ರಸ್ತೆ ಹೋಗುವುದೆಲ್ಲಿಗೆ?

ಬೂದು ಬಣ್ಣದ ಚಳಿಗೆ
ಮುಂಜಾವದ ತುಟಿಯೊಡೆದಿದೆ
ಆಕಾಶ ಚಂದಿರನನ್ನು
ಹಣೆಯಲ್ಲಿ ಧರಿಸಿ ನಸುನಗುತಿದೆ
ಮಿಲ್ಲುಗಳಿಂದ ಹೊಗೆಯನ್ನೂ
ಹುಣ್ಣುಗಳನ್ನೂ
ಬಳುವಳಿಯಾಗಿ ಪಡೆದಿರುವ ಭದ್ರೆ
ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ
ಜಿಪುಣಶೆಟ್ಟಿ ಸೂರ್ಯನದು
ತೂಕದ ವ್ಯವಹಾರ
ಒಂದೊಂದೆ ಕಿರಣ ಚೆಲ್ಲುತ್ತಿದ್ದಾನೆ
ನೆಲದ ಕೊರಳಿಗೆ ಹಾರ.

ಅಂದವಾಗಿ ಅಲಂಕರಿಸಿಕೊಂಡು
ಅಚ್ಚುಕಟ್ಟಾಗಿ ಕುಳಿತುಕೊಂಡಿರುವ
ಹಾಲಿನ ಬಾಟಲಿಗಳಿಗೆ
ಮೈತುಂಬಾ ನಿರೀಕ್ಷೆ
ಯಾರೋ ಮಡಿವಂತರು
ಸಾರಿಸಿ ಗುಡಿಸಿದ ಅಂಗಳ
ಗುಬ್ಬಚ್ಚಿಗಳಿಗೆ ರಂಗಸಜ್ಜಿಕೆ.

ಕೈಗಾಡಿಯ ಬೈಟೂ ಕಾಫಿಯಲ್ಲಿ
ಬೋನಸ್ಸು ಮುಷ್ಕರ ಹಬೆಯಾಡುತ್ತಿದೆ
ದೂರದ ಚರ್ಚಿನ ಗಂಟೆ
ಎಂಟು ಹೊಡೆದಿದೆ.
ಪುಸ್ತಕದ ಬೆಟ್ಟ ಹೊತ್ತ
ಪುಟಾಣಿಗಳಿಂದ ಪ್ರಾರ್ಥನಾಗೀತೆ
ಕಾಡಿನ ಕಡವೆಯ ಮರಿಗಳು
ಊರ ಉದ್ಯಾನವನದ
ಕಬ್ಬಿಣದ ಕಂಬಗಳಿಗೆ
ಹತಾಶೆಯಿಂದ ಕೊರಳು ಉಜ್ಜುತ್ತಿವೆ
ಬತ್ತಲಾದ ಪುಟ್ಟ ಗಿಡಗಳು
ವನಮಹೋತ್ಸವದ ದಿನ ಎಣಿಸುತ್ತಿವೆ.

ಚಪ್ಪಲಿ, ಚೀಲ, ಕೊಡೆ
ಚದುರಿ ಚೆಲ್ಲಾಪಿಲ್ಲಿಯಾಗಿವೆ.
ವರದಕ್ಷಿಣೆ ತರದ ಹುಡುಗಿಯ ಹಾಗೆ
ಇಡಿಯಾಗಿ ಮೈಸುಟ್ಟುಕೊಂಡಿರುವ
ಕಾರು ಮುಖ ಮಾತ್ರ ಉಳಿಸಿಕೊಂಡಿದೆ.
ಕೈಗಾಡಿಗೆ ಕಾಲಿಲ್ಲ
ಶನಿದೇವರ ರಥ ಕಾಣೆಯಾಗಿದೆ.
ಚುರುಮುರಿ ಉಂಡೆಯನ್ನು
ಸುತ್ತಿರುವ ಮಾಸಲು ಹಾಳೆಯಲ್ಲಿ
ಉಲ್ಲಾಸಭರಿತ ಕವಿತೆ.

ಒಂದಿಷ್ಟು ಕದನ-ಕುತೂಹಲ
ಆಮೇಲೆ-
ಲಾಠಿ ಬೂಟುಗಳ ಟಪ ಟಪ
ಸದ್ದಿನ ಹಿನ್ನೆಲೆಯಲ್ಲಿ
ಟೋಪಿಗಳ ಶಾಂತಿಸಭೆ.

ಭಜನೆ, ತಾಳ, ಬೆಂಕಿ
ಸಣ್ಣಗೆ ಉಸಿರು ಕಟ್ಟಿಸುವ ಹೊಗೆ.
ಯಾರದ್ದೊ….
ಕೊನೆಯ ಮೆರವಣಿಗೆ.
ಸೀಳಿಹೋದ ಅಭಯಹಸ್ತದ ಮಗ್ಗುಲಲ್ಲಿ
ಚಿಂದಿಚಿಂದಿಯಾದ
ನೇಗಿಲು ಹೊತ್ತ ರೈತನ ಚಿತ್ರ.

ಕಣ್ಣರಳಿಸಿ ನೋಡುತ್ತಿದ್ದಾನೆ
ಹಸಿರು ರುಮಾಲಿನ ಹುಡುಗ
ಮಾಕ್ಸ್, ಬುದ್ಧ, ಗಾಂಧಿ
ಚಿಂತನೆಯಲ್ಲಿ ಗಡ್ಡ ಹಣ್ಣಾಗುತ್ತಿದೆ
ಮೈಮರೆತು ನಿಂತಿದ್ದಾನೆ ಹುಡುಗ!

ಗಾಳಿಯೊಳಗೆ ತೇಲಿದಂತೆ
ಚೆಲುವಾಗಿ ಹೂವಿನ ಹಾಗೆ
ಪರಿಮಳಿಸುತ್ತ ನಡೆದು ಬರುತ್ತಿದ್ದಾಳೆ
ಸೇಬು ಕೆನ್ನೆಯ ಹುಡುಗಿ
ಉತ್ಸವದ ಮೂರುತಿಯ ಹಾಗೆ ಶಿಸ್ತಾಗಿ
ಉತ್ಸಾಹ ಉಕ್ಕುಕ್ಕಿ ಚೆಲ್ಲುವ ಹಾಗೆ
ಹರಿದು ಬರುತ್ತಿದ್ದಾಳೆ ಹುಡುಗಿ
ಮೊಟ್ಟ ಮೊದಲ ಹೆಜ್ಜೆ ಇಟ್ಟ
ಮಗುವಿನ ಸಂಭ್ರಮದಲ್ಲಿ
ಅವರಿವರನ್ನು ಕೇಳುತ್ತಿದ್ದಾಳೆ….
ಈ ರಸ್ತೆ ಹೋಗುವುದೆಲ್ಲಿಗೆ?


Previous post ಕಂಡರೂ ಕಂಡಾವು ಕನಸು
Next post ಮರ್ಮ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys