Home / ಕವನ / ನೀಳ್ಗವಿತೆ / ರುಗ್ಣ ಯಾಕುಬ

ರುಗ್ಣ ಯಾಕುಬ

ಸುಡಾನವನಾಳಿದ ಅತ್ಯಂತ ಕ್ರೂರಿ ದೊರೆ
ಯಾರೆಂದು ಕೇಳಿದರೆ ಎಲ್ಲರೂ ಹೇಳುವರು-
ಅವನೇ ಯಾಕುಬ
ರುಗ್ಣ ಯಾಕುಬ
ಅವನ ಕತೆ ಕೇಳುವುದು
ನಾಕು ಜನ ಇರುವ ಕಡೆ-ಪ್ರಜಾ
ಜನರೆ ಅವನ ವಿರುದ್ಧ
ದಂಗೆಯೆದ್ದರು ಸಹಾ-ಆ
ದಂಗೆಯನು ಸದೆಬಡಿದು
ಅನೇಕರನು ಹಿಡಿದು
ಕೆಲವರನು ಕೂಡಲೇ
ಕೆಲವರನು ಆಮೇಲೆ

ಅಂಥವರ ನಡುವೊಬ್ಬ
ಮಾಂತ್ರಿಕನೂ ಇದ್ದ
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಒಂದು ದಿನ ಅಂಥವನ
ಸರದಿಯೂ ಬರಲಾಗಿ :
“ಯಾಕೆ ಸುಮ್ಮನೆ ನನ್ನ
ಕೊಲಿಸುವಿರಿ ? ಕೊಲಿಸಿದರೆ
ನಾ ಕಲಿತ ವಿದ್ಯೆಯೂ
ನನ್ನ ಜತೆ ಹೋಗಿ-
ಇಲ್ಲದಿದ್ದರೆ ನಿಮಗೆ
ಕುಳಿತಲ್ಲೆ ತೋರಿಸುವೆ
ಲೋಕದದ್ಭುತಗಳ
ಅಂಗೈಗೆ ತರಿಸುವೆ!”

ಆಗ ಯಾಕುಬನು
ರುಗ್ಣ ಯಾಕುಬನು :
“ಮಾತುಗಳು ಹಾಗಿರಲಿ
ತಂದು ತೋರಿಸು ನನಗೆ
ಲೋಕದಲೆ ಅತ್ಯಂತ
ಚೆಲುವಾದ ಕುದುರೆಗಳ
ಅಂಥ ದೃಶ್ಯಗಳ !”

ಬರೀ ಒಂದು ಹಿಡಿ ಕೊತ್ತಂಬರಿ
ಒಂದು ಮಣ್ಣಿನ ಪಾತ್ರೆ
ಬೆಂಕಿ, ಇದ್ದಿಲು, ಒಂದು
ಮಸಿಯ ಬುರುಡಿಯೂ
ಬರೆವ ಲೆಕ್ಕಣಿಕೆ
ಪ್ರತ್ಯೇಕ ಮರದ ಪತ್ರೆ

ಆಮೇಲೆ ಯಾಕುಬನ
ರುಗ್ಣ ಯಾಕುಬನ
ಅಂಗೈಲಿ ಮಸಿ ಬಿಂದು
ದುಂಡನೇ ನಿಂದು
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಮಂತ್ರಗಳ ಹೇಳುವನು
ಕುದುರೆಗಳ ಕರೆಯುವನು

ಕರೆದರೆ ಮೊದಲು
ವಿಶಾಲ ಬಯಲು
ಬಹುಶಃ ಏಶಿಯಾ
ಬಹುಶಃ ಆಫ್ರಿಕಾ
ಆಮೇಲೆ ಅದರ
ಅಂಚಿನಿಂದೆದ್ದು
ಬಂದಂತೆ ಮೋಡ
ಒಂದು ಸಾವಿರ ಘೋಡ
ಓಟದಲಿ ಮೈ-ಮಾಟದಲಿ
ಒಂದನ್ನೊಂದು ಮೀರಿ
ಈ ಕಡೆಗೇ ಸಾರಿ

ಆಮೇಲೆ ಮರುದಿನವು
ಪ್ರತಿದಿನವು ಹೀಗೆಯೇ
ಅದ್ಭುತ ನಗರಿಗಳು
ರಾಜ್ಯಗಳು ಕೋಶಗಳು
ವಿಶಾಲ ಸಮುದ್ರಗಳು
ಮರುಭೂಮಿಗಳು, ಇದೀಗ
ಅರಳಿದ ಗುಲಾಬಿಗಳು
ದೂರದ ಗ್ರಹಗಳೂ

ಪಿರಮಿಡಿನ ರಹಸ್ಯಗಳು
ದಾರಿತಪ್ಪಿದ ನೌಕೆಗಳು
ಯಾರೂ ಬಿಡಿಸದ ಒಗಟುಗಳು
ಸುಂದರ ಹೌರಿಗಳು
ಚರಿತ್ರೆಯ ಪ್ರಸಿದ್ಧ
ಹಾದರಗಳೂ, ಯುದ್ಧಗಳೂ

ವಿಚಿತ್ರ ಜಂತುಗಳು
ವಜ್ರ ವೈಡೂರ್ಯಗಳು
ಮಾತಾಡುವ ಮೀನುಗಳು
ಜನವಿರದ ಸಂತೆಗಳು
ವೇಶ್ಯೆಯರ ಪಡಖಾನೆಗಳು
ಅವರ ವಿನೋದಗಳೂ
ಹುಟ್ಟಿದಾಗಲೆ ನಗುವ ಶಿಶುಗಳೂ
ಕಡಲ ತಳ ಕಾದಿಟ್ಟ
ನಿಧಿಗಳೂ, ಎಷ್ಟೋ ಜನರ
ವಿಧಿಗಳೂ.

ಹೀಗಿತ್ತು. ಇರಲು
ದಿನದಿನದ ಮಾಯಾಬಜಾರ-
ದೊಳಗೆ ಬಯಸಲಿ ಬಯಸದೆ ಇರಲಿ
ಆಗಾಗ
ಬರುವ ಅಪರಿಚಿತ ವ್ಯಕ್ತಿ
ಮುಖವಾಡದಿಂದ ಮುಖ
ಪೂರ್ತಿ ಮುಚ್ಚಿ

ಉತ್ತರದಾತ, ತುಸು ಬಾಗಿರುವಾತ
ದಿರಿಸು ನೋಡಿದರೆ ಅರಬ
ಅಥವ ಅಂಥದೇ ಇನ್ನೊಬ್ಬ
ಯಾಕ ಈ ವೇಷ ?
ಯಾಕೆ ಮುಖವಾಡ ?
“ತೆಗೆದು ಬಿಸಾಕಲು ಹೇಳು !”
ಎಂದು ಯಾಕುಬ
ರುಗ್ಣ ಯಾಕುಬ

“ದುಡುಕಬಾರದು ನಾವು
ಯಾರೀತ, ಹೆಸರೇನು
ಯಾವ ದೇಶದವ- ಯಾರಿಗೂ
ತಿಳಿಯದೆ ಇರುವಾಗ
ತಿಳಿಯದಿರಲೆಂದೆ ಅಲ್ಲಾ ಅವನ
ಮುಖವ ಮುಚ್ಚಿರುವಾಗ”

ಬಾರಿ ಬಾರಿಗೂ ಯಾವುದೋ ಬದಿಯಿಂದ
ಮೂಡುತ್ತಿದ್ದ ವಿಚಿತ್ರ
ಕೆಲವೊಮ್ಮೆ ಕುದುರೆಯ ಮೇಲೆ ಆರೋಹಿ
ಕೆಲವೊಮ್ಮೆ ಹೇಸರಗತ್ತೆಯನೂ ಏರಿ
ಮರುಭೂಮಿಗಳ ಸಂಚಾರಿ
ದಾರಿ ಮರೆತಂತೆಯೂ ತೋರಿ
ಆದರೂ

ಅಂಗೈಯ ಕ್ರೌರ್ಯ
ಒಂದನ್ನೊಂದು ಮೀರಿ
ಮೂಡುತ್ತಿದ್ದುವು
ಯಾಕುಬನ
ರುಗ್ಣ ಯಾಕುಬನ-ಮರುಳು
ಮಾಡುತಿದ್ದವು

ದಿನ ದಿನದ ಕೊಲೆ, ಹಾದರ, ಬಲಾತ್ಕಾರ ಸಂಭೋಗ
ದಿನ ದಿನದ ಶಿಕ್ಷೆ. ಅಂಗಾಂಗ ಛೇದ
ದಿನ ದಿನದ ಅನುಭವದ ಕ್ರೂರ
ಸಾಕ್ಷಾತ್ಕಾರಕ್ಕೆ ಪೂರ್ತಿ ವಶವಾದ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...