ನಾನು ಪ್ರೀತಿಸಿದ ಹುಡುಗಿಯರು

ಅವರೆಲ್ಲಿದ್ದಾರೆ ಈಗ? ಕಾಲ ಕಾಲಕ್ಕೆ ನನ್ನೆದೆಯ
ತಿದಿಯೊತ್ತಿ ಜೀವಕ್ಕೆ ಜೀವ ಕೊಡುತಿದ್ದವರು?
ಕೆಲವರಿದ್ದರು ಕಾಸರಗೋಡಿನ ಹಳೆಮನೆಗಳಲ್ಲಿ
ದೀಪಗಳಂತೆ ಉರಿಯುತ್ತ-ಇನ್ನು ಕೆಲವರು
ತಿರುವನಂತಪುರದಲ್ಲಿ, ತೀರ ಕೊನೆಯವಳು
ಬಾರ್ಸಿಲೋನಾದ ಯಾವುದೋ ಬೀದಿಯಲ್ಲಿ

ಈಗೆಲ್ಲಿಯೆಂದು ಹೇಳುವುದು ಹೇಗೆ-ಒಬೊಬ್ಬರಿಗು
ಕೊನೆಯ ಪತ್ರ ಬರೆದು ಎಷ್ಟೋ ಕಾಲವಾಗಿದೆ.
ಅವರ ವಿಳಾಸಗಳನ್ನೂ ಹರಿದು ಹಾಕಿದ್ದೇನೆ-
ಅಚಾನಕವಾಗಿ ಎಂದಾದರೂ ಎದುರು ಸಿಕ್ಕಿದರೆ
ಅವರ ಮುಖ ಕೆಂಪಾಗುತ್ತದೆ, ಹೆಜ್ಜೆ ತಡವುತ್ತದೆ,
ಕೈಚೀಲ ಕೆಳಗೆ ಬೀಳುತ್ತದೆ-ಎಂಬ ಭ್ರಮೆ ನನಗಿಲ್ಲ.

ಒಬ್ಬಳಿದ್ದಳು ದೈವವಿಶ್ವಾಸಿ-ಪ್ರೇಮದಲ್ಲಿ ತನ್ನ
ದೈವವನ್ನು ಕಾಣಬೇಕೆನ್ನುತ್ತಿದ್ದಳು, ಇನ್ನೊಬ್ಬಾಕೆ
ಕ್ರಾಂತಿಕಾರಿಣಿ ಇಡಿಯ ಸಮುದಾಯವನ್ನೆ ತಿದ್ದಲೆಳಸಿದ್ದಳು;
ಮಗದೊಬ್ಬಳು ಕನಸುಗಾರ್ತಿ, ಎಲ್ಲ ಕಡೆಯೂ ತನ್ನ
ಪ್ರತಿಬಿಂಬಗಳನ್ನೆ ಕಾಣುತಿದ್ದಳು-ನನ್ನ ಮಾನಸದಲ್ಲಿ
ಒಬ್ಬರ ಮೇಲೊಬ್ಬರಂತೆ ಅಲೆಯೆಬ್ಬಿಸಿ ಹೋದರು

ಕೈಗೊಳ್ಳಲೆ ನಾನೊಂದು ತೀರ್ಥಯಾತ್ರೆ. ಒಬ್ಬೊಬ್ಬರನು
ಹುಡುಕುತ್ತ ಅರಿಯದ ಪ್ರದೇಶಗಳಲ್ಲಿ ಅಪರಿಚಿತ ದೇಶಗಳಲ್ಲಿ
ಅವರಿವರ ಕೇಳುತ್ತ ತೋಚಿದ ಕಾರಣಗಳ ಕೊಡುತ್ತ
ಸಂತೆ ಸೇರಿದಲ್ಲಿ ಸೇರಿ ರಾತ್ರಿಗೆ ಮೊದಲೆ ಹರದಾರಿ ಸಾಗಿ
ಕತ್ತಲಾದಲ್ಲಿ ಮಲಗಿ ಮುಂಜಾವದ ಬೆಳಕಿನಲ್ಲಿ ನಡೆದು
ಕಾಣುವೆನೆ ನಾನು ಕಾಣಬೇಕೆಂದು ಬಯಸಿದವರ?

ಗುರುತು ಬದಲಾಗಿರಬಹುದೆ? ಮಕ್ಕಳಾಗಿರಬಹುದೆ?
ಮೈಮನಸ್ಸಿನ ಬಿಗಿತ ಸಡಿಲಗೊಂಡಿರಬಹುದೆ?
ಹಳೆಯ ಹಟಗಳನೀಗ ಬಿಟ್ಟುಕೊಟ್ಟಿರಬಹುದೆ ?
ಗತಕಾಲದ ನೆನಪು-ಹೂವಿನಂತಹ ಕದಪು
ಜರ್ಜರಿತವಾಗಿರಬಹುದೆ ಇನ್ನೆಂದು ಮರುಕಳಿಸದಂತೆ
ಬೇರೆ ಗಂಡಸರ ನಿರಂಕುಶ ಪ್ರಭುತ್ವಕ್ಕೆ ಸಿಕ್ಕು?

ಹೀಗೊಂದು ಬೀದಿಯಲಿ ಕಂಡೆನೊಬ್ಬಳನೆನಿಸಿ
ಬದಿಯ ಹೋಟೆಲ ಹೊಕ್ಕು ದಿಕ್ಕು ತೋಚದೆ ಕುಳಿತೆ.
ಕುಳಿತಿದ್ದನೊಬ್ಬಾತ ಇಳಿವಯಸ್ಕ ಅನ್ಯಮನಸ್ಕ
ಗುಳಿಬಿದ್ದ ಕಣ್ಣುಗಳ ಹಾಯಿಸಿ ಬೀದಿಯ ಕಡೆಗೆ
ಹಾಯುತಿದ್ದುವು ಅವನ ಮುಖದ ಸುಕ್ಕುಗಳ ಮೇಲೆ
ಎಷ್ಟೋ ಚಿತ್ರಗಳ ಸರಮಾಲೆ ಎಷ್ಟೋ ಸಮುದ್ರಗಳ ಅಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೫
Next post ಶೂನ್ಯದ ಮೋಹ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…