Home / ಲೇಖನ / ಇತರೆ / ಕೃತಕತೆಯಂದ ನೈಜತೆಗೆ

ಕೃತಕತೆಯಂದ ನೈಜತೆಗೆ

ಪ್ರಿಯ ಸಖಿ

ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜೀವನ ವಿಧಾನದಿಂದ ನಿಧಾನಕ್ಕೆ ನಾವು ನೈಜತೆಯಿಂದ ಕೃತಕತೆಯೆಡೆಗೆ ಮುಖ ಮಾಡಿ ನಡೆಯುತ್ತಿದ್ದೇವೆ. ನಮ್ಮ ಒಂದು ದಿನದ ದಿನಚರಿಯನ್ನು ನಮ್ಮ ನಡವಳಿಕೆ, ಮಾತು ಕೃತಿಗಳನ್ನು ಗಮನಿಸಿದರೆ ನಾವೆಷ್ಟು ಕೃತಕವಾಗುತ್ತಿದ್ದೇವೆ ಎಂದು ತನ್ನಷ್ಟಕ್ಕೇ ಗೋಚರವಾಗುತ್ತಾ ಸಾಗುತ್ತದೆ. ಇಂದು ಆಧುನಿಕ ಮಾನವನ ನಡೆನುಡಿಗಳೆಲ್ಲಾ ವ್ಯವಹಾರಿಕವಾಗಿವೆ. ತನಗೆ ಇಷ್ಟವಿರಲಿ ಬಿಡಲಿ ಕಾರ್ಯಸಾಧನೆಗೆ ಅನಿವಾರ್ಯವೆಂಬಂತೆ ಹಲವಾರು ಮುಖವಾಡಗಳನ್ನು ತೊಟ್ಟುಕೊಂಡು ಬಿಟ್ಟಿದ್ದಾನೆ. ಕೆಲವೊಮ್ಮೆ ತನ್ನ ನಿಜ ಮುಖ ಯಾವುದು? ಮುಖವಾಡ ಯಾವುದು? ಎಂಬುದೇ ಅವನಿಗೆ ಗೊಂದಲವಾಗುವಷ್ಟು ಮುಖವಾಡಗಳು ಇಂದು ಪ್ರಮುಖ ಪಾತ್ರ ವಹಿಸುತ್ತಿವೆ.

ಆದರೆ ಸೂಕ್ಷ್ಮ ವ್ಯಕ್ತಿಯೊಬ್ಬನಿಗೆ ತನ್ನ ನೈಜ ಮುಖ ಸದಾ ಕಾಡುತ್ತಿರುತ್ತದೆ. ನೈಜ, ಸೂಕ್ಷ್ಮ ಭಾವನೆಗಳು ಕೃತಕತೆಯ ದಾಳಿಯಿಂದ ಮನದಾಳದಲ್ಲಿ ಸದಾ ನಲುಗುತ್ತಿರುತ್ತದೆ. ವ್ಯಕ್ತಿ ಹೆಚ್ಚು ಹೆಚ್ಚು ಮಹತ್ವಾಕಾಂಕ್ಷಿ, ಅಹಂಕಾರಿ, ಆಶೆಬುರುಕನಾದಷ್ಟೂ ಅವನ ಈ ಎಲ್ಲಾ ಗುಣಗಳ ಪೂರೈಕೆಗಾಗಿ ತನ್ನ ಸುತ್ತಲೂ ಕೋಟೆಗಳನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನೆ. ಜೊತೆಗೆ ಹೆಚ್ಚು ಮುಖವಾಡಗಳನ್ನು
ತೊಟ್ಟುಕೊಳ್ಳುತ್ತಾ ಸಾಗುತ್ತಾನೆ. ಹಾಗೇ ತಾನು ಹಿರಿಯ, ದೊಡ್ಡವ್ಯಕ್ತಿ, ಪ್ರತಿಭಾವಂತ, ಶ್ರೇಷ್ಟ, ಗೌರವಾನ್ವಿತ ಎಂಬೆಲ್ಲಾ ಭ್ರಮೆಗಳು ತಲೆಯನ್ನು ಹೊಕ್ಕರೆ ಅದನ್ನು ಪೂರೈಸುವ ಸಲುವಾಗಿಯೂ ತಾನಾಗಿಲ್ಲದ್ದರ, ಆದರೆ ತಾನು ಭ್ರಮಿಸಿದ್ದರಂತೆ ಕಾಣಲು ಬಲವಂತಕ್ಕೆ ಮುಖವಾಡಗಳನ್ನು ಹಾಕಿಕೊಂಡು ಪೋಸುಗಳನ್ನು ಕೊಡಲು ಪ್ರಾರಂಭಿಸಿ ಬಿಡುತ್ತಾನೆ.

ಸಖಿ, ಆದರೆ ಇವೆಲ್ಲಾ ಕೃತಕತೆಗಳು, ಮುಖವಾಡಗಳು, ನಾಟಕೀಯತೆಗಳು ಒಂದಿಲೊಮ್ಮೆ ವ್ಯಕ್ತಿಗೋ ಇಡೀ ಮಾನವ ಜನಾಂಗಕ್ಕೋ ಅಸಹ್ಯ ತರಿಸುವುದೇ ಇಲ್ಲವೇ? ಅಂತಹ ಕಾಲ ಬಹಳ ಬೇಗ ಬರಲಿ. ನಾವು ಮತ್ತೆ ನಮ್ಮ ನೈಜತೆಗೆ ಬೆಲೆ ಕೊಡುವಂತಾಗಲಿ, ನೈಸರ್ಗಿಕ ಭಾವನೆಗಳನ್ನು ಅರ್ಧೈಸಿಕೊಳ್ಳುವಂತಾಗಲಿ. ಈ ಎಲ್ಲಾ ಮುಖವಾಡಗಳನ್ನು ವ್ಯವಹಾರಿಕತೆಯನ್ನು ಮೀರಿ ನಮಗೆ ನಾವು ಸತ್ಯವಾಗುತ್ತಾ, ಪಾರದರ್ಶಕವಾಗುತ್ತಾ, ಹೋಗುವುದು ಸಾಧ್ಯವೇ ಇಲ್ಲವೇ? ಆ ದಿಕ್ಕಿನೆಡೆಗೆ ನಡೆದಾದರೂ ನೋಡಬೇಕೆಂಬ ಆಸೆ ಈ ಮನುಕುಲಕ್ಕೆ ಬರಬೇಕಲ್ಲವೇ?

ಹೀಗಾದಾಗ ನಮಗೆ ಯಾವ ಧರ್ಮ, ನೀತಿ, ಕಾನೂನು, ಶಾಸ್ತ್ರಗಳೂ ಬೇಕಿಲ್ಲ. ಏಕೆಂದರೆ ಸೂಕ್ಷ್ಮ ಸಂವೇದನೆಗಳಿಗೆ ಮಿಡಿಯುವ ನಮ್ಮ ಪ್ರಾಮಾಣಿಕ ನೈಜತೆ ಆಗ ನಮ್ಮೊಂದಿಗಿರುತ್ತದೆ. ಮನಸ್ಸೆಂಬ ಮಾನದಂಡ ಜೊತೆಗಿರುವ ವ್ಯಕ್ತಿಗೆ ತಪ್ಪು ಸರಿಗಳನ್ನು ತಾನೇ ನಿರ್ಧರಿಸಬಲ್ಲ ಸ್ಥೈರ್ಯವೂ ಇರುತ್ತದೆ. ಹೀಗಾದಾಗ ಬೇರೆ ಚೌಕಟ್ಟುಗಳೆಲ್ಲಾ ಏಕೆ?

ಸಖಿ, ಈ ವ್ಯವಹಾರದ ಬದುಕಿನಲ್ಲಿ ನಿತ್ಯವೂ ನಲುಗುತ್ತಿರುವ ನಮ್ಮ ನೈಜ ಸೂಕ್ಷ್ಮತೆಗಳನ್ನು ಇನ್ನಾದರೂ ಉಳಿಸಿಕೊಳ್ಳಲು ಪ್ರಯತ್ನಿಸೋಣ, ಬೇರೆ ಬೇರೆ ಸಂಸ್ಕೃತಿಯ ಧಾಳಿಗೆ ಈಡಾಗುವ ಮೊದಲು ನಮ್ಮ ನಮ್ಮ ಮನದ ಸ್ವಧರ್ಮಕ್ಕೆ ಹಿಂತಿರುಗೋಣ. ಅಲ್ಲಿಯೇ ನಮ್ಮ ನಿಜವಾದ ನೆಲೆಗಳಿರುವುದು. ಈ ಬದುಕಿಗೊಂದು ಬೆಲೆಯಿರುವುದು, ಅಲ್ಲವೇ ಸಖಿ ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...