ಕೇರಳ

ಹದಿನಾರಕೆ
ಈಗತಾನೆ ಐನೀರು ಮುಳುಗಿ ಬಂದವಳು
ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ
ಶಕುಂತಳೆ
ಇದು ವಿಶ್ವಾಮಿತ್ರ ಸೃಷ್ಟಿ
ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ.
ಈ ಪ್ರಮೀಳೆ ಯಾರಾರ ಹೃದಯಕ್ಕೆ
ಹಚ್ಚುವಳೊ ಬೆಂಕಿ!
ಆರಿಸುವ
ಲಾಲಿಸುವ ತೋಳ ತೆರೆಮಾಲೆ
ಕುಡಿಮೊಲೆಯ ಕ್ಷೀರ ನಿಕ್ಷೇಪ
ಹೊತ್ತು ತಲೆಬಾಗಿಸಿದ ಕಲ್ಪವೃಕ್ಷ

ಛೀ ಸಾಕು
ಈ ಹುಚ್ಚು
ಇದು ಸೆಕೆಂಡ್ ಹ್ಯಾಂಡ್ ಕಾವ್ಯ
ಯಾರ ಟೇಸ್ಟಿಗೋ ಮಾಡಿದ ಅಡಿಗೆ ಇದು
ಪಂಪ, ಕುಮಾರವ್ಯಾಸ, ಮಿಲ್ಟನರ
ಕಿಸೆಗೆ ಕೈಹಾಕಿ
ಪದ ವಿಜೃಂಭಣೆಯ ಅಮಲಿನಲ್ಲಿ
ನಾನು ರಾಮಾಯಣ ಬರೆಯಲೊಲ್ಲೆ
ನನ್ನ ದರ್ಶನ ಬೇರೆ
ಕೊಂಡೆ ಕೊಳ್ಳಗಳಲ್ಲಿ ಗಲ್ಲಿಗಳಲ್ಲಿ
ಕಂಡ, ಅರಗಿಸಿಕೊಂಡ,
ಮರೆತೇ ಹೋದ ಸಂಕೀರ್ಣ
ಅನುಭವದ ವಿಸ್ಕಿ, ಅದು
ಇಲ್ಲಿ ವಿಶ್ವಾಮಿತ್ರನೂ
ನಾಯಿಯ ಮಾಂಸ ತಿಂದು ತೇಗಿದ್ದ
ಇದಕ್ಕೆ ನೂರೆಂಟು ಪ್ರಾಕಾರಗಳು
ಈಕೆಗೆ ಹದಿನಾರೆಂಬ ಛಲವೇಕೆ?
ಕಾಲದ ಪರೆ ತೆರೆದರೆ
ಒಳಗೆ ಮಸಿ ಹಿಡಿದ ಪೆಟ್ಟಿಕ್ಕೋಟು
ಅಗ್ಗ ಪೌಡರಿನಲ್ಲಿ ಬೆವರಿನ ಕಮಟು
ಹೆಲೆನಳ ಚರ್ಮದಲ್ಲೂ ಗ್ರೀಸಿನ ಜಾರು
ಈ ವಿಕೃತ ಮುಖಗಳ ವ್ಯಕ್ತಿ
ಇರಬಹುದು ನಾನು ನೀನು

ನನ್ನ ಹಾಡೇ ಬೇರೆ
ತಾಳಲಯ ವ್ಯಾಕರಣ ಸಿಂಟ್ಯಾಕ್ಸು ಎಲ್ಲ
ಒಡೆದು
ನೋವು ನಗೆ ಜಿಗುಪ್ಸೆ ವ್ಯಂಗ್ಯ
ತಿಳಿದ ತಿಳಿಯದ ಸುಪ್ತ ಜಾಗೃತ ಭಾವಗಳ
ಅಕ್ರೊಬಾಟಿಕ್ಸ್
ಏನೋ ಹೇಳಬೇಕು
ಏನೆಂಬುದು ಮಬ್ಬಿ
ಹೇಗೋ ಹೇಳಬೇಕು
ಹೇಗೆಂಬುದು ಅಸ್ಪಷ್ಟ
ಅತೃಪ್ತಿಯ ಉಗ್ಗು
ಕಳಚಿ ಬೀಳುವ ಇಂದ್ರಿಯ ಪ್ರಜ್ಞೆಗಳಿಗೆ ಜೋತು
ನನ್ನ ಪ್ಯಾಟರ್ನ್ ಕಂಡು ಹುಡುಕುವ
ಪ್ರಯತ್ನ ಇದು
ಈ ಸಂಕೀರ್ಣತೆಯ ಅಕ್ಷಯ ಜಿಡ್ಡುದಾರ ಮೈಬಿಗಿದು
ಅನುಭವವಾಗಿ, ಅದು ನಾನಾಗಿ
ನಾನೆ ಅಭಿವ್ಯಕ್ತಿಯಾದಾಗ
ಅದೇನು ನಾನೇ ನನ್ನ ಕಾವ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವ ಅವನಲ್ಲ
Next post ಬಯಕೆ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…