Home / ಕವನ / ಕವಿತೆ / ಖೂನಿ

ಖೂನಿ

ಸುಲಭ ಅಥವಾ ಕಷ್ಟದ
ಮಾತಲ್ಲ-
ಅವ ಸುಮ್ಮನೇ ಕೂತಿದ್ದ
ಸಂಜೆಯೂ ಆಗುತ್ತ ಇತ್ತು
ಆಗಲೇ ಗಡಿಯಾರ
ಆರರ ಹತ್ತಿರ ಬಂದಿತ್ತು
ಎದ್ದು
ಕಿಟಕಿಯ ತೆರೆದು ಬಂದ
ಇದ್ದ
ಬೆಳಕೂ ಒಳ ಬಂತು
ಅದು
ನದೀ ಮೇಲಿಂದ ಬಂತು
* * *

ಅವ ಆರಾಮ ಕುರ್ಚಿಯಲಿ
ಇದ್ದಾನೆ
ಅವ ಈಗಲೇ
ಬರಲಿದ್ದಾನೆ
ನೆರೆಮನೆ ಪಾತ್ರೆಯ
ಸದ್ದು ? ಅಥವ
ಗೋಡೆಯ ಮೇಲಿಂದ ಬೆಕ್ಕು
ಕೆಳ ಹಾರಿದ್ದು ?
ಅಥವ ಯಾರೋ
ನೀರಿಗೆ ಬಿದ್ದು…
ಅವಸರವೇನು
ನಿಧಾನ
* * *

ಬಹುದಿನಗಳಿಂದಲೂ
ಒಬ್ಬ ಸಿಗರೇಟು ತೆಗೆದರೆ
ಇನ್ನೊಬ್ಬ ಕಡ್ಡಿಗೀರುವನು
ಹಾಗಿತ್ತು

ತುಸು ಸಂಗೀತವೂ ಇತ್ತು
ಅದು ಆಗೀಗ
ನೀರ ಝುರಿಯಂತೆ
ಹರಿದು ಬರುತಿತ್ತು
ಮುಂದೆ ಹೋದಂತೆ
ಹಿಂದೆಯೂ ಬರುತಿತ್ತು
ನದಿ ದಾಟಿದವರಿಗೆ
ಇದು ಗೊತ್ತು
ನದೀ ಮಧ್ಯದಲೇ
ತಲೆ ಸುತ್ತು
ಆಗ
* * *

ಆಗಲೇ ಆರು ಹೊಡೆಯಿತು
ಕೊನೇ ಉಗಿಬಂಡಿಯೂ
ವರ್ಧಿಸಿತು ವೇಗ
ಆಗಲೇ
ಅಸ್ಪಷ್ಟ ಬೆಳಕಿನಲಿ
ನೀ ಎದ್ದು ನಿಂತಿ
ಎರಡೂ ಕೈಯಲಿ ಕಲ್ಲ
ಎತ್ತಿ ಹೊಡೆದಿ
ಆಮೇಲೆ ಕಿಟಕಿಯ
ಹೊರಕ್ಕೆ ದೂಡಿದಿ
ಧಡ್ಡೆಂದು ಸದ್ದು
ಒಮ್ಮೆ ಕೇಳಿಸಿತು
ಉಗಿ ಬಂಡಿಯ ಸದ್ದು
ಅದನ್ನು ಅಳಿಸಿತ್ತು
* * *

ಅವ ಬಾಗಿಲ ಬಳಿ
ಹೋಗುವನು
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಬಾಗಿಲ
ತೆರೆಯುವನು

ಅವನೇ ! ಅವ
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಕಾಲ
ಮನೆಯೊಳಗೆ ಇರಿಸುವನು
* * *

“ಸಂಜೆಯ ಕಿಟಕಿ ?”
“ಹೌದು”
“ಸರಿಯಾದ ಕಡೆಗೆ”
“ನನ್ನದೆ ಯೋಚನೆ”
“ಆ ಕಲ್ಲು ?”
“ಅದೂ ನನ್ನದೆ”
“ಚೆನ್ನಾಗಿದೆ. ಕಬ್ಬಿಣ ಅಥವ…”
“ಯುರೇನಿಯದಂತೆ ?”
“ಬಹಳ ಭಾರವಿರಬೇಕು”
“ಇದೆ”
* * *

ಅವಸರದ ಮಾತಲ್ಲ
ಅದರ ಅಗತ್ಯವೂ ಇಲ್ಲ
ಒಂದೆರಡು ದಿನಗಳೆ ?
ಆರಾಮ ಕುರ್ಚಿಯಲಿ
ನೀನು ಕುಳಿತಿರುವಿ
ಬಾಗಿಲಿನ ಬಡಿತಕ್ಕೆ
ಎದ್ದು ಬರುವಿ
ಒಂದು ಕ್ಷಣ ಯೋಚನೆಗೆ
ಸಿಕ್ಕಿದಂತಿರುವಿ
ಆಮೇಲೆ ನಿಧಾನ
ತೆರೆದೇ ತೆರೆಯುವಿ
ಒದ್ದೆಯಾಗಿಲ್ಲ ಮೈ
ಒದ್ದೆಯಾಗಿಲ್ಲ ಕೂದಲೂ
ಆದರೂ
ಹಳೇ ಹಾವಸೆಯ ವಾಸನೆ
ಮತ್ತೊಮ್ಮೆ ನಾನು
ಒಳಕ್ಕೆ ಕಾಲಿಡುವೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...