ಮಾಟಗಾರ ಸುಬ್ಬ

ಮಾಟಗಾರ ಸುಬ್ಬ

ಸುಬ್ಬನು “ಸುಗುಣಗಂಭೀರ”. ಜನರನ್ನುತಿದ್ದರು- “ಹೆಂಡತಿಯನ್ನು ಅಂಕೆಯಲ್ಲಿಟ್ಟು ಆಳುವುದನ್ನು ಸುಬ್ಬನಿಂದಲೇ ಕಲಿಯಬೇಕು” ಎಂದು, ನಿಜಕ್ಕೂ ಅಹುದು, ಸುಬ್ಬನ ಮೊದಲನೆ ಮಡದಿಯು ಆ ಗಂಭೀರದ ಪ್ರಖರತೆಗೆ ಸುಟ್ಟು ಭಸ್ಮವಾಗಿದ್ದಳು. ದ್ವಿತೀಯ ಪತ್ನಿಯು-ಸುಂದರಿ-ಕ್ಷಯದ ಮೆಟ್ಟಿಲಲ್ಲಿ ನಿಂತು, ಮೃತ್ಯು ಮಂದಿರದೊಳಗೆ ಇಣಕುತಿದ್ದಳು.

ಆಕೆಗೊಂದು ಮಗು ಹುಟ್ಟಿತು!

ನಿತ್ಯ ರೋಗೀ ಸ್ತ್ರೀಗೆ ತವರುಮನೆಗಿಂತ ಉತ್ತಮವಾದ ಆಸ್ಪತ್ರೆಯಿಲ್ಲ. ಸುಗುಣಗಂಭೀರ ಸುಬ್ಬನು ಇದನ್ನು ಬಲ್ಲಷ್ಟು ಚೆನ್ನಾಗಿ ಮತ್ತಾರೂ ಅರಿಯರು. “ಉತ್ತಮವಾದ ಹವೆಯ ಸುಖಪಡೆದು, ಆರೋಗ್ಯ ಹೊಂದುತ್ತಿರು” ಎಂದು ಹರಸಿ, ಆಕೆಯನ್ನು ಪುತ್ತೂರಿಗೆ, ತವರುಮನೆಗೆ ಕಳುಹಿಸಿಕೊಟ್ಟು ಒಂದು ನಿಟ್ಟುಸಿರು ಬಿಟ್ಟನು:-

“ನಿತ್ಯ ರೋಗೀ ಹೆಂಡತಿ ಯಿ೦ದ ಗಂಡನಿಗೇನು ಪ್ರಯೋಜನ?”

ಅದೊಂದು ಪ್ರಶ್ನೆಯಲ್ಲಿ ಜಗತ್ತೇ ಅಡಕವಾಗಿತ್ತು. ಸುಜ್ಞಾನಿಗಳಾದ ನೀವೆಲ್ಲರೂ ಅದನ್ನು ಚೆನ್ನಾಗಿ ಬಲ್ಲಿರಿ.

ಸುಂದರಿಯ ತವರುಮನೆಯ ನೆರೆಕರೆಯವರು ಆಕೆಯ ಪತಿಗೃಹದ ಸೌಭಾಗ್ಯವನ್ನು ಹೊಗಳುತ್ತ, ಒಳಗಿಂದೊಳಗೆ ಮತ್ಸರಪಡೆಯುತ್ತಿರುವಾಗ, ಇತ್ತ ಕಾರ್ಕಳದ ನಾರಾಯಣ ಕಾಮತರು ಸುಬ್ಬನ ಸುದೀರ್ಘ ಪತ್ರವೊಂದನ್ನು ಪಡೆದು ಓದಿದರು:-

“ಸುಬ್ಬನ ನಮಸ್ಕಾರಗಳು. ನಾನು ನನ್ನ ದ್ವಿತೀಯಪತ್ನಿಯ ಸಂಬಂಧವನ್ನು ತೊರೆಯಬೇಕಾಗಿ ಬಂದಿದೆ. ಕಾರಣಗಳಿವೆ. ಈಗ ಹೇಳಲಾರೆ. ನಾನು ತೃತೀಯ ಸಂಬಂಧವನ್ನು ಮಾಡಿಕೊಳ್ಳಲು ಸಿದ್ಧನಿದ್ದೇನೆ. ಒಳ್ಳೆ ರೂಪವತಿ ಹೆಣ್ಣೊಂದನ್ನು-ಸುದೃಢಕಾಯದ-ಸುಗುಣ-ಕನ್ನಿಕೆಯನ್ನು ಬಯಸುತ್ತೇನೆ. ಕಾರ್ಕಳದಲ್ಲಿ ತಮ್ಮ ಪರಿಚಯದವರಾರಾದರೂ ಇದ್ದರೆ ತಿಳಿಸಿರಿ. ವರದಕ್ಷಿಣೆಯನ್ನು ಬಯಸುವವನಲ್ಲ”

ನಾರಾಯಣ ಕಾಮತರು ತಮ್ಮ ಅಂಗಡಿಯ ಎದುರಿನ ಮನೆಯ ಕಡೆ ನೋಡಿದರು. ಬಳಕುವ ಜವ್ವನೆ ನೀಲೆಯು, ಕಿಟಕಿಯ ಬಳಿ ಕುಳಿತು, ಯೋಚನಾಮಗ್ನಳಾಗಿದ್ದಳು, ಸುಬ್ಬನಿಗೆ ಈ ನೀಲೆಯನ್ನು ಕೊಟ್ಟರಾಗದೇ?

“ಬಡವೆ; ಪ್ರಾಪ್ತ ವಯಸ್ಕಳು!” ಎಂದು ತಮ್ಮೊಳಗೆ ಆಡಿಕೊಳ್ಳುತ್ತ, ನಾರಾಯಣ ಕಾಮತರು, ಅಂಗಡಿಯನ್ನು ಪರಮಾತ್ಮನ ರಕ್ಷಣೆಗೆ ತೊರೆದು, ಕೆಳಗಿಳಿದು, ನೀಲೆಯ ಮನೆಯನ್ನು ಪ್ರವೇಶಿಸಿ, ಆಕೆಯ ತಾಯಿಯನ್ನು ಕರೆದು, ಪತ್ರದ ಅಭಿಪ್ರಾಯವನ್ನು ತಿಳಿಸಿದರು. ನೀಲೆಯ ತಾಯಿ ಸಂತೋಷದಿಂದ ಒಪ್ಪಿಕೊಂಡಳು.

ಮರುದಿನದ ಟಪ್ಪಾಲಿನಲ್ಲಿ ಸುಬ್ಬನು ಈ ಸಾರಾಂಶವನ್ನುಳ್ಳ ಪತ್ರವನ್ನು ಪಡೆದು, ಓದಿದನು:-

“…ಹುಡುಗಿಯ ಹೆಸರು ನೀಲೆ ಸುರೂಪಿ; ಸುಶಿಕ್ಷಿತ; ಸುದೃಢೆ; ಸುಗುಣಿ.”

ಸುಗುಣಗಂಭೀರ ಸುಬ್ಬನು ಉಬ್ಬಿದನು. “ರೋಗರತ್ನ ಸುಂದರಿಯನ್ನು ಪುತ್ತೂರಿನ ವೈದ್ಯರತ್ನಗಳ ಆರೈಕೆಯಲ್ಲಿರಲಿ!” ಎಂದು, ದೂರದಿಂದ ತನ್ನ ದ್ವಿತೀಯ ಪತ್ನಿಯನ್ನು ಹರಸಿದನು, ತೃತೀಯ ಪತ್ನಿಯ ಸಿದ್ಧತೆಗಾಗಿ ತನ್ನ ಕಿಸೆಯಿಂದ ಬಹು ಮೌಲ್ಯದ ಘ೦ಟನ್ ಪೆನ್ನನ್ನು ತೆಗೆದು, ಕಾರ್ಕಳ ನಾರಾಯಣಕಾಮತರಿಗೆ ತನ್ನ ಗಂಭೀರ್‍ಯಕ್ಕೊಪ್ಪುವ ಉತ್ತರವನ್ನು ಬರೆದನು.

ಟಪ್ಪಾಲು ಇಲಾಖೆಯ ಒಂದು ಲಕ್ಷಣೀಯ ವಿಚಿತ್ರವೆಂದರೆ, ಕೆಲವು ಪತ್ರಗಳು ಸಕಾಲದಲ್ಲಿ ಖಂಡಿತವಾಗಿ ತಲಪುವುವು! ಅಂತಹ ಭಾಗ್ಯಶಾಲಿ ಪತ್ರಗಳಲ್ಲಿ ಸುಬ್ಬಣ್ಣನದೂ ಒಂದು!

ನಾರಾಯಣ ಕಾಮತರಿಗೆ, ಅಂಚೆಯವನನ್ನು ನೋಡಿದ ಕೂಡಲೇ ಎದೆ ಝಲ್ಲೆನಿಸುವಂತಹ ಆನಂದಲಹರಿಯ ಅನುಭವವಾಗಲಿಲ್ಲವಾದರೂ ಕುತೂಹಲವೂ ನಿಜವಾಗಿಯೂ ವಿಶೇಷವಾಗಿತ್ತು. ಅಂಚೆಯವನು ಪತ್ರವನ್ನು ಅವರ ಕೈಗೆ ಕೊಡುವ ಮೊದಲೇ, ಇವರೇ ಕಿತ್ತುಕೊಂಡು,- ಗಲ್ಲಿಗೇರಿಸಲು ಪಾಸಿಕಂಭದ ಕೆಳಗೆ ನಿಲ್ಲಸಲ್ಪಟ್ಟಿರುವವನ ಬಳಿಗೆ ಬಂಧ ವಿಮೋಚನೆಯ ಹುಕುಮಿನ ಪತ್ರವನ್ನು ಒಯ್ಯುವವನ ವೇಗದಿಂದ ಉನ್ಮಾದನಂತೆ ಓಡಿ,- ಪತ್ರವನ್ನು ನೀಲೆಯ ತಾಯಿಯ ಕೈಗೆ ಇತ್ತು, ಪರೋಪಕಾರಮಾಡಿದ ಚರ್ಯೆಯಿಂದ ಮುಖವರಳಿಸಿದರು.

ನೀಲೆಯ ತಾಯಿಯು ಸುಗುಣಗಂಭೀರ ಸುಬ್ಬನ ಪತ್ರವನ್ನೊಡೆದು ಓದಿದಳು:-

“ಸಂತೋಷವಾಯಿತು; ಒಪ್ಪಿದೆ. ಆದರೆ, ಹುಡುಗಿಯು, ಮುಂದೆ ನಾನು ಹೇಳಿದಂತೆ ಕೇಳದಿದ್ದರೆ ಮಾಟ ಮಾಡಿ ಕೊಲ್ಲಿಸ್ಯೇನು!……” ಏನಿದು!-ನೀಲೆಯ ತಾಯಿಯು ಮುಂದೆ ಓದಲಿಲ್ಲ. ಆಶ್ಚರ್ಯ-ಕ್ರೋಧ ದುಃಖಗಳಿ೦ದ ಅಂಧೆಯಾದಳು. ಆಕೆಯ ಮನೋಮಂದಿರಗಳೆಲ್ಲ ಅವೆರಡು ಶಬ್ದಗಳಿಂದ ಒಡೆದು ಚೂರಾದವು. ಒಲೆಯ ಬಳಿಯಲ್ಲೇ ಕುಳಿತಿದ್ದಳಾದ ಕಾರಣ, ದೂರಕ್ಕೆ ನಡೆದು ಹೋಗಬೇಕಾದ ಶ್ರಮವೇನೂ ಇಲ್ಲದೆ, ಅದನ್ನು ಆಗಲೇ ಒಲೆಗೆ ಬಿಸುಡಿ, ಅದನ್ನು ಹಿಡಿದಿದ್ದ ಕೈ ಬೆರಳುಗಳನ್ನು ಒಂದು ಕ್ಷಣ ಬೆಂಕಿಯಮೇಲೆ ಹಿಡಿದು, ಮಾಟದ “ಅಣು”ಗಳಾವುವಾದರೂ ಇದ್ದಿದ್ದರೆ ಅವುಗಳನ್ನು ನಾಶಪಡಿಸಿ, ಪರಿಶುದ್ಧಳಾಗಿ, ಸುಗುಣಗಂಭೀರನಿಗೆ ತಾನೇ ಪತ್ರ ಬರೆದಳು.

ಮರುದಿನದ ಟಪ್ಪಾಲಿನವನನ್ನು ದಾರಿಯಲ್ಲಿ ಹೊಂಚು ಹಾಕಿ ಸುಗುಣಗಂಭೀರ ಸುಬ್ಬನು, ಆತನಿಂದ ಪತ್ರ ಪಡೆದು ಓದಿದನು. ಮೊದಲು ಓದಿದುದು ತನ್ನ ವಿಳಾಸವನ್ನು. ಹೀಗಿತ್ತು:-

“ಮಾಟಗಾರ ಸುಬ್ಬನಿಗೆ. . . . . . .”
ಮಾಟಗಾರ ಸುಬ್ಬ? ಎಂಥ ಹೆಸರು!

ಆ ಮೇಲೆ, ಪತ್ರದೊಳಗಿನ ಪಂಕ್ತಿಗಳು ಇವಿಷ್ಟು:-

“ನಿಮಗೆ ಮಾಟಮಾಡಿಸುವ ಶಕ್ತಿಯಿದೆಯೆಂದು ತಿಳಿಯಲು ಆನಂದವಾಗುತ್ತದೆ. ಮಾಟಮಾಡಿಸುವ ಬಗ್ಗೆ ನಿಮಗೆ ಹೆಣ್ಣು ಬೇಕಾಗಿದ್ದರೆ ಜಪಾನ್ ಗೊಂಬೆಗಳ ಅಂಗಡಿಗಾರರಿಗೆ ಬರೆದು ತರಿಸಿ, ಅವುಗಳ ಮೇಲೆ ನಿಮ್ಮ ಶಕ್ತಿಯನ್ನು ಉಪಯೋಗಿಸಿರಿ”

ಸುಬ್ಬನನ್ನೀಗ ನಾವೆಲ್ಲ “ಮಾಟಗಾರ ಸುಬ್ಬ”ನೆಂದು ಕರೆಯುತ್ತಿರುವೆವು. “ಮಾಟ” ಮತ್ತು “ಜಪಾನಗೊಂಬೆ” ಎನ್ನುತ್ತಲೇ ಸುಬ್ಬನು ಕೋಪದಿಂದ ಮೂರ್‍ಚೆಹೋಗುವನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪ ಬೆಳಗಿಸು
Next post ಭಾವವೆಂಬ ಗಿಡ ಬಳ್ಳಿಯಲಿ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…