Home / ಕವನ / ಕವಿತೆ / ಅಂದೊಂದು ದಿನದಲ್ಲಿ

ಅಂದೊಂದು ದಿನದಲ್ಲಿ

ಅಂದೊಂದು ದಿನದಲ್ಲಿ,- ನಿಶಿಯ ನೀರವದಲ್ಲಿ-
ಇಂದುವಿನ ತಿಳಿಯಾದ ಬೆಳದಿಂಗಳಲ್ಲಿ-
ಒ೦ದಿಯಾನಂದವನು ಬಗೆಯ ಬೇಸರ ಕಳೆಯೆ,
ಮಂದಿರದ ಹೊರಜಗಲಿಯಲ್ಲೊರಗಿದೆ


ಮೇಲೆ ನೀಲಾಕಾರವನ್ನ ದಿಟ್ಟಿಯನಟ್ಟೆ-
ಲೀಲೆಯಿಂದಲಿ ಚಂದ್ರ ಸಾಗುತಿಹನು.
ಹಲಕೆಲವು ತಾರೆಗಳು ತಮ್ಮ ಪತಿ ವಿರಹವನು,
ತಾಳಲಾರದೆ ಮೆಲ್ಲಿನಡಿಯಿಡುವುವು


ಬಂಧು ಬಳಗವನೆಲ್ಲ ಬಿಟ್ಟು, ಕಾಲನಗಾಧ
ಕಂದರದಿ ಮರೆಯಾಗುತಿರುವ ನರರಂತೆ.
ಅಂದು ಕೆಲ ತಾರೆಗಳು ತಮ್ಮ ಸಹಚರರನ್ನು
ಹಿಂದುಳಿದು, ಕೆಳ ಬಿದ್ದು ಮರೆಯಾಗುತಿಹವು


ನೀಲಿಮೆಯ ನಭದಲ್ಲಿ ರಜತ ಚಂದ್ರನ ಕಿರಣ-
ಮಾಲೆ ಸಾಲಿಟ್ಟೆಸೆಯೆ ತೆರೆಯ ತೆರದಲ್ಲಿ,
ಹಾಲ ಕಡಲಿನ ಪೆಂಪ ಲೀಲೆಯಿಂದೊಳಗೊ೦ಡು
ಮೇಲೆಯಾಗಸವಿಂದು ತೊಳಗುತಿಹುದು


ಎತ್ತಲೂ ಪ್ರಕೃತಿಯದು ಮೌನ ರಾಜ್ಯದ ಮರೆಯೊ-
ಳೊತ್ತರದಿ ಮಲಗಿ ನಿದ್ದೆಯ ಗೈಯುತಿರಲು,
ಸುತ್ತಲಿರುತಿಹ ಬೆಡಗ ನೋಡಿಯರೆಚಣ ಸರಿಯೆ
ಎತ್ತಣಿಂದಲೊ ಬ೦ತು ನಿದ್ದೆಯಾವರಿಸಿ,


ರಾತ್ರಿಯೆಲ್ಲವು ಸವೆಯೆ ಸವಿಯಾದ ಕನಸಿನಲಿ,
ಮತ್ತೆನ್ನನೆಬ್ಬಿಸಿತು ಮೈದಡವುತ-
ಹತ್ತಿರದ ಮರ-ಬಳ್ಳಿ-ಗಿಡಗಳೆಲೆಯೆಡೆಯಲ್ಲಿ
ಸುತ್ತಿ ಸುಳಿಯುತಲಿದ್ದ ತಂಗಾಳಿಯು


ತಂಬೆಲರು ತನ್ನ ಸುವಿಲಾಸದಿಂದೆಸೆಯುತ್ತ,
ತುಂಬಿ ನವಶಕ್ತಿಯನು ಅಂಗಾ೦ಗದಲ್ಲಿ,
ಬೆಂಬಿಡದೆ ಮೆಯ್ಯನ್ನು ಹಾದು ಹೋಗಲು, ನವಿರು
ಬಿಂಬಿಸಿತು; ನಲವೊಲಿಯಿತೆನ್ನ ಮನಕೆ


ಎಂದಿಗೂ ಬಾರದಿಹ ಹೊಸ ಹುರುಪು ಬಗೆಯೊಳಗೆ
ಬಂದು ಶಾ೦ತಿಯ ಕೊಡಲು, ಎದ್ದು ಕುಳಿತೆ.
ಮುಂದೆ ನಾ ಸುತ್ತಲೂ ಸರಿಯಿಸಲು ನೋಟವನು,
ಸುಂದರದ ದೃಶ್ಯವದು ಕಂಡಿತೆನಗೆ-


ಉಷೆಯು, ಹೊಸ ಮಿರುಗು ಮೈವೆತ್ತು ರಂಜಿಸುತಿರುವ
ಹೊಸ ವಸ್ತ್ರವುಡಿಸಿಹಳು ಪ್ರಕೃತಿರತಿಗೆ.
ಮಿಸುನಿ ಬಣ್ಣವನದಕೆ ಹಚ್ಚುತಿದ್ದನು ಮೂಡು-
ದೆಸೆಯೊಳರುಣನ ಕೂಡಿ ಬರುವ ರವಿಯು

೧೦
ಉದಯಿಸುವ ನೇಸರಿಗೆ ಸ್ವಾಗತವನೀವಂತೆ,
ಉದಯ ಗಾನವನೆಲ್ಲ ವಿಹಗ ತತಿಯು
ಮುದದಿ ಮಾಡುತಲಿದ್ದುವಲ್ಲದೇ ಬಳ್ಳಿಗಳು
ಇದಿರಿನಲಿ ಹಿಡಿದಿದ್ದುವಲರುಗಳನು

೧೧
ಇಂತೆಸೆವ ನೋಟವನು ಮನದಣಿಯೆ ನೋಡುತ್ತ,
ಸಂತಸವನಾ೦ತೆದ್ದು, ಈ ತಿರೆಯನು
ಇಂತು ಕಂಗೊಳಪಂತೆ ಗೈದ ದೇವಗೆ ನಾನು
ಅಂತರಂಗದಿ ಧನ್ಯವಾದವರ್ಪಿಸಿದ್ದೆ.
*****
೧೯೩೫

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...