Home / ಕಥೆ / ಕಿರು ಕಥೆ / ನಾನು ನಿನ್ನನ್ನು ಪ್ರೀತಿಸುತ್ತೇನೆ

ನಾನು ನಿನ್ನನ್ನು ಪ್ರೀತಿಸುತ್ತೇನೆ

ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು. ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು. ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ್ದ ಆಕೆಗೆ ಅಹಂ ಎಳ್ಳಷ್ಟು ಇರದಿರುವುದು ಅಚ್ಚರಿಯ ಸಂಗತಿಯಾಗಿತ್ತು. ಹುಡುಗಿಯರಿಗಂತೂ ಸರಿ, ಹುಡುಗರೆದುರಾದರೂ ಅವಳು ಯಾವ ಸಂಕೋಚವಿಲ್ಲದೆ ಮಾತನಾಡಿಸುವಳು. ಯಾವಾಗಲೂ ತರಗತಿಯ ಕಡೆಗೆ ಆಲಕ್ಷಿಸಿ ಲೇಡೀಸ್ ರೂಮಿನೆದುರು ಅಣಕು, ತಮಾಷೆ, ಪೊಗರಿನ ಮಾತುಗಳಿಂದ ಸಿನಿಮಾ ಹಿರೋಗಳ ಸ್ಟೈಲ್‌ನಲ್ಲಿ ಕಣ್ಣುಗಳಿಂದಲೇ ಹುಡುಗಿಯರ ಬೇಟೆಯಾಡುತ್ತಿದ್ದ ಹುಡುಗರು ಅವಳ ದೆಸೆಯಿಂದಾಗಿ ತರಗತಿಗಳಿಗೆ ಚಕ್ಕರೆ ಹೊಡೆಯುವುದನ್ನು ನಿಲ್ಲಿಸಿದ್ದರು. ಒಂದೊಂದು ಸಲ ಅವಳ ಸಲಿಗೆಯ ಮಾತುಗಳಿಂದ ಹುಡುಗರೆ ಮುಜುಗರಕ್ಕೊಳಪಡುವ ಪರಿಸ್ಥಿತಿ ನಿರ್ಮಾಣವಾಯಿತು.

ಚೆಲ್ಲು ಚೆಲ್ಲಾಗಿದ್ದ ಹುಡುಗಿ ಸಹಜವಾಗಿಯೇ ಆ ಶ್ರೀಮಂತ ಹುಡುಗನೊಂದಿಗೆ ಮಾತಾಡಿದ್ದಳು. ಸ್ಫುರದ್ರೂಪಿಯಾಗಿದ್ದ ಅವನು ಹಿಂಡುಗಟ್ಟಲೆ ಗೆಳೆಯರನ್ನು ಬೆನ್ನಿಗೆ ಕಟ್ಟಿಕೊಂಡು ಉಡಾಫೆಯಿಂದಲೇ ವತಿðಸುತ್ತಿದ್ದ. ಕ್ಲಾಸಿನಲ್ಲೂ ಅದೇ ಚಾಳಿ, ಅವನಿಂದ ಪ್ರಧ್ಯಾಪಕರಿಗೂ ತಲೆನೋವು. ಅವನ ಕೀಟಲೆ, ಪೊಗರಿನ ವರ್ತನೆ, ಲೇವಡಿ ಮಾತುಗಳಿಂದ ಹುಡುಗಿಯರು ಕಪ್ಪೆಚಿಪ್ಪಿನೊಳಗೆ ಮುದುಡಿಕೊಂಡಂತಿರುತ್ತಿದ್ದರು.

ಇಡೀ ಕ್ಯಾಂಪಸ್ಸು ಅವನನ್ನು ಸಹಿಸಿಕೊಂಡಿತ್ತು.

ಆ ಹುಡುಗಿಯ ಬಗ್ಗೆ ಅವನಿಗೆ ಮೊದಲ ನೋಟದಲ್ಲೆ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ಅದನ್ನು ಅವಳೆದುರು ಪ್ರಸ್ತಾಪಿಸುವ ಧಾರ್ಷ್ಟ್ಯವನ್ನು ತೋರಿಸಲಿಲ್ಲ. ಗೆಳೆಯರೊಂದಿಗೆ ಹೇಳಿಕೊಂಡಿದ್ದ. ಅವರು ಅವಳ ಮೇಲಿನ ಅವನ ಹುಚ್ಚಿನ ಕಿಚ್ಚಿಗೆ ಗಾಳಿಯೂದಿದ್ದರು. ಅವನು ಚಿತ್ತಾರದ ಕನಸುಗಳಲ್ಲಿ ಮೀಯುತ್ತ ಪೂರ್ತಿ ಅವಳ ಹಂಬಲದಲ್ಲಿ ಚಡಪಡಿಸುತ್ತಿದ್ದ. ಆಸೆ ಉಕ್ಕೇರುತ್ತಿದ್ದಂತೆ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಒಂದು ಸಾಲಿನ ಒಕ್ಕಣಿಕೆಯ ಕಾಗದವನ್ನು ಅವಳಿಗೆ ತಲುಪಿಸಿದ.

ಆ ಹುಡುಗಿ ಮಾತ್ರ ಸಹಜವಾಗಿದ್ದಳು.

ಅವನು ಆಕಾಶಕ್ಕೆ ನೆಗೆದಿದ್ದ. ಅಂತ ಚೆಂದದ ಚೆಲುವೆಯನ್ನು ದಕ್ಕಿಸಿಕೊಂಡ ಸಂಭ್ರಮದಲ್ಲಿ ಗೆಳೆಯರು ಅವನಿಂದ ಜಬರದಸ್ತಾದ ಪಾರ್ಟಿ ಮಾಡಿಸಿದ್ದರು. ಅವರಿಬ್ಬರ ಪ್ರಣಯದ ವಿಷಯವನ್ನು ಅವರೇ ಹರಡಿ ವರ್ಣರಂಜಿತಗೊಳಿಸಿದ್ದರು. ಹುಡುಗನಿಗೆ ದಿನದ ಇಪ್ಪತ್ನಾಲ್ಕು ಗಂಟೆ ಅವಳದೇ ಧ್ಯಾನವಾಯಿತು.

ಪ್ರೀತಿಯೆಂದರೆ ಏನು? ಹೆಣ್ಣು-ಗಂಡು ತೀರ ಹತ್ತಿರ ಹತ್ತಿರ ಬರಬೇಕು. ಮನಸ್ಸು ಮನಸ್ಸು ಕೂಡಬೇಕು. ಭಾವನೆಗಳು ಎರಕಗೊಳ್ಳಬೇಕು. ಹೃದಯಗಳು ಮಾತಾಡಬೇಕು. ಜೊತೆ ಜೊತೆಯಾಗಿ ಹೋಟ್ಲು ಸಿನಿಮಾ, ಪಿಕ್‌ನಿಕ್ಕು ಪಾರ್ಕು ಒತ್ತಾಯಿಸಿದರೂ ಅವಳು ಹೊಟೇಲಿಗೆ ಬರಲಿಲ್ಲ. ಏಕಾಂತದಲ್ಲಿ ಮಾತಾಡಬೇಕೆಂದರೆ ಪಾರ್ಕಿಗೂ ಬರಲಿಲ್ಲ. ಎದುರಾದರೆ ಮಾತಾಡುವಳು. ನಗುವಳು, ಬರೆದುಕೊಳ್ಳಲು ನೋಟ್ಸ್ ಕೊಡುವಳು. ಪ್ರೀತಿಯ ವಿಷಯ ಮಾತಾಡಬೇಕೆನ್ನುವಷ್ಟರಲ್ಲಿ ಮಾಯೆಯಾಗಿ ಬಿಡುವಳು. ಅಂತರಂಗದ ವಿಚಾರವಾದರೂ ಏನು!

ಒಂದಿನ ಅವನು ಅವಳನ್ನು ಹಿಡಿದು ನಿಲ್ಲಿಸಿಯೇ ಬಿಟ್ಟ. ಎದೆ ಒಡೆದು ಕೊಳ್ಳುತ್ತಿದ್ದರೂ, ಮೈ ಬೆವರುತ್ತಿದ್ದರೂ ಧೈರ್ಯದಿಂದ “ಐ ಲವ್ ಯು” ಎಂದುಬಿಟ್ಟ. ಆಕೆ ಪಕಪಕನೆ ನಕ್ಕು ಬಿಟ್ಟಳು. “ಪ್ಲೀಸ್ ನೀವು ನಗಬೇಡಿ, ನಿಮ್ಮ ಅಭಿಪ್ರಾಯ ಹೇಳಿರಿ” ಗೋಗರೆದ ಅವನು.

“ನಾನೇಕೆ ಹೇಳಬೇಕು?”
“ನಾನು ನಿಮ್ಮನ್ನು ಪ್ರೀತಿಸುತ್ತೇನೆ.”
“ಪ್ರೀತಿಸು ಅಂತ ಯಾರು ಹೇಳಿದರು?”

ವಿಚಲಿತನಾದರೂ ಹುಡುಗ ಸಾವರಿಸಿಕೊಂಡ: “ಹೇಳಿಕೆಯಿಂದ ಪ್ರೀತಿ ಹುಟ್ಟುವುದಿಲ್ಲ. ಅದು ಹೃದಯದ ಸೆಲೆ, ನಾನು ಮನಸಾರೆ ಪ್ರೀತಿಸುತ್ತೇನೆ ಮದುವೆ ಮಾಡಿಕೊಳ್ಳುತ್ತೇನೆ” ಎಂದ.

“ಅಂದರೆ ನನ್ನ ಜೀವನವನ್ನು ಹಾಳು ಮಾಡುವ ವಿಚಾರವೋ?” ಅವನ ಮೇಲಿನ ದೃಷ್ಟಿ ಹೊರಳಿಸದೆ ಕೇಳಿದಳು ಹುಡುಗಿ.

“ನೀವು ನನ್ನನ್ನು ಪ್ರೀತಿಸುವುದಿಲ್ಲವೆ?” ಗಲಿಬಿಲಿಗೊಳಗಾದ ಹುಡುಗ.

“ಹುಡುಗಿ ಸ್ಪಷ್ಟವಾಗಿ ಹೇಳಿದಳು” “ರೀ ಮಿಸ್ಟರ್‍, ನಾನು ಕಾಲೇಜಿಗೆ ಬಂದದ್ದು ಕಲಿಯಲಿಕ್ಕೆ, ಭವಿಷ್ಯ ರೂಪಿಸಿಕೊಳ್ಳುವುದಕ್ಕೆ – ಪ್ರೀತಿ, ಪ್ರೇಮದ ಹುಡುಗಾಟಕ್ಕಲ್ಲ.”

ಹುಡುಗನ ಮುಖದಲ್ಲಿ ಭ್ರಮೆಗಳ ಗುರುತು ಒಂದೂ ಕಾಣಿಸಲಿಲ್ಲ.

*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...