ಖೂನಿ

ಸುಲಭ ಅಥವಾ ಕಷ್ಟದ
ಮಾತಲ್ಲ-
ಅವ ಸುಮ್ಮನೇ ಕೂತಿದ್ದ
ಸಂಜೆಯೂ ಆಗುತ್ತ ಇತ್ತು
ಆಗಲೇ ಗಡಿಯಾರ
ಆರರ ಹತ್ತಿರ ಬಂದಿತ್ತು
ಎದ್ದು
ಕಿಟಕಿಯ ತೆರೆದು ಬಂದ
ಇದ್ದ
ಬೆಳಕೂ ಒಳ ಬಂತು
ಅದು
ನದೀ ಮೇಲಿಂದ ಬಂತು
* * *

ಅವ ಆರಾಮ ಕುರ್ಚಿಯಲಿ
ಇದ್ದಾನೆ
ಅವ ಈಗಲೇ
ಬರಲಿದ್ದಾನೆ
ನೆರೆಮನೆ ಪಾತ್ರೆಯ
ಸದ್ದು ? ಅಥವ
ಗೋಡೆಯ ಮೇಲಿಂದ ಬೆಕ್ಕು
ಕೆಳ ಹಾರಿದ್ದು ?
ಅಥವ ಯಾರೋ
ನೀರಿಗೆ ಬಿದ್ದು…
ಅವಸರವೇನು
ನಿಧಾನ
* * *

ಬಹುದಿನಗಳಿಂದಲೂ
ಒಬ್ಬ ಸಿಗರೇಟು ತೆಗೆದರೆ
ಇನ್ನೊಬ್ಬ ಕಡ್ಡಿಗೀರುವನು
ಹಾಗಿತ್ತು

ತುಸು ಸಂಗೀತವೂ ಇತ್ತು
ಅದು ಆಗೀಗ
ನೀರ ಝುರಿಯಂತೆ
ಹರಿದು ಬರುತಿತ್ತು
ಮುಂದೆ ಹೋದಂತೆ
ಹಿಂದೆಯೂ ಬರುತಿತ್ತು
ನದಿ ದಾಟಿದವರಿಗೆ
ಇದು ಗೊತ್ತು
ನದೀ ಮಧ್ಯದಲೇ
ತಲೆ ಸುತ್ತು
ಆಗ
* * *

ಆಗಲೇ ಆರು ಹೊಡೆಯಿತು
ಕೊನೇ ಉಗಿಬಂಡಿಯೂ
ವರ್ಧಿಸಿತು ವೇಗ
ಆಗಲೇ
ಅಸ್ಪಷ್ಟ ಬೆಳಕಿನಲಿ
ನೀ ಎದ್ದು ನಿಂತಿ
ಎರಡೂ ಕೈಯಲಿ ಕಲ್ಲ
ಎತ್ತಿ ಹೊಡೆದಿ
ಆಮೇಲೆ ಕಿಟಕಿಯ
ಹೊರಕ್ಕೆ ದೂಡಿದಿ
ಧಡ್ಡೆಂದು ಸದ್ದು
ಒಮ್ಮೆ ಕೇಳಿಸಿತು
ಉಗಿ ಬಂಡಿಯ ಸದ್ದು
ಅದನ್ನು ಅಳಿಸಿತ್ತು
* * *

ಅವ ಬಾಗಿಲ ಬಳಿ
ಹೋಗುವನು
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಬಾಗಿಲ
ತೆರೆಯುವನು

ಅವನೇ ! ಅವ
ಒಂದು ಕ್ಷಣ ಏನೋ
ಯೋಚಿಸಿ ನಿಲ್ಲುವನು
ಆಮೇಲೆ ಕಾಲ
ಮನೆಯೊಳಗೆ ಇರಿಸುವನು
* * *

“ಸಂಜೆಯ ಕಿಟಕಿ ?”
“ಹೌದು”
“ಸರಿಯಾದ ಕಡೆಗೆ”
“ನನ್ನದೆ ಯೋಚನೆ”
“ಆ ಕಲ್ಲು ?”
“ಅದೂ ನನ್ನದೆ”
“ಚೆನ್ನಾಗಿದೆ. ಕಬ್ಬಿಣ ಅಥವ…”
“ಯುರೇನಿಯದಂತೆ ?”
“ಬಹಳ ಭಾರವಿರಬೇಕು”
“ಇದೆ”
* * *

ಅವಸರದ ಮಾತಲ್ಲ
ಅದರ ಅಗತ್ಯವೂ ಇಲ್ಲ
ಒಂದೆರಡು ದಿನಗಳೆ ?
ಆರಾಮ ಕುರ್ಚಿಯಲಿ
ನೀನು ಕುಳಿತಿರುವಿ
ಬಾಗಿಲಿನ ಬಡಿತಕ್ಕೆ
ಎದ್ದು ಬರುವಿ
ಒಂದು ಕ್ಷಣ ಯೋಚನೆಗೆ
ಸಿಕ್ಕಿದಂತಿರುವಿ
ಆಮೇಲೆ ನಿಧಾನ
ತೆರೆದೇ ತೆರೆಯುವಿ
ಒದ್ದೆಯಾಗಿಲ್ಲ ಮೈ
ಒದ್ದೆಯಾಗಿಲ್ಲ ಕೂದಲೂ
ಆದರೂ
ಹಳೇ ಹಾವಸೆಯ ವಾಸನೆ
ಮತ್ತೊಮ್ಮೆ ನಾನು
ಒಳಕ್ಕೆ ಕಾಲಿಡುವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೫೦ ವರ್ಷ ಬಳೆಸಬಹುದಾದ ಬ್ಯಾಟರಿ
Next post ಬಾರಯ್ಯಾ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…