Home / ಲೇಖನ / ಇತರೆ / ಎಲ್ಲೆಡೆ ಸಲ್ಲುವುದು ಒಳಿತು

ಎಲ್ಲೆಡೆ ಸಲ್ಲುವುದು ಒಳಿತು

ಪ್ರಿಯ ಸಖಿ,
ಅಲ್ಲಾಗಲಿ ಅಥವಾ ಇಲ್ಲಾಗಲಿ
ಸಲ್ಲದೆನ್ನಬೇಡ
ಒಳಿತು
ಎಲ್ಲೂ ಒಂದೇ ನೋಡ
ಸೆಣಸು ನಿಸು ಒಳ್ಮನಸು ಪತಾಕೆ
ಬೀಳದಂತೆ ಜೋಕೆ !
ಕವಿ ಗೋಪಾಲಕೃಷ್ಣ ಅಡಿಗರ ‘ಅಲ್ಲಾಗಲಿ’ ಎಂಬ ಕವನದ ಈ ಸಾಲುಗಳನ್ನು ಓದಿದೆಯಾ ಸಖಿ? ಎಲ್ಲ ಕೆಡಕುಗಳನ್ನು ನೋಡಿ ನೋಡಿ ತಲ್ಲಣಿಸುತ್ತಿದ್ದ ಎದೆಗೆ ಕೊಂಚ ತಂಪಾಯಿತೆ? ಒಳಿತು ಇಲ್ಲಿ ಇಲ್ಲವೇ ಇಲ್ಲ ಎಂದು ಪರಿತಪಿಸಿ ಕೊರಗಬೇಡ ಎಲ್ಲೆಡೆಯೂ ಒಳಿತು ಇದ್ದೇ ಇದೆ. ಒಳಮನಸ್ಸಿನಲ್ಲೇ ಕೆಟ್ಟದ್ದರೊಂದಿಗೆ ಸೆಣಸು. ಒಳಿತಿನ ಪತಾಕೆ ಕೆಳಜಾರಿ ಬೀಳದಂತೆ ಜೋಪಾನವಾಗಿ ನಿಲ್ಲಿಸು ಎಂದು ಹಿತನುಡಿಗಳನ್ನಾಡಿದ್ದಾರೆ ಕವಿ.

ನಮ್ಮ ಎಲ್ಲ ಒಳಿತು ಕೆಡುಕಿನ ಮೂಲ ನಮ್ಮೊಳಗೇ ಇದೆ. ಅದನ್ನು ಆ ದಿಕ್ಕುಗಳಲ್ಲಿ ನಡೆಸುವವರೂ ನಾವೇ. ಒಳಿತಿನೆಡೆಗೇ ನಾವು ನಡೆಯುತ್ತೇವೆ ಎಂದು ಮನದಲ್ಲಿ ದೃಢವಾಗಿ ನಿಶ್ಚಯಿಸಿದರೆ, ಅದನ್ನು ಮೀರುವ ಧೈರ್ಯ ಬಹುಶಃ ನಮಗೂ ಬರಬಾರದು! ಪದ್ಯವನ್ನು ಮುಂದುವರೆಸುತ್ತಾ ಕವಿ,
ಒಳಮನ ದೇವರ ಮನೆ ಮಣಿಯಲ್ಲಿ
ಇದೆ ಇಂದಿಗೂ ಆ ದೀಪದ ಮಲ್ಲಿ
ಎಣ್ಣೆ ತೀರಿ ಕರಟಿದರೂ ಬತ್ತಿ
ಒತ್ತಿ ತುಳಿದರೂ ತಮಸ್ಸು ಮುತ್ತಿ
ಹೂಡಿದೆ ಕತ್ತಲ ಕೊಡೆ ರಣ
ಈ ಚಿತ್ಕಣ ಘನ ಚಿರಂತನ
ನೋಡಿ ಬೀಗು, ಸಂದೇಹನೀಗು
ಸಾಷ್ಟಾಂಗ ಬಾಗು ಅದಕೆ
ಒಲವಿನ ಹನಿಮಣಿ ಕೊಡುಕೈಗಾಣಿಕೆ
ಎರೆಯೊ ನಿನ್ನ ಎದೆಯೊರತೆ
ಬೆಳಕಿಗೆ ಬಾರದಂತೆ ಕೊರತೆ!
ಎನ್ನುತ್ತಾರೆ ಒಳಮನಸ್ಸಿನ ದೇವರಮನೆಯಲ್ಲಿ ಎಣ್ಣೆ ತೀರಿ, ಬತ್ತಿ ಕರಟಿದ ಹಣತೆ ಇದೆ. ತುಂಬಿರುವ ಕತ್ತಲಿನೊಡನೆ ನಿರಂತರವಾಗಿ ಯುದ್ಧ ಸಾರಿದೆ ಮನಸ್ಸು. ಮನದಲ್ಲಿ ಸದಾ ಒಳಿತು ಕೆಡುಕಿನ ಕುರಿತು ವಿವೇಚನೆ ನಡೆದೇ ಇದೆ. ಅದನ್ನು ನೋಡಿ ಹೆಮ್ಮೆ ಪಡು. ಕತ್ತಲ ಮೇಲೆ ಬೆಳಕು ಗೆಲುವು ಸಾಧಿಸೇ ಸಾಧಿಸುತ್ತದೆ ಸಂದೇಹ ಬೇಡೆನ್ನುತ್ತಾ ಧೈರ್ಯ ತುಂಬುತ್ತಾರೆ ಕವಿ.

ಬೆಳಕನ್ನು ಶಾಶ್ವತವಾಗಿ ನುಂಗಿಬಿಡಲು ಕತ್ತಲು ಶತಪ್ರಯತ್ನ ಮಾಡಿದರೂ ಕತ್ತಲಿನ ಅರಿವಿಗೇ ಬರದಂತೆ ಮೆಲ್ಲ ಮೆಲ್ಲಗೆ ಬೆಳಕು ಪಸರಿಸಿ ಕತ್ತಲನ್ನು ಹೊಡೆದೋಡಿಸಿ ಬಿಡುತ್ತವಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...