Home / ಕವನ / ಕವಿತೆ / ಖೂನಿ

ಖೂನಿ

ಸುಲಭ ಅಥವಾ ಕಷ್ಟದ
ಮಾತಲ್ಲ-
ಅವ ಸುಮ್ಮನೇ ಕೂತಿದ್ದ
ಸಂಜೆಯೂ ಆಗುತ್ತ ಇತ್ತು
ಆಗಲೇ ಗಡಿಯಾರ
ಆರರ ಹತ್ತಿರ ಬಂದಿತ್ತು
ಎದ್ದು
ಕಿಟಕಿಯ ತೆರೆದು ಬಂದ
ಇದ್ದ
ಬೆಳಕೂ ಒಳ ಬಂತು
ಅದು
ನದೀ ಮೇಲಿಂದ ಬಂತು
* * *

ಅವ ಆರಾಮ ಕುರ್ಚಿಯಲಿ
ಇದ್ದಾನೆ
ಅವ ಈಗಲೇ
ಬರಲಿದ್ದಾನೆ
ನೆರೆಮನೆ ಪಾತ್ರೆಯ
ಸದ್ದು ? ಅಥವ
ಗೋಡೆಯ ಮೇಲಿಂದ ಬೆಕ್ಕು
ಕೆಳ ಹಾರಿದ್ದು ?
ಅಥವ ಯಾರೋ
ನೀರಿಗೆ ಬಿದ್ದು…
ಅವಸರವೇನು
ನಿಧಾನ
* * *

ಬಹುದಿನಗಳಿಂದಲೂ
ಒಬ್ಬ ಸಿಗರೇಟು ತೆಗೆದರೆ
ಇನ್ನೊಬ್ಬ ಕಡ್ಡಿಗೀರುವನು
ಹಾಗಿತ್ತು

ತುಸು ಸಂಗೀತವೂ ಇತ್ತು
ಅದು ಆಗೀಗ
ನೀರ ಝುರಿಯಂತೆ
ಹರಿದು ಬರುತಿತ್ತು
ಮುಂದೆ ಹೋದಂತೆ
ಹಿಂದೆಯೂ ಬರುತಿತ್ತು
ನದಿ ದಾಟಿದವರಿಗೆ
ಇದು ಗೊತ್ತು
ನದೀ ಮಧ್ಯದಲೇ
ತಲೆ ಸುತ್ತು
ಆಗ
* * *

ಆಗಲೇ ಆರು ಹೊಡೆಯಿತು
ಕೊನೇ ಉಗಿಬಂಡಿಯೂ
ವರ್ಧಿಸಿತು ವೇಗ
ಆಗಲೇ
ಅಸ್ಪಷ್ಟ ಬೆಳಕಿನಲಿ
ನೀ ಎದ್ದು ನಿಂತಿ
ಎರಡೂ ಕೈಯಲಿ ಕಲ್ಲ
ಎತ್ತಿ ಹೊಡೆದಿ
ಆಮೇಲೆ ಕಿಟಕಿಯ
ಹೊರಕ್ಕೆ ದೂಡಿದಿ
ಧಡ್ಡೆಂದು ಸದ್ದು
ಒಮ್ಮೆ ಕೇಳಿಸಿತು
ಉಗಿ ಬಂಡಿಯ ಸದ್ದು
ಅದನ್ನು ಅಳಿಸಿತ್ತು
* * *

ಅವ ಬಾಗಿಲ ಬಳಿ
ಹೋಗುವನು
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಬಾಗಿಲ
ತೆರೆಯುವನು

ಅವನೇ ! ಅವ
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಕಾಲ
ಮನೆಯೊಳಗೆ ಇರಿಸುವನು
* * *

“ಸಂಜೆಯ ಕಿಟಕಿ ?”
“ಹೌದು”
“ಸರಿಯಾದ ಕಡೆಗೆ”
“ನನ್ನದೆ ಯೋಚನೆ”
“ಆ ಕಲ್ಲು ?”
“ಅದೂ ನನ್ನದೆ”
“ಚೆನ್ನಾಗಿದೆ. ಕಬ್ಬಿಣ ಅಥವ…”
“ಯುರೇನಿಯದಂತೆ ?”
“ಬಹಳ ಭಾರವಿರಬೇಕು”
“ಇದೆ”
* * *

ಅವಸರದ ಮಾತಲ್ಲ
ಅದರ ಅಗತ್ಯವೂ ಇಲ್ಲ
ಒಂದೆರಡು ದಿನಗಳೆ ?
ಆರಾಮ ಕುರ್ಚಿಯಲಿ
ನೀನು ಕುಳಿತಿರುವಿ
ಬಾಗಿಲಿನ ಬಡಿತಕ್ಕೆ
ಎದ್ದು ಬರುವಿ
ಒಂದು ಕ್ಷಣ ಯೋಚನೆಗೆ
ಸಿಕ್ಕಿದಂತಿರುವಿ
ಆಮೇಲೆ ನಿಧಾನ
ತೆರೆದೇ ತೆರೆಯುವಿ
ಒದ್ದೆಯಾಗಿಲ್ಲ ಮೈ
ಒದ್ದೆಯಾಗಿಲ್ಲ ಕೂದಲೂ
ಆದರೂ
ಹಳೇ ಹಾವಸೆಯ ವಾಸನೆ
ಮತ್ತೊಮ್ಮೆ ನಾನು
ಒಳಕ್ಕೆ ಕಾಲಿಡುವೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...