Home / ಕವನ / ಕವಿತೆ / ಕೇರಳ

ಕೇರಳ

ಹದಿನಾರಕೆ
ಈಗತಾನೆ ಐನೀರು ಮುಳುಗಿ ಬಂದವಳು
ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ
ಶಕುಂತಳೆ
ಇದು ವಿಶ್ವಾಮಿತ್ರ ಸೃಷ್ಟಿ
ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ.
ಈ ಪ್ರಮೀಳೆ ಯಾರಾರ ಹೃದಯಕ್ಕೆ
ಹಚ್ಚುವಳೊ ಬೆಂಕಿ!
ಆರಿಸುವ
ಲಾಲಿಸುವ ತೋಳ ತೆರೆಮಾಲೆ
ಕುಡಿಮೊಲೆಯ ಕ್ಷೀರ ನಿಕ್ಷೇಪ
ಹೊತ್ತು ತಲೆಬಾಗಿಸಿದ ಕಲ್ಪವೃಕ್ಷ

ಛೀ ಸಾಕು
ಈ ಹುಚ್ಚು
ಇದು ಸೆಕೆಂಡ್ ಹ್ಯಾಂಡ್ ಕಾವ್ಯ
ಯಾರ ಟೇಸ್ಟಿಗೋ ಮಾಡಿದ ಅಡಿಗೆ ಇದು
ಪಂಪ, ಕುಮಾರವ್ಯಾಸ, ಮಿಲ್ಟನರ
ಕಿಸೆಗೆ ಕೈಹಾಕಿ
ಪದ ವಿಜೃಂಭಣೆಯ ಅಮಲಿನಲ್ಲಿ
ನಾನು ರಾಮಾಯಣ ಬರೆಯಲೊಲ್ಲೆ
ನನ್ನ ದರ್ಶನ ಬೇರೆ
ಕೊಂಡೆ ಕೊಳ್ಳಗಳಲ್ಲಿ ಗಲ್ಲಿಗಳಲ್ಲಿ
ಕಂಡ, ಅರಗಿಸಿಕೊಂಡ,
ಮರೆತೇ ಹೋದ ಸಂಕೀರ್ಣ
ಅನುಭವದ ವಿಸ್ಕಿ, ಅದು
ಇಲ್ಲಿ ವಿಶ್ವಾಮಿತ್ರನೂ
ನಾಯಿಯ ಮಾಂಸ ತಿಂದು ತೇಗಿದ್ದ
ಇದಕ್ಕೆ ನೂರೆಂಟು ಪ್ರಾಕಾರಗಳು
ಈಕೆಗೆ ಹದಿನಾರೆಂಬ ಛಲವೇಕೆ?
ಕಾಲದ ಪರೆ ತೆರೆದರೆ
ಒಳಗೆ ಮಸಿ ಹಿಡಿದ ಪೆಟ್ಟಿಕ್ಕೋಟು
ಅಗ್ಗ ಪೌಡರಿನಲ್ಲಿ ಬೆವರಿನ ಕಮಟು
ಹೆಲೆನಳ ಚರ್ಮದಲ್ಲೂ ಗ್ರೀಸಿನ ಜಾರು
ಈ ವಿಕೃತ ಮುಖಗಳ ವ್ಯಕ್ತಿ
ಇರಬಹುದು ನಾನು ನೀನು

ನನ್ನ ಹಾಡೇ ಬೇರೆ
ತಾಳಲಯ ವ್ಯಾಕರಣ ಸಿಂಟ್ಯಾಕ್ಸು ಎಲ್ಲ
ಒಡೆದು
ನೋವು ನಗೆ ಜಿಗುಪ್ಸೆ ವ್ಯಂಗ್ಯ
ತಿಳಿದ ತಿಳಿಯದ ಸುಪ್ತ ಜಾಗೃತ ಭಾವಗಳ
ಅಕ್ರೊಬಾಟಿಕ್ಸ್
ಏನೋ ಹೇಳಬೇಕು
ಏನೆಂಬುದು ಮಬ್ಬಿ
ಹೇಗೋ ಹೇಳಬೇಕು
ಹೇಗೆಂಬುದು ಅಸ್ಪಷ್ಟ
ಅತೃಪ್ತಿಯ ಉಗ್ಗು
ಕಳಚಿ ಬೀಳುವ ಇಂದ್ರಿಯ ಪ್ರಜ್ಞೆಗಳಿಗೆ ಜೋತು
ನನ್ನ ಪ್ಯಾಟರ್ನ್ ಕಂಡು ಹುಡುಕುವ
ಪ್ರಯತ್ನ ಇದು
ಈ ಸಂಕೀರ್ಣತೆಯ ಅಕ್ಷಯ ಜಿಡ್ಡುದಾರ ಮೈಬಿಗಿದು
ಅನುಭವವಾಗಿ, ಅದು ನಾನಾಗಿ
ನಾನೆ ಅಭಿವ್ಯಕ್ತಿಯಾದಾಗ
ಅದೇನು ನಾನೇ ನನ್ನ ಕಾವ್ಯ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...