Home / ಕವನ / ಕವಿತೆ / ಕೇರಳ

ಕೇರಳ

ಹದಿನಾರಕೆ
ಈಗತಾನೆ ಐನೀರು ಮುಳುಗಿ ಬಂದವಳು
ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ
ಶಕುಂತಳೆ
ಇದು ವಿಶ್ವಾಮಿತ್ರ ಸೃಷ್ಟಿ
ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ.
ಈ ಪ್ರಮೀಳೆ ಯಾರಾರ ಹೃದಯಕ್ಕೆ
ಹಚ್ಚುವಳೊ ಬೆಂಕಿ!
ಆರಿಸುವ
ಲಾಲಿಸುವ ತೋಳ ತೆರೆಮಾಲೆ
ಕುಡಿಮೊಲೆಯ ಕ್ಷೀರ ನಿಕ್ಷೇಪ
ಹೊತ್ತು ತಲೆಬಾಗಿಸಿದ ಕಲ್ಪವೃಕ್ಷ

ಛೀ ಸಾಕು
ಈ ಹುಚ್ಚು
ಇದು ಸೆಕೆಂಡ್ ಹ್ಯಾಂಡ್ ಕಾವ್ಯ
ಯಾರ ಟೇಸ್ಟಿಗೋ ಮಾಡಿದ ಅಡಿಗೆ ಇದು
ಪಂಪ, ಕುಮಾರವ್ಯಾಸ, ಮಿಲ್ಟನರ
ಕಿಸೆಗೆ ಕೈಹಾಕಿ
ಪದ ವಿಜೃಂಭಣೆಯ ಅಮಲಿನಲ್ಲಿ
ನಾನು ರಾಮಾಯಣ ಬರೆಯಲೊಲ್ಲೆ
ನನ್ನ ದರ್ಶನ ಬೇರೆ
ಕೊಂಡೆ ಕೊಳ್ಳಗಳಲ್ಲಿ ಗಲ್ಲಿಗಳಲ್ಲಿ
ಕಂಡ, ಅರಗಿಸಿಕೊಂಡ,
ಮರೆತೇ ಹೋದ ಸಂಕೀರ್ಣ
ಅನುಭವದ ವಿಸ್ಕಿ, ಅದು
ಇಲ್ಲಿ ವಿಶ್ವಾಮಿತ್ರನೂ
ನಾಯಿಯ ಮಾಂಸ ತಿಂದು ತೇಗಿದ್ದ
ಇದಕ್ಕೆ ನೂರೆಂಟು ಪ್ರಾಕಾರಗಳು
ಈಕೆಗೆ ಹದಿನಾರೆಂಬ ಛಲವೇಕೆ?
ಕಾಲದ ಪರೆ ತೆರೆದರೆ
ಒಳಗೆ ಮಸಿ ಹಿಡಿದ ಪೆಟ್ಟಿಕ್ಕೋಟು
ಅಗ್ಗ ಪೌಡರಿನಲ್ಲಿ ಬೆವರಿನ ಕಮಟು
ಹೆಲೆನಳ ಚರ್ಮದಲ್ಲೂ ಗ್ರೀಸಿನ ಜಾರು
ಈ ವಿಕೃತ ಮುಖಗಳ ವ್ಯಕ್ತಿ
ಇರಬಹುದು ನಾನು ನೀನು

ನನ್ನ ಹಾಡೇ ಬೇರೆ
ತಾಳಲಯ ವ್ಯಾಕರಣ ಸಿಂಟ್ಯಾಕ್ಸು ಎಲ್ಲ
ಒಡೆದು
ನೋವು ನಗೆ ಜಿಗುಪ್ಸೆ ವ್ಯಂಗ್ಯ
ತಿಳಿದ ತಿಳಿಯದ ಸುಪ್ತ ಜಾಗೃತ ಭಾವಗಳ
ಅಕ್ರೊಬಾಟಿಕ್ಸ್
ಏನೋ ಹೇಳಬೇಕು
ಏನೆಂಬುದು ಮಬ್ಬಿ
ಹೇಗೋ ಹೇಳಬೇಕು
ಹೇಗೆಂಬುದು ಅಸ್ಪಷ್ಟ
ಅತೃಪ್ತಿಯ ಉಗ್ಗು
ಕಳಚಿ ಬೀಳುವ ಇಂದ್ರಿಯ ಪ್ರಜ್ಞೆಗಳಿಗೆ ಜೋತು
ನನ್ನ ಪ್ಯಾಟರ್ನ್ ಕಂಡು ಹುಡುಕುವ
ಪ್ರಯತ್ನ ಇದು
ಈ ಸಂಕೀರ್ಣತೆಯ ಅಕ್ಷಯ ಜಿಡ್ಡುದಾರ ಮೈಬಿಗಿದು
ಅನುಭವವಾಗಿ, ಅದು ನಾನಾಗಿ
ನಾನೆ ಅಭಿವ್ಯಕ್ತಿಯಾದಾಗ
ಅದೇನು ನಾನೇ ನನ್ನ ಕಾವ್ಯ.
*****

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...