ಖೂನಿ

ಸುಲಭ ಅಥವಾ ಕಷ್ಟದ
ಮಾತಲ್ಲ-
ಅವ ಸುಮ್ಮನೇ ಕೂತಿದ್ದ
ಸಂಜೆಯೂ ಆಗುತ್ತ ಇತ್ತು
ಆಗಲೇ ಗಡಿಯಾರ
ಆರರ ಹತ್ತಿರ ಬಂದಿತ್ತು
ಎದ್ದು
ಕಿಟಕಿಯ ತೆರೆದು ಬಂದ
ಇದ್ದ
ಬೆಳಕೂ ಒಳ ಬಂತು
ಅದು
ನದೀ ಮೇಲಿಂದ ಬಂತು
* * *

ಅವ ಆರಾಮ ಕುರ್ಚಿಯಲಿ
ಇದ್ದಾನೆ
ಅವ ಈಗಲೇ
ಬರಲಿದ್ದಾನೆ
ನೆರೆಮನೆ ಪಾತ್ರೆಯ
ಸದ್ದು ? ಅಥವ
ಗೋಡೆಯ ಮೇಲಿಂದ ಬೆಕ್ಕು
ಕೆಳ ಹಾರಿದ್ದು ?
ಅಥವ ಯಾರೋ
ನೀರಿಗೆ ಬಿದ್ದು…
ಅವಸರವೇನು
ನಿಧಾನ
* * *

ಬಹುದಿನಗಳಿಂದಲೂ
ಒಬ್ಬ ಸಿಗರೇಟು ತೆಗೆದರೆ
ಇನ್ನೊಬ್ಬ ಕಡ್ಡಿಗೀರುವನು
ಹಾಗಿತ್ತು

ತುಸು ಸಂಗೀತವೂ ಇತ್ತು
ಅದು ಆಗೀಗ
ನೀರ ಝುರಿಯಂತೆ
ಹರಿದು ಬರುತಿತ್ತು
ಮುಂದೆ ಹೋದಂತೆ
ಹಿಂದೆಯೂ ಬರುತಿತ್ತು
ನದಿ ದಾಟಿದವರಿಗೆ
ಇದು ಗೊತ್ತು
ನದೀ ಮಧ್ಯದಲೇ
ತಲೆ ಸುತ್ತು
ಆಗ
* * *

ಆಗಲೇ ಆರು ಹೊಡೆಯಿತು
ಕೊನೇ ಉಗಿಬಂಡಿಯೂ
ವರ್ಧಿಸಿತು ವೇಗ
ಆಗಲೇ
ಅಸ್ಪಷ್ಟ ಬೆಳಕಿನಲಿ
ನೀ ಎದ್ದು ನಿಂತಿ
ಎರಡೂ ಕೈಯಲಿ ಕಲ್ಲ
ಎತ್ತಿ ಹೊಡೆದಿ
ಆಮೇಲೆ ಕಿಟಕಿಯ
ಹೊರಕ್ಕೆ ದೂಡಿದಿ
ಧಡ್ಡೆಂದು ಸದ್ದು
ಒಮ್ಮೆ ಕೇಳಿಸಿತು
ಉಗಿ ಬಂಡಿಯ ಸದ್ದು
ಅದನ್ನು ಅಳಿಸಿತ್ತು
* * *

ಅವ ಬಾಗಿಲ ಬಳಿ
ಹೋಗುವನು
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಬಾಗಿಲ
ತೆರೆಯುವನು

ಅವನೇ ! ಅವ
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಕಾಲ
ಮನೆಯೊಳಗೆ ಇರಿಸುವನು
* * *

“ಸಂಜೆಯ ಕಿಟಕಿ ?”
“ಹೌದು”
“ಸರಿಯಾದ ಕಡೆಗೆ”
“ನನ್ನದೆ ಯೋಚನೆ”
“ಆ ಕಲ್ಲು ?”
“ಅದೂ ನನ್ನದೆ”
“ಚೆನ್ನಾಗಿದೆ. ಕಬ್ಬಿಣ ಅಥವ…”
“ಯುರೇನಿಯದಂತೆ ?”
“ಬಹಳ ಭಾರವಿರಬೇಕು”
“ಇದೆ”
* * *

ಅವಸರದ ಮಾತಲ್ಲ
ಅದರ ಅಗತ್ಯವೂ ಇಲ್ಲ
ಒಂದೆರಡು ದಿನಗಳೆ ?
ಆರಾಮ ಕುರ್ಚಿಯಲಿ
ನೀನು ಕುಳಿತಿರುವಿ
ಬಾಗಿಲಿನ ಬಡಿತಕ್ಕೆ
ಎದ್ದು ಬರುವಿ
ಒಂದು ಕ್ಷಣ ಯೋಚನೆಗೆ
ಸಿಕ್ಕಿದಂತಿರುವಿ
ಆಮೇಲೆ ನಿಧಾನ
ತೆರೆದೇ ತೆರೆಯುವಿ
ಒದ್ದೆಯಾಗಿಲ್ಲ ಮೈ
ಒದ್ದೆಯಾಗಿಲ್ಲ ಕೂದಲೂ
ಆದರೂ
ಹಳೇ ಹಾವಸೆಯ ವಾಸನೆ
ಮತ್ತೊಮ್ಮೆ ನಾನು
ಒಳಕ್ಕೆ ಕಾಲಿಡುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೫೦ ವರ್ಷ ಬಳೆಸಬಹುದಾದ ಬ್ಯಾಟರಿ
Next post ಬಾರಯ್ಯಾ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys