Home / ಕವನ / ಕವಿತೆ / ನಾನು ಪ್ರೀತಿಸಿದ ಹುಡುಗಿಯರು

ನಾನು ಪ್ರೀತಿಸಿದ ಹುಡುಗಿಯರು

ಅವರೆಲ್ಲಿದ್ದಾರೆ ಈಗ? ಕಾಲ ಕಾಲಕ್ಕೆ ನನ್ನೆದೆಯ
ತಿದಿಯೊತ್ತಿ ಜೀವಕ್ಕೆ ಜೀವ ಕೊಡುತಿದ್ದವರು?
ಕೆಲವರಿದ್ದರು ಕಾಸರಗೋಡಿನ ಹಳೆಮನೆಗಳಲ್ಲಿ
ದೀಪಗಳಂತೆ ಉರಿಯುತ್ತ-ಇನ್ನು ಕೆಲವರು
ತಿರುವನಂತಪುರದಲ್ಲಿ, ತೀರ ಕೊನೆಯವಳು
ಬಾರ್ಸಿಲೋನಾದ ಯಾವುದೋ ಬೀದಿಯಲ್ಲಿ

ಈಗೆಲ್ಲಿಯೆಂದು ಹೇಳುವುದು ಹೇಗೆ-ಒಬೊಬ್ಬರಿಗು
ಕೊನೆಯ ಪತ್ರ ಬರೆದು ಎಷ್ಟೋ ಕಾಲವಾಗಿದೆ.
ಅವರ ವಿಳಾಸಗಳನ್ನೂ ಹರಿದು ಹಾಕಿದ್ದೇನೆ-
ಅಚಾನಕವಾಗಿ ಎಂದಾದರೂ ಎದುರು ಸಿಕ್ಕಿದರೆ
ಅವರ ಮುಖ ಕೆಂಪಾಗುತ್ತದೆ, ಹೆಜ್ಜೆ ತಡವುತ್ತದೆ,
ಕೈಚೀಲ ಕೆಳಗೆ ಬೀಳುತ್ತದೆ-ಎಂಬ ಭ್ರಮೆ ನನಗಿಲ್ಲ.

ಒಬ್ಬಳಿದ್ದಳು ದೈವವಿಶ್ವಾಸಿ-ಪ್ರೇಮದಲ್ಲಿ ತನ್ನ
ದೈವವನ್ನು ಕಾಣಬೇಕೆನ್ನುತ್ತಿದ್ದಳು, ಇನ್ನೊಬ್ಬಾಕೆ
ಕ್ರಾಂತಿಕಾರಿಣಿ ಇಡಿಯ ಸಮುದಾಯವನ್ನೆ ತಿದ್ದಲೆಳಸಿದ್ದಳು;
ಮಗದೊಬ್ಬಳು ಕನಸುಗಾರ್ತಿ, ಎಲ್ಲ ಕಡೆಯೂ ತನ್ನ
ಪ್ರತಿಬಿಂಬಗಳನ್ನೆ ಕಾಣುತಿದ್ದಳು-ನನ್ನ ಮಾನಸದಲ್ಲಿ
ಒಬ್ಬರ ಮೇಲೊಬ್ಬರಂತೆ ಅಲೆಯೆಬ್ಬಿಸಿ ಹೋದರು

ಕೈಗೊಳ್ಳಲೆ ನಾನೊಂದು ತೀರ್ಥಯಾತ್ರೆ. ಒಬ್ಬೊಬ್ಬರನು
ಹುಡುಕುತ್ತ ಅರಿಯದ ಪ್ರದೇಶಗಳಲ್ಲಿ ಅಪರಿಚಿತ ದೇಶಗಳಲ್ಲಿ
ಅವರಿವರ ಕೇಳುತ್ತ ತೋಚಿದ ಕಾರಣಗಳ ಕೊಡುತ್ತ
ಸಂತೆ ಸೇರಿದಲ್ಲಿ ಸೇರಿ ರಾತ್ರಿಗೆ ಮೊದಲೆ ಹರದಾರಿ ಸಾಗಿ
ಕತ್ತಲಾದಲ್ಲಿ ಮಲಗಿ ಮುಂಜಾವದ ಬೆಳಕಿನಲ್ಲಿ ನಡೆದು
ಕಾಣುವೆನೆ ನಾನು ಕಾಣಬೇಕೆಂದು ಬಯಸಿದವರ?

ಗುರುತು ಬದಲಾಗಿರಬಹುದೆ? ಮಕ್ಕಳಾಗಿರಬಹುದೆ?
ಮೈಮನಸ್ಸಿನ ಬಿಗಿತ ಸಡಿಲಗೊಂಡಿರಬಹುದೆ?
ಹಳೆಯ ಹಟಗಳನೀಗ ಬಿಟ್ಟುಕೊಟ್ಟಿರಬಹುದೆ ?
ಗತಕಾಲದ ನೆನಪು-ಹೂವಿನಂತಹ ಕದಪು
ಜರ್ಜರಿತವಾಗಿರಬಹುದೆ ಇನ್ನೆಂದು ಮರುಕಳಿಸದಂತೆ
ಬೇರೆ ಗಂಡಸರ ನಿರಂಕುಶ ಪ್ರಭುತ್ವಕ್ಕೆ ಸಿಕ್ಕು?

ಹೀಗೊಂದು ಬೀದಿಯಲಿ ಕಂಡೆನೊಬ್ಬಳನೆನಿಸಿ
ಬದಿಯ ಹೋಟೆಲ ಹೊಕ್ಕು ದಿಕ್ಕು ತೋಚದೆ ಕುಳಿತೆ.
ಕುಳಿತಿದ್ದನೊಬ್ಬಾತ ಇಳಿವಯಸ್ಕ ಅನ್ಯಮನಸ್ಕ
ಗುಳಿಬಿದ್ದ ಕಣ್ಣುಗಳ ಹಾಯಿಸಿ ಬೀದಿಯ ಕಡೆಗೆ
ಹಾಯುತಿದ್ದುವು ಅವನ ಮುಖದ ಸುಕ್ಕುಗಳ ಮೇಲೆ
ಎಷ್ಟೋ ಚಿತ್ರಗಳ ಸರಮಾಲೆ ಎಷ್ಟೋ ಸಮುದ್ರಗಳ ಅಲೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...