Home / ಕವನ / ನೀಳ್ಗವಿತೆ / ವರುಣನ ಕೇಳು

ವರುಣನ ಕೇಳು

ವರುಣನ ಮಗ ಭೃಗು ತಿಳಿದಿದ್ದ
ಎಲ್ಲರಿಗಿಂತಲು ತಾನೇ ಬುದ್ಧ
ಒದ್ದನು ವರುಣನು ಆತನ ಪೃಷ್ಠಕೆ
ಭೃಗು ಮುಗ್ಗರಿಸಿದನಾಚೆಯ ಲೋಕಕೆ

ಭೃಗು ನೋಡಿದ-
ಅಲ್ಲೊಬ್ಬಾತ
ಇನ್ನೊಬ್ಬಾತನ ಬಿಚ್ಚುತಲಿದ್ದ
ವೃಕ್ಷದ ತೊಗಟೆಯ ಬಿಡಿಸುವ ಹಾಗೆ
ಒಂದೊಂದೇ ಪೊರೆ
ಬೀಳಲು ಕೆಳಗೆ

ಒಳಗೇನುಳಿವುದು ?
ಕೊನೆಗೇನುಳಿವುದು ?
ಇಂಥಾ ಕೆಲಸವು ಎಂದಿಗೆ ಮುಗಿವುದು ?
ಎನ್ನಲು ಭ್ರೃಗುವು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಬಿಚ್ಚುವ ವ್ಯಕ್ತಿಯೆ ಬಿಚ್ಚುವುದಿಲ್ಲ
ಬಿಚ್ಚಿದುದೆಲ್ಲಾ ಮುಗಿಯುವುದಿಲ್ಲ
ಪೊರೆಯೊಳಗಿದ್ದರೆ ಪೊರಯೇನಂತೆ
ಅಷ್ಟಕೆ ಯಾತಕೆ ಯಾರಿಗೆ ಚಿಂತೆ ?
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಒಬ್ಬಾನೊಬ್ಬ
ಬಾಯಿಯ ತೆರೆದು ಕೂಗುತಲಿರುವ
ಆದರು ಹೊರಡದು ಒಂದೂ ಶಬ್ದ
ಇದ ನೋಡಿದ ಭ್ರಗು-
ವಾದನು ಸ್ತಬ್ದ

ಕೂಗಿದರೇತಕೆ
ಧ್ವನಿಯೇ ಇಲ್ಲ ?
ಇದಕುತ್ತರವ ಯಾವನು ಬಲ್ಲ ?
ಎನ್ನಲು ಭೃಗು ಆತನು ಹೇಳಿದ-
ಹೊಗೆಲೊ ಹೈದ !
ವರುಣನ ಕೇಳು !

ಕಿವಿಗಳಿಗೆಲ್ಲವು ಕೇಳಲೆಬೇಕೆ ?
ಕೇಳದ ಸ್ವರವೂ ಇರದೇ ಏಕೆ?
ಕೇಳುವ ಸಮಯ ಸರಿಯಾಗಿ ಕೇಳು
ಕೇಳದ ಸಮಯ ಕಿವಿಮುಚ್ಚಿಕೊಳ್ಳು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಒಬ್ಬ ವಿದೂಷಕ
ಸಿಂಹಾಸನವ ಏರಿದ ಕೌತುಕ
ನಕ್ಕವರೆಲ್ಲರ ಅಳಿಸುತಲಿದ್ದ
ಅತ್ತವರನ್ನೂ ನಗಿಸುತಲಿದ್ದ

ಅತ್ತವರಾರು ?
ನಕ್ಕವರಾರು ?
ಇಂಥ ರಾಜ್ಯದಿ ಉಳಿದವರಾರು ?
ಎನ್ನಲು ಭೃಗು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಸಿಂಹಗಳಿಲ್ಲದ ಸಿಂಹಾಸನದಿ
ಕೂರದೆ ಏನು ಯಾರೂ ಸುಖದಿ ?
ನಕ್ಕರೆ ಬಾಯಿ ಅತ್ತರೆ ಕಣ್ಣು
ಹಾಲು ಕಡೆದೇ ಸಿಗುವುದು ಗಿಣ್ಣು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ.

ಭೃಗು ನೋಡಿದ-
ಕಾರ್ಗತ್ತಲೆ
ಮೈಬಣ್ಣದ ತೀರಾ ಬೆತ್ತಲೆ
ವೃಕ್ತಿಯು ಭಾರೀ ಗದೆಯನು ಹಿಡಿದು
ನದಿಯೆರಡನ್ನೂ
ಕಾಯುತ್ತಿರುವುದು

ಒಂದರ ತುಂಬಾ
ಹರಿಯುವ ನೆತ್ತರು
ಇನ್ನೊಂದರಲಿ ಯಾವುದೊ ಅತ್ತರು
ಎರಡೂ ನದಿಗಳು ಹೋಗುವುದೊಂದೇ
ಬಯಲಲಿ ತುಸು
ಹಿಂದೇ ಮುಂದೇ

ಯಾತಕೆ ಗದೆ
ಯಾತಕೆ ಬೆತ್ತಲೆ
ಯಾತಕೆ ಎರಡೂ ನದಿಗಳು ಇತ್ತಲೆ ?
ಎನ್ನಲು ಭೃಗು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಹಲವರು ಸತ್ತರು ಕೆಲವರು ಅತ್ತರು
ಕಾವಲುಗಾರನ ಬಟ್ಟೆಯ ಕಿತ್ತರು
ನೀರಿನ ಗುಣ ಕೆಳಗೇ ಹರಿವುದು
ಆವಿ ಮಾತ್ರವೆ ಮೇಲೇರುವುದು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭ್ಸಗು ನೋಡಿದ-
ಮೈಕೈ ಅಸ್ಥಿ
ಆದಂಥವನೂಬ್ಬನೆ ಕುಸ್ತಿ
ಮಾಡುತ್ತಿರುವ ನೋಡುತ್ತಿರುವ
ಗಾಳಿಯ ಜತೆ
ಹೋರುತ್ತಿರುವ

ಹಲ್ಲನು ಕಡಿದು
ತಲೆಯನು ಬಾಗಿ
ತಾನೂ ಹೊಡೆತವ ಕೊಂಡವನಾಗಿ
ಯಾರೋ ದೊಪ್ಪನೆ ಕೆಡವಿಸಿ ಒಮ್ಮೆಲೆ
ಕುಳಿತಿರಬಹುದೆ
ಅವನೆದೆ ಮೇಲೆ ?

ಯಾತಕೆ ಈ ಸ್ಥಿತಿ
ಯಾತಕೆ ಅಸ್ಥಿ
ಯಾರೊಂದಿಗೆ ಈ ನಡೆಸಿದ ಕುಸ್ತಿ?
ಎನ್ನಲು ಭೃಗು ಅತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಕಾಣುವುದೂಂದೇ ವಾಸ್ತವವಲ್ಲ
ಕಾಣದೆ ಇರುವುದು ಸುಳ್ಳೇನಲ್ಲ
ಆಡುವ ವ್ಯಕ್ತಿಗೆ ಆಟವೆ ಮುಖ್ಯ
ಗೆಲುವಿನಂತೆಯೆ ಸೋಲೂ ಶಕ್ಯ
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಇಬ್ಬರು ಸ್ತ್ರೀಯರು
ತೊಡೆ ತೆರೆದಿದ್ದರು ಅರೆತೆರೆದಿದ್ದರು
ಲೋಕದ ಸಕಲೈಶ್ವರ್ಯವು ಅಲ್ಲಿ
ಹುದುಗಿಟ್ಟಂತೆ
ಹೊರಗೂ ಚೆಲ್ಲಿ

ಕತ್ತಲು ಬೆಳಕು
ನೆರಳಿನ ಸರ್ಪ
ಯಾರಿಗು ತಲೆ ಬಾಗದ ದರ್ಪ
ಭೃಗು ದಂಗಾದ ಎಷ್ಟೋ ಕಾದ
ಅಳುಕುತ ಅವರ
ಬಳಿಗೂ ಹೋದ

ಕತ್ತಲು ಬೆಳಕು
ಒಂದೇ ಕಡೆಯೆ !
ಸಕಲೈಶ್ಚರ್ಯಕು ಇಂಥಾ ಎಡೆಯೆ ?
ಎನ್ನಲು ಭೃಗು ಹೇಳಿದರವರು-
ನೀನಿನ್ನೂ ಕರು !
ವರುಣನ ಕೇಳು !

ಹೋಗುವ ದಾರಿಯೆ ಬರಲೂ ಬೇಕು
ಅದಕೇ ಕತ್ತಲು ಅದಕೇ ಬೆಳಕು
ಸೃಷ್ಟಿಮೂಲದ ಇಂಥ ರಹಸ್ಯ
ಯಾರಲು ಕೇಳದೆ ತಿಳಿವುದವಶ್ಯ !
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಆಚೆಗೆ ಬಿದ್ದ-
ಎಷ್ಟೋ ಯುಗ
ಹಾಗೆಯೆ ಇದ್ದ !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...