Home / ಕವನ / ಕವಿತೆ / ಬೀಳ್ಕೊಡುಗೆ

ಬೀಳ್ಕೊಡುಗೆ

ಮುಗಿಯಿತು
ಬಾಳಿನ ಒಂದು ಮಜಲು
ಅವರು ಕರೆದೊಯ್ಯಲು ಬಂದಿಹರು
ಹೊರಡ ಬೇಕಾಗಿದೆ
ಹೊಸ ಜಾಗಕೆ
ಹೊಸ ಬಾಳನು ನಡೆಸಲು
ಕಸಿ ಮಾಡಿದ ಸಸಿ ತೆರದಿ
ಇಲ್ಲಿಗೆ, ಇನ್ನು ಮೇಲೆ
ನಾನೊಬ್ಬ ಅತಿಥಿಯಾದೆನೆಂದು ತಿಳಿದಾ ಇವಳಿಗೆ,
ತನ್ನೊಳಗೆ ಏನೋ ಆಗುತ್ತಿದೆ
ಏನೆಂದು ಹೇಳಲರಿಯಳು
ಘಳಿಗೆ ಘಳಿಗೆಗೂ ನಿಟ್ಟುಸಿರು, ನಿರಾಸಕ್ತಿ
ಮುಖ ಕಿತ್ತರಿಷ್ಟೂ ರಕ್ತ ಬರುವುದಿಲ್ಲ
ಶಕ್ತಿ ಸೋರಿ ಹೋದಂತೆನಿಸಿ
ಕೂತರೆ ಕೂತಲ್ಲೇ ಆಗಿ
ದೆವ್ವ ಬಡಿದವಳಾಗಿದ್ದಾಳೆ.
ನಿಟ್ತು ಗಣ್ಣಿಗೆ ಬಿದ್ದಿಹಳು
ಏನೋ ನೋಡುತ್ತಿರುವಳು, ಏನೋ ಕಾಣಿಸುವುದು
ಎಲ್ಲಾ ಹೊಸ ಹೊಸದೆನಿಸುವುದು
ಮತ್ತೆ ಮತ್ತೆ ನೋಡ ಬೇಕೆನಿಸುವುದು,
ಎದೆ, ಬಿಳಿ ಮೋಡಕ್ಕಿಟ್ಟು ಕೊಂಡಂತಾಗಿ
ನೋವಿನ ಜಡಿ ಹಿಡಿದಿದೆ….

ಅತ್ತ ಬಂದ ಹಾಗೂ ಅಲ್ಲ
ಇತ್ತ ಬಿಟ್ಟ ಹಾಗೂ ಅಲ್ಲ
ಹೆಜ್ಜೆ ಇಟ್ಟಲ್ಲಿ ಕೆಸರು ಪಿಚಕಾರಿಯಾಗಿ ಹಾರುವಂತೆ
ಏನು ನೋಡಿದರೂ….. ಇನ್ನೆಲ್ಲಿ ಇದೆಲ್ಲಾ
ಯಾರನ್ನು ನೋಡಿದರೂ….. ಇನ್ನೆಲ್ಲಿ ಇವರೆಲ್ಲಾ
ಎಂಬ ನೋವು
ಓಡುತ್ತಾ ಬಂದ
ಮುದ್ದಿನ ಬೆಕ್ಕು
‘ನನಗೆ ತಿಳಿದಿದೆ ನೀನು ಹೋಗುವೆ ’ ಯೆಂಬಂತೆ
‘ಮಿಯಾಂವ್ ಮಿಯಾಂವ್’ ಎಂದು ನರಳಿದರೆ
ಮೊದಲೆ ಏರಿಯ ಮೇಲೆ ಹೊರಳುವಂತೆ ತುಂಬಿ
ಜೀಕುತ್ತಿದ್ದು
ಹಿಡಿಸಲಾರದ ಹಾಗೆ ಕೋಡಿ ಹೋಗುತ್ತಿರಲು
ಮೇಲೆ ಹೊಸದಾಗಿ ಪ್ರವಾಹ ಬಂದು ಗುದ್ದಿದರೆ
ಫಕ್ಕನೆ ಕರಿಬಾನ ಸಾಲು ಉರುಳಿದಂತೆ
ಕೋಡಿ ಧಡ ಧಡ ಕಿತ್ತು ಹೋಗುವ ಹಾಗೆ
ಬಿಕ್ಕುಕ್ಕುವವು ಒಂದೇ ಸಮನೆ

ಹೆಜ್ಜೆ ಸಪ್ಪಳವಾಯಿತು
ಕಂಡರಿನ್ನು –
ಯಾಕಮ್ಮಣ್ಣಿ ಹೀಗಳುವೆ?
ನೀನು ಸೀಮೆಗಿಲ್ಲದವಳಾಗಿಬಿಟ್ಟೆ ಬಿಡು
ಶುಭವೆಂದು ಕಾಲಿಡುವಾಗ ಅಳುವರೇನು?
ಹೀಗಾದರಾಯಿತು ಹೆತ್ತವರಿಗೆ ಹೊತ್ತವರಿಗೆ
ಕೀರ್ತಿ ಬಂದ ಹಾಗೆಯೆ!

ಇಷ್ಟಕ್ಕೂ ಏನಾಗಿದೆಯೆಂದು ಅಳುವೆ
ಏನು ನಿನ್ನನ್ನು ಕೊಲೆ ಕೊಟ್ಟಿದ್ದೀವಾ?
ಸುಲಿಗೆ ಕೊಟ್ಟಿದ್ದೀವಾ?
ಏಳೇ ಬೆಳೆಕಾತಿ!
ಹೀಗಳುವವಳು ಮದುವೆ ಯಾಕೆ ಮಾಡಿಕೊಂಡೆ?
ನಿನಗಷ್ಟು ಸಂಕಟವಾದರೆ ಇಷ್ಟು ಮಾಡು!
ಇಲ್ಲೆ ಇದ್ದು ಬಿಡು ಹುಟ್ಟಿದ ಮನೆ ಹುಳುವಾಗಿ
ಕಟ್ಟಿ! ಕೆಟ್ಟಿ! ಏಳೇಳು
ನಿನಗ್ಯಾಕೆ ಬುದ್ದಿ ಇಲ್ಲ
ಮೊದ ಮೊದಲು ಎಲ್ಲರಿಗೂ ಹಾಗೇನೆ
ಏಳು! ಮೊದಲು ಹೋಗಿ ಮುಖ ತೊಳೆದುಕೊಂಡು ಬಾ
ನೋಡಿದವರೇನಾದರೂ ಅಂದಾರು
ಅಳುತ್ತಾ ಕುಳಿತಿಹಳೆಲ್ಲಮ್ಮಾ! ಎಂದೆಲ್ಲಿ ಘಾತಿಸುವರೋ ಎಂದು
ಅವಸರ, ಅವಸರವಾಗಿ
ಅಡಸಲ, ಪಡಸಲ ಕಣ್ಣೀರ ಒರೆಸಿಕೊಂಡು,
ಏನೂ ಆಗಿಲ್ಲವೆಂಬಂತಿರಲು ಹವಣಿಸುವಳು,

ಆಗತಾನೇ ಬಂದವರು
ಬಿದ್ದು ಬಿದ್ದು ಅಳುವಂತೆ
ಸಾಗ ಹಾಕಲು ಬಂದ ಅಜ್ಜಿ
ಮೊಮ್ಮಗಳನ್ನಪ್ಪಪ್ಪಿ ರೋದಿಸುವಳು

ಊರು, ಉದ್ವಾನ ಕಂಡಿಲ್ಲ
ಒಳ್ಳೆಯದು ಕೆಟ್ಟದ್ದೊಂದೂ ಗೊತ್ತಿಲ್ಲ
ಹೇಗೆ ಸಂಭಾಳಿಸುವಳೋ ನನ್ನ ಕಂದಾ
ಪ್ರೀತಿಯಲಿ ಬೆಳೆದವಳು
ಬೇಕಾದ್ದೆ ತಿಂದವಳು
ಯಾರು ನೋಡುವರಿನ್ನು
ನನ ಕಂದಾ ‘ಹ್ಹಾ!’ ಎಂದಳೇ ‘ಹ್ಹೋ!’ ಎಂದಳೆಯೆಂದು
ಇನ್ನು ಮುಂದ
ದೇವರೇ!
ನಾವೆಷ್ಟರವರು
ನೀನು ಕಾಪಾಡ ಬೇಕಾದನೆನ್ನುವಳು; ಬೋರಾಡುವಳು
ಕಣ್ಣಲ್ಲಿ ನೀರು ತರಿಸುವಳು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...