ಕರೆಕರೆದು ಬರುವೆನೊ ಬಂದೆನೊ ಇದೊ ಬಂದೆ,
ಕರ್ಣಾಟ ಸಾಗರ ಸೇರಽಲು;
ತಿಳಿನೀರ ತಳವನ್ನು ಸೇರಲು!  ||ಕರೆ||

ಕೊಡಗಿನ ಮಲೆನಾಡ ಶಿಖರದೊಳುದಯಿಸಿ
ಹರಿಹರಿದೆ ಕನ್ನಡ ರಾಜ್ಯದೊಳ್;
ಕವಿರಸದ ಹನಿಯಾಗಿ ಸೇರಽಲು!

ಕಾಂತಿಯೊ ಇದು ಒಂದು ಕ್ರಾಂತಿಗೆ ಸಮನಾಗಿ
ಕರ್ಣಾಟ ಬಯಲೊಳು-ಈ ಕಾಂತಿ,
ದೇವಸೂರ್ಯನು ತೋರಿದೀಕಾಂತಿ!  ||ಕರೆ||

ಸೂರ್ಯಕಾಂತಿಯ ನಾನು ಕರ್ಣಾಟ ಸಾಗರ
ತೆರೆ ಮೇಲೆ ಥಳಥಳನೆ ತೇಲಿಽಸಿ;
ಸಹ್ಯಾದ್ರಿ ಏರಿದೆ ನೋಡಽಲು!

ವಜ್ರಪ್ರಕಾಶವು ಕರಿಮಣ್ಣು ಕರ್ಣಾಟ!
ಗೋದೆ ಕೃಷ್ಣಾ ತುಂಗಾ ಕಾವೇರೀ,
ತಾಯ್ಮಣಿಯರು ಮೀಸಿ ಮುದವೇರಿ!  ||ಕರೆ||

ನೂರಾರು ಜನಕುಽಲ ಹತ್ತಾರು ರಾಜ್ಯದೊಳ್
ನಾನೊರ್ವ ಕುಡುಪುತ್ರನದರೊಽಳು,
ಮುಳೂಗಿದೆ ಕರ್ಣಾಟ ತೆರೆಯೊಽಳು!

ಹನಿಗೊಂದು ಕವಿಯಾಗಿ ಅಲೆಗೊಂದು ಮುನಿಯಾಗಿ
ಜಲಚರದ ತೆರೆದಲ್ಲಿ ವೀರಽರೊ;
ಶಕ್ತಿಪ್ರಧಾಯಕ ರಾಜ್ಯಽವೊಽ  ||ಕರೆ||

ಸಂಪತ್ತು ಸಾಮ್ರಾಜ್ಯ ಸಂಸ್ಕೃತಿ ಸಾಹಿತ್ಯ
ರಸಿಕ ಕಲೆಗಳ ತವರೂಽರೊ;
ಪಂಪಾದಿ ಕವಿಗಳು ಬಳೆದೂರೊಽ

ಈ ರಾಜ್ಯ ಕರ್ಣಾಟ,- ಬಂದೆನೊ ಇದೊ ಬಂದೆ
ನಾನದಕೆ ನಾನಾಗಿ ಮೀಸಽಲೊ;
ತಾಯ್ನುಡಿ ಹಾಡುತ್ತ ಬಂದೆಽನೊ~  ||ಕರೆ||
*****

ಪುಸ್ತಕ: ಸೂರ್ಯ ಕಾಂತಿ