Home / ಕಥೆ / ಕಿರು ಕಥೆ / ನಾನು ನಿನ್ನನ್ನು ಪ್ರೀತಿಸುತ್ತೇನೆ

ನಾನು ನಿನ್ನನ್ನು ಪ್ರೀತಿಸುತ್ತೇನೆ

ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು. ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು. ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ್ದ ಆಕೆಗೆ ಅಹಂ ಎಳ್ಳಷ್ಟು ಇರದಿರುವುದು ಅಚ್ಚರಿಯ ಸಂಗತಿಯಾಗಿತ್ತು. ಹುಡುಗಿಯರಿಗಂತೂ ಸರಿ, ಹುಡುಗರೆದುರಾದರೂ ಅವಳು ಯಾವ ಸಂಕೋಚವಿಲ್ಲದೆ ಮಾತನಾಡಿಸುವಳು. ಯಾವಾಗಲೂ ತರಗತಿಯ ಕಡೆಗೆ ಆಲಕ್ಷಿಸಿ ಲೇಡೀಸ್ ರೂಮಿನೆದುರು ಅಣಕು, ತಮಾಷೆ, ಪೊಗರಿನ ಮಾತುಗಳಿಂದ ಸಿನಿಮಾ ಹಿರೋಗಳ ಸ್ಟೈಲ್‌ನಲ್ಲಿ ಕಣ್ಣುಗಳಿಂದಲೇ ಹುಡುಗಿಯರ ಬೇಟೆಯಾಡುತ್ತಿದ್ದ ಹುಡುಗರು ಅವಳ ದೆಸೆಯಿಂದಾಗಿ ತರಗತಿಗಳಿಗೆ ಚಕ್ಕರೆ ಹೊಡೆಯುವುದನ್ನು ನಿಲ್ಲಿಸಿದ್ದರು. ಒಂದೊಂದು ಸಲ ಅವಳ ಸಲಿಗೆಯ ಮಾತುಗಳಿಂದ ಹುಡುಗರೆ ಮುಜುಗರಕ್ಕೊಳಪಡುವ ಪರಿಸ್ಥಿತಿ ನಿರ್ಮಾಣವಾಯಿತು.

ಚೆಲ್ಲು ಚೆಲ್ಲಾಗಿದ್ದ ಹುಡುಗಿ ಸಹಜವಾಗಿಯೇ ಆ ಶ್ರೀಮಂತ ಹುಡುಗನೊಂದಿಗೆ ಮಾತಾಡಿದ್ದಳು. ಸ್ಫುರದ್ರೂಪಿಯಾಗಿದ್ದ ಅವನು ಹಿಂಡುಗಟ್ಟಲೆ ಗೆಳೆಯರನ್ನು ಬೆನ್ನಿಗೆ ಕಟ್ಟಿಕೊಂಡು ಉಡಾಫೆಯಿಂದಲೇ ವತಿðಸುತ್ತಿದ್ದ. ಕ್ಲಾಸಿನಲ್ಲೂ ಅದೇ ಚಾಳಿ, ಅವನಿಂದ ಪ್ರಧ್ಯಾಪಕರಿಗೂ ತಲೆನೋವು. ಅವನ ಕೀಟಲೆ, ಪೊಗರಿನ ವರ್ತನೆ, ಲೇವಡಿ ಮಾತುಗಳಿಂದ ಹುಡುಗಿಯರು ಕಪ್ಪೆಚಿಪ್ಪಿನೊಳಗೆ ಮುದುಡಿಕೊಂಡಂತಿರುತ್ತಿದ್ದರು.

ಇಡೀ ಕ್ಯಾಂಪಸ್ಸು ಅವನನ್ನು ಸಹಿಸಿಕೊಂಡಿತ್ತು.

ಆ ಹುಡುಗಿಯ ಬಗ್ಗೆ ಅವನಿಗೆ ಮೊದಲ ನೋಟದಲ್ಲೆ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ಅದನ್ನು ಅವಳೆದುರು ಪ್ರಸ್ತಾಪಿಸುವ ಧಾರ್ಷ್ಟ್ಯವನ್ನು ತೋರಿಸಲಿಲ್ಲ. ಗೆಳೆಯರೊಂದಿಗೆ ಹೇಳಿಕೊಂಡಿದ್ದ. ಅವರು ಅವಳ ಮೇಲಿನ ಅವನ ಹುಚ್ಚಿನ ಕಿಚ್ಚಿಗೆ ಗಾಳಿಯೂದಿದ್ದರು. ಅವನು ಚಿತ್ತಾರದ ಕನಸುಗಳಲ್ಲಿ ಮೀಯುತ್ತ ಪೂರ್ತಿ ಅವಳ ಹಂಬಲದಲ್ಲಿ ಚಡಪಡಿಸುತ್ತಿದ್ದ. ಆಸೆ ಉಕ್ಕೇರುತ್ತಿದ್ದಂತೆ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಒಂದು ಸಾಲಿನ ಒಕ್ಕಣಿಕೆಯ ಕಾಗದವನ್ನು ಅವಳಿಗೆ ತಲುಪಿಸಿದ.

ಆ ಹುಡುಗಿ ಮಾತ್ರ ಸಹಜವಾಗಿದ್ದಳು.

ಅವನು ಆಕಾಶಕ್ಕೆ ನೆಗೆದಿದ್ದ. ಅಂತ ಚೆಂದದ ಚೆಲುವೆಯನ್ನು ದಕ್ಕಿಸಿಕೊಂಡ ಸಂಭ್ರಮದಲ್ಲಿ ಗೆಳೆಯರು ಅವನಿಂದ ಜಬರದಸ್ತಾದ ಪಾರ್ಟಿ ಮಾಡಿಸಿದ್ದರು. ಅವರಿಬ್ಬರ ಪ್ರಣಯದ ವಿಷಯವನ್ನು ಅವರೇ ಹರಡಿ ವರ್ಣರಂಜಿತಗೊಳಿಸಿದ್ದರು. ಹುಡುಗನಿಗೆ ದಿನದ ಇಪ್ಪತ್ನಾಲ್ಕು ಗಂಟೆ ಅವಳದೇ ಧ್ಯಾನವಾಯಿತು.

ಪ್ರೀತಿಯೆಂದರೆ ಏನು? ಹೆಣ್ಣು-ಗಂಡು ತೀರ ಹತ್ತಿರ ಹತ್ತಿರ ಬರಬೇಕು. ಮನಸ್ಸು ಮನಸ್ಸು ಕೂಡಬೇಕು. ಭಾವನೆಗಳು ಎರಕಗೊಳ್ಳಬೇಕು. ಹೃದಯಗಳು ಮಾತಾಡಬೇಕು. ಜೊತೆ ಜೊತೆಯಾಗಿ ಹೋಟ್ಲು ಸಿನಿಮಾ, ಪಿಕ್‌ನಿಕ್ಕು ಪಾರ್ಕು ಒತ್ತಾಯಿಸಿದರೂ ಅವಳು ಹೊಟೇಲಿಗೆ ಬರಲಿಲ್ಲ. ಏಕಾಂತದಲ್ಲಿ ಮಾತಾಡಬೇಕೆಂದರೆ ಪಾರ್ಕಿಗೂ ಬರಲಿಲ್ಲ. ಎದುರಾದರೆ ಮಾತಾಡುವಳು. ನಗುವಳು, ಬರೆದುಕೊಳ್ಳಲು ನೋಟ್ಸ್ ಕೊಡುವಳು. ಪ್ರೀತಿಯ ವಿಷಯ ಮಾತಾಡಬೇಕೆನ್ನುವಷ್ಟರಲ್ಲಿ ಮಾಯೆಯಾಗಿ ಬಿಡುವಳು. ಅಂತರಂಗದ ವಿಚಾರವಾದರೂ ಏನು!

ಒಂದಿನ ಅವನು ಅವಳನ್ನು ಹಿಡಿದು ನಿಲ್ಲಿಸಿಯೇ ಬಿಟ್ಟ. ಎದೆ ಒಡೆದು ಕೊಳ್ಳುತ್ತಿದ್ದರೂ, ಮೈ ಬೆವರುತ್ತಿದ್ದರೂ ಧೈರ್ಯದಿಂದ “ಐ ಲವ್ ಯು” ಎಂದುಬಿಟ್ಟ. ಆಕೆ ಪಕಪಕನೆ ನಕ್ಕು ಬಿಟ್ಟಳು. “ಪ್ಲೀಸ್ ನೀವು ನಗಬೇಡಿ, ನಿಮ್ಮ ಅಭಿಪ್ರಾಯ ಹೇಳಿರಿ” ಗೋಗರೆದ ಅವನು.

“ನಾನೇಕೆ ಹೇಳಬೇಕು?”
“ನಾನು ನಿಮ್ಮನ್ನು ಪ್ರೀತಿಸುತ್ತೇನೆ.”
“ಪ್ರೀತಿಸು ಅಂತ ಯಾರು ಹೇಳಿದರು?”

ವಿಚಲಿತನಾದರೂ ಹುಡುಗ ಸಾವರಿಸಿಕೊಂಡ: “ಹೇಳಿಕೆಯಿಂದ ಪ್ರೀತಿ ಹುಟ್ಟುವುದಿಲ್ಲ. ಅದು ಹೃದಯದ ಸೆಲೆ, ನಾನು ಮನಸಾರೆ ಪ್ರೀತಿಸುತ್ತೇನೆ ಮದುವೆ ಮಾಡಿಕೊಳ್ಳುತ್ತೇನೆ” ಎಂದ.

“ಅಂದರೆ ನನ್ನ ಜೀವನವನ್ನು ಹಾಳು ಮಾಡುವ ವಿಚಾರವೋ?” ಅವನ ಮೇಲಿನ ದೃಷ್ಟಿ ಹೊರಳಿಸದೆ ಕೇಳಿದಳು ಹುಡುಗಿ.

“ನೀವು ನನ್ನನ್ನು ಪ್ರೀತಿಸುವುದಿಲ್ಲವೆ?” ಗಲಿಬಿಲಿಗೊಳಗಾದ ಹುಡುಗ.

“ಹುಡುಗಿ ಸ್ಪಷ್ಟವಾಗಿ ಹೇಳಿದಳು” “ರೀ ಮಿಸ್ಟರ್‍, ನಾನು ಕಾಲೇಜಿಗೆ ಬಂದದ್ದು ಕಲಿಯಲಿಕ್ಕೆ, ಭವಿಷ್ಯ ರೂಪಿಸಿಕೊಳ್ಳುವುದಕ್ಕೆ – ಪ್ರೀತಿ, ಪ್ರೇಮದ ಹುಡುಗಾಟಕ್ಕಲ್ಲ.”

ಹುಡುಗನ ಮುಖದಲ್ಲಿ ಭ್ರಮೆಗಳ ಗುರುತು ಒಂದೂ ಕಾಣಿಸಲಿಲ್ಲ.

*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...