Home / ಕವನ / ಕವಿತೆ / ರಸ್ತೆ ಹೋಗುವುದೆಲ್ಲಿಗೆ?

ರಸ್ತೆ ಹೋಗುವುದೆಲ್ಲಿಗೆ?

ಬೂದು ಬಣ್ಣದ ಚಳಿಗೆ
ಮುಂಜಾವದ ತುಟಿಯೊಡೆದಿದೆ
ಆಕಾಶ ಚಂದಿರನನ್ನು
ಹಣೆಯಲ್ಲಿ ಧರಿಸಿ ನಸುನಗುತಿದೆ
ಮಿಲ್ಲುಗಳಿಂದ ಹೊಗೆಯನ್ನೂ
ಹುಣ್ಣುಗಳನ್ನೂ
ಬಳುವಳಿಯಾಗಿ ಪಡೆದಿರುವ ಭದ್ರೆ
ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ
ಜಿಪುಣಶೆಟ್ಟಿ ಸೂರ್ಯನದು
ತೂಕದ ವ್ಯವಹಾರ
ಒಂದೊಂದೆ ಕಿರಣ ಚೆಲ್ಲುತ್ತಿದ್ದಾನೆ
ನೆಲದ ಕೊರಳಿಗೆ ಹಾರ.

ಅಂದವಾಗಿ ಅಲಂಕರಿಸಿಕೊಂಡು
ಅಚ್ಚುಕಟ್ಟಾಗಿ ಕುಳಿತುಕೊಂಡಿರುವ
ಹಾಲಿನ ಬಾಟಲಿಗಳಿಗೆ
ಮೈತುಂಬಾ ನಿರೀಕ್ಷೆ
ಯಾರೋ ಮಡಿವಂತರು
ಸಾರಿಸಿ ಗುಡಿಸಿದ ಅಂಗಳ
ಗುಬ್ಬಚ್ಚಿಗಳಿಗೆ ರಂಗಸಜ್ಜಿಕೆ.

ಕೈಗಾಡಿಯ ಬೈಟೂ ಕಾಫಿಯಲ್ಲಿ
ಬೋನಸ್ಸು ಮುಷ್ಕರ ಹಬೆಯಾಡುತ್ತಿದೆ
ದೂರದ ಚರ್ಚಿನ ಗಂಟೆ
ಎಂಟು ಹೊಡೆದಿದೆ.
ಪುಸ್ತಕದ ಬೆಟ್ಟ ಹೊತ್ತ
ಪುಟಾಣಿಗಳಿಂದ ಪ್ರಾರ್ಥನಾಗೀತೆ
ಕಾಡಿನ ಕಡವೆಯ ಮರಿಗಳು
ಊರ ಉದ್ಯಾನವನದ
ಕಬ್ಬಿಣದ ಕಂಬಗಳಿಗೆ
ಹತಾಶೆಯಿಂದ ಕೊರಳು ಉಜ್ಜುತ್ತಿವೆ
ಬತ್ತಲಾದ ಪುಟ್ಟ ಗಿಡಗಳು
ವನಮಹೋತ್ಸವದ ದಿನ ಎಣಿಸುತ್ತಿವೆ.

ಚಪ್ಪಲಿ, ಚೀಲ, ಕೊಡೆ
ಚದುರಿ ಚೆಲ್ಲಾಪಿಲ್ಲಿಯಾಗಿವೆ.
ವರದಕ್ಷಿಣೆ ತರದ ಹುಡುಗಿಯ ಹಾಗೆ
ಇಡಿಯಾಗಿ ಮೈಸುಟ್ಟುಕೊಂಡಿರುವ
ಕಾರು ಮುಖ ಮಾತ್ರ ಉಳಿಸಿಕೊಂಡಿದೆ.
ಕೈಗಾಡಿಗೆ ಕಾಲಿಲ್ಲ
ಶನಿದೇವರ ರಥ ಕಾಣೆಯಾಗಿದೆ.
ಚುರುಮುರಿ ಉಂಡೆಯನ್ನು
ಸುತ್ತಿರುವ ಮಾಸಲು ಹಾಳೆಯಲ್ಲಿ
ಉಲ್ಲಾಸಭರಿತ ಕವಿತೆ.

ಒಂದಿಷ್ಟು ಕದನ-ಕುತೂಹಲ
ಆಮೇಲೆ-
ಲಾಠಿ ಬೂಟುಗಳ ಟಪ ಟಪ
ಸದ್ದಿನ ಹಿನ್ನೆಲೆಯಲ್ಲಿ
ಟೋಪಿಗಳ ಶಾಂತಿಸಭೆ.

ಭಜನೆ, ತಾಳ, ಬೆಂಕಿ
ಸಣ್ಣಗೆ ಉಸಿರು ಕಟ್ಟಿಸುವ ಹೊಗೆ.
ಯಾರದ್ದೊ….
ಕೊನೆಯ ಮೆರವಣಿಗೆ.
ಸೀಳಿಹೋದ ಅಭಯಹಸ್ತದ ಮಗ್ಗುಲಲ್ಲಿ
ಚಿಂದಿಚಿಂದಿಯಾದ
ನೇಗಿಲು ಹೊತ್ತ ರೈತನ ಚಿತ್ರ.

ಕಣ್ಣರಳಿಸಿ ನೋಡುತ್ತಿದ್ದಾನೆ
ಹಸಿರು ರುಮಾಲಿನ ಹುಡುಗ
ಮಾಕ್ಸ್, ಬುದ್ಧ, ಗಾಂಧಿ
ಚಿಂತನೆಯಲ್ಲಿ ಗಡ್ಡ ಹಣ್ಣಾಗುತ್ತಿದೆ
ಮೈಮರೆತು ನಿಂತಿದ್ದಾನೆ ಹುಡುಗ!

ಗಾಳಿಯೊಳಗೆ ತೇಲಿದಂತೆ
ಚೆಲುವಾಗಿ ಹೂವಿನ ಹಾಗೆ
ಪರಿಮಳಿಸುತ್ತ ನಡೆದು ಬರುತ್ತಿದ್ದಾಳೆ
ಸೇಬು ಕೆನ್ನೆಯ ಹುಡುಗಿ
ಉತ್ಸವದ ಮೂರುತಿಯ ಹಾಗೆ ಶಿಸ್ತಾಗಿ
ಉತ್ಸಾಹ ಉಕ್ಕುಕ್ಕಿ ಚೆಲ್ಲುವ ಹಾಗೆ
ಹರಿದು ಬರುತ್ತಿದ್ದಾಳೆ ಹುಡುಗಿ
ಮೊಟ್ಟ ಮೊದಲ ಹೆಜ್ಜೆ ಇಟ್ಟ
ಮಗುವಿನ ಸಂಭ್ರಮದಲ್ಲಿ
ಅವರಿವರನ್ನು ಕೇಳುತ್ತಿದ್ದಾಳೆ….
ಈ ರಸ್ತೆ ಹೋಗುವುದೆಲ್ಲಿಗೆ?


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...