Home / ಕವನ / ಕವಿತೆ / ಇಂದು ನಾನು ಧನ್ಯನು

ಇಂದು ನಾನು ಧನ್ಯನು


ಇಂದು ನಾನು ಧನ್ಯನು!
ನನ್ನ ತುಟಿಯೊಳುಕ್ಕಿ ಬಂದ
ಮುಗುಳುನಗೆಗೆ ಮಾರುನುಡಿ
ದೊರಕಿತಹಾ ನಿನ್ನ ಧರದಿ
ಚಿಗುರುತಿರಲು ನಗೆಯ ಕುಡಿ!

ಇಷ್ಟು ದಿನವು ನಿನ್ನ ತುಟಿಯ
ಬಿಗಿದಿದ್ದಿತು ದುಗುಡವು!
ಇಂದೇತಕೊ ಅದು ಸಡಿಲಿತು
ಚೆದರಿತೆಲ್ಲ ಮೋಡವು!

ನಮ್ಮ ನಗೆಯ ಮಿಲನವನ್ನೆ
ಮೈಯ ಬೇಟವೆನಲು ಜನರು
ನಿನ್ನ ನಗೆಯು ಬತ್ತಿತು!
“ಎದೆಯೊಳೊಲವು ತುಂಬಿದ್ದರು
ನಗಲಸಾಧ್ಯ” ಎಂಬ ಭಾವ
ನಿನ್ನ ಗಂಟಲೊತ್ತಿತು!

ನಮ್ಮ ನಡುವೆ ಈ ದುಗುಡವು
ಎಂಥ ಘೋರ ಕಂದರವನು
ಒಡ್ಡಿತು ನಾ ಬಲ್ಲೆನು!
ಇನ್ನು ನಿನ್ನ ನಗೆಯ ತೆಂಗ-
ಸಾರ ಕೈಯ್ಯ ಚಾಚಿ ಕರೆಯೆ
ಈ ಕೊನೆಯೊಳೆ ನಿಲ್ಲೆನು!

ನಿನಗೆ ನಗಲಸಾಧ್ಯವೆಂಬು-
ದನ್ನು ನಾನು ತಿಳಿದು ತಿಳಿದು
ನಿನ್ನ ನಗೆಗೆ ಕಾದೆನು!
ಸತ್ತೊಲವಿನ ಸಂಜೀವಿನಿ-
ಯಾದ ನಿನ್ನ ನಗೆಯ ಕಂಡು
ಇಂದು ನಾನು ಧನ್ಯನು!
ನನ್ನ ತುಟಿಯೊಳುಕ್ಕಿ ಬಂದ
ಮುಗುಳುನಗೆಗೆ ಮಾರುನುಡಿ
ದೊರಕಿತಹಾ ನಿನ್ನಧರದಿ
ಚಿಗುರುತಿರಲು ನಗೆಯ ಕುಡಿ!


ನಮ್ಮ ನಗೆಯ ಮಿಲನವನ್ನೆ
ಮೈಯ ಬೇಟವೆನಲು ಜನರು
ನಿನ್ನ ನಗೆಯು ಬತ್ತಿತು!
“ಎದೆಯೊಳೊಲವು ತುಂಬಿದ್ದರು
ನಗಲಸಾಧ್ಯ” ಎಂಬ ಭಾವ
ನಿನ್ನಗಂಟಲೊತ್ತಿತು!

ಓ ಓ ಓ ಈ ಜನರದೆಂಥ ಹುಂಬರು!
ಒಲವಿನುಗಮದಲ್ಲು ಇವರು
ಅಕ್ರಮ ರತಿ-ಕೇಳಿಯನ್ನು
ಅದರಿನೊಗೆವ ಭ್ರೂಣಹತ್ಯೆ-
ಎಲ್ಲವನೂ ಕಾಂಬರು!
ಓ ಓ ಓ ಈ ಜನರದೆಂಥ ಹುಂಬರು!

“ಮೈಯಿರುವುದು ನಾಮಕೊ
ನಾಮವಿಹುದು ಮೈಯ್ಯಿಗೊ”
ಎಂಬ ಶಂಕೆ ಬರುವ ತೆರದಿ
ನಾಮಂಗಳ ಬಳಿತವೇನು!

ಮಿಕ್ಕ ಕಾರ್ಯವಾವುದಕೂ
ಬಿಡುವೆ ಇಲ್ಲವೆಂಬ ತೆರದಿ
ಆಹ್ನಿಕಗಳ ಹೊಡೆತವೇನು!
ತೂತಾಗುವ ತೆರದಿ ಕಿವಿಯು
ಸೋತು ಹೋಗುವನಕ ಬಾಯಿ
ವೇದಂಗಳ ಘೋಷವೇನು?
ಮಡಿ-ಮೈಲಿಗೆ ವ್ಯಾಖ್ಯೆಯೇನು?
“ಏಕಾದಶಿಯುಪವಾಸವು
ಇಂದು ಸರಿಯೊ ನಾಳೆ ಸರಿಯೊ”
ಎಂಬ ‘ಗಹನ’ ವಿಷಯಗಳಲಿ
ತೋರುವ ಉತ್ಸಾಹವೇನು!

ತಿರೆಯ ಪಾಪಗಳನು ಮುಚ್ಚೆ
ಹಾಕುವ ತೆರೆಯೆಂತೆ ಇರುಳು
ಬರಲು ಕದ್ದು ಊರಿನಾಚೆ
ಹೊಲಗೇರಿಗೆ ತೆರಳ್ವುದೇನು!
ಅಲ್ಲಿ ಹೊಲತಿಯೊರ್ವಳೊಡನೆ
ಮಲಗಿ ಸುಖಿಪ ಮುದವದೇನು!

ದಿನವೆಲ್ಲವು ಭಗವಂತನ
ನಾಮಾಮೃತದೊಳಗೆ ಮಿಂದ
ಬಾಯಿ, ಅವಳ ಬಾಯ್ದಂಬುಲ-
ವನ್ನು ಮೆಲ್ಲುತಿರುವುದಯ್ಯೊ!
ದಿನವೆಲ್ಲವು ಯಾರ ನೆರಳು
ಸೋಕಿದರೂ ನದಿಯ ಸ್ನಾನ-
ವಾಗುತಿತ್ತೊ, ಅವಳೆದೆಗಳೆ
ಇವನ ಎದೆಯ ನಾಮಗಳನು
ಅಳಿಸುತಿಹವು! ತನ್ನ ಮಗುವೆ
ತನ್ನ ಮುಟ್ಟಗೊಡದ ಇವಗೆ
(ದಿಟವೆ ಇಂಥ ಪಾಪಿಗಳನು
ಮುಗ್ಧ ಹಸುಳೆ ಮುಟ್ಟಬಹುದೆ!)
ಅವಳ ಸನಿಹದಲ್ಲೆ ನಿದ್ದೆ!

ಎಂಥ ಪತನವಿದುವು ಗೆಳತಿ!
ಒಲವಿನ ವಿಮಲತೆಯನರಿವ-
ರೆಂತು ಈ ಮೂಢರು!
ಒಲಿದ ಎರಡು ಹೃದಯಗಳಲಿ
ಒಲಿದ ತಂದೆ ಮಕ್ಕಳಲ್ಲಿ
ಒಡಕನಯ್ಯೊ ತರುವರು!

ಓ ಓ ಓ ಈ ಜನರದೆಂಥ ಹುಂಬರು!
ಒಲಿವಿನುಗಮದಲ್ಲು ಇವರು ಏನೇನನೊ ಕಾಂಬರು!
* * *

ಅಂದೆನ್ನನು ನೀನು ಕರೆದೆ
ನಿನ್ನನೇನೊ ಕಾಡಿರೆ
ಬಿಸಿಯೆ ಕಂಬನಿಯಲಿ ನಿನ್ನ
ಕೆನ್ನೆ ಹೂವು ಬಾಡಿರೆ!

“ಓ! ಗೆಳೆಯನೆ! ಬರದಿರಿನ್ನು
ನನ್ನ ಮನೆಯ ಸನಿಹಕೆ!
ಬಂದಾಹುತಿಯಾಗದಿರು
ಜನರ ಮನದ ಶಂಕೆಗೆ!
ಬಂದು ನೆಯ್ಯ ಹೊಯ್ಯದಿರು
ಜನರ ಬಾಯ ಬೆಂಕಿಗೆ”-
ಈ ನುಡಿಗಳು ನಿನ್ನ ಹೃದಯ-
ದಾಳದಿಂದ ಬಂದುದಲ್ಲ!

(ನನ್ನ ಕಣ್ಣೆ ನುಡಿವುದೆಲ್ಲ!)
ಎಂಬುದ ನಾ ಬಲ್ಲೆನು!
ಆದರೇಕೊ ನನ್ನ ಎದೆಗೆ
ಬರೆಯನಿಟ್ಟ ತೆರದೊಳಾಯ್ತು
ನಿನ್ನ ಈ ನುಡಿಗಳು!

ನಿನ್ನ ಕಣ್ಣು ಸುರಿಸುತಿರುವ
ಕಂಬನಿಗಳ ತುಟಿಯೊಳೆ
ಹೀರಲೆಂದು ಬಗೆದೆನು!
ಬಾಡಿಹೋದ ಕೆನ್ನೆ ಹೂವ
ಮುತ್ತಮಾಲೆಯಿಂದ ಮತ್ತೆ
ಅರಳಿಸೆ ನಾ ಬಯಸಿದೆ!
ಆದರೆನ್ನನಾವುದೋ
ಶಕ್ತಿ ತಡೆದು ನಿಲಿಸಿತು!
ದುಃಖವಾರಿನಿಧಿಯ ಪಾಲ್ಗೆ
ನನ್ನನಕಟ ಸಲಿಸಿತು!

ಅಕಟ ಇನ್ನು ನಿನ್ನ ಮನೆಗೆ
ಬರದೊಲಾಯ್ತೆ ಗೆಳತಿಯೆ!
ಇನ್ನಿಲ್ಲವು ನಿನ್ನ ಕಣ್ಣ ನಿನ್ನ ನಗೆಯ ಆದರ!
ಇನ್ನು ನೀನು ಜಿಂಕೆಯಂತೆ
ಚಿಮ್ಮಿ ಬಂದು ಸನಿಹದಲ್ಲೆ
ಕುಳಿತು ಹರಟಲಾರೆಯಯ್ಯೊ!
ಇನ್ನು ನಿನ್ನ ಕೆಂದುಟಿಯನು
ಹುಸಿಯ ಮುನಿಸಿನಿಂದ ನೀನು
ತುಸು ಬಿರುಕಿಸಿ ನೋಡಲಾರೆ!

ಇನ್ನು ನಾನು ಬಂದೆನೆನುವ
ಸಡಗರದೊಳೆ ಓಡಾಡುತ
ನಲಿವ ಚೆಲುವ ಸವಿಯಲಾರೆ!

ಇನ್ನು ನಿನಗೆ ಬೇಕಾದುದ
ತಂದುಕೊಡುವ ಭಾಗ್ಯವೆಲ್ಲ
ಮಾಯವಾಯಿತಕಟ ನೀರೆ!

ಬೇಡ ಮುತ್ತು, ಬೇಡ ಬೇಟ,
ನಿನ್ನ ಮುಖವ ಕಾಂಬ ಸುಖವೆ
ನಿನ್ನ ಕಣ್ಣ ನಿನ್ನ ನಗೆಯ
ಬಲೆಗೆ ಸಿಲುಕಿ ಮೀನಿನಂತೆ
ಪರದಾಡುವ ಸುಖವದೊಂದೆ
ಸಾಕೆಂದಿರೆ ನಾನು ಗೆಳತಿ
ಜನರದನೂ ಸಹಿಸಲಿಲ್ಲ!

ಓ ಓ ಓ ಈ ಜನರದೆಂಥ ಹುಂಬರು!
ಒಲಿವಿನುಗಮದಲ್ಲು ಇವರು ಏನೇನನೊ ಕಾಂಬರು!


ಇದೆಲ್ಲ ಗೆಳತಿ ಹಳೆಯ ಕತೆಯು!
ದಿಟವು, ಬಲ್ಲೆ ವ್ಯಥೆಯ ಕಥೆಯು!
ಆದರೇಕೊ ನಿನ್ನ ಬಿಗಿದ
ಮೊಗವ ಕಂಡು ನನ್ನ ಮನವು
ಉರಿಯುತಿತ್ತು ಕೋಪದಿ!
ಇಂದದೆಲ್ಲ ಮಾಯವಾಯ್ತು
ನಿನ್ನ ನಗೆಯ ಸ್ಪರ್ಶದಿ!

ತನಗೆ ತಾನೆ ತಿಳಿಯದಂತೆ
ಮೋಡದ ಮರೆಯಿಂದಲಿಣುಕಿ
ನೋಡಿ ನಲಿನ ‘ಬೆಳ್ಳಿ’ಯಂತೆ
ದುಗುಡದ ತೆರೆಯನ್ನು ಕೊಂಚ
ಸರಿಸಿ, ಮುಗುಳುನಗೆಯು ಉಕ್ಕಿತು!
ಸತ್ತೊಲವಿನ ಸಂಜೀವಿನಿ-
ಯಾದ ಆ ನಗೆಯ ಕಂಡು
ಇಂದು ನಾನು ಧನ್ಯನು!
ನನ್ನ ತುಟಿಯೊಳುಕ್ಕಿ ಬಂದ
ಮುಗುಳುನಗೆಗೆ ಮಾರುನುಡಿ
ದೊರಕಿತಹಾ ನಿನ್ನಧರದಿ
ಚಿಗುರುತಿರಲು ನಗೆಯ ಕುಡಿ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...