Home / ಕವನ / ಕವಿತೆ / ರಸ್ತೆ ಹೋಗುವುದೆಲ್ಲಿಗೆ?

ರಸ್ತೆ ಹೋಗುವುದೆಲ್ಲಿಗೆ?

ಬೂದು ಬಣ್ಣದ ಚಳಿಗೆ
ಮುಂಜಾವದ ತುಟಿಯೊಡೆದಿದೆ
ಆಕಾಶ ಚಂದಿರನನ್ನು
ಹಣೆಯಲ್ಲಿ ಧರಿಸಿ ನಸುನಗುತಿದೆ
ಮಿಲ್ಲುಗಳಿಂದ ಹೊಗೆಯನ್ನೂ
ಹುಣ್ಣುಗಳನ್ನೂ
ಬಳುವಳಿಯಾಗಿ ಪಡೆದಿರುವ ಭದ್ರೆ
ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ
ಜಿಪುಣಶೆಟ್ಟಿ ಸೂರ್ಯನದು
ತೂಕದ ವ್ಯವಹಾರ
ಒಂದೊಂದೆ ಕಿರಣ ಚೆಲ್ಲುತ್ತಿದ್ದಾನೆ
ನೆಲದ ಕೊರಳಿಗೆ ಹಾರ.

ಅಂದವಾಗಿ ಅಲಂಕರಿಸಿಕೊಂಡು
ಅಚ್ಚುಕಟ್ಟಾಗಿ ಕುಳಿತುಕೊಂಡಿರುವ
ಹಾಲಿನ ಬಾಟಲಿಗಳಿಗೆ
ಮೈತುಂಬಾ ನಿರೀಕ್ಷೆ
ಯಾರೋ ಮಡಿವಂತರು
ಸಾರಿಸಿ ಗುಡಿಸಿದ ಅಂಗಳ
ಗುಬ್ಬಚ್ಚಿಗಳಿಗೆ ರಂಗಸಜ್ಜಿಕೆ.

ಕೈಗಾಡಿಯ ಬೈಟೂ ಕಾಫಿಯಲ್ಲಿ
ಬೋನಸ್ಸು ಮುಷ್ಕರ ಹಬೆಯಾಡುತ್ತಿದೆ
ದೂರದ ಚರ್ಚಿನ ಗಂಟೆ
ಎಂಟು ಹೊಡೆದಿದೆ.
ಪುಸ್ತಕದ ಬೆಟ್ಟ ಹೊತ್ತ
ಪುಟಾಣಿಗಳಿಂದ ಪ್ರಾರ್ಥನಾಗೀತೆ
ಕಾಡಿನ ಕಡವೆಯ ಮರಿಗಳು
ಊರ ಉದ್ಯಾನವನದ
ಕಬ್ಬಿಣದ ಕಂಬಗಳಿಗೆ
ಹತಾಶೆಯಿಂದ ಕೊರಳು ಉಜ್ಜುತ್ತಿವೆ
ಬತ್ತಲಾದ ಪುಟ್ಟ ಗಿಡಗಳು
ವನಮಹೋತ್ಸವದ ದಿನ ಎಣಿಸುತ್ತಿವೆ.

ಚಪ್ಪಲಿ, ಚೀಲ, ಕೊಡೆ
ಚದುರಿ ಚೆಲ್ಲಾಪಿಲ್ಲಿಯಾಗಿವೆ.
ವರದಕ್ಷಿಣೆ ತರದ ಹುಡುಗಿಯ ಹಾಗೆ
ಇಡಿಯಾಗಿ ಮೈಸುಟ್ಟುಕೊಂಡಿರುವ
ಕಾರು ಮುಖ ಮಾತ್ರ ಉಳಿಸಿಕೊಂಡಿದೆ.
ಕೈಗಾಡಿಗೆ ಕಾಲಿಲ್ಲ
ಶನಿದೇವರ ರಥ ಕಾಣೆಯಾಗಿದೆ.
ಚುರುಮುರಿ ಉಂಡೆಯನ್ನು
ಸುತ್ತಿರುವ ಮಾಸಲು ಹಾಳೆಯಲ್ಲಿ
ಉಲ್ಲಾಸಭರಿತ ಕವಿತೆ.

ಒಂದಿಷ್ಟು ಕದನ-ಕುತೂಹಲ
ಆಮೇಲೆ-
ಲಾಠಿ ಬೂಟುಗಳ ಟಪ ಟಪ
ಸದ್ದಿನ ಹಿನ್ನೆಲೆಯಲ್ಲಿ
ಟೋಪಿಗಳ ಶಾಂತಿಸಭೆ.

ಭಜನೆ, ತಾಳ, ಬೆಂಕಿ
ಸಣ್ಣಗೆ ಉಸಿರು ಕಟ್ಟಿಸುವ ಹೊಗೆ.
ಯಾರದ್ದೊ….
ಕೊನೆಯ ಮೆರವಣಿಗೆ.
ಸೀಳಿಹೋದ ಅಭಯಹಸ್ತದ ಮಗ್ಗುಲಲ್ಲಿ
ಚಿಂದಿಚಿಂದಿಯಾದ
ನೇಗಿಲು ಹೊತ್ತ ರೈತನ ಚಿತ್ರ.

ಕಣ್ಣರಳಿಸಿ ನೋಡುತ್ತಿದ್ದಾನೆ
ಹಸಿರು ರುಮಾಲಿನ ಹುಡುಗ
ಮಾಕ್ಸ್, ಬುದ್ಧ, ಗಾಂಧಿ
ಚಿಂತನೆಯಲ್ಲಿ ಗಡ್ಡ ಹಣ್ಣಾಗುತ್ತಿದೆ
ಮೈಮರೆತು ನಿಂತಿದ್ದಾನೆ ಹುಡುಗ!

ಗಾಳಿಯೊಳಗೆ ತೇಲಿದಂತೆ
ಚೆಲುವಾಗಿ ಹೂವಿನ ಹಾಗೆ
ಪರಿಮಳಿಸುತ್ತ ನಡೆದು ಬರುತ್ತಿದ್ದಾಳೆ
ಸೇಬು ಕೆನ್ನೆಯ ಹುಡುಗಿ
ಉತ್ಸವದ ಮೂರುತಿಯ ಹಾಗೆ ಶಿಸ್ತಾಗಿ
ಉತ್ಸಾಹ ಉಕ್ಕುಕ್ಕಿ ಚೆಲ್ಲುವ ಹಾಗೆ
ಹರಿದು ಬರುತ್ತಿದ್ದಾಳೆ ಹುಡುಗಿ
ಮೊಟ್ಟ ಮೊದಲ ಹೆಜ್ಜೆ ಇಟ್ಟ
ಮಗುವಿನ ಸಂಭ್ರಮದಲ್ಲಿ
ಅವರಿವರನ್ನು ಕೇಳುತ್ತಿದ್ದಾಳೆ….
ಈ ರಸ್ತೆ ಹೋಗುವುದೆಲ್ಲಿಗೆ?


Tagged:

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...