Home / ಕವನ / ಕವಿತೆ / ಶಂತನು ಮರಳಿ ಬಂದಾಗ

ಶಂತನು ಮರಳಿ ಬಂದಾಗ

ನಾನು ಇನ್ನೊಮ್ಮೆ ಮರಳಿ ಬರುವಾಗ
ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ
ಸತ್ಯವತಿಯಾಗಿ ಸತಿಯಾಗಿ
ನೀನು ಖಂಡಿತ ನನಗೆ ಸಿಕ್ಕುತ್ತಿ
ಹಳೆ ಪರಿಚಯ ಉಕ್ಕಿ ಬಂದು
ಮನದಲ್ಲಿ ಬಿಕ್ಕುತ್ತಿ
ಆಗ ನಿನ್ನ ವದನತುಂಬ
ವಿರಹದ ನೋವಿನ ಗೆರೆಗಳನ್ನು
ಬಿಸಿಯುಸಿರಿನಲ್ಲಿ
ಪಾಪಪ್ರಜ್ಞೆಯ ಬರೆಗಳನ್ನು
ನೋಡುವ ಇಚ್ಛೆ ನನಗಿರದು
ಅವೆಲ್ಲ ಹಿಂದೆ ನಡೆದ ಅಪರಾಧಗಳು
ಪ್ರೀತಿ-ನೀತಿಯಿರದ
ದಾಹ-ಮೋಹದ ಮಿಲನದಿಂದಾದ
ಪ್ರಮಾದಗಳು.
ಅವುಗಳಲ್ಲಿ ನಂಬಿಕೆ ನಿನಗೂ ಇರದು.
ಬಯಸಲಿಲ್ಲವೆ ನೀನು ರಾಣಿಯ ಪಟ್ಟ
ಹೊರಿಸಲಿಲ್ಲವೆ ಪರಿಪರಿಯ ಆಣೆಗಳ ಬೆಟ್ಟ
‘ಬೇಡುವುಡೆ ನೀವೆನ್ನ ಅಯ್ಯನಂ ಬೇಡಿ’ರೆಂದು
ನಾಚಿ ನನಗೆ ಹುಚ್ಚು ಹಿಡಿಸಲಿಲ್ಲವೆ,
ಆಗಲೆ ತಿಳಿಯಬೇಕಿತ್ತು
ನಿನ್ನಂತರಂಗದ ಹೋರೆಯನು
ಕಾಮ-ಪ್ರೇಮದ ಮೇರೆಯನು
ಗಂಡು ಎಂದೆಂದೂ ಹೆಣ್ಣಿಗೆ ಸೋತಿದ್ದಾನೆ
ಅಂತ-ದುರಂತಕ್ಕೆ ಬಲಿಯಾಗಿದ್ದಾನೆ
ಅದಕೆಂದೆ ನುಡಿವೆ
ಸಿಕ್ಕಿದರೆ ನೀನು ‘ಹಲೋ’ ಎಂದು ತೆರಳು
ತಡೆಯದಿರು, ನುಡಿಯದಿರು
ಮತ್ತೊಮ್ಮೆ ಕನ್ನೆಯಾಗಿ
ನನ್ನೆದುರು ಸುಳಿಯದಿರು
ನಾನು ಮತ್ತೊಮ್ಮೆ ಮಂಕಾಗಿ
ಮುಂದಿನ ಭಾರತಕ್ಕೆ ಕಾರಣವಾಗಲಾರೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...