Home / ಕವನ / ಅನುವಾದ / ದುಃಖಸೇತು

ದುಃಖಸೇತು

ಅನಾಥೆ ಇವಳಿನ್ನೊಬ್ಬ
ಳೀ ಜನ್ಮರೋಸಿ,
ವೇದೆಯನು ತಾಳದೆಯೆ
ಮುಳುಗಿದಳು ಹೊಳೆಗೆ.
ಮೆಲ್ಲಗಿವಳನು ಮುಟ್ಟು,
ಮರುಗಿ ಹಿಡಿದೆತ್ತು,
ಏನು ಕೋಮಲಕಾಯ!
ಹೊಳಪು ಹೊಸಪ್ರಾಯ
ನೋಡು, ಮೈಯೊಳಗುಡಿಗೆ
ತೊಯ್ದು ಹತ್ತಿಹುದು:
ತೋಡಿ, ತೊರೆನೊರೆಯಾಗಿ
ಹೊಳೆ ಬಸಿಯುತಿಹುದು.
ಎದೆಗರಗು, ಬಾ, ಎತ್ತು,
ಮಾಕರಿಸದೊಲಿದು.
ದುಡುಕಿ, ಕಟ್ಟನು ಮೀರಿ,
ಕೆಟ್ಟವಳು ಇವಳು,
ತಾನು ಮಾಡಿದ ಕರ್ಮ
ತನ್ನ ಬೆನ್ನಲಿ ಬಂದು
ಸುಟ್ಟವಳು ಇವಳು;
ಎನುತ ದೋಷವ ಬೆದಕಿ
ಗದರದಿರು ನೀನು.
ಅವಳ ಪಾಪಗಳೇನೊ,
ಹೊಲ್ಲನಡೆಯೇನೊ ,
ಅದರೆಣಿಕೆಗಿದೆ ಹೊತ್ತು?
ನಾವೆ ಜರೆವವರು?
ಜವರಾಯ ನುಂಗಿದೀ
ಹೆಣ್ಣು ಮಗುವಿನಲಿ
ಹೊರೆದ ಕಲ್ಮಷ ತೊಳೆದು,
ಈಗ ತಾನುಳಿದಿಹುದು,
ಚೆಲುವಾದ, ನಿರ್ಮಲದ
ಹೆಣ್ಣುತನವೊಂದು!
ಏನು ಕರೆಗಳೆ ಇರಲಿ,
ಹೆಣ್ಣು ಹುಟ್ಟಹುದು.
ಒರಸು ಆ ತುಟಿಗಳನು,
ಕೆಸರೊಸರುತಿಹುದು.
ಕಟ್ಟು ಕೂಡಿಸಿ ಕುರುಳ,
ಕರಿಯ ಸೊಂಪಿನ ಕುರುಳ,
ಅದ್ದಿ ಕೆದರಿಹುದು.
ಆರಿವಳು? ಮನೆಯೆಲ್ಲಿ?
ಬಲ್ಲವರು ಯಾರು?
ಇವಳ ತಂದೆಯದಾರು ?
ಇವಳ ತಾಯಿಯದಾರು?
ಅಕ್ಕತಂಗಿಯರಿಹರೆ?
ಅಣ್ಣತಮ್ಮದಿರು?
ಇನ್ನು ಅಕ್ಕರೆಯಾತ
ಇನ್ನು ಹತ್ತಿರದಾತ
ಮತ್ತೊಬ್ಬನಿಹನೊ?
ನಿರಿಹಿಡಿದು, ನಡುವೇರಿ,
ತೊದಲುಮಾತನು ಬೀರಿ,
ಕೊರಗ ನಗಿಸಲು ಬಲ್ಲ
ಮಗುವಿಲ್ಲವೇನೋ?
ಆಹ, ಎಲ್ಲಡಗಿತೋ
ಆರ್ಯಧರ್ಮದ ಕರುಣ,
ಆರ್ಯಜನಗಳ ಮರುಕ,
ಉರಿಯುವನೆ ಬಲ್ಲ!
ಅಯ್ಯೋ, ಏನನ್ಯಾಯ,
ತುಂಬಿದೀ ಊರಲ್ಲಿ,
ಮನೆ ಇವಳಿಗಿಲ್ಲ,
ತುಂಬಿದೀ ಜನದಲ್ಲಿ
ನೆರೆ ಇವಳಿಗಿಲ್ಲ.
ಅನಾಥೆ ಹಾ, ದಿಕ್ಕಿಲ್ಲ,
ಮರಣವೇ ಶರಣು.
ಹೆತ್ತವರ ಪ್ರೇಮವೋ,
ಸೋದರರ ಪ್ರೇಮವೋ,
ಕೂಡಿದನ ಪ್ರೇಮವೋ,
ಮಕ್ಕಳಲ್ಲಿ ಪ್ರೇಮವೋ,
ಯಾವುದೂ ಹಿಡಿಯದೆಯೆ
ತಡೆಯದೆಯೆ ಹೋಯ್ತೆ?
ನಿಷ್ಕರುಣರಲಿ ಬೆಂದು,
ಪ್ರೇಮಸಾಗರದಮೃತ
ಬಯಲುದೊರೆಯಾಯ್ತೆ?
ದೀನರಕ್ಷಕ ಮೊರೆಯ
ಕೇಳಿ ಕಾಪಾಡುವುದು
ತನಗೆ ಹುಸಿಯಾಯ್ತೆ?
ಏನು ಬಂತೋ ದುಃಖ,
ಏನು ಬಂತೋ ರೋಷ,
ಕ್ರೂರಮನಸನು ಮಾಡಿ
ಬೀರಿದಳು ಬದುಕು!
ಊರ ಮನೆಬೆಳಕುಗಳು
ದೂರ ಸರಿಯುತ್ತ,
ಕತ್ತಲೆಯ ಹೊಳೆ ಹರಿದು
ಹತ್ತಿರಕೆ ಬರುತ,
ಚಳಿಗಾಲ ಸೋಕಿದರೆ
ಬೆಚ್ಚಿ ನಡುಗುವಳು,
ಬೆಚ್ಚಿದಳೆ, ನಡುಗಿದಳೆ,
ಹೆದರಿದಳೆ ಹೊಳೆಗೆ?
ಹುಚ್ಚು ಹಿಡಿಸಿದ ಹಾಳು
ಬಾಳ ತೆಗೆದೊಗೆದು,
ಏನಿದೆಯೊ ಅರಿಯದಿಹ
ಸಾವ ಕೆಳೆಬಗೆದು,
ಎಲ್ಲಾದರೂ ಸರಿಯೆ,
ಎಲ್ಲಾದರೂ ಸರಿಯೆ,
ಈ ಲೋಕ ಬೇಡೆಂದು
ಹಾರಿದಳು ನೆಗೆದು.
ಹಾರಿದಳು, ಮುಳುಗಿದಳು,
ತೇಲಿದಳು, ಕೊಚ್ಚಿದಳು,
ಕೊರೆವ ಹೊಳೆಯೊಳಗೆ,
ಎಲವೊ ಕಾಮುಕ, ಕಟುಕ,
ಇಲ್ಲಿ ಬಾ, ನೋಡು ಬಾ
ಎಲ್ಲಿ ಬೆಚ್ಚಗೆ ಮಲಗಿ
ಸಲ್ಲಾಪಮಾಡುತಿಹೆ.
ಈಗ ಬಾ, ನೋಡು ಬಾ,
ಇವಳೊಡನೆ ಮುಳುಗು ಬಾ,
ಮುಳುಗು ಬಾ, ಪಾಪಿ!
ಮೆಲ್ಲಗಿವಳನು ಮುಟ್ಟು,
ಮರುಗಿ ಹಿಡಿದೆತ್ತು.
ಏನು ಕೋಮಲಕಾಯ!
ಹೊಳಪು ಹೊಸಪ್ರಾಯ!
ಕೈಕಾಲುಗಳ ಸವರಿ
ಮೃದುವಾಗಿ ಮಡಿಸು;
ಬಿರುಗಣ್ಣ ನೋಟವನು
ರೆಪ್ಪೆಯಲಿ ಕವಿಸು;-
ಜರೆಯುವರ, ಹಳಿಯುವರ,
ಕೊರೆಯುವರ, ತುಳಿಯುವರ,
ಕಿವಿ ಕೇಳಿ ಕೇಳಿ,
ಹಲ್ಲುಮುಡಿಯನು ಕಚ್ಚಿ
ಕಲ್ಲುಮನಸಾದಾಗ
ನೆಟ್ಟು ದೀ ನೋಟ!
ಮುಂದ ಬಲ್ಲವರಾರು?
ಇಂದಾಯ್ತು ಶಾಂತಿ.
ದೇವ ಮಾಡುವುದಿರಲಿ,
ನಾವು ಮಾಡುವ ಹಿಂಸೆ,
ಅದೆ ನರಕಹಿಂಸೆ!
ದುಃಖಿಗಳ, ಪಾಪಿಗಳ
ನಾವು ಧಿಕ್ಕರಿಸುವೆವು
ದೂರ ಅಟ್ಟುವೆವು.
ಅಟ್ಟನಾ ರೀತಿಯಲಿ
ತಂದೆ, ರಕ್ಷಕನು.
ದೈನ್ಯದಲಿ, ಮೌನದಲಿ
ತನ್ನ ಪಾಪವನೊಪ್ಪಿ
ಮರೆಹೊಗುವನಾಥೆಯನು
ಎದೆಯಲ್ಲಿ ಕೈಮುಗಿಸಿ
ಅವನ ಬಳಿ ಕಳುಹು.
*****
HOOD (1799 – 1845): Bridge of sighs
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...