Home / ಕವನ / ಕವಿತೆ / ಕೇರಳ

ಕೇರಳ

ಹದಿನಾರಕೆ
ಈಗತಾನೆ ಐನೀರು ಮುಳುಗಿ ಬಂದವಳು
ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ
ಶಕುಂತಳೆ
ಇದು ವಿಶ್ವಾಮಿತ್ರ ಸೃಷ್ಟಿ
ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ.
ಈ ಪ್ರಮೀಳೆ ಯಾರಾರ ಹೃದಯಕ್ಕೆ
ಹಚ್ಚುವಳೊ ಬೆಂಕಿ!
ಆರಿಸುವ
ಲಾಲಿಸುವ ತೋಳ ತೆರೆಮಾಲೆ
ಕುಡಿಮೊಲೆಯ ಕ್ಷೀರ ನಿಕ್ಷೇಪ
ಹೊತ್ತು ತಲೆಬಾಗಿಸಿದ ಕಲ್ಪವೃಕ್ಷ

ಛೀ ಸಾಕು
ಈ ಹುಚ್ಚು
ಇದು ಸೆಕೆಂಡ್ ಹ್ಯಾಂಡ್ ಕಾವ್ಯ
ಯಾರ ಟೇಸ್ಟಿಗೋ ಮಾಡಿದ ಅಡಿಗೆ ಇದು
ಪಂಪ, ಕುಮಾರವ್ಯಾಸ, ಮಿಲ್ಟನರ
ಕಿಸೆಗೆ ಕೈಹಾಕಿ
ಪದ ವಿಜೃಂಭಣೆಯ ಅಮಲಿನಲ್ಲಿ
ನಾನು ರಾಮಾಯಣ ಬರೆಯಲೊಲ್ಲೆ
ನನ್ನ ದರ್ಶನ ಬೇರೆ
ಕೊಂಡೆ ಕೊಳ್ಳಗಳಲ್ಲಿ ಗಲ್ಲಿಗಳಲ್ಲಿ
ಕಂಡ, ಅರಗಿಸಿಕೊಂಡ,
ಮರೆತೇ ಹೋದ ಸಂಕೀರ್ಣ
ಅನುಭವದ ವಿಸ್ಕಿ, ಅದು
ಇಲ್ಲಿ ವಿಶ್ವಾಮಿತ್ರನೂ
ನಾಯಿಯ ಮಾಂಸ ತಿಂದು ತೇಗಿದ್ದ
ಇದಕ್ಕೆ ನೂರೆಂಟು ಪ್ರಾಕಾರಗಳು
ಈಕೆಗೆ ಹದಿನಾರೆಂಬ ಛಲವೇಕೆ?
ಕಾಲದ ಪರೆ ತೆರೆದರೆ
ಒಳಗೆ ಮಸಿ ಹಿಡಿದ ಪೆಟ್ಟಿಕ್ಕೋಟು
ಅಗ್ಗ ಪೌಡರಿನಲ್ಲಿ ಬೆವರಿನ ಕಮಟು
ಹೆಲೆನಳ ಚರ್ಮದಲ್ಲೂ ಗ್ರೀಸಿನ ಜಾರು
ಈ ವಿಕೃತ ಮುಖಗಳ ವ್ಯಕ್ತಿ
ಇರಬಹುದು ನಾನು ನೀನು

ನನ್ನ ಹಾಡೇ ಬೇರೆ
ತಾಳಲಯ ವ್ಯಾಕರಣ ಸಿಂಟ್ಯಾಕ್ಸು ಎಲ್ಲ
ಒಡೆದು
ನೋವು ನಗೆ ಜಿಗುಪ್ಸೆ ವ್ಯಂಗ್ಯ
ತಿಳಿದ ತಿಳಿಯದ ಸುಪ್ತ ಜಾಗೃತ ಭಾವಗಳ
ಅಕ್ರೊಬಾಟಿಕ್ಸ್
ಏನೋ ಹೇಳಬೇಕು
ಏನೆಂಬುದು ಮಬ್ಬಿ
ಹೇಗೋ ಹೇಳಬೇಕು
ಹೇಗೆಂಬುದು ಅಸ್ಪಷ್ಟ
ಅತೃಪ್ತಿಯ ಉಗ್ಗು
ಕಳಚಿ ಬೀಳುವ ಇಂದ್ರಿಯ ಪ್ರಜ್ಞೆಗಳಿಗೆ ಜೋತು
ನನ್ನ ಪ್ಯಾಟರ್ನ್ ಕಂಡು ಹುಡುಕುವ
ಪ್ರಯತ್ನ ಇದು
ಈ ಸಂಕೀರ್ಣತೆಯ ಅಕ್ಷಯ ಜಿಡ್ಡುದಾರ ಮೈಬಿಗಿದು
ಅನುಭವವಾಗಿ, ಅದು ನಾನಾಗಿ
ನಾನೆ ಅಭಿವ್ಯಕ್ತಿಯಾದಾಗ
ಅದೇನು ನಾನೇ ನನ್ನ ಕಾವ್ಯ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...