Home / ಲೇಖನ / ಇತರೆ / ಎಲ್ಲೆಡೆ ಸಲ್ಲುವುದು ಒಳಿತು

ಎಲ್ಲೆಡೆ ಸಲ್ಲುವುದು ಒಳಿತು

ಪ್ರಿಯ ಸಖಿ,
ಅಲ್ಲಾಗಲಿ ಅಥವಾ ಇಲ್ಲಾಗಲಿ
ಸಲ್ಲದೆನ್ನಬೇಡ
ಒಳಿತು
ಎಲ್ಲೂ ಒಂದೇ ನೋಡ
ಸೆಣಸು ನಿಸು ಒಳ್ಮನಸು ಪತಾಕೆ
ಬೀಳದಂತೆ ಜೋಕೆ !
ಕವಿ ಗೋಪಾಲಕೃಷ್ಣ ಅಡಿಗರ ‘ಅಲ್ಲಾಗಲಿ’ ಎಂಬ ಕವನದ ಈ ಸಾಲುಗಳನ್ನು ಓದಿದೆಯಾ ಸಖಿ? ಎಲ್ಲ ಕೆಡಕುಗಳನ್ನು ನೋಡಿ ನೋಡಿ ತಲ್ಲಣಿಸುತ್ತಿದ್ದ ಎದೆಗೆ ಕೊಂಚ ತಂಪಾಯಿತೆ? ಒಳಿತು ಇಲ್ಲಿ ಇಲ್ಲವೇ ಇಲ್ಲ ಎಂದು ಪರಿತಪಿಸಿ ಕೊರಗಬೇಡ ಎಲ್ಲೆಡೆಯೂ ಒಳಿತು ಇದ್ದೇ ಇದೆ. ಒಳಮನಸ್ಸಿನಲ್ಲೇ ಕೆಟ್ಟದ್ದರೊಂದಿಗೆ ಸೆಣಸು. ಒಳಿತಿನ ಪತಾಕೆ ಕೆಳಜಾರಿ ಬೀಳದಂತೆ ಜೋಪಾನವಾಗಿ ನಿಲ್ಲಿಸು ಎಂದು ಹಿತನುಡಿಗಳನ್ನಾಡಿದ್ದಾರೆ ಕವಿ.

ನಮ್ಮ ಎಲ್ಲ ಒಳಿತು ಕೆಡುಕಿನ ಮೂಲ ನಮ್ಮೊಳಗೇ ಇದೆ. ಅದನ್ನು ಆ ದಿಕ್ಕುಗಳಲ್ಲಿ ನಡೆಸುವವರೂ ನಾವೇ. ಒಳಿತಿನೆಡೆಗೇ ನಾವು ನಡೆಯುತ್ತೇವೆ ಎಂದು ಮನದಲ್ಲಿ ದೃಢವಾಗಿ ನಿಶ್ಚಯಿಸಿದರೆ, ಅದನ್ನು ಮೀರುವ ಧೈರ್ಯ ಬಹುಶಃ ನಮಗೂ ಬರಬಾರದು! ಪದ್ಯವನ್ನು ಮುಂದುವರೆಸುತ್ತಾ ಕವಿ,
ಒಳಮನ ದೇವರ ಮನೆ ಮಣಿಯಲ್ಲಿ
ಇದೆ ಇಂದಿಗೂ ಆ ದೀಪದ ಮಲ್ಲಿ
ಎಣ್ಣೆ ತೀರಿ ಕರಟಿದರೂ ಬತ್ತಿ
ಒತ್ತಿ ತುಳಿದರೂ ತಮಸ್ಸು ಮುತ್ತಿ
ಹೂಡಿದೆ ಕತ್ತಲ ಕೊಡೆ ರಣ
ಈ ಚಿತ್ಕಣ ಘನ ಚಿರಂತನ
ನೋಡಿ ಬೀಗು, ಸಂದೇಹನೀಗು
ಸಾಷ್ಟಾಂಗ ಬಾಗು ಅದಕೆ
ಒಲವಿನ ಹನಿಮಣಿ ಕೊಡುಕೈಗಾಣಿಕೆ
ಎರೆಯೊ ನಿನ್ನ ಎದೆಯೊರತೆ
ಬೆಳಕಿಗೆ ಬಾರದಂತೆ ಕೊರತೆ!
ಎನ್ನುತ್ತಾರೆ ಒಳಮನಸ್ಸಿನ ದೇವರಮನೆಯಲ್ಲಿ ಎಣ್ಣೆ ತೀರಿ, ಬತ್ತಿ ಕರಟಿದ ಹಣತೆ ಇದೆ. ತುಂಬಿರುವ ಕತ್ತಲಿನೊಡನೆ ನಿರಂತರವಾಗಿ ಯುದ್ಧ ಸಾರಿದೆ ಮನಸ್ಸು. ಮನದಲ್ಲಿ ಸದಾ ಒಳಿತು ಕೆಡುಕಿನ ಕುರಿತು ವಿವೇಚನೆ ನಡೆದೇ ಇದೆ. ಅದನ್ನು ನೋಡಿ ಹೆಮ್ಮೆ ಪಡು. ಕತ್ತಲ ಮೇಲೆ ಬೆಳಕು ಗೆಲುವು ಸಾಧಿಸೇ ಸಾಧಿಸುತ್ತದೆ ಸಂದೇಹ ಬೇಡೆನ್ನುತ್ತಾ ಧೈರ್ಯ ತುಂಬುತ್ತಾರೆ ಕವಿ.

ಬೆಳಕನ್ನು ಶಾಶ್ವತವಾಗಿ ನುಂಗಿಬಿಡಲು ಕತ್ತಲು ಶತಪ್ರಯತ್ನ ಮಾಡಿದರೂ ಕತ್ತಲಿನ ಅರಿವಿಗೇ ಬರದಂತೆ ಮೆಲ್ಲ ಮೆಲ್ಲಗೆ ಬೆಳಕು ಪಸರಿಸಿ ಕತ್ತಲನ್ನು ಹೊಡೆದೋಡಿಸಿ ಬಿಡುತ್ತವಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...