Home / ಕವನ / ಕವಿತೆ / ಎಂದೆಂದೂ ಕೇಳಲಾಗದ ಪ್ರಶ್ನೆಗಳು

ಎಂದೆಂದೂ ಕೇಳಲಾಗದ ಪ್ರಶ್ನೆಗಳು

ನನ್ನ-ನನ್ನಂತವರ ಹುಟ್ಟಿನೊಂದಿಗೇ
ಆಳ ಬೇರು ಬಿಟ್ಟು ಬೆಳೆದ
ಎಷ್ಟೊಂದು ಎಂದೆಂದೂ
ಕೇಳಲಾಗದ ಪ್ರಶ್ನೆಗಳು!

ಸೀತೆ ಸಾವಿತ್ರಿ ಅಹಲ್ಯೆ ಎಂದೂ
ಕೇಳದ ಪ್ರಶ್ನೆಗಳು
ದ್ರೌಪದಿ, ಗಾರ್ಗಿ, ಸಂಚಿಹೊನ್ನಮ್ಮ
ಕೇಳಿಯೂ ಉಳಿದ ಪ್ರಶ್ನೆಗಳು!

ಆದಿ ಅಂತ್ಯವಿಲ್ಲದೇ
ದಶಮಾನ ಶತಮಾನ ಸಹಸ್ರಮಾನಗಳಿಂದ
ಬಹುಶಃ ‘ಈವ್’ಳ ಹುಟ್ಟಿನೊಂದಿಗೇ
ಹುಟ್ಟಿಕೊಂಡ ಉತ್ತರಗಳೇ ಇಲ್ಲದ ಪ್ರಶ್ನೆಗಳು
ಬೆಂಬಿಡದ ಭೂತಗಳು!

ಅಪ್ಪಿ-ತಪ್ಪಿಯೂ ಅವು ಹೊರಗೆ ಇಣುಕದಂತೆ
ಸುರುಳಿ ಸುತ್ತಿ ಸುತ್ತಿ
ಮತ್ತೂ ಗೋಜಲಾಗಿಸಿ
ಸಣ್ಣ ಉಂಡೆ ಮಾಡಿ
ಮನದ ಮೂಲೆಯಲ್ಲೇ ಎಲ್ಲೋ
ಒತ್ತರಿಸಿಟ್ಟು ಕಾವು ಕೊಟ್ಟ ಪ್ರಶ್ನೆಗಳು
ಎಂದೆಂದೂ ಯಾರಲ್ಲೂ ಕೇಳಲಾಗದ ಪ್ರಶ್ನೆಗಳು
ಇದ್ದೂ ಸತ್ತಂತೆ ಇದ್ದರೆಷ್ಟು ಬಿಟ್ಟರೆಷ್ಟು?

ಇಲ್ಲಾ ನಮ್ಮ ಬದುಕಿನಲಿ
ಪ್ರಶ್ನೆಗಳಿಗೆ ಕೆಲಸವಿಲ್ಲ
ಮತ್ತಾರೋ ಆಜ್ಞಾಪಿಸಿದ ಉತ್ತರಗಳ
ಉಭ-ಶುಭವೆನ್ನದೇ ಒಪ್ಪಿ
ಅದನೇ ಮುಂದಿನ ಪೀಳಿಗೆಗೆ ಹಂಚಿ
ಎಂದೆಂದೂ ಕೇಳಲಾಗದ ಪ್ರಶ್ನೆಗಳು
ಒಳಗೇ ಚುಚ್ಚಿ
ನೋಯಿಸುತ್ತಿದ್ದರೂ ಸರಿ

ಕಾದುಕೆಂಡವಾದ ಪ್ರಶ್ನೆಗಳಿಗೆ
ತಣ್ಣನೆ ಕೊರೆವ ನೀರು ಚೆಲ್ಲಿ
ಇಲ್ಲಾ, ಏನೂ ಆಗಿಯೇ ಇಲ್ಲವೆಂಬಂತೆ
ಮುಗ್ಧತೆಯ ಮುಖ ತೊಟ್ಟು
ಬದುಕು ಸವೆಸುತ್ತೇವೆ
ನಾನು-ನನ್ನಂತವರು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...