Home / ಕವನ / ಕವಿತೆ / ಬೀಳ್ಕೊಡುಗೆ

ಬೀಳ್ಕೊಡುಗೆ

ಮುಗಿಯಿತು
ಬಾಳಿನ ಒಂದು ಮಜಲು
ಅವರು ಕರೆದೊಯ್ಯಲು ಬಂದಿಹರು
ಹೊರಡ ಬೇಕಾಗಿದೆ
ಹೊಸ ಜಾಗಕೆ
ಹೊಸ ಬಾಳನು ನಡೆಸಲು
ಕಸಿ ಮಾಡಿದ ಸಸಿ ತೆರದಿ
ಇಲ್ಲಿಗೆ, ಇನ್ನು ಮೇಲೆ
ನಾನೊಬ್ಬ ಅತಿಥಿಯಾದೆನೆಂದು ತಿಳಿದಾ ಇವಳಿಗೆ,
ತನ್ನೊಳಗೆ ಏನೋ ಆಗುತ್ತಿದೆ
ಏನೆಂದು ಹೇಳಲರಿಯಳು
ಘಳಿಗೆ ಘಳಿಗೆಗೂ ನಿಟ್ಟುಸಿರು, ನಿರಾಸಕ್ತಿ
ಮುಖ ಕಿತ್ತರಿಷ್ಟೂ ರಕ್ತ ಬರುವುದಿಲ್ಲ
ಶಕ್ತಿ ಸೋರಿ ಹೋದಂತೆನಿಸಿ
ಕೂತರೆ ಕೂತಲ್ಲೇ ಆಗಿ
ದೆವ್ವ ಬಡಿದವಳಾಗಿದ್ದಾಳೆ.
ನಿಟ್ತು ಗಣ್ಣಿಗೆ ಬಿದ್ದಿಹಳು
ಏನೋ ನೋಡುತ್ತಿರುವಳು, ಏನೋ ಕಾಣಿಸುವುದು
ಎಲ್ಲಾ ಹೊಸ ಹೊಸದೆನಿಸುವುದು
ಮತ್ತೆ ಮತ್ತೆ ನೋಡ ಬೇಕೆನಿಸುವುದು,
ಎದೆ, ಬಿಳಿ ಮೋಡಕ್ಕಿಟ್ಟು ಕೊಂಡಂತಾಗಿ
ನೋವಿನ ಜಡಿ ಹಿಡಿದಿದೆ….

ಅತ್ತ ಬಂದ ಹಾಗೂ ಅಲ್ಲ
ಇತ್ತ ಬಿಟ್ಟ ಹಾಗೂ ಅಲ್ಲ
ಹೆಜ್ಜೆ ಇಟ್ಟಲ್ಲಿ ಕೆಸರು ಪಿಚಕಾರಿಯಾಗಿ ಹಾರುವಂತೆ
ಏನು ನೋಡಿದರೂ….. ಇನ್ನೆಲ್ಲಿ ಇದೆಲ್ಲಾ
ಯಾರನ್ನು ನೋಡಿದರೂ….. ಇನ್ನೆಲ್ಲಿ ಇವರೆಲ್ಲಾ
ಎಂಬ ನೋವು
ಓಡುತ್ತಾ ಬಂದ
ಮುದ್ದಿನ ಬೆಕ್ಕು
‘ನನಗೆ ತಿಳಿದಿದೆ ನೀನು ಹೋಗುವೆ ’ ಯೆಂಬಂತೆ
‘ಮಿಯಾಂವ್ ಮಿಯಾಂವ್’ ಎಂದು ನರಳಿದರೆ
ಮೊದಲೆ ಏರಿಯ ಮೇಲೆ ಹೊರಳುವಂತೆ ತುಂಬಿ
ಜೀಕುತ್ತಿದ್ದು
ಹಿಡಿಸಲಾರದ ಹಾಗೆ ಕೋಡಿ ಹೋಗುತ್ತಿರಲು
ಮೇಲೆ ಹೊಸದಾಗಿ ಪ್ರವಾಹ ಬಂದು ಗುದ್ದಿದರೆ
ಫಕ್ಕನೆ ಕರಿಬಾನ ಸಾಲು ಉರುಳಿದಂತೆ
ಕೋಡಿ ಧಡ ಧಡ ಕಿತ್ತು ಹೋಗುವ ಹಾಗೆ
ಬಿಕ್ಕುಕ್ಕುವವು ಒಂದೇ ಸಮನೆ

ಹೆಜ್ಜೆ ಸಪ್ಪಳವಾಯಿತು
ಕಂಡರಿನ್ನು –
ಯಾಕಮ್ಮಣ್ಣಿ ಹೀಗಳುವೆ?
ನೀನು ಸೀಮೆಗಿಲ್ಲದವಳಾಗಿಬಿಟ್ಟೆ ಬಿಡು
ಶುಭವೆಂದು ಕಾಲಿಡುವಾಗ ಅಳುವರೇನು?
ಹೀಗಾದರಾಯಿತು ಹೆತ್ತವರಿಗೆ ಹೊತ್ತವರಿಗೆ
ಕೀರ್ತಿ ಬಂದ ಹಾಗೆಯೆ!

ಇಷ್ಟಕ್ಕೂ ಏನಾಗಿದೆಯೆಂದು ಅಳುವೆ
ಏನು ನಿನ್ನನ್ನು ಕೊಲೆ ಕೊಟ್ಟಿದ್ದೀವಾ?
ಸುಲಿಗೆ ಕೊಟ್ಟಿದ್ದೀವಾ?
ಏಳೇ ಬೆಳೆಕಾತಿ!
ಹೀಗಳುವವಳು ಮದುವೆ ಯಾಕೆ ಮಾಡಿಕೊಂಡೆ?
ನಿನಗಷ್ಟು ಸಂಕಟವಾದರೆ ಇಷ್ಟು ಮಾಡು!
ಇಲ್ಲೆ ಇದ್ದು ಬಿಡು ಹುಟ್ಟಿದ ಮನೆ ಹುಳುವಾಗಿ
ಕಟ್ಟಿ! ಕೆಟ್ಟಿ! ಏಳೇಳು
ನಿನಗ್ಯಾಕೆ ಬುದ್ದಿ ಇಲ್ಲ
ಮೊದ ಮೊದಲು ಎಲ್ಲರಿಗೂ ಹಾಗೇನೆ
ಏಳು! ಮೊದಲು ಹೋಗಿ ಮುಖ ತೊಳೆದುಕೊಂಡು ಬಾ
ನೋಡಿದವರೇನಾದರೂ ಅಂದಾರು
ಅಳುತ್ತಾ ಕುಳಿತಿಹಳೆಲ್ಲಮ್ಮಾ! ಎಂದೆಲ್ಲಿ ಘಾತಿಸುವರೋ ಎಂದು
ಅವಸರ, ಅವಸರವಾಗಿ
ಅಡಸಲ, ಪಡಸಲ ಕಣ್ಣೀರ ಒರೆಸಿಕೊಂಡು,
ಏನೂ ಆಗಿಲ್ಲವೆಂಬಂತಿರಲು ಹವಣಿಸುವಳು,

ಆಗತಾನೇ ಬಂದವರು
ಬಿದ್ದು ಬಿದ್ದು ಅಳುವಂತೆ
ಸಾಗ ಹಾಕಲು ಬಂದ ಅಜ್ಜಿ
ಮೊಮ್ಮಗಳನ್ನಪ್ಪಪ್ಪಿ ರೋದಿಸುವಳು

ಊರು, ಉದ್ವಾನ ಕಂಡಿಲ್ಲ
ಒಳ್ಳೆಯದು ಕೆಟ್ಟದ್ದೊಂದೂ ಗೊತ್ತಿಲ್ಲ
ಹೇಗೆ ಸಂಭಾಳಿಸುವಳೋ ನನ್ನ ಕಂದಾ
ಪ್ರೀತಿಯಲಿ ಬೆಳೆದವಳು
ಬೇಕಾದ್ದೆ ತಿಂದವಳು
ಯಾರು ನೋಡುವರಿನ್ನು
ನನ ಕಂದಾ ‘ಹ್ಹಾ!’ ಎಂದಳೇ ‘ಹ್ಹೋ!’ ಎಂದಳೆಯೆಂದು
ಇನ್ನು ಮುಂದ
ದೇವರೇ!
ನಾವೆಷ್ಟರವರು
ನೀನು ಕಾಪಾಡ ಬೇಕಾದನೆನ್ನುವಳು; ಬೋರಾಡುವಳು
ಕಣ್ಣಲ್ಲಿ ನೀರು ತರಿಸುವಳು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...