ಒಂದು ದಿನ
ಸಿಟ್ಟಿನ ಭರದಲ್ಲಿ
ಪರಮೇಶ್ವರನಿಗೆ ನಾನು
ತಾಯಿ ಮೇಲೆ ಬೈದೆ
ಅವನುಲೋಕಾಭಿರಾಮವಾಗಿ
ಚಕ್ಕನೆ ನಕ್ಕ
ಪಕ್ಕದ ಮನೆಯ ಬೋರ
ಮುಖವನು ಬರಿದೆ ಕುಗ್ಗಿಸಿ
ಅಂಟು ಮೋರೆಯ ಗಂಟು ಹಾಕಿ
ಸವಾಲು ಮಾಡಿದ
‘ಯಾಕಯ್ಯ ನೀನು’ ಹೀಗೆ
ಆ ನಿರ್ಗುಣ, ನಿರಾಕಾರ
ಅನಾಥ ಜಗನ್ನಾಥನಿಗೆ
ಏನಾದರೂ ಅನ್ನುತ್ತಿ
ಶಬ್ದ ಜಾಲದಲಿ ಅವನ
‘ಧರ್ಮಫಣಿಯನ್ನು ಹಿಡಿಯುತ್ತಿ’
ಇನ್ನೊಮ್ಮೆ ಬೈದೆ ಬಿಗಿಯಾಗಿ
ವಿದ್ಯಾಪೀಠದ ಗೋಡೆ ಬಿರಿಯಿತು
ಮನುಷ್ಯ ಏಕೆ ಸಿಟ್ಟಾಗುತ್ತಾನೆ?
ಈ ವಿಷಯದ ಕುರಿತು ಅಲ್ಲಿ
ಶೋಧ ನಡೆದಿದೆ.
ಹೊಗೆಬತ್ತಿಯ ಧೂಮ ತುಂಬಿದ
ಹೊಟ್ಟೆಯಲ್ಲಿ
ಭಾವವಿಹ್ವಲ ಚರ್ಚೆ ನಡೆದಿದೆ
ನನ್ನ ಹುಟ್ಟು ದಿನದಂದು
ದೇವನಿಗೆ ಇನ್ನೊಮ್ಮೆ ಬೈದೆ
ಚಾಬೂಕಿನೇಟಿನಂತೆ
ಶಬ್ದದೇಟುಗಳ ಒಂದೇ ಸವನೆ
ಬಿಗಿದು ಹೇಳಿದೆ
‘ಪಾಪಿ ಮಗನೆ’ ಮುರುಕು ಭಾಕರಿಗಾಗಿ
ಸರಕು ಕಟ್ಟಿಗೆಯ ಮುರಿಸುವೆ
ತಾಯಿ ಉಟ್ಟ ಚಿಂದಿ ಬಟ್ಟೆಯ ಚೂರಿನಿಂದ
ಬಡಕಲು ಮೈಯ ಒರಸುವೆ
ಗುಟುಕು ಸೆರೆಯ ತೃಷೆಗಾಗಿ
ಕುಂಟಣಿಯನಾಗಿಸುವೆ, ದೇವ
ಆಗದಿದು ಬಾಳಲು ನಿನಗೆ
ಅದಕಾಗಿ ಮಣ್ಣಿನಲಿ ಹೋರುವ
ಶಪಿತ ಪ್ರೇಮಲ, ವತ್ಸಲ,
ತಾಯಿಯಾಗಬೇಕು’
ಬೋರ ನಕ್ಕ
ನಾನು ಬೈದಾಗ ಅವನೂ ನಕ್ಕನೇನೋ?
*****
ಮೂಲ: ಕೇಶವ ಮೆಶ್ರಾಮ
(ಮರಾಠಿ)