Home / ಕವನ / ಕವಿತೆ / ದುರ್ದೈವಿ

ದುರ್ದೈವಿ

ಮಾಮರದ ತೋಪಿನಲಿ
ಚೆಂದಿರನ ಬೆಳಕಿನಲಿ
ಕೊಳದ ಸೋಪಾನದಲಿ
ಕುಳಿತಿರುವಳಿವಳಾರು?

ನೀರಿನಂಚಿಗೆ ಸರಿದು
ತೊಯ್ಸಿಹಳು ನಿರಿಗಳನು
ಕಾಲ್ಗಳನು ಚಾಚುವಳು
ಮುದುರುವಳು ಕ್ಷಣಕೊಮ್ಮೆ

ಉಬ್ಬಿಹುದು ಇವಳೆದುಯು
ನಿಟ್ಟುಸಿರ ಬಿಡುತಿಹಳು
ಜೀವದಾಶೆಯ ತೊರೆದು
ಕುಳಿತಿಹಳು ತನುಗಾತ್ರಿ

ದಾರಿಗರ ಅರಿವಿಲ್ಲ
ಪ್ರಾಣಿಗಳ ಭಯವಿಲ್ಲ
ಗಂಗೆಯನು ದಿಟ್ಟಿಸುತ
ಉಸಿರುತಿಹಳೇನನೋ

ಯೌವನದ ಶೋಭೆಯಲಿ
ತುಂಬಿ ತುಳುಕುವ ಮುಖವು
ಕಳೆಗುಂದಿ ಬಾಡಿಹುದು
ಕಂಬನಿಯ ತರುತಿಹಳು

ಜಗದ ಸುಖವನು ಬಿಟ್ಟು
ಬಂದಿಹಳು ದುರ್ದೈವಿ
ಏನಿಹುದೊ ಮನದಿಚ್ಛೆ
ಯಾರೇನು ಮಾಡಿದರೊ

ನಿಷ್ಕಳಂಕದ ಪ್ರೇಮ
ಸ್ಪೂರ್ತಿಯಲಿ ಬಂಧಿಸುತ
ಅಧರವನು ಚುಂಬಿಸುವ
ಗೆಳೆಯನೇನಾದನೋ

ತಾಳಲಾರೆವು ಹಸಿವ
ಏನ ಕೊಡುವೆಯೆ ಅಮ್ಮ
ಎನುತ ಪೀಡಿಸಿ ಸುಳಿವ
ಮಕ್ಕಳೇನಾದರೋ

ಜಗಕೆ ಒಡೆಯನು ಪರಮ
ಕರುಣಮೂರ್ತಿಯು ಎಂದು
ಜನರು ಹೊಗಳುತಲಿರುವ
ದೇವ ತಾನೆಲ್ಲಿಹನೊ

ಶೂನ್ಯ ಹೃದಯಳು ಇನ್ನು
ಮುಳುಗುವಳು ಕ್ಷಣದೊಳಗೆ
ಕಂಗಳನು ಮುಚ್ಚಿದಳು
ಎಚ್ಚರವ ತಪ್ಪಿದಳು

ಕಾಲಚಕ್ರವ ನೆಗೆದು
ಸ್ಥೂಲಕಾಯವ ಬಿಟ್ಟು
ಯಾರು ಅರಿಯದ ಸ್ಥಳಕೆ
ಹೊರಡುತಿದೆ ಇವಳಾತ್ಮ

ಹೋಗಿ ಬದಿಯಲಿ ಕುಳಿತು
ಮೈದಡವಿ ಕಣ್ಣೊರಸಿ
ಏಳು ತಂಗೀ ಎಂದು
ಸಂತೈಸಿ ಕರೆಯಲೇ?

ಪೋಗು! ನೀನಾರಿಲ್ಲಿ
ಬಂದುದೇತಕೆ? ಎಂದು
ಕ್ರೂರ ದೃಷ್ಟಿಯೊಳೆನ್ನ
ನೋಡಿಬಿಡುವಳೊ ಏನೊ!

ಆಗುವುದು ನಿಲ್ಲದದು
ಆಗದಿಹುದಾಗದದು
ಹೀಗೆಂದು ಜನಕಜೆಯು
ಸಾಗಿದಳು ಮುಂದೆ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...