ಅಂದೊಂದು ದಿನದಲ್ಲಿ,- ನಿಶಿಯ ನೀರವದಲ್ಲಿ-
ಇಂದುವಿನ ತಿಳಿಯಾದ ಬೆಳದಿಂಗಳಲ್ಲಿ-
ಒ೦ದಿಯಾನಂದವನು ಬಗೆಯ ಬೇಸರ ಕಳೆಯೆ,
ಮಂದಿರದ ಹೊರಜಗಲಿಯಲ್ಲೊರಗಿದೆ
೨
ಮೇಲೆ ನೀಲಾಕಾರವನ್ನ ದಿಟ್ಟಿಯನಟ್ಟೆ-
ಲೀಲೆಯಿಂದಲಿ ಚಂದ್ರ ಸಾಗುತಿಹನು.
ಹಲಕೆಲವು ತಾರೆಗಳು ತಮ್ಮ ಪತಿ ವಿರಹವನು,
ತಾಳಲಾರದೆ ಮೆಲ್ಲಿನಡಿಯಿಡುವುವು
೩
ಬಂಧು ಬಳಗವನೆಲ್ಲ ಬಿಟ್ಟು, ಕಾಲನಗಾಧ
ಕಂದರದಿ ಮರೆಯಾಗುತಿರುವ ನರರಂತೆ.
ಅಂದು ಕೆಲ ತಾರೆಗಳು ತಮ್ಮ ಸಹಚರರನ್ನು
ಹಿಂದುಳಿದು, ಕೆಳ ಬಿದ್ದು ಮರೆಯಾಗುತಿಹವು
೪
ನೀಲಿಮೆಯ ನಭದಲ್ಲಿ ರಜತ ಚಂದ್ರನ ಕಿರಣ-
ಮಾಲೆ ಸಾಲಿಟ್ಟೆಸೆಯೆ ತೆರೆಯ ತೆರದಲ್ಲಿ,
ಹಾಲ ಕಡಲಿನ ಪೆಂಪ ಲೀಲೆಯಿಂದೊಳಗೊ೦ಡು
ಮೇಲೆಯಾಗಸವಿಂದು ತೊಳಗುತಿಹುದು
೫
ಎತ್ತಲೂ ಪ್ರಕೃತಿಯದು ಮೌನ ರಾಜ್ಯದ ಮರೆಯೊ-
ಳೊತ್ತರದಿ ಮಲಗಿ ನಿದ್ದೆಯ ಗೈಯುತಿರಲು,
ಸುತ್ತಲಿರುತಿಹ ಬೆಡಗ ನೋಡಿಯರೆಚಣ ಸರಿಯೆ
ಎತ್ತಣಿಂದಲೊ ಬ೦ತು ನಿದ್ದೆಯಾವರಿಸಿ,
೬
ರಾತ್ರಿಯೆಲ್ಲವು ಸವೆಯೆ ಸವಿಯಾದ ಕನಸಿನಲಿ,
ಮತ್ತೆನ್ನನೆಬ್ಬಿಸಿತು ಮೈದಡವುತ-
ಹತ್ತಿರದ ಮರ-ಬಳ್ಳಿ-ಗಿಡಗಳೆಲೆಯೆಡೆಯಲ್ಲಿ
ಸುತ್ತಿ ಸುಳಿಯುತಲಿದ್ದ ತಂಗಾಳಿಯು
೭
ತಂಬೆಲರು ತನ್ನ ಸುವಿಲಾಸದಿಂದೆಸೆಯುತ್ತ,
ತುಂಬಿ ನವಶಕ್ತಿಯನು ಅಂಗಾ೦ಗದಲ್ಲಿ,
ಬೆಂಬಿಡದೆ ಮೆಯ್ಯನ್ನು ಹಾದು ಹೋಗಲು, ನವಿರು
ಬಿಂಬಿಸಿತು; ನಲವೊಲಿಯಿತೆನ್ನ ಮನಕೆ
೮
ಎಂದಿಗೂ ಬಾರದಿಹ ಹೊಸ ಹುರುಪು ಬಗೆಯೊಳಗೆ
ಬಂದು ಶಾ೦ತಿಯ ಕೊಡಲು, ಎದ್ದು ಕುಳಿತೆ.
ಮುಂದೆ ನಾ ಸುತ್ತಲೂ ಸರಿಯಿಸಲು ನೋಟವನು,
ಸುಂದರದ ದೃಶ್ಯವದು ಕಂಡಿತೆನಗೆ-
೯
ಉಷೆಯು, ಹೊಸ ಮಿರುಗು ಮೈವೆತ್ತು ರಂಜಿಸುತಿರುವ
ಹೊಸ ವಸ್ತ್ರವುಡಿಸಿಹಳು ಪ್ರಕೃತಿರತಿಗೆ.
ಮಿಸುನಿ ಬಣ್ಣವನದಕೆ ಹಚ್ಚುತಿದ್ದನು ಮೂಡು-
ದೆಸೆಯೊಳರುಣನ ಕೂಡಿ ಬರುವ ರವಿಯು
೧೦
ಉದಯಿಸುವ ನೇಸರಿಗೆ ಸ್ವಾಗತವನೀವಂತೆ,
ಉದಯ ಗಾನವನೆಲ್ಲ ವಿಹಗ ತತಿಯು
ಮುದದಿ ಮಾಡುತಲಿದ್ದುವಲ್ಲದೇ ಬಳ್ಳಿಗಳು
ಇದಿರಿನಲಿ ಹಿಡಿದಿದ್ದುವಲರುಗಳನು
೧೧
ಇಂತೆಸೆವ ನೋಟವನು ಮನದಣಿಯೆ ನೋಡುತ್ತ,
ಸಂತಸವನಾ೦ತೆದ್ದು, ಈ ತಿರೆಯನು
ಇಂತು ಕಂಗೊಳಪಂತೆ ಗೈದ ದೇವಗೆ ನಾನು
ಅಂತರಂಗದಿ ಧನ್ಯವಾದವರ್ಪಿಸಿದ್ದೆ.
*****
೧೯೩೫

















