Home / ಕವನ / ಕವಿತೆ / ನಾನು ಪ್ರೀತಿಸಿದ ಹುಡುಗಿಯರು

ನಾನು ಪ್ರೀತಿಸಿದ ಹುಡುಗಿಯರು

ಅವರೆಲ್ಲಿದ್ದಾರೆ ಈಗ? ಕಾಲ ಕಾಲಕ್ಕೆ ನನ್ನೆದೆಯ
ತಿದಿಯೊತ್ತಿ ಜೀವಕ್ಕೆ ಜೀವ ಕೊಡುತಿದ್ದವರು?
ಕೆಲವರಿದ್ದರು ಕಾಸರಗೋಡಿನ ಹಳೆಮನೆಗಳಲ್ಲಿ
ದೀಪಗಳಂತೆ ಉರಿಯುತ್ತ-ಇನ್ನು ಕೆಲವರು
ತಿರುವನಂತಪುರದಲ್ಲಿ, ತೀರ ಕೊನೆಯವಳು
ಬಾರ್ಸಿಲೋನಾದ ಯಾವುದೋ ಬೀದಿಯಲ್ಲಿ

ಈಗೆಲ್ಲಿಯೆಂದು ಹೇಳುವುದು ಹೇಗೆ-ಒಬೊಬ್ಬರಿಗು
ಕೊನೆಯ ಪತ್ರ ಬರೆದು ಎಷ್ಟೋ ಕಾಲವಾಗಿದೆ.
ಅವರ ವಿಳಾಸಗಳನ್ನೂ ಹರಿದು ಹಾಕಿದ್ದೇನೆ-
ಅಚಾನಕವಾಗಿ ಎಂದಾದರೂ ಎದುರು ಸಿಕ್ಕಿದರೆ
ಅವರ ಮುಖ ಕೆಂಪಾಗುತ್ತದೆ, ಹೆಜ್ಜೆ ತಡವುತ್ತದೆ,
ಕೈಚೀಲ ಕೆಳಗೆ ಬೀಳುತ್ತದೆ-ಎಂಬ ಭ್ರಮೆ ನನಗಿಲ್ಲ.

ಒಬ್ಬಳಿದ್ದಳು ದೈವವಿಶ್ವಾಸಿ-ಪ್ರೇಮದಲ್ಲಿ ತನ್ನ
ದೈವವನ್ನು ಕಾಣಬೇಕೆನ್ನುತ್ತಿದ್ದಳು, ಇನ್ನೊಬ್ಬಾಕೆ
ಕ್ರಾಂತಿಕಾರಿಣಿ ಇಡಿಯ ಸಮುದಾಯವನ್ನೆ ತಿದ್ದಲೆಳಸಿದ್ದಳು;
ಮಗದೊಬ್ಬಳು ಕನಸುಗಾರ್ತಿ, ಎಲ್ಲ ಕಡೆಯೂ ತನ್ನ
ಪ್ರತಿಬಿಂಬಗಳನ್ನೆ ಕಾಣುತಿದ್ದಳು-ನನ್ನ ಮಾನಸದಲ್ಲಿ
ಒಬ್ಬರ ಮೇಲೊಬ್ಬರಂತೆ ಅಲೆಯೆಬ್ಬಿಸಿ ಹೋದರು

ಕೈಗೊಳ್ಳಲೆ ನಾನೊಂದು ತೀರ್ಥಯಾತ್ರೆ. ಒಬ್ಬೊಬ್ಬರನು
ಹುಡುಕುತ್ತ ಅರಿಯದ ಪ್ರದೇಶಗಳಲ್ಲಿ ಅಪರಿಚಿತ ದೇಶಗಳಲ್ಲಿ
ಅವರಿವರ ಕೇಳುತ್ತ ತೋಚಿದ ಕಾರಣಗಳ ಕೊಡುತ್ತ
ಸಂತೆ ಸೇರಿದಲ್ಲಿ ಸೇರಿ ರಾತ್ರಿಗೆ ಮೊದಲೆ ಹರದಾರಿ ಸಾಗಿ
ಕತ್ತಲಾದಲ್ಲಿ ಮಲಗಿ ಮುಂಜಾವದ ಬೆಳಕಿನಲ್ಲಿ ನಡೆದು
ಕಾಣುವೆನೆ ನಾನು ಕಾಣಬೇಕೆಂದು ಬಯಸಿದವರ?

ಗುರುತು ಬದಲಾಗಿರಬಹುದೆ? ಮಕ್ಕಳಾಗಿರಬಹುದೆ?
ಮೈಮನಸ್ಸಿನ ಬಿಗಿತ ಸಡಿಲಗೊಂಡಿರಬಹುದೆ?
ಹಳೆಯ ಹಟಗಳನೀಗ ಬಿಟ್ಟುಕೊಟ್ಟಿರಬಹುದೆ ?
ಗತಕಾಲದ ನೆನಪು-ಹೂವಿನಂತಹ ಕದಪು
ಜರ್ಜರಿತವಾಗಿರಬಹುದೆ ಇನ್ನೆಂದು ಮರುಕಳಿಸದಂತೆ
ಬೇರೆ ಗಂಡಸರ ನಿರಂಕುಶ ಪ್ರಭುತ್ವಕ್ಕೆ ಸಿಕ್ಕು?

ಹೀಗೊಂದು ಬೀದಿಯಲಿ ಕಂಡೆನೊಬ್ಬಳನೆನಿಸಿ
ಬದಿಯ ಹೋಟೆಲ ಹೊಕ್ಕು ದಿಕ್ಕು ತೋಚದೆ ಕುಳಿತೆ.
ಕುಳಿತಿದ್ದನೊಬ್ಬಾತ ಇಳಿವಯಸ್ಕ ಅನ್ಯಮನಸ್ಕ
ಗುಳಿಬಿದ್ದ ಕಣ್ಣುಗಳ ಹಾಯಿಸಿ ಬೀದಿಯ ಕಡೆಗೆ
ಹಾಯುತಿದ್ದುವು ಅವನ ಮುಖದ ಸುಕ್ಕುಗಳ ಮೇಲೆ
ಎಷ್ಟೋ ಚಿತ್ರಗಳ ಸರಮಾಲೆ ಎಷ್ಟೋ ಸಮುದ್ರಗಳ ಅಲೆ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...