Home / ಕವನ / ಕವಿತೆ / ನೀಲಿ ಹೂಗಳ ಹಾದಿಯಲಿ

ನೀಲಿ ಹೂಗಳ ಹಾದಿಯಲಿ

ಇಡೀ ರಾತ್ರಿ ಎದ್ದು ಕೂಡುತ್ತೇನೆ
ಬಿದ್ದ ಕೆಟ್ಟ ಕನಸಿನ ಅಬ್ಬರಕೆ.
ಮನದ ಎಲ್ಲಾ ಚಿತ್ರಗಳನ್ನು ಅಳುಕಿಸಿದರೂ
ಎದ್ದು ಬಂದು ನಿಲ್ಲುತ್ತದೆ ನಿನ್ನ ಮುಖ
ಕನ್ನಡಿ ಚೂರುಗಳಾಗಿವೆ ಮನದ ಮಾತುಗಳು.

ಹೂವಕಂಪ ನೆರಳಿಗೆ ಹಾಯ್ದು ಚಿಟ್ಟೆಯ
ರೆಕ್ಕೆಯಲ್ಲಿ ಕೆಂಪುರಕ್ತ ದುಃಖ ಬಿಕ್ಕುಗಳ
ಮಡಿಲಲ್ಲಿ ಒಂಟಿ ಹಕ್ಕಿ ರೆಪ್ಪೆ ಮುಚ್ಚಿದ
ಕಣ್ಣುಗಳು ಬೆಳಕು ಹರಿಯಲಿಲ್ಲ
ನೀಲಿ ಕಡಲಿನಲಿ ತೇಲುವ ಒಂಟಿ ದೋಣಿ.

ಉಪ್ಪುನೀರು ಅಂಗಳದಲಿ ಹರಳುಗಟ್ಟಿ
ಸೇವಂತಿಗೆ ಚಿಗುರಲಿಲ್ಲ ಹೂ ಬಿಡಲು
ಮೋಡದ ದಟ್ಟಕಪ್ಪು ಕಣ್ ಕಾಡಿಗೆ ಅಳುಕಿಸಿದೆ
ಸವರಿದ ಗಾಯ ಮಾಯದ ಉರಿ
ಬಾಯಾರಿದ ಸಾಲುಗಳು ಇಂಗಿವೆ ನದಿಯಲಿ.

ಗಿಡದಲಿ ಚಿಗುರಿದ ಹಸಿರು ಇಳಿದು
ಒಡಲಲಿ ಅರಳು ಕಾದು ಕುಳಿತ
ಚಿಟ್ಟೆ ಹೂವು ಬಟ್ಟಲು ಕಣ್ಣುಗಳ ಹೀರುನೋಟ
ನೆಲದ ಕಂಪ ಹೀರಿ ಎದೆಗೆ ಹಾಲು ಕರೆದು
ಕಾಯುತ್ತ ನಿಂತ ಕ್ಷಣ ಬಣ್ಣದ ಹೂಗಳ ಅರಳಿಸಲು.

ಕಲ್ಲರಳಿದ ಹೂವ ಮೊಗೆದ ಬೊಗಸೆ
ಕಡಲತುಂಬ ತುಂಬಿದ ಸೋನೆ ಹನಿ
ಕನಸುಗಳ ನೂರು ಗಾವುದ ನಡೆದ
ಹೆಜ್ಜೆ ಭಾರಗಳು ಒಜ್ಜೆ ಭಾವಗಳು
ಹಗುರ ಹಾಡಾಗಲಿ ನೀ ಬರುವ ನೀಲಿ ಹೂಗಳ ಹಾದಿಯಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...