Home / ಲೇಖನ / ಹಾಸ್ಯ / ಮಾಟಗಾರ ಸುಬ್ಬ

ಮಾಟಗಾರ ಸುಬ್ಬ

ಸುಬ್ಬನು “ಸುಗುಣಗಂಭೀರ”. ಜನರನ್ನುತಿದ್ದರು- “ಹೆಂಡತಿಯನ್ನು ಅಂಕೆಯಲ್ಲಿಟ್ಟು ಆಳುವುದನ್ನು ಸುಬ್ಬನಿಂದಲೇ ಕಲಿಯಬೇಕು” ಎಂದು, ನಿಜಕ್ಕೂ ಅಹುದು, ಸುಬ್ಬನ ಮೊದಲನೆ ಮಡದಿಯು ಆ ಗಂಭೀರದ ಪ್ರಖರತೆಗೆ ಸುಟ್ಟು ಭಸ್ಮವಾಗಿದ್ದಳು. ದ್ವಿತೀಯ ಪತ್ನಿಯು-ಸುಂದರಿ-ಕ್ಷಯದ ಮೆಟ್ಟಿಲಲ್ಲಿ ನಿಂತು, ಮೃತ್ಯು ಮಂದಿರದೊಳಗೆ ಇಣಕುತಿದ್ದಳು.

ಆಕೆಗೊಂದು ಮಗು ಹುಟ್ಟಿತು!

ನಿತ್ಯ ರೋಗೀ ಸ್ತ್ರೀಗೆ ತವರುಮನೆಗಿಂತ ಉತ್ತಮವಾದ ಆಸ್ಪತ್ರೆಯಿಲ್ಲ. ಸುಗುಣಗಂಭೀರ ಸುಬ್ಬನು ಇದನ್ನು ಬಲ್ಲಷ್ಟು ಚೆನ್ನಾಗಿ ಮತ್ತಾರೂ ಅರಿಯರು. “ಉತ್ತಮವಾದ ಹವೆಯ ಸುಖಪಡೆದು, ಆರೋಗ್ಯ ಹೊಂದುತ್ತಿರು” ಎಂದು ಹರಸಿ, ಆಕೆಯನ್ನು ಪುತ್ತೂರಿಗೆ, ತವರುಮನೆಗೆ ಕಳುಹಿಸಿಕೊಟ್ಟು ಒಂದು ನಿಟ್ಟುಸಿರು ಬಿಟ್ಟನು:-

“ನಿತ್ಯ ರೋಗೀ ಹೆಂಡತಿ ಯಿ೦ದ ಗಂಡನಿಗೇನು ಪ್ರಯೋಜನ?”

ಅದೊಂದು ಪ್ರಶ್ನೆಯಲ್ಲಿ ಜಗತ್ತೇ ಅಡಕವಾಗಿತ್ತು. ಸುಜ್ಞಾನಿಗಳಾದ ನೀವೆಲ್ಲರೂ ಅದನ್ನು ಚೆನ್ನಾಗಿ ಬಲ್ಲಿರಿ.

ಸುಂದರಿಯ ತವರುಮನೆಯ ನೆರೆಕರೆಯವರು ಆಕೆಯ ಪತಿಗೃಹದ ಸೌಭಾಗ್ಯವನ್ನು ಹೊಗಳುತ್ತ, ಒಳಗಿಂದೊಳಗೆ ಮತ್ಸರಪಡೆಯುತ್ತಿರುವಾಗ, ಇತ್ತ ಕಾರ್ಕಳದ ನಾರಾಯಣ ಕಾಮತರು ಸುಬ್ಬನ ಸುದೀರ್ಘ ಪತ್ರವೊಂದನ್ನು ಪಡೆದು ಓದಿದರು:-

“ಸುಬ್ಬನ ನಮಸ್ಕಾರಗಳು. ನಾನು ನನ್ನ ದ್ವಿತೀಯಪತ್ನಿಯ ಸಂಬಂಧವನ್ನು ತೊರೆಯಬೇಕಾಗಿ ಬಂದಿದೆ. ಕಾರಣಗಳಿವೆ. ಈಗ ಹೇಳಲಾರೆ. ನಾನು ತೃತೀಯ ಸಂಬಂಧವನ್ನು ಮಾಡಿಕೊಳ್ಳಲು ಸಿದ್ಧನಿದ್ದೇನೆ. ಒಳ್ಳೆ ರೂಪವತಿ ಹೆಣ್ಣೊಂದನ್ನು-ಸುದೃಢಕಾಯದ-ಸುಗುಣ-ಕನ್ನಿಕೆಯನ್ನು ಬಯಸುತ್ತೇನೆ. ಕಾರ್ಕಳದಲ್ಲಿ ತಮ್ಮ ಪರಿಚಯದವರಾರಾದರೂ ಇದ್ದರೆ ತಿಳಿಸಿರಿ. ವರದಕ್ಷಿಣೆಯನ್ನು ಬಯಸುವವನಲ್ಲ”

ನಾರಾಯಣ ಕಾಮತರು ತಮ್ಮ ಅಂಗಡಿಯ ಎದುರಿನ ಮನೆಯ ಕಡೆ ನೋಡಿದರು. ಬಳಕುವ ಜವ್ವನೆ ನೀಲೆಯು, ಕಿಟಕಿಯ ಬಳಿ ಕುಳಿತು, ಯೋಚನಾಮಗ್ನಳಾಗಿದ್ದಳು, ಸುಬ್ಬನಿಗೆ ಈ ನೀಲೆಯನ್ನು ಕೊಟ್ಟರಾಗದೇ?

“ಬಡವೆ; ಪ್ರಾಪ್ತ ವಯಸ್ಕಳು!” ಎಂದು ತಮ್ಮೊಳಗೆ ಆಡಿಕೊಳ್ಳುತ್ತ, ನಾರಾಯಣ ಕಾಮತರು, ಅಂಗಡಿಯನ್ನು ಪರಮಾತ್ಮನ ರಕ್ಷಣೆಗೆ ತೊರೆದು, ಕೆಳಗಿಳಿದು, ನೀಲೆಯ ಮನೆಯನ್ನು ಪ್ರವೇಶಿಸಿ, ಆಕೆಯ ತಾಯಿಯನ್ನು ಕರೆದು, ಪತ್ರದ ಅಭಿಪ್ರಾಯವನ್ನು ತಿಳಿಸಿದರು. ನೀಲೆಯ ತಾಯಿ ಸಂತೋಷದಿಂದ ಒಪ್ಪಿಕೊಂಡಳು.

ಮರುದಿನದ ಟಪ್ಪಾಲಿನಲ್ಲಿ ಸುಬ್ಬನು ಈ ಸಾರಾಂಶವನ್ನುಳ್ಳ ಪತ್ರವನ್ನು ಪಡೆದು, ಓದಿದನು:-

“…ಹುಡುಗಿಯ ಹೆಸರು ನೀಲೆ ಸುರೂಪಿ; ಸುಶಿಕ್ಷಿತ; ಸುದೃಢೆ; ಸುಗುಣಿ.”

ಸುಗುಣಗಂಭೀರ ಸುಬ್ಬನು ಉಬ್ಬಿದನು. “ರೋಗರತ್ನ ಸುಂದರಿಯನ್ನು ಪುತ್ತೂರಿನ ವೈದ್ಯರತ್ನಗಳ ಆರೈಕೆಯಲ್ಲಿರಲಿ!” ಎಂದು, ದೂರದಿಂದ ತನ್ನ ದ್ವಿತೀಯ ಪತ್ನಿಯನ್ನು ಹರಸಿದನು, ತೃತೀಯ ಪತ್ನಿಯ ಸಿದ್ಧತೆಗಾಗಿ ತನ್ನ ಕಿಸೆಯಿಂದ ಬಹು ಮೌಲ್ಯದ ಘ೦ಟನ್ ಪೆನ್ನನ್ನು ತೆಗೆದು, ಕಾರ್ಕಳ ನಾರಾಯಣಕಾಮತರಿಗೆ ತನ್ನ ಗಂಭೀರ್‍ಯಕ್ಕೊಪ್ಪುವ ಉತ್ತರವನ್ನು ಬರೆದನು.

ಟಪ್ಪಾಲು ಇಲಾಖೆಯ ಒಂದು ಲಕ್ಷಣೀಯ ವಿಚಿತ್ರವೆಂದರೆ, ಕೆಲವು ಪತ್ರಗಳು ಸಕಾಲದಲ್ಲಿ ಖಂಡಿತವಾಗಿ ತಲಪುವುವು! ಅಂತಹ ಭಾಗ್ಯಶಾಲಿ ಪತ್ರಗಳಲ್ಲಿ ಸುಬ್ಬಣ್ಣನದೂ ಒಂದು!

ನಾರಾಯಣ ಕಾಮತರಿಗೆ, ಅಂಚೆಯವನನ್ನು ನೋಡಿದ ಕೂಡಲೇ ಎದೆ ಝಲ್ಲೆನಿಸುವಂತಹ ಆನಂದಲಹರಿಯ ಅನುಭವವಾಗಲಿಲ್ಲವಾದರೂ ಕುತೂಹಲವೂ ನಿಜವಾಗಿಯೂ ವಿಶೇಷವಾಗಿತ್ತು. ಅಂಚೆಯವನು ಪತ್ರವನ್ನು ಅವರ ಕೈಗೆ ಕೊಡುವ ಮೊದಲೇ, ಇವರೇ ಕಿತ್ತುಕೊಂಡು,- ಗಲ್ಲಿಗೇರಿಸಲು ಪಾಸಿಕಂಭದ ಕೆಳಗೆ ನಿಲ್ಲಸಲ್ಪಟ್ಟಿರುವವನ ಬಳಿಗೆ ಬಂಧ ವಿಮೋಚನೆಯ ಹುಕುಮಿನ ಪತ್ರವನ್ನು ಒಯ್ಯುವವನ ವೇಗದಿಂದ ಉನ್ಮಾದನಂತೆ ಓಡಿ,- ಪತ್ರವನ್ನು ನೀಲೆಯ ತಾಯಿಯ ಕೈಗೆ ಇತ್ತು, ಪರೋಪಕಾರಮಾಡಿದ ಚರ್ಯೆಯಿಂದ ಮುಖವರಳಿಸಿದರು.

ನೀಲೆಯ ತಾಯಿಯು ಸುಗುಣಗಂಭೀರ ಸುಬ್ಬನ ಪತ್ರವನ್ನೊಡೆದು ಓದಿದಳು:-

“ಸಂತೋಷವಾಯಿತು; ಒಪ್ಪಿದೆ. ಆದರೆ, ಹುಡುಗಿಯು, ಮುಂದೆ ನಾನು ಹೇಳಿದಂತೆ ಕೇಳದಿದ್ದರೆ ಮಾಟ ಮಾಡಿ ಕೊಲ್ಲಿಸ್ಯೇನು!……” ಏನಿದು!-ನೀಲೆಯ ತಾಯಿಯು ಮುಂದೆ ಓದಲಿಲ್ಲ. ಆಶ್ಚರ್ಯ-ಕ್ರೋಧ ದುಃಖಗಳಿ೦ದ ಅಂಧೆಯಾದಳು. ಆಕೆಯ ಮನೋಮಂದಿರಗಳೆಲ್ಲ ಅವೆರಡು ಶಬ್ದಗಳಿಂದ ಒಡೆದು ಚೂರಾದವು. ಒಲೆಯ ಬಳಿಯಲ್ಲೇ ಕುಳಿತಿದ್ದಳಾದ ಕಾರಣ, ದೂರಕ್ಕೆ ನಡೆದು ಹೋಗಬೇಕಾದ ಶ್ರಮವೇನೂ ಇಲ್ಲದೆ, ಅದನ್ನು ಆಗಲೇ ಒಲೆಗೆ ಬಿಸುಡಿ, ಅದನ್ನು ಹಿಡಿದಿದ್ದ ಕೈ ಬೆರಳುಗಳನ್ನು ಒಂದು ಕ್ಷಣ ಬೆಂಕಿಯಮೇಲೆ ಹಿಡಿದು, ಮಾಟದ “ಅಣು”ಗಳಾವುವಾದರೂ ಇದ್ದಿದ್ದರೆ ಅವುಗಳನ್ನು ನಾಶಪಡಿಸಿ, ಪರಿಶುದ್ಧಳಾಗಿ, ಸುಗುಣಗಂಭೀರನಿಗೆ ತಾನೇ ಪತ್ರ ಬರೆದಳು.

ಮರುದಿನದ ಟಪ್ಪಾಲಿನವನನ್ನು ದಾರಿಯಲ್ಲಿ ಹೊಂಚು ಹಾಕಿ ಸುಗುಣಗಂಭೀರ ಸುಬ್ಬನು, ಆತನಿಂದ ಪತ್ರ ಪಡೆದು ಓದಿದನು. ಮೊದಲು ಓದಿದುದು ತನ್ನ ವಿಳಾಸವನ್ನು. ಹೀಗಿತ್ತು:-

“ಮಾಟಗಾರ ಸುಬ್ಬನಿಗೆ. . . . . . .”
ಮಾಟಗಾರ ಸುಬ್ಬ? ಎಂಥ ಹೆಸರು!

ಆ ಮೇಲೆ, ಪತ್ರದೊಳಗಿನ ಪಂಕ್ತಿಗಳು ಇವಿಷ್ಟು:-

“ನಿಮಗೆ ಮಾಟಮಾಡಿಸುವ ಶಕ್ತಿಯಿದೆಯೆಂದು ತಿಳಿಯಲು ಆನಂದವಾಗುತ್ತದೆ. ಮಾಟಮಾಡಿಸುವ ಬಗ್ಗೆ ನಿಮಗೆ ಹೆಣ್ಣು ಬೇಕಾಗಿದ್ದರೆ ಜಪಾನ್ ಗೊಂಬೆಗಳ ಅಂಗಡಿಗಾರರಿಗೆ ಬರೆದು ತರಿಸಿ, ಅವುಗಳ ಮೇಲೆ ನಿಮ್ಮ ಶಕ್ತಿಯನ್ನು ಉಪಯೋಗಿಸಿರಿ”

ಸುಬ್ಬನನ್ನೀಗ ನಾವೆಲ್ಲ “ಮಾಟಗಾರ ಸುಬ್ಬ”ನೆಂದು ಕರೆಯುತ್ತಿರುವೆವು. “ಮಾಟ” ಮತ್ತು “ಜಪಾನಗೊಂಬೆ” ಎನ್ನುತ್ತಲೇ ಸುಬ್ಬನು ಕೋಪದಿಂದ ಮೂರ್‍ಚೆಹೋಗುವನು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...