Home / ಕವನ / ನೀಳ್ಗವಿತೆ / ವರುಣನ ಕೇಳು

ವರುಣನ ಕೇಳು

ವರುಣನ ಮಗ ಭೃಗು ತಿಳಿದಿದ್ದ
ಎಲ್ಲರಿಗಿಂತಲು ತಾನೇ ಬುದ್ಧ
ಒದ್ದನು ವರುಣನು ಆತನ ಪೃಷ್ಠಕೆ
ಭೃಗು ಮುಗ್ಗರಿಸಿದನಾಚೆಯ ಲೋಕಕೆ

ಭೃಗು ನೋಡಿದ-
ಅಲ್ಲೊಬ್ಬಾತ
ಇನ್ನೊಬ್ಬಾತನ ಬಿಚ್ಚುತಲಿದ್ದ
ವೃಕ್ಷದ ತೊಗಟೆಯ ಬಿಡಿಸುವ ಹಾಗೆ
ಒಂದೊಂದೇ ಪೊರೆ
ಬೀಳಲು ಕೆಳಗೆ

ಒಳಗೇನುಳಿವುದು ?
ಕೊನೆಗೇನುಳಿವುದು ?
ಇಂಥಾ ಕೆಲಸವು ಎಂದಿಗೆ ಮುಗಿವುದು ?
ಎನ್ನಲು ಭ್ರೃಗುವು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಬಿಚ್ಚುವ ವ್ಯಕ್ತಿಯೆ ಬಿಚ್ಚುವುದಿಲ್ಲ
ಬಿಚ್ಚಿದುದೆಲ್ಲಾ ಮುಗಿಯುವುದಿಲ್ಲ
ಪೊರೆಯೊಳಗಿದ್ದರೆ ಪೊರಯೇನಂತೆ
ಅಷ್ಟಕೆ ಯಾತಕೆ ಯಾರಿಗೆ ಚಿಂತೆ ?
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಒಬ್ಬಾನೊಬ್ಬ
ಬಾಯಿಯ ತೆರೆದು ಕೂಗುತಲಿರುವ
ಆದರು ಹೊರಡದು ಒಂದೂ ಶಬ್ದ
ಇದ ನೋಡಿದ ಭ್ರಗು-
ವಾದನು ಸ್ತಬ್ದ

ಕೂಗಿದರೇತಕೆ
ಧ್ವನಿಯೇ ಇಲ್ಲ ?
ಇದಕುತ್ತರವ ಯಾವನು ಬಲ್ಲ ?
ಎನ್ನಲು ಭೃಗು ಆತನು ಹೇಳಿದ-
ಹೊಗೆಲೊ ಹೈದ !
ವರುಣನ ಕೇಳು !

ಕಿವಿಗಳಿಗೆಲ್ಲವು ಕೇಳಲೆಬೇಕೆ ?
ಕೇಳದ ಸ್ವರವೂ ಇರದೇ ಏಕೆ?
ಕೇಳುವ ಸಮಯ ಸರಿಯಾಗಿ ಕೇಳು
ಕೇಳದ ಸಮಯ ಕಿವಿಮುಚ್ಚಿಕೊಳ್ಳು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಒಬ್ಬ ವಿದೂಷಕ
ಸಿಂಹಾಸನವ ಏರಿದ ಕೌತುಕ
ನಕ್ಕವರೆಲ್ಲರ ಅಳಿಸುತಲಿದ್ದ
ಅತ್ತವರನ್ನೂ ನಗಿಸುತಲಿದ್ದ

ಅತ್ತವರಾರು ?
ನಕ್ಕವರಾರು ?
ಇಂಥ ರಾಜ್ಯದಿ ಉಳಿದವರಾರು ?
ಎನ್ನಲು ಭೃಗು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಸಿಂಹಗಳಿಲ್ಲದ ಸಿಂಹಾಸನದಿ
ಕೂರದೆ ಏನು ಯಾರೂ ಸುಖದಿ ?
ನಕ್ಕರೆ ಬಾಯಿ ಅತ್ತರೆ ಕಣ್ಣು
ಹಾಲು ಕಡೆದೇ ಸಿಗುವುದು ಗಿಣ್ಣು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ.

ಭೃಗು ನೋಡಿದ-
ಕಾರ್ಗತ್ತಲೆ
ಮೈಬಣ್ಣದ ತೀರಾ ಬೆತ್ತಲೆ
ವೃಕ್ತಿಯು ಭಾರೀ ಗದೆಯನು ಹಿಡಿದು
ನದಿಯೆರಡನ್ನೂ
ಕಾಯುತ್ತಿರುವುದು

ಒಂದರ ತುಂಬಾ
ಹರಿಯುವ ನೆತ್ತರು
ಇನ್ನೊಂದರಲಿ ಯಾವುದೊ ಅತ್ತರು
ಎರಡೂ ನದಿಗಳು ಹೋಗುವುದೊಂದೇ
ಬಯಲಲಿ ತುಸು
ಹಿಂದೇ ಮುಂದೇ

ಯಾತಕೆ ಗದೆ
ಯಾತಕೆ ಬೆತ್ತಲೆ
ಯಾತಕೆ ಎರಡೂ ನದಿಗಳು ಇತ್ತಲೆ ?
ಎನ್ನಲು ಭೃಗು ಆತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಹಲವರು ಸತ್ತರು ಕೆಲವರು ಅತ್ತರು
ಕಾವಲುಗಾರನ ಬಟ್ಟೆಯ ಕಿತ್ತರು
ನೀರಿನ ಗುಣ ಕೆಳಗೇ ಹರಿವುದು
ಆವಿ ಮಾತ್ರವೆ ಮೇಲೇರುವುದು
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭ್ಸಗು ನೋಡಿದ-
ಮೈಕೈ ಅಸ್ಥಿ
ಆದಂಥವನೂಬ್ಬನೆ ಕುಸ್ತಿ
ಮಾಡುತ್ತಿರುವ ನೋಡುತ್ತಿರುವ
ಗಾಳಿಯ ಜತೆ
ಹೋರುತ್ತಿರುವ

ಹಲ್ಲನು ಕಡಿದು
ತಲೆಯನು ಬಾಗಿ
ತಾನೂ ಹೊಡೆತವ ಕೊಂಡವನಾಗಿ
ಯಾರೋ ದೊಪ್ಪನೆ ಕೆಡವಿಸಿ ಒಮ್ಮೆಲೆ
ಕುಳಿತಿರಬಹುದೆ
ಅವನೆದೆ ಮೇಲೆ ?

ಯಾತಕೆ ಈ ಸ್ಥಿತಿ
ಯಾತಕೆ ಅಸ್ಥಿ
ಯಾರೊಂದಿಗೆ ಈ ನಡೆಸಿದ ಕುಸ್ತಿ?
ಎನ್ನಲು ಭೃಗು ಅತನು ಹೇಳಿದ-
ಹೋಗೆಲೊ ಹೈದ !
ವರುಣನ ಕೇಳು !

ಕಾಣುವುದೂಂದೇ ವಾಸ್ತವವಲ್ಲ
ಕಾಣದೆ ಇರುವುದು ಸುಳ್ಳೇನಲ್ಲ
ಆಡುವ ವ್ಯಕ್ತಿಗೆ ಆಟವೆ ಮುಖ್ಯ
ಗೆಲುವಿನಂತೆಯೆ ಸೋಲೂ ಶಕ್ಯ
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಮುಗ್ಗರಿಸಿದ್ದ

ಭೃಗು ನೋಡಿದ-
ಇಬ್ಬರು ಸ್ತ್ರೀಯರು
ತೊಡೆ ತೆರೆದಿದ್ದರು ಅರೆತೆರೆದಿದ್ದರು
ಲೋಕದ ಸಕಲೈಶ್ವರ್ಯವು ಅಲ್ಲಿ
ಹುದುಗಿಟ್ಟಂತೆ
ಹೊರಗೂ ಚೆಲ್ಲಿ

ಕತ್ತಲು ಬೆಳಕು
ನೆರಳಿನ ಸರ್ಪ
ಯಾರಿಗು ತಲೆ ಬಾಗದ ದರ್ಪ
ಭೃಗು ದಂಗಾದ ಎಷ್ಟೋ ಕಾದ
ಅಳುಕುತ ಅವರ
ಬಳಿಗೂ ಹೋದ

ಕತ್ತಲು ಬೆಳಕು
ಒಂದೇ ಕಡೆಯೆ !
ಸಕಲೈಶ್ಚರ್ಯಕು ಇಂಥಾ ಎಡೆಯೆ ?
ಎನ್ನಲು ಭೃಗು ಹೇಳಿದರವರು-
ನೀನಿನ್ನೂ ಕರು !
ವರುಣನ ಕೇಳು !

ಹೋಗುವ ದಾರಿಯೆ ಬರಲೂ ಬೇಕು
ಅದಕೇ ಕತ್ತಲು ಅದಕೇ ಬೆಳಕು
ಸೃಷ್ಟಿಮೂಲದ ಇಂಥ ರಹಸ್ಯ
ಯಾರಲು ಕೇಳದೆ ತಿಳಿವುದವಶ್ಯ !
-ಎಂದನು ವರುಣ :
ನೀನಿನ್ನೂ ಹೈದ !
ಎನ್ನಲು ಭೃಗು ಆಚೆಗೆ ಬಿದ್ದ-
ಎಷ್ಟೋ ಯುಗ
ಹಾಗೆಯೆ ಇದ್ದ !
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...