
ನನಗೆ ಕವಿಯಾಗಬೇಕೆಂಬ ಇಚ್ಛೆ ಬಹಳ ಕಡೆಗೆ ನನ್ನನ್ನು ‘ಕವಿ’ ಎಂದು ಕರೆದರೆ ಸಾಕು; ಅಷ್ಟೇ ಸಂತೋಷ, ಆದರೆ ಕವಿತೆ ಬರೆಯದಿದ್ದರೆ, ಕವಿಯೆಂದು ಯಾರು ಕರೆಯುವರು ? ಅಂತೆಯೇ ಕವಿತೆ ಬರೆಯಲಿಕ್ಕೆ ಪ್ರಾರಂಭಿಸಿದೆ. ಅಂದರೆ, ಪ್ರಾರಂಭಿಸಲು ಪ್ರಯತ್ನಿಸಿದೆ. ಕೆಳಗೆ ಕೊಟ್ಟ ಕೆಲವು ಮಾದರಿಯ ಪದ್ಯಗಳು ನನ್ನ ಪ್ರಯತ್ನದ ಪುಷ್ಪ ಫಲಗಳು. ನನ್ನ ಪ್ರಯತ್ನವು ಸಫಲವಾಯಿತೋ ನಿಷ್ಪಲವಾಯಿತೋ ವಾಚಕ ವೃಂದವೇ ಹೇಳಬೇಕು.
ಆದರೆ “ನರಕವಿಗಳಿದ್ದಲ್ಲಿ ವರಕವಿಗಳು ವಿದ್ಯೆ ತೋರಬಾರದು (!?)” ಎಂದು ಕವಿಯು ಹೇಳಿದಂತೆ ಕವಿಗಳು ಮಾತ್ರ ಇವುಗಳ ಕಡೆಗೆ ಲಕ್ಷ್ಯ ಕೊಡಬಾರದು. ನನ್ನ ಕವಿತೆಗಳು ಜನಸಾಮಾನ್ಯರಿಗಾಗಿ ಇವೆ; ಕವಿಗಳಿಗಲ್ಲ. ಗುಡ್ಡಕ್ಕೆ ಕಲ್ಲು ಹೊರುವಷ್ಟು ಹುಚ್ಚ ನಾನಲ್ಲ. ಸಮುದ್ರಕ್ಕೆ ನೀರಿನ ಕೊಡ ಹೊರುವಷ್ಟು ವಿಚಾರಶೂನ್ಯನಲ್ಲ. ಇಲೆಕ್ಟ್ರಿಕ್ ಪಾವರ ಹೌಸಿಗೆ ಕೈ ದೀಪ ಹಿಡಿದುಕೊಂಡು ಹೋಗುವಷ್ಟು ಮೂರ್ಖನಲ್ಲ. ‘ಆತ್ಮಸಂತೋಷದಿಂದ ಮತ್ತು ಅಕ್ಕಲ ಹುಷಾರಿಯಿಂದ’ ಬರೆಯುತ್ತಿರುವ ನಾನು ಜಾಣನಿದ್ದೇನೆ! ನನಗೆ ತಿಳುವಳಿಕೆ ಇದೆ !!
* * *
ಕವಿಯು ತನ್ನ ಸ್ಫೂರ್ತಿಯ ಬಲದಿಂದ ಅರ್ವಾಚೀನ ಶಾಸ್ತ್ರೀಯ ಕೌತುಕಗಳಿಗಿಂತ ಹೆಚ್ಚು ಅಗಾಧವಾದ ಕೃತಿಗಳನ್ನು ಮಾಡಬಲ್ಲನು; ವಸ್ತುಗಳನ್ನು ರಚಿಸಬಲ್ಲನು. ನಾನೇ ಒಂದು ಕಡೆಯಲ್ಲಿ ಹೀಗೆ ಬರೆದಿಲ್ಲವೆ ?
ಹಕ್ಕಿಯಾಗಿ ಹಾರುವೆನು
ಚಿಕ್ಕಿಯಾಗಿ ಬೆಳಗುವೆನು
ಬೆಕ್ಕಿನಂತೆ ಜಿಗಿಯುವೆನು
ಸೊಕ್ಕಿನಿಂದ ಸಂದಿಗೊಂದಿಗಳಲಿ ||
***
ಸುಗ್ರಾಸ ಭೋಜನವಿಲ್ಲದೆ ಯಾರೂ ಕವಿಯಾಗಲಾರರೆಂದು ಅನ್ನುವ ವಾಡಿಕೆ. ಆದರೆ ಇದು ತಪ್ಪು. ವಾಕ್ಪಟದಲ್ಲಿ ನಟನು ಘೋರವಾದ ಅರಣ್ಯದಲ್ಲಿ ಹಸಿವೆ ನೀರಡಿಕೆಗಳಿಂದ ಬಳಲುತ್ತಿದ್ದರೂ, ಜಿಗಿಜಿಗಿದು ಹಾಡುವದನ್ನು ಕಣ್ಣಾರೆ ಕಾಣುತ್ತೇವೆ. ನಾನು ಕವಿ ಇದ್ದರೇನಾಯಿತು ? ನೀವು ಕವಿ ಇರದಿದ್ದರೇನಾಯಿತು ? ಕಂಡದ್ದನ್ನೂ ಕೇಳಿದ್ದನ್ನೂ ನಂಬಲೇಬೇಕು. ನಂಬುಗೆಯ ವಿಷಯವಾಗಿ ನನ್ನ ಬೇರೊಂದು ಕವಿತೆಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದೇನೆ:
ಕಂಡದ್ದನ್ನು ನಂಬದವರಾರು
ಕಾಣದ್ದನ್ನು ನಂಬುವವರಾರು
ಕಣ್ಣು ಕೊಟ್ಟ ಪರಮಾತ್ಮನು
ಮುಕ್ಕಣ್ಣನಲ್ಲವೇ ಮರುಳೇ ?
* * *
ಕಡೆಗೊಮ್ಮೆ ಕವಿಯಾದೆ! ನೀವೂ ದಯವಿಟ್ಟು ನನ್ನನ್ನು ಕವಿಯೆಂದು ಕರೆಯಿರಿ. ದೈವದ ಬಾಯಿಯಲ್ಲಿ ದೇವರಿದ್ದಾನೆ. ನೀವೆಲ್ಲ ಹಾರೈಸಿದರೆ, ಕವಿಯಾಗಿಯೇ ತೀರುವೆನು, ಯಾವನೊಬ್ಬನನ್ನು “ಹುಚ್ಚ” “ಹುಚ್ಚ” ಎಂದು ಹುಡುಗರು ಬೆನ್ನು ಹತ್ತಿದರೆ ಜಾಣನೂ ಹುಚ್ಚನಾಗುವದು ಸ್ವಾಭಾವಿಕ. ಹಾಗೆಯೇ ನೀವೆಲ್ಲರೂ ‘ಕವಿ’ ಎಂದು ಕರೆದರೆ ನಾನೂ ಕವಿಯಾಗುವದು ನಿಶ್ಚಯ. ಆ ಮೇಲೆ ಇದರಂತೆಯೇ ನೂರಾರು ಕವಿತೆಗಳನ್ನು ಬರೆದು ನಿಮ್ಮೆದುರಿಗೆ ಇಡುವೆ!
* * * *
ಇಷ್ಟರಲ್ಲಿ ಒಂದು ಹಳೆಯ ಮಾತು ನೆನಪಾಯಿತು:
ಧಾರವಾಡದಿಂದ ಹೊರಡುವ ಕನ್ನಡ ಮಾಸಿಕಕ್ಕೆ ಓರ್ವ “ಕವಿ”ಯು ಒಂದು “ಕವಿತೆ” ಯನ್ನು ಕಳಿಸಿದನು, ಪಾಪ! ಕವಿಗೆ ಪದವಿ ಬಿರುದಾವಳಿಗಳಿದ್ದಿಲ್ಲ. ಮಾಸಿಕವು ಮೇಲ್ತರಗತಿಯದು. ಅದರ ಸಂಪಾದಕರು ನಾಮಾಂಕಿತ ವಾಂಙ್ಮಯ ವಿಶಾರದರು ! ಆದ್ದರಿಂದ ” ಕವಿ ”ಯು ಭೀತಿಗೊಂಡು, “ನನ್ನ ಕವಿತೆಯನ್ನು ತಿದ್ದಿ ನಿಮ್ಮ ಮಾಸಿಕದಲ್ಲಿ ಸೇರಿಸಿರಿ. ಇದರಂತೆ ಮುಂದೆಯೂ ಕವಿತೆ ಕಳಿಸುವೆ ” ಎಂದು ಮುಂತಾಗಿ ಬರೆದಿದ್ದನು. ಅದಕ್ಕೆ ಪ್ರತ್ಯುತ್ತರವಾಗಿ ಸಂಪಾದಕ ಮಹಾಶಯರು ಹೀಗೆ ಬರೆದರು: “ನಾವು ನಿಮ್ಮ ಕವಿತೆಯನ್ನು ತಿದ್ದಿ ಹಾಕುವವರಿದ್ದೆವು. ಆದರೆ ಮುಂದೆ ಪುನಃ ಕವಿತೆಗಳನ್ನು ಕಳಿಸುವ ಬೆದರಿಕೆಯನ್ನು ನೋಡಿ ಈಗ ಕಳಿಸಿದ ಕವಿತೆಯನ್ನು ಈ ಪತ್ರದ ಜೊತೆಗೆ ತಿರುಗಿ ಕಳಿಸಿದ್ದೇವೆ!!”
*****














