Home / ಕವನ / ಕವಿತೆ / ಅಂದೊಂದು ದಿನದಲ್ಲಿ

ಅಂದೊಂದು ದಿನದಲ್ಲಿ

ಅಂದೊಂದು ದಿನದಲ್ಲಿ,- ನಿಶಿಯ ನೀರವದಲ್ಲಿ-
ಇಂದುವಿನ ತಿಳಿಯಾದ ಬೆಳದಿಂಗಳಲ್ಲಿ-
ಒ೦ದಿಯಾನಂದವನು ಬಗೆಯ ಬೇಸರ ಕಳೆಯೆ,
ಮಂದಿರದ ಹೊರಜಗಲಿಯಲ್ಲೊರಗಿದೆ


ಮೇಲೆ ನೀಲಾಕಾರವನ್ನ ದಿಟ್ಟಿಯನಟ್ಟೆ-
ಲೀಲೆಯಿಂದಲಿ ಚಂದ್ರ ಸಾಗುತಿಹನು.
ಹಲಕೆಲವು ತಾರೆಗಳು ತಮ್ಮ ಪತಿ ವಿರಹವನು,
ತಾಳಲಾರದೆ ಮೆಲ್ಲಿನಡಿಯಿಡುವುವು


ಬಂಧು ಬಳಗವನೆಲ್ಲ ಬಿಟ್ಟು, ಕಾಲನಗಾಧ
ಕಂದರದಿ ಮರೆಯಾಗುತಿರುವ ನರರಂತೆ.
ಅಂದು ಕೆಲ ತಾರೆಗಳು ತಮ್ಮ ಸಹಚರರನ್ನು
ಹಿಂದುಳಿದು, ಕೆಳ ಬಿದ್ದು ಮರೆಯಾಗುತಿಹವು


ನೀಲಿಮೆಯ ನಭದಲ್ಲಿ ರಜತ ಚಂದ್ರನ ಕಿರಣ-
ಮಾಲೆ ಸಾಲಿಟ್ಟೆಸೆಯೆ ತೆರೆಯ ತೆರದಲ್ಲಿ,
ಹಾಲ ಕಡಲಿನ ಪೆಂಪ ಲೀಲೆಯಿಂದೊಳಗೊ೦ಡು
ಮೇಲೆಯಾಗಸವಿಂದು ತೊಳಗುತಿಹುದು


ಎತ್ತಲೂ ಪ್ರಕೃತಿಯದು ಮೌನ ರಾಜ್ಯದ ಮರೆಯೊ-
ಳೊತ್ತರದಿ ಮಲಗಿ ನಿದ್ದೆಯ ಗೈಯುತಿರಲು,
ಸುತ್ತಲಿರುತಿಹ ಬೆಡಗ ನೋಡಿಯರೆಚಣ ಸರಿಯೆ
ಎತ್ತಣಿಂದಲೊ ಬ೦ತು ನಿದ್ದೆಯಾವರಿಸಿ,


ರಾತ್ರಿಯೆಲ್ಲವು ಸವೆಯೆ ಸವಿಯಾದ ಕನಸಿನಲಿ,
ಮತ್ತೆನ್ನನೆಬ್ಬಿಸಿತು ಮೈದಡವುತ-
ಹತ್ತಿರದ ಮರ-ಬಳ್ಳಿ-ಗಿಡಗಳೆಲೆಯೆಡೆಯಲ್ಲಿ
ಸುತ್ತಿ ಸುಳಿಯುತಲಿದ್ದ ತಂಗಾಳಿಯು


ತಂಬೆಲರು ತನ್ನ ಸುವಿಲಾಸದಿಂದೆಸೆಯುತ್ತ,
ತುಂಬಿ ನವಶಕ್ತಿಯನು ಅಂಗಾ೦ಗದಲ್ಲಿ,
ಬೆಂಬಿಡದೆ ಮೆಯ್ಯನ್ನು ಹಾದು ಹೋಗಲು, ನವಿರು
ಬಿಂಬಿಸಿತು; ನಲವೊಲಿಯಿತೆನ್ನ ಮನಕೆ


ಎಂದಿಗೂ ಬಾರದಿಹ ಹೊಸ ಹುರುಪು ಬಗೆಯೊಳಗೆ
ಬಂದು ಶಾ೦ತಿಯ ಕೊಡಲು, ಎದ್ದು ಕುಳಿತೆ.
ಮುಂದೆ ನಾ ಸುತ್ತಲೂ ಸರಿಯಿಸಲು ನೋಟವನು,
ಸುಂದರದ ದೃಶ್ಯವದು ಕಂಡಿತೆನಗೆ-


ಉಷೆಯು, ಹೊಸ ಮಿರುಗು ಮೈವೆತ್ತು ರಂಜಿಸುತಿರುವ
ಹೊಸ ವಸ್ತ್ರವುಡಿಸಿಹಳು ಪ್ರಕೃತಿರತಿಗೆ.
ಮಿಸುನಿ ಬಣ್ಣವನದಕೆ ಹಚ್ಚುತಿದ್ದನು ಮೂಡು-
ದೆಸೆಯೊಳರುಣನ ಕೂಡಿ ಬರುವ ರವಿಯು

೧೦
ಉದಯಿಸುವ ನೇಸರಿಗೆ ಸ್ವಾಗತವನೀವಂತೆ,
ಉದಯ ಗಾನವನೆಲ್ಲ ವಿಹಗ ತತಿಯು
ಮುದದಿ ಮಾಡುತಲಿದ್ದುವಲ್ಲದೇ ಬಳ್ಳಿಗಳು
ಇದಿರಿನಲಿ ಹಿಡಿದಿದ್ದುವಲರುಗಳನು

೧೧
ಇಂತೆಸೆವ ನೋಟವನು ಮನದಣಿಯೆ ನೋಡುತ್ತ,
ಸಂತಸವನಾ೦ತೆದ್ದು, ಈ ತಿರೆಯನು
ಇಂತು ಕಂಗೊಳಪಂತೆ ಗೈದ ದೇವಗೆ ನಾನು
ಅಂತರಂಗದಿ ಧನ್ಯವಾದವರ್ಪಿಸಿದ್ದೆ.
*****
೧೯೩೫

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...