ಬೀಳ್ಕೊಡುಗೆ

ಮುಗಿಯಿತು
ಬಾಳಿನ ಒಂದು ಮಜಲು
ಅವರು ಕರೆದೊಯ್ಯಲು ಬಂದಿಹರು
ಹೊರಡ ಬೇಕಾಗಿದೆ
ಹೊಸ ಜಾಗಕೆ
ಹೊಸ ಬಾಳನು ನಡೆಸಲು
ಕಸಿ ಮಾಡಿದ ಸಸಿ ತೆರದಿ
ಇಲ್ಲಿಗೆ, ಇನ್ನು ಮೇಲೆ
ನಾನೊಬ್ಬ ಅತಿಥಿಯಾದೆನೆಂದು ತಿಳಿದಾ ಇವಳಿಗೆ,
ತನ್ನೊಳಗೆ ಏನೋ ಆಗುತ್ತಿದೆ
ಏನೆಂದು ಹೇಳಲರಿಯಳು
ಘಳಿಗೆ ಘಳಿಗೆಗೂ ನಿಟ್ಟುಸಿರು, ನಿರಾಸಕ್ತಿ
ಮುಖ ಕಿತ್ತರಿಷ್ಟೂ ರಕ್ತ ಬರುವುದಿಲ್ಲ
ಶಕ್ತಿ ಸೋರಿ ಹೋದಂತೆನಿಸಿ
ಕೂತರೆ ಕೂತಲ್ಲೇ ಆಗಿ
ದೆವ್ವ ಬಡಿದವಳಾಗಿದ್ದಾಳೆ.
ನಿಟ್ತು ಗಣ್ಣಿಗೆ ಬಿದ್ದಿಹಳು
ಏನೋ ನೋಡುತ್ತಿರುವಳು, ಏನೋ ಕಾಣಿಸುವುದು
ಎಲ್ಲಾ ಹೊಸ ಹೊಸದೆನಿಸುವುದು
ಮತ್ತೆ ಮತ್ತೆ ನೋಡ ಬೇಕೆನಿಸುವುದು,
ಎದೆ, ಬಿಳಿ ಮೋಡಕ್ಕಿಟ್ಟು ಕೊಂಡಂತಾಗಿ
ನೋವಿನ ಜಡಿ ಹಿಡಿದಿದೆ….

ಅತ್ತ ಬಂದ ಹಾಗೂ ಅಲ್ಲ
ಇತ್ತ ಬಿಟ್ಟ ಹಾಗೂ ಅಲ್ಲ
ಹೆಜ್ಜೆ ಇಟ್ಟಲ್ಲಿ ಕೆಸರು ಪಿಚಕಾರಿಯಾಗಿ ಹಾರುವಂತೆ
ಏನು ನೋಡಿದರೂ….. ಇನ್ನೆಲ್ಲಿ ಇದೆಲ್ಲಾ
ಯಾರನ್ನು ನೋಡಿದರೂ….. ಇನ್ನೆಲ್ಲಿ ಇವರೆಲ್ಲಾ
ಎಂಬ ನೋವು
ಓಡುತ್ತಾ ಬಂದ
ಮುದ್ದಿನ ಬೆಕ್ಕು
‘ನನಗೆ ತಿಳಿದಿದೆ ನೀನು ಹೋಗುವೆ ’ ಯೆಂಬಂತೆ
‘ಮಿಯಾಂವ್ ಮಿಯಾಂವ್’ ಎಂದು ನರಳಿದರೆ
ಮೊದಲೆ ಏರಿಯ ಮೇಲೆ ಹೊರಳುವಂತೆ ತುಂಬಿ
ಜೀಕುತ್ತಿದ್ದು
ಹಿಡಿಸಲಾರದ ಹಾಗೆ ಕೋಡಿ ಹೋಗುತ್ತಿರಲು
ಮೇಲೆ ಹೊಸದಾಗಿ ಪ್ರವಾಹ ಬಂದು ಗುದ್ದಿದರೆ
ಫಕ್ಕನೆ ಕರಿಬಾನ ಸಾಲು ಉರುಳಿದಂತೆ
ಕೋಡಿ ಧಡ ಧಡ ಕಿತ್ತು ಹೋಗುವ ಹಾಗೆ
ಬಿಕ್ಕುಕ್ಕುವವು ಒಂದೇ ಸಮನೆ

ಹೆಜ್ಜೆ ಸಪ್ಪಳವಾಯಿತು
ಕಂಡರಿನ್ನು –
ಯಾಕಮ್ಮಣ್ಣಿ ಹೀಗಳುವೆ?
ನೀನು ಸೀಮೆಗಿಲ್ಲದವಳಾಗಿಬಿಟ್ಟೆ ಬಿಡು
ಶುಭವೆಂದು ಕಾಲಿಡುವಾಗ ಅಳುವರೇನು?
ಹೀಗಾದರಾಯಿತು ಹೆತ್ತವರಿಗೆ ಹೊತ್ತವರಿಗೆ
ಕೀರ್ತಿ ಬಂದ ಹಾಗೆಯೆ!

ಇಷ್ಟಕ್ಕೂ ಏನಾಗಿದೆಯೆಂದು ಅಳುವೆ
ಏನು ನಿನ್ನನ್ನು ಕೊಲೆ ಕೊಟ್ಟಿದ್ದೀವಾ?
ಸುಲಿಗೆ ಕೊಟ್ಟಿದ್ದೀವಾ?
ಏಳೇ ಬೆಳೆಕಾತಿ!
ಹೀಗಳುವವಳು ಮದುವೆ ಯಾಕೆ ಮಾಡಿಕೊಂಡೆ?
ನಿನಗಷ್ಟು ಸಂಕಟವಾದರೆ ಇಷ್ಟು ಮಾಡು!
ಇಲ್ಲೆ ಇದ್ದು ಬಿಡು ಹುಟ್ಟಿದ ಮನೆ ಹುಳುವಾಗಿ
ಕಟ್ಟಿ! ಕೆಟ್ಟಿ! ಏಳೇಳು
ನಿನಗ್ಯಾಕೆ ಬುದ್ದಿ ಇಲ್ಲ
ಮೊದ ಮೊದಲು ಎಲ್ಲರಿಗೂ ಹಾಗೇನೆ
ಏಳು! ಮೊದಲು ಹೋಗಿ ಮುಖ ತೊಳೆದುಕೊಂಡು ಬಾ
ನೋಡಿದವರೇನಾದರೂ ಅಂದಾರು
ಅಳುತ್ತಾ ಕುಳಿತಿಹಳೆಲ್ಲಮ್ಮಾ! ಎಂದೆಲ್ಲಿ ಘಾತಿಸುವರೋ ಎಂದು
ಅವಸರ, ಅವಸರವಾಗಿ
ಅಡಸಲ, ಪಡಸಲ ಕಣ್ಣೀರ ಒರೆಸಿಕೊಂಡು,
ಏನೂ ಆಗಿಲ್ಲವೆಂಬಂತಿರಲು ಹವಣಿಸುವಳು,

ಆಗತಾನೇ ಬಂದವರು
ಬಿದ್ದು ಬಿದ್ದು ಅಳುವಂತೆ
ಸಾಗ ಹಾಕಲು ಬಂದ ಅಜ್ಜಿ
ಮೊಮ್ಮಗಳನ್ನಪ್ಪಪ್ಪಿ ರೋದಿಸುವಳು

ಊರು, ಉದ್ವಾನ ಕಂಡಿಲ್ಲ
ಒಳ್ಳೆಯದು ಕೆಟ್ಟದ್ದೊಂದೂ ಗೊತ್ತಿಲ್ಲ
ಹೇಗೆ ಸಂಭಾಳಿಸುವಳೋ ನನ್ನ ಕಂದಾ
ಪ್ರೀತಿಯಲಿ ಬೆಳೆದವಳು
ಬೇಕಾದ್ದೆ ತಿಂದವಳು
ಯಾರು ನೋಡುವರಿನ್ನು
ನನ ಕಂದಾ ‘ಹ್ಹಾ!’ ಎಂದಳೇ ‘ಹ್ಹೋ!’ ಎಂದಳೆಯೆಂದು
ಇನ್ನು ಮುಂದ
ದೇವರೇ!
ನಾವೆಷ್ಟರವರು
ನೀನು ಕಾಪಾಡ ಬೇಕಾದನೆನ್ನುವಳು; ಬೋರಾಡುವಳು
ಕಣ್ಣಲ್ಲಿ ನೀರು ತರಿಸುವಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರೂಣದ ಮಾತು
Next post ಕಾಣದ ಕೈ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…