ್ಕೆಸೆದಳು ಕಾಚ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿರಹ
Next post ಎಲ್ಲಿ ಹುಡುಕಲಿ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…