ದನಿಗಳು

ನಡುರಾತ್ರಿಯ ನಾಭಿಯಲ್ಲಿ
ನೆಲ ಜಲ ಮಾತಾಡಿತ ?
ಹಗಲಿನ ಹದ್ದುಗಳು ಹಾರಿ
ಹಮ್ಮಿಗೆ ಗದ್ಗದ ಮೂಡಿ
ತರ್ಕ ಚಿತೆಗೆ ಬಿದ್ದಿತ ?
ತಳದ ಹುತ್ತ ಬಾಯಿ ತೆರೆದು
ನಿದ್ದೆಯಿದ್ದ ನಾಗರಾಗ
ಮೂಕಸನ್ನೆ ತಾಕಲಾಡಿ ಎಚ್ಚರಕ್ಕೆ ಚೆಲ್ಲಿತ ?
ಬಾನಿನ ಮಹೇಂದ್ರಕಾಯ
ಅಸಂಖ್ಯ ನೇತ್ರವ ಬಿಚ್ಚಿ
ಉಳುಕಿದ ಮಣ್ಣೆದೆಯನ್ನು ಚಂದ್ರಹಸ್ತ ಸವರಿತ ?

ಬಂದಿರೇ, ಆಹ!
ಬನ್ನಿರೇ
ಏಕಾಂತಕ್ಕೆಳೆವ ಒಗಟುಗಳೇ
ಬಗೆಹರಿಯದ ಜಿಗಟುಗಳೇ
ಯಾಕೆ ಹೀಗೆ ಕಾಡುತ್ತೀರಿ ?
ಮೋಡದಲ್ಲಿ ನಿಧಾನ ಮೂಡುವ ಅರ್ಥಾತೀತ ಗೂಢಗಳೆ
ಹೊಳೆ ಬೆಟ್ಟ ಬಿಕ್ಕಿದ ಅನುಕ್ತ ಗಾಢಗಳೆ
ನೇಗಿಲು ಹೂಡುತ್ತೀರಿ ಯಾಕೆ ಎದೆಗೆ ನಿಷ್ಕರುಣಿಗಳೆ?
ನಿದ್ದೆ ಹಬ್ಬದ ನೋವ ಬೆಳೆಯುತ್ತೀರಿ ಯಾಕೆ ?
ತಬ್ಬಿದ ಮಣ್ಣಿನ ಸುಖಕ್ಕೆ ಮುಳಿಯುತ್ತೀರಿ ಯಾಕೆ ?
ನಿಂತ ಮುಖ ನಿಂತಂತೆ ಚಲಿಸುವ ನೀವು
ದಯಾಕ್ಷಿ ಭಯಗಳೆ
ರಾಕ್ಷಸ ನಯಗಳೆ
ಲಕ್ಷಣಗೆರೆ ದಾಟಿಸಬರುವಿರೆ ?
ವ್ಯವಹಾರ ಕೊಯಿಲಾಗುವ ಮುನ್ನ
ಮಳೆ ನಷ್ಟದಲ್ಲಿ ಹುಟ್ಟುವ
ಹೆಸರಿಲ್ಲದ ಇಷ್ಟಗಳೆ
ಯಾಕೆ ಕಾಡುತ್ತೀರಿ ಹೀಗೆ ?
ಕಾಡಿ, ಮುಖ ದೀನಮಾಡಿ
ಬೇಡುವ ಧಾಟಿಯಲ್ಲಿ ನೀಡಿಬಿಡುತ್ತೀರಿ ಹೇಗೆ ?

ಉರಿವ ಹಗಲ ಆರಿಸಿದ
ಇರುಳ ಪನ್ನೀರೇ ಘನಿಸಿತೆ ?
ಕಿರುತಿಂಗಳ ಕೊರಗುಬೆಳಕಲ್ಲಿ ಮುಗಿಲು
ಮುಡಿಗಡ್ಡದ ಮುನಿಗಳ ರೂಪಿಸಿತೆ ?
ಮುನಿಗಳೆ!
ಪಾತಾಳ ಜಯಿಸಿದ ದನಿಗಳೆ
ನಿಮ್ಮ ಕೈಕಾಲಿಗೆ ನೀರೆರೆಯಲಿ ಹೇಗೆ
ಕಲಿತ ವೇದಾಂತವೆಲ್ಲ ಬಚ್ಚಲ ಕೊಚ್ಚೆ;
ನಿಮಗೆ ಏನ ತೊಡಿಸಲಿ ಹೇಗೆ
ನಕ್ಷತ್ರಗಂಗೆ ಉದ್ದಸಾಲದ ಕಚ್ಚೆ;
ಕ್ಷಣಸತ್ಯದ ಹೆಣ ಮೆಟ್ಟಿ ಬರುವ
ಅಮೂರ್ತ ಗುರಿಗಳೆ
ಕಡಲೊಡಲಿಗೆ ತಣ್ಣಗೆ ಹರಿದು
ಗಿರಿನೆತ್ತಿ ಕಾರುವ ವಿರೋಧದುರಿಗಳೆ
ಕೋಟ್ಯಂತರ ಇಳೆಕಣಗಳ ಗುಡಿಸುವ ಬರಲುಗಳೆ
ಮಣ್ಣನಾಲಿಗೆಯಿಂದ ಹಿಡಿಯಲಿ ಹೇಗೆ ?
ನಿಮ್ಮನ್ನು ಹಿಡಿಯದ ನುಡಿ
ಬರಿ ನಾದದ ಬೇಗೆ.

ಗೋಳದ ಗುರುತ್ವದಾಚೆಗೆ
ಗಿರಿತೂಕವೆ ಜಳ್ಳು,
ಬೆಳಕಿನ ವೇಗಕ್ಕೆಳೆದರೆ
ಕಾಯದ ರೂಪವೆ ಸುಳ್ಳು,
ಬಣ್ಣಗಳೋ ಕಣ್ಣ ಭ್ರಮೆ
ಕಣ್ಣೋ ಅದಕ್ಕೆ ನಲಿಯುವ ಬೆಳ್ಳು,
ಇಲ್ಲಿಯ ಹಗಲು ಎಲ್ಲಿಗೊ
ಇರುಳೂ ಅಲ್ಲವಾಗಿ
ಈವರೆಗೆ ಕಂಡದ್ದೆಲ್ಲ
ಕಾಣದ್ದರ ನೆರಳು.

ಎಂಬ ಬಗೆ ಕವಿಸುವ
ಕವಿಸಿ ಕುದಿಸುವ
ಕುದಿಸಿ ಉದಿಸುವ ಧಗ ಧಗ ಚಂದ್ರರೆ
ಸತ್ಯದ ಮೈಯಲ್ಲಿ ಸುಳಿಯುವ
ಸುಳ್ಳಿನ ಚಹರೆ ನೀಡಿ ಯಾಕೆ
ಶಂಕೆಯಲ್ಲಿ ಅದ್ದುತ್ತೀರಿ ?
ಬೆಳಕು ಹರಿಯಲು ಕರಗುವ
ಅಸ್ಪಷ್ಟ ಚೀರುಗಳೆ
ಅಯ್ಯೋ!
ಯಾಕೆ ಹಾಗೆ ತೀರುತ್ತೀರಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಘಾಟಿ ಹೆಂಗಸು
Next post ಕಳೆದವು ಹತ್ತು ದಿನ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…