Home / ಕವನ / ಕವಿತೆ / ಇರವು ಮತ್ತು ಧರ್ಮಗಳ ಹಾಡು

ಇರವು ಮತ್ತು ಧರ್ಮಗಳ ಹಾಡು

ಇಹುದೆನ್ನಲಿರವಿಲ್ಲ ಇಲ್ಲವೆನಲಿಹುದಿರವು
ಇದರ ತೆರವರಿವರಾರವನೊಬ್ಬ ಹೊರತು
ಜನ್ಮಮೃತ್ಯುಗಳೆರಡು ತುದಿನಡುವೆಯಾಡುವೀ
ಜೀವಲೀಲೆಯ ಮರ್ಮವೊರೆವರಾರರಿತು?
ಬಿಂದು ಬಹುವಾಗೊಡೆದು ಅಂಗಾಂಗವಾಗುತ್ತ
ಒಂದಾತ್ಮ ತಾನ್ನೆನ್ನುವನುಭಾವಹೊಂದಿ
ಪಂಚಭೂತಗಳೊಡನೆ ಅದು-ತಾನು ಎಂದೆನುತ
ಬೇಹರಿಸಿ ಬೇಹಾರ ತೀರೆ ತಾ ನಂದಿ;
ತನುತನುವೊಳಷ್ಟಷ್ಟು ದೇಶವನು ತಾ ತುಂಬಿ
ಕರ್ಮಗಳಿನಷ್ಟಷ್ಟು ಕಾಲವನು ತುಂಬಿ
ಮಮತೆಯೊಳಗಷ್ಟಷ್ಟು ವಿಶ್ವಾತ್ಮವನು ತುಂಬಿ
ಅಹಮೆಂದು ನೊಂದು ನಲಿದಾನಂದ ತುಂಬಿ
ಸೃಷ್ಟಿ ಮೊದಲಿಂದುವರೆಗಾಗಿಹೋದವರೆಷ್ಟು!
ಆದವರು ಹೋದವರು ಆಗುವವರವರೇ.
ಅರ್ಥಕಾಮಗಳಿಡುವ ರತಿವಿರತಿ ಛಂದಕ್ಕೆ
ಭೂತರಂಗದಿ ಜೀವ ನರ್ತಿಸುವುದರರೇ!
(೨)
ಈ ಮಹಾನಾಟ್ಯವನು ಚೋದಿಸುವ ಚಾಲಕನು
ಈ ಚಿತ್ರಗತಿಗಾನವಿನ್ಯಾಸಿ ಯಾರು?
ಇಲ್ಲಿ ಕೊಂಕಲ್ಲಿ ಋಜು ಇಲ್ಲಿ ಕಟುವಲ್ಲಿ ಮೃದು
ಅಂತು ರಸ ಕೊನೆಗಮೃತ ವಿಂತೆಸೆಪನಾರು?
ಧರ್ಮವದು ಜೀವನದ ಮರ್ಮವದು ಚೇತನರ
ಸಮುದಾಯಮಂಗಳಕೆ ಅದರಂಕೆ ರಕ್ಷೆ
ದೇಹಾಂಗದರಿವೆಲ್ಲ ಜೀವಾಣುಗಿರುವಂತೆ
ಅರಿವರಿವೊಳಿಹುದಿದರ ಹೃನ್ನಿಷ್ಠ ನಕ್ಷೆ.
ಈ ನಕ್ಷೆಯಂತಾಗೆ ಅರ್ಥಕಾಮವಿಕಾಸ
ಎಂಥ ಶುಭದುದಯವಹುದೆಲ್ಲ ಜೀವರೊಳು!
ಧರ್ಮಾರ್ಥ ಕಾಮಗಳ ಈ ಪರಸ್ಪರವಶತೆ
ದುಸ್ಸಾಧ್ಯವೀಜಗದೊಳದಕೆ ಭವದಳಲು.
ಒಂದುಸಿರು ಹಲವೊಡಲು ಒಂದರಿವು ಹಲವು ಮನ
ಒಂದೆ ಆನಂದಕ್ಕೆ ಹಲಹಲವು ಹೃದಯ
ಇಲ್ಲಳಿಯಲಲ್ಲುಳಿದು ಇಲ್ಲಿ ಮುಳುಗಲ್ಲೆದ್ದು
ಅರ್ಥಕಾಮಗಳಂಕೆಗಿಡೆ ಧರ್ಮದುದಯ.
ಹಲವರಿದ ಧಿಕ್ಕರಿಸೆ ಕೆಲವರೊಳಗುಜ್ವಲಿಸಿ
ಭೋಗಿಯೋಡಿಸೆ ನಿಷ್ಠ ಯತಿಯನಾಶ್ರಯಿಸಿ
ಹಲರತೀಂದ್ರಿಯರಾಗೆ ಕೆಲಜಿತೇಂದ್ರಿಯರಲ್ಲಿ
ತೂಕ ತಪ್ಪಿದ ಜಗವ ಸಮತೂಕ ನಿಲಿಸಿ
ಅರಿವೊಳೆಲ್ಲೋ ನಿಂತು ಶಿವವ ಸಾಧಿಸುತಿಹುದು
ಲೇಸುಕೇಡಳಿವುಳಿವ ತಕ್ಕಂತೆ ಬಳಸಿ
ಆ ಧರ್ಮಭೃದ್ವರರ ನೆನಹನರಿವೊಳು ಧರಿಸಿ
ಶಂಕೆಯೆಲ್ಲವಕಳೆವ ಶಿವಕೆ ಬಗೆ ಬೆಳಸಿ.
*****
Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...