Home / ಕವನ / ಕವಿತೆ / ಅಪ್ಪುವಿನ ರೈಲು

ಅಪ್ಪುವಿನ ರೈಲು

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು
ಹೈದರಾಬಾದಿನ ಬಯಲು
ಫಲಕ್‌ನುಮಾದಿಂದ ಬೋಲಾರಾಮಿಗೆ
ಯಾಕೆ ಏನೆಂಬ ಗೊಡವೆಯಿಲ್ಲದೆ
ಕರೆಯುವುದು ಮಂದಿಯನು ರಾತ್ರಿಹಗಲು
ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ
ಎಲ್ಲ ಕಡೆಗೂ ಇದೊಂದೇ ಬಂಡಿ
ಬೆಳಿಗ್ಗೆ ಮಧ್ಯಾಹ್ನ ಸಂಜೆ ಇಳಿಸಂಜೆ
ಕೂತಲ್ಲೆ ಕಣ್ಣಿಗೆ ನಿದ್ದೆ ಹತ್ತುವ ತನಕ
ನಿದ್ದೆಯಲ್ಲಿ ಹೊಸ ಹೊಸ ಕನಸು ಬೀಳುವ ತನಕ
ಯಾವಾಗ ಬಂದರು ಮಂದಿ ಅವರವರ ಮನೆಗೆ
ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಮೂಟೆ
ಏನದರ ಒಳಗೆ ಎಲ್ಲ ರಹಸ್ಯ!

ಕೆಲವೊಮ್ಮೆ ಮಾತ್ರ ನಿಂತು ಬಿಡುವುದು
ಅಪ್ಪುವಿನ ರೈಲು ಅರ್ಧದಾರಿಯಲ್ಲಿ
ಅದರ ಕೊಳವೆಯಿಂದ ಹೋಗುವುದು ಹೊಗೆ
ಅಕಾಶಕ್ಕೆ ಹೋಗಿ ಆಗುವುದು ಮೋಡ
ಮಳೆಯಾಗಿ ಸುರಿದು ಕಪ್ಪೆಗಳ ಕರೆಯುವುದು
ಜನ ಮಾತ್ರ ಕಾಯುವುದಿಲ್ಲ. ಅವರು
ಎಲ್ಲೆಂದರಲ್ಲಿ–ಸಂಕದಲ್ಲಿ, ಬಯಲಲ್ಲಿ
ಭ್ರಮೆಗೊಂಡ ಇರುವೆಗಳಂತೆ
ಇಳಿದು ಚದರುವರು; ದಾರಿ ಬದಿಯ
ಎಮ್ಮೆಗಳು ಹಳ್ಳಕೊಳ್ಳಗಳಿಂದ ಎದ್ದು
ಇದು ಹೀಗೇಕೆಂದು ನೋಡುವುವು
ಅರ್ಥವಾಗದೆ ಹೊರಟುಹೋಗುವುವು

ಅಷ್ಟೂ ಹೊತ್ತು ನಿಂತಲ್ಲೆ ನಿಂತ ಅಪ್ಪುವಿನ ರೈಲು
ಇನ್ನೇನು ರಾತ್ರಿ ಇಲ್ಲೇ ತೆಗೆಯುವುದು ನಿದ್ದೆ
ಎಂದುಕೊಂಡರೆ ಥಟ್ಪನೆ ಹಾಹಾ ಎಂದು
ಅದರ ಗಾಲಿಗಳಿಗೆ ಜೀವ ಬಂದು
ಹೊರಟುಬಿಡುವುದು-ಅದೋ ಆಗ ಬರುವರು
ಇದು ತನಕ ಎಲ್ಲೂ ಕಾಣಿಸದ ಜನರು
ಎಲ್ಲಿ ಹೋಗಿದ್ದರು ಅವರು? ಮಸೀದಿಗೆ.
ದೇವರ ಗುಡಿಗೆ-ಇದು ಪ್ರಾರ್ಥನೆಯ ಸಮಯ!
ಅಪ್ಪುವಿಗೊ ಕುಳಿತಲ್ಲೆ ತೂಕಡಿಕೆ
ರೆಪ್ಪೆಗಳೆಡೆಯಿಂದ ಕಾಣಿಸುವುದೇನು?
ಓಹೊ ನೂರು ಮೆಟ್ಟಿಲ ಮಹಡಿ-ಅದರೊಳಗೆ
ಕುಣಿಯುವುದು ಒಂದು ಕರಡಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...