ಎಂದೆಂದೂ ಕೇಳಲಾಗದ ಪ್ರಶ್ನೆಗಳು

ನನ್ನ-ನನ್ನಂತವರ ಹುಟ್ಟಿನೊಂದಿಗೇ
ಆಳ ಬೇರು ಬಿಟ್ಟು ಬೆಳೆದ
ಎಷ್ಟೊಂದು ಎಂದೆಂದೂ
ಕೇಳಲಾಗದ ಪ್ರಶ್ನೆಗಳು!

ಸೀತೆ ಸಾವಿತ್ರಿ ಅಹಲ್ಯೆ ಎಂದೂ
ಕೇಳದ ಪ್ರಶ್ನೆಗಳು
ದ್ರೌಪದಿ, ಗಾರ್ಗಿ, ಸಂಚಿಹೊನ್ನಮ್ಮ
ಕೇಳಿಯೂ ಉಳಿದ ಪ್ರಶ್ನೆಗಳು!

ಆದಿ ಅಂತ್ಯವಿಲ್ಲದೇ
ದಶಮಾನ ಶತಮಾನ ಸಹಸ್ರಮಾನಗಳಿಂದ
ಬಹುಶಃ ‘ಈವ್’ಳ ಹುಟ್ಟಿನೊಂದಿಗೇ
ಹುಟ್ಟಿಕೊಂಡ ಉತ್ತರಗಳೇ ಇಲ್ಲದ ಪ್ರಶ್ನೆಗಳು
ಬೆಂಬಿಡದ ಭೂತಗಳು!

ಅಪ್ಪಿ-ತಪ್ಪಿಯೂ ಅವು ಹೊರಗೆ ಇಣುಕದಂತೆ
ಸುರುಳಿ ಸುತ್ತಿ ಸುತ್ತಿ
ಮತ್ತೂ ಗೋಜಲಾಗಿಸಿ
ಸಣ್ಣ ಉಂಡೆ ಮಾಡಿ
ಮನದ ಮೂಲೆಯಲ್ಲೇ ಎಲ್ಲೋ
ಒತ್ತರಿಸಿಟ್ಟು ಕಾವು ಕೊಟ್ಟ ಪ್ರಶ್ನೆಗಳು
ಎಂದೆಂದೂ ಯಾರಲ್ಲೂ ಕೇಳಲಾಗದ ಪ್ರಶ್ನೆಗಳು
ಇದ್ದೂ ಸತ್ತಂತೆ ಇದ್ದರೆಷ್ಟು ಬಿಟ್ಟರೆಷ್ಟು?

ಇಲ್ಲಾ ನಮ್ಮ ಬದುಕಿನಲಿ
ಪ್ರಶ್ನೆಗಳಿಗೆ ಕೆಲಸವಿಲ್ಲ
ಮತ್ತಾರೋ ಆಜ್ಞಾಪಿಸಿದ ಉತ್ತರಗಳ
ಉಭ-ಶುಭವೆನ್ನದೇ ಒಪ್ಪಿ
ಅದನೇ ಮುಂದಿನ ಪೀಳಿಗೆಗೆ ಹಂಚಿ
ಎಂದೆಂದೂ ಕೇಳಲಾಗದ ಪ್ರಶ್ನೆಗಳು
ಒಳಗೇ ಚುಚ್ಚಿ
ನೋಯಿಸುತ್ತಿದ್ದರೂ ಸರಿ

ಕಾದುಕೆಂಡವಾದ ಪ್ರಶ್ನೆಗಳಿಗೆ
ತಣ್ಣನೆ ಕೊರೆವ ನೀರು ಚೆಲ್ಲಿ
ಇಲ್ಲಾ, ಏನೂ ಆಗಿಯೇ ಇಲ್ಲವೆಂಬಂತೆ
ಮುಗ್ಧತೆಯ ಮುಖ ತೊಟ್ಟು
ಬದುಕು ಸವೆಸುತ್ತೇವೆ
ನಾನು-ನನ್ನಂತವರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೊಯಟ್ರಿ
Next post ಮಡಿಲು ಬರಿದೇ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…