Home / ಕವನ / ನೀಳ್ಗವಿತೆ / ವರುಣನ ಕೇಳು

ವರುಣನ ಕೇಳು

ವರುಣನ ಮಗ ಭೃಗು ತಿಳಿದಿದ್ದ
ಎಲ್ಲರಿಗಿಂತಲು ತಾನೇ ಬುದ್ಧ
ಒದ್ದನು ವರುಣನು ಆತನ ಪೃಷ್ಠಕೆ
ಭೃಗು ಮುಗ್ಗರಿಸಿದನಾಚೆಯ ಲೋಕಕೆ

ಭೃಗು ನೋಡಿದ-
ಅಲ್ಲೊಬ್ಬಾತ
ಇನ್ನೊಬ್ಬಾತನ ಬಿಚ್ಚುತಲಿದ್ದ
ವೃಕ್ಷದ ತೊಗಟೆಯ ಬಿಡಿಸುವ ಹಾಗೆ
ಒಂದೊಂದೇ ಪೊರೆ
ಬೀಳಲು ಕೆಳಗೆ

ಒಳಗೇನುಳಿವುದು ?
ಕೊನೆಗೇನುಳಿವುದು ?
ಇಂಥಾ ಕೆಲಸವು ಎಂದಿಗೆ ಮುಗಿವುದು ?
ಎನ್ನಲು ಭ್ರೃಗುವು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಬಿಚ್ಚುವ ವ್ಯಕ್ತಿಯೆ ಬಿಚ್ಚುವುದಿಲ್ಲ
ಬಿಚ್ಚಿದುದೆಲ್ಲಾ ಮುಗಿಯುವುದಿಲ್ಲ
ಪೊರೆಯೊಳಗಿದ್ದರೆ ಪೊರಯೇನಂತೆ
ಅಷ್ಟಕೆ ಯಾತಕೆ ಯಾರಿಗೆ ಚಿಂತೆ ?
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಒಬ್ಬಾನೊಬ್ಬ
ಬಾಯಿಯ ತೆರೆದು ಕೂಗುತಲಿರುವ
ಆದರು ಹೊರಡದು ಒಂದೂ ಶಬ್ದ
ಇದ ನೋಡಿದ ಭ್ರಗು-
ವಾದನು ಸ್ತಬ್ದ

ಕೂಗಿದರೇತಕೆ
ಧ್ವನಿಯೇ ಇಲ್ಲ ?
ಇದಕುತ್ತರವ ಯಾವನು ಬಲ್ಲ ?
ಎನ್ನಲು ಭೃಗು ಆತನು ಹೇಳಿದ-
ಹೊಗೆಲೊ ಹೈದ !
ವರುಣನ ಕೇಳು !

ಕಿವಿಗಳಿಗೆಲ್ಲವು ಕೇಳಲೆಬೇಕೆ ?
ಕೇಳದ ಸ್ವರವೂ ಇರದೇ ಏಕೆ?
ಕೇಳುವ ಸಮಯ ಸರಿಯಾಗಿ ಕೇಳು
ಕೇಳದ ಸಮಯ ಕಿವಿಮುಚ್ಚಿಕೊಳ್ಳು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಒಬ್ಬ ವಿದೂಷಕ
ಸಿಂಹಾಸನವ ಏರಿದ ಕೌತುಕ
ನಕ್ಕವರೆಲ್ಲರ ಅಳಿಸುತಲಿದ್ದ
ಅತ್ತವರನ್ನೂ ನಗಿಸುತಲಿದ್ದ

ಅತ್ತವರಾರು ?
ನಕ್ಕವರಾರು ?
ಇಂಥ ರಾಜ್ಯದಿ ಉಳಿದವರಾರು ?
ಎನ್ನಲು ಭೃಗು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಸಿಂಹಗಳಿಲ್ಲದ ಸಿಂಹಾಸನದಿ
ಕೂರದೆ ಏನು ಯಾರೂ ಸುಖದಿ ?
ನಕ್ಕರೆ ಬಾಯಿ ಅತ್ತರೆ ಕಣ್ಣು
ಹಾಲು ಕಡೆದೇ ಸಿಗುವುದು ಗಿಣ್ಣು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ.

ಭೃಗು ನೋಡಿದ-
ಕಾರ್ಗತ್ತಲೆ
ಮೈಬಣ್ಣದ ತೀರಾ ಬೆತ್ತಲೆ
ವೃಕ್ತಿಯು ಭಾರೀ ಗದೆಯನು ಹಿಡಿದು
ನದಿಯೆರಡನ್ನೂ
ಕಾಯುತ್ತಿರುವುದು

ಒಂದರ ತುಂಬಾ
ಹರಿಯುವ ನೆತ್ತರು
ಇನ್ನೊಂದರಲಿ ಯಾವುದೊ ಅತ್ತರು
ಎರಡೂ ನದಿಗಳು ಹೋಗುವುದೊಂದೇ
ಬಯಲಲಿ ತುಸು
ಹಿಂದೇ ಮುಂದೇ

ಯಾತಕೆ ಗದೆ
ಯಾತಕೆ ಬೆತ್ತಲೆ
ಯಾತಕೆ ಎರಡೂ ನದಿಗಳು ಇತ್ತಲೆ ?
ಎನ್ನಲು ಭೃಗು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಹಲವರು ಸತ್ತರು ಕೆಲವರು ಅತ್ತರು
ಕಾವಲುಗಾರನ ಬಟ್ಟೆಯ ಕಿತ್ತರು
ನೀರಿನ ಗುಣ ಕೆಳಗೇ ಹರಿವುದು
ಆವಿ ಮಾತ್ರವೆ ಮೇಲೇರುವುದು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭ್ಸಗು ನೋಡಿದ-
ಮೈಕೈ ಅಸ್ಥಿ
ಆದಂಥವನೂಬ್ಬನೆ ಕುಸ್ತಿ
ಮಾಡುತ್ತಿರುವ ನೋಡುತ್ತಿರುವ
ಗಾಳಿಯ ಜತೆ
ಹೋರುತ್ತಿರುವ

ಹಲ್ಲನು ಕಡಿದು
ತಲೆಯನು ಬಾಗಿ
ತಾನೂ ಹೊಡೆತವ ಕೊಂಡವನಾಗಿ
ಯಾರೋ ದೊಪ್ಪನೆ ಕೆಡವಿಸಿ ಒಮ್ಮೆಲೆ
ಕುಳಿತಿರಬಹುದೆ
ಅವನೆದೆ ಮೇಲೆ ?

ಯಾತಕೆ ಈ ಸ್ಥಿತಿ
ಯಾತಕೆ ಅಸ್ಥಿ
ಯಾರೊಂದಿಗೆ ಈ ನಡೆಸಿದ ಕುಸ್ತಿ?
ಎನ್ನಲು ಭೃಗು ಅತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಕಾಣುವುದೂಂದೇ ವಾಸ್ತವವಲ್ಲ
ಕಾಣದೆ ಇರುವುದು ಸುಳ್ಳೇನಲ್ಲ
ಆಡುವ ವ್ಯಕ್ತಿಗೆ ಆಟವೆ ಮುಖ್ಯ
ಗೆಲುವಿನಂತೆಯೆ ಸೋಲೂ ಶಕ್ಯ
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಇಬ್ಬರು ಸ್ತ್ರೀಯರು
ತೊಡೆ ತೆರೆದಿದ್ದರು ಅರೆತೆರೆದಿದ್ದರು
ಲೋಕದ ಸಕಲೈಶ್ವರ್ಯವು ಅಲ್ಲಿ
ಹುದುಗಿಟ್ಟಂತೆ
ಹೊರಗೂ ಚೆಲ್ಲಿ

ಕತ್ತಲು ಬೆಳಕು
ನೆರಳಿನ ಸರ್ಪ
ಯಾರಿಗು ತಲೆ ಬಾಗದ ದರ್ಪ
ಭೃಗು ದಂಗಾದ ಎಷ್ಟೋ ಕಾದ
ಅಳುಕುತ ಅವರ
ಬಳಿಗೂ ಹೋದ

ಕತ್ತಲು ಬೆಳಕು
ಒಂದೇ ಕಡೆಯೆ !
ಸಕಲೈಶ್ಚರ್ಯಕು ಇಂಥಾ ಎಡೆಯೆ ?
ಎನ್ನಲು ಭೃಗು ಹೇಳಿದರವರು-
ನೀನಿನ್ನೂ ಕರು !
ವರುಣನ ಕೇಳು !

ಹೋಗುವ ದಾರಿಯೆ ಬರಲೂ ಬೇಕು
ಅದಕೇ ಕತ್ತಲು ಅದಕೇ ಬೆಳಕು
ಸೃಷ್ಟಿಮೂಲದ ಇಂಥ ರಹಸ್ಯ
ಯಾರಲು ಕೇಳದೆ ತಿಳಿವುದವಶ್ಯ !
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಆಚೆಗೆ ಬಿದ್ದ-
ಎಷ್ಟೋ ಯುಗ
ಹಾಗೆಯೆ ಇದ್ದ !
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್