Home / ಕವನ / ಕವಿತೆ / ದುರ್ದೈವಿ

ದುರ್ದೈವಿ

ಮಾಮರದ ತೋಪಿನಲಿ
ಚೆಂದಿರನ ಬೆಳಕಿನಲಿ
ಕೊಳದ ಸೋಪಾನದಲಿ
ಕುಳಿತಿರುವಳಿವಳಾರು?

ನೀರಿನಂಚಿಗೆ ಸರಿದು
ತೊಯ್ಸಿಹಳು ನಿರಿಗಳನು
ಕಾಲ್ಗಳನು ಚಾಚುವಳು
ಮುದುರುವಳು ಕ್ಷಣಕೊಮ್ಮೆ

ಉಬ್ಬಿಹುದು ಇವಳೆದುಯು
ನಿಟ್ಟುಸಿರ ಬಿಡುತಿಹಳು
ಜೀವದಾಶೆಯ ತೊರೆದು
ಕುಳಿತಿಹಳು ತನುಗಾತ್ರಿ

ದಾರಿಗರ ಅರಿವಿಲ್ಲ
ಪ್ರಾಣಿಗಳ ಭಯವಿಲ್ಲ
ಗಂಗೆಯನು ದಿಟ್ಟಿಸುತ
ಉಸಿರುತಿಹಳೇನನೋ

ಯೌವನದ ಶೋಭೆಯಲಿ
ತುಂಬಿ ತುಳುಕುವ ಮುಖವು
ಕಳೆಗುಂದಿ ಬಾಡಿಹುದು
ಕಂಬನಿಯ ತರುತಿಹಳು

ಜಗದ ಸುಖವನು ಬಿಟ್ಟು
ಬಂದಿಹಳು ದುರ್ದೈವಿ
ಏನಿಹುದೊ ಮನದಿಚ್ಛೆ
ಯಾರೇನು ಮಾಡಿದರೊ

ನಿಷ್ಕಳಂಕದ ಪ್ರೇಮ
ಸ್ಪೂರ್ತಿಯಲಿ ಬಂಧಿಸುತ
ಅಧರವನು ಚುಂಬಿಸುವ
ಗೆಳೆಯನೇನಾದನೋ

ತಾಳಲಾರೆವು ಹಸಿವ
ಏನ ಕೊಡುವೆಯೆ ಅಮ್ಮ
ಎನುತ ಪೀಡಿಸಿ ಸುಳಿವ
ಮಕ್ಕಳೇನಾದರೋ

ಜಗಕೆ ಒಡೆಯನು ಪರಮ
ಕರುಣಮೂರ್ತಿಯು ಎಂದು
ಜನರು ಹೊಗಳುತಲಿರುವ
ದೇವ ತಾನೆಲ್ಲಿಹನೊ

ಶೂನ್ಯ ಹೃದಯಳು ಇನ್ನು
ಮುಳುಗುವಳು ಕ್ಷಣದೊಳಗೆ
ಕಂಗಳನು ಮುಚ್ಚಿದಳು
ಎಚ್ಚರವ ತಪ್ಪಿದಳು

ಕಾಲಚಕ್ರವ ನೆಗೆದು
ಸ್ಥೂಲಕಾಯವ ಬಿಟ್ಟು
ಯಾರು ಅರಿಯದ ಸ್ಥಳಕೆ
ಹೊರಡುತಿದೆ ಇವಳಾತ್ಮ

ಹೋಗಿ ಬದಿಯಲಿ ಕುಳಿತು
ಮೈದಡವಿ ಕಣ್ಣೊರಸಿ
ಏಳು ತಂಗೀ ಎಂದು
ಸಂತೈಸಿ ಕರೆಯಲೇ?

ಪೋಗು! ನೀನಾರಿಲ್ಲಿ
ಬಂದುದೇತಕೆ? ಎಂದು
ಕ್ರೂರ ದೃಷ್ಟಿಯೊಳೆನ್ನ
ನೋಡಿಬಿಡುವಳೊ ಏನೊ!

ಆಗುವುದು ನಿಲ್ಲದದು
ಆಗದಿಹುದಾಗದದು
ಹೀಗೆಂದು ಜನಕಜೆಯು
ಸಾಗಿದಳು ಮುಂದೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...