Home / ಕವನ / ಅನುವಾದ / ದುಃಖಸೇತು

ದುಃಖಸೇತು

ಅನಾಥೆ ಇವಳಿನ್ನೊಬ್ಬ
ಳೀ ಜನ್ಮರೋಸಿ,
ವೇದೆಯನು ತಾಳದೆಯೆ
ಮುಳುಗಿದಳು ಹೊಳೆಗೆ.
ಮೆಲ್ಲಗಿವಳನು ಮುಟ್ಟು,
ಮರುಗಿ ಹಿಡಿದೆತ್ತು,
ಏನು ಕೋಮಲಕಾಯ!
ಹೊಳಪು ಹೊಸಪ್ರಾಯ
ನೋಡು, ಮೈಯೊಳಗುಡಿಗೆ
ತೊಯ್ದು ಹತ್ತಿಹುದು:
ತೋಡಿ, ತೊರೆನೊರೆಯಾಗಿ
ಹೊಳೆ ಬಸಿಯುತಿಹುದು.
ಎದೆಗರಗು, ಬಾ, ಎತ್ತು,
ಮಾಕರಿಸದೊಲಿದು.
ದುಡುಕಿ, ಕಟ್ಟನು ಮೀರಿ,
ಕೆಟ್ಟವಳು ಇವಳು,
ತಾನು ಮಾಡಿದ ಕರ್ಮ
ತನ್ನ ಬೆನ್ನಲಿ ಬಂದು
ಸುಟ್ಟವಳು ಇವಳು;
ಎನುತ ದೋಷವ ಬೆದಕಿ
ಗದರದಿರು ನೀನು.
ಅವಳ ಪಾಪಗಳೇನೊ,
ಹೊಲ್ಲನಡೆಯೇನೊ ,
ಅದರೆಣಿಕೆಗಿದೆ ಹೊತ್ತು?
ನಾವೆ ಜರೆವವರು?
ಜವರಾಯ ನುಂಗಿದೀ
ಹೆಣ್ಣು ಮಗುವಿನಲಿ
ಹೊರೆದ ಕಲ್ಮಷ ತೊಳೆದು,
ಈಗ ತಾನುಳಿದಿಹುದು,
ಚೆಲುವಾದ, ನಿರ್ಮಲದ
ಹೆಣ್ಣುತನವೊಂದು!
ಏನು ಕರೆಗಳೆ ಇರಲಿ,
ಹೆಣ್ಣು ಹುಟ್ಟಹುದು.
ಒರಸು ಆ ತುಟಿಗಳನು,
ಕೆಸರೊಸರುತಿಹುದು.
ಕಟ್ಟು ಕೂಡಿಸಿ ಕುರುಳ,
ಕರಿಯ ಸೊಂಪಿನ ಕುರುಳ,
ಅದ್ದಿ ಕೆದರಿಹುದು.
ಆರಿವಳು? ಮನೆಯೆಲ್ಲಿ?
ಬಲ್ಲವರು ಯಾರು?
ಇವಳ ತಂದೆಯದಾರು ?
ಇವಳ ತಾಯಿಯದಾರು?
ಅಕ್ಕತಂಗಿಯರಿಹರೆ?
ಅಣ್ಣತಮ್ಮದಿರು?
ಇನ್ನು ಅಕ್ಕರೆಯಾತ
ಇನ್ನು ಹತ್ತಿರದಾತ
ಮತ್ತೊಬ್ಬನಿಹನೊ?
ನಿರಿಹಿಡಿದು, ನಡುವೇರಿ,
ತೊದಲುಮಾತನು ಬೀರಿ,
ಕೊರಗ ನಗಿಸಲು ಬಲ್ಲ
ಮಗುವಿಲ್ಲವೇನೋ?
ಆಹ, ಎಲ್ಲಡಗಿತೋ
ಆರ್ಯಧರ್ಮದ ಕರುಣ,
ಆರ್ಯಜನಗಳ ಮರುಕ,
ಉರಿಯುವನೆ ಬಲ್ಲ!
ಅಯ್ಯೋ, ಏನನ್ಯಾಯ,
ತುಂಬಿದೀ ಊರಲ್ಲಿ,
ಮನೆ ಇವಳಿಗಿಲ್ಲ,
ತುಂಬಿದೀ ಜನದಲ್ಲಿ
ನೆರೆ ಇವಳಿಗಿಲ್ಲ.
ಅನಾಥೆ ಹಾ, ದಿಕ್ಕಿಲ್ಲ,
ಮರಣವೇ ಶರಣು.
ಹೆತ್ತವರ ಪ್ರೇಮವೋ,
ಸೋದರರ ಪ್ರೇಮವೋ,
ಕೂಡಿದನ ಪ್ರೇಮವೋ,
ಮಕ್ಕಳಲ್ಲಿ ಪ್ರೇಮವೋ,
ಯಾವುದೂ ಹಿಡಿಯದೆಯೆ
ತಡೆಯದೆಯೆ ಹೋಯ್ತೆ?
ನಿಷ್ಕರುಣರಲಿ ಬೆಂದು,
ಪ್ರೇಮಸಾಗರದಮೃತ
ಬಯಲುದೊರೆಯಾಯ್ತೆ?
ದೀನರಕ್ಷಕ ಮೊರೆಯ
ಕೇಳಿ ಕಾಪಾಡುವುದು
ತನಗೆ ಹುಸಿಯಾಯ್ತೆ?
ಏನು ಬಂತೋ ದುಃಖ,
ಏನು ಬಂತೋ ರೋಷ,
ಕ್ರೂರಮನಸನು ಮಾಡಿ
ಬೀರಿದಳು ಬದುಕು!
ಊರ ಮನೆಬೆಳಕುಗಳು
ದೂರ ಸರಿಯುತ್ತ,
ಕತ್ತಲೆಯ ಹೊಳೆ ಹರಿದು
ಹತ್ತಿರಕೆ ಬರುತ,
ಚಳಿಗಾಲ ಸೋಕಿದರೆ
ಬೆಚ್ಚಿ ನಡುಗುವಳು,
ಬೆಚ್ಚಿದಳೆ, ನಡುಗಿದಳೆ,
ಹೆದರಿದಳೆ ಹೊಳೆಗೆ?
ಹುಚ್ಚು ಹಿಡಿಸಿದ ಹಾಳು
ಬಾಳ ತೆಗೆದೊಗೆದು,
ಏನಿದೆಯೊ ಅರಿಯದಿಹ
ಸಾವ ಕೆಳೆಬಗೆದು,
ಎಲ್ಲಾದರೂ ಸರಿಯೆ,
ಎಲ್ಲಾದರೂ ಸರಿಯೆ,
ಈ ಲೋಕ ಬೇಡೆಂದು
ಹಾರಿದಳು ನೆಗೆದು.
ಹಾರಿದಳು, ಮುಳುಗಿದಳು,
ತೇಲಿದಳು, ಕೊಚ್ಚಿದಳು,
ಕೊರೆವ ಹೊಳೆಯೊಳಗೆ,
ಎಲವೊ ಕಾಮುಕ, ಕಟುಕ,
ಇಲ್ಲಿ ಬಾ, ನೋಡು ಬಾ
ಎಲ್ಲಿ ಬೆಚ್ಚಗೆ ಮಲಗಿ
ಸಲ್ಲಾಪಮಾಡುತಿಹೆ.
ಈಗ ಬಾ, ನೋಡು ಬಾ,
ಇವಳೊಡನೆ ಮುಳುಗು ಬಾ,
ಮುಳುಗು ಬಾ, ಪಾಪಿ!
ಮೆಲ್ಲಗಿವಳನು ಮುಟ್ಟು,
ಮರುಗಿ ಹಿಡಿದೆತ್ತು.
ಏನು ಕೋಮಲಕಾಯ!
ಹೊಳಪು ಹೊಸಪ್ರಾಯ!
ಕೈಕಾಲುಗಳ ಸವರಿ
ಮೃದುವಾಗಿ ಮಡಿಸು;
ಬಿರುಗಣ್ಣ ನೋಟವನು
ರೆಪ್ಪೆಯಲಿ ಕವಿಸು;-
ಜರೆಯುವರ, ಹಳಿಯುವರ,
ಕೊರೆಯುವರ, ತುಳಿಯುವರ,
ಕಿವಿ ಕೇಳಿ ಕೇಳಿ,
ಹಲ್ಲುಮುಡಿಯನು ಕಚ್ಚಿ
ಕಲ್ಲುಮನಸಾದಾಗ
ನೆಟ್ಟು ದೀ ನೋಟ!
ಮುಂದ ಬಲ್ಲವರಾರು?
ಇಂದಾಯ್ತು ಶಾಂತಿ.
ದೇವ ಮಾಡುವುದಿರಲಿ,
ನಾವು ಮಾಡುವ ಹಿಂಸೆ,
ಅದೆ ನರಕಹಿಂಸೆ!
ದುಃಖಿಗಳ, ಪಾಪಿಗಳ
ನಾವು ಧಿಕ್ಕರಿಸುವೆವು
ದೂರ ಅಟ್ಟುವೆವು.
ಅಟ್ಟನಾ ರೀತಿಯಲಿ
ತಂದೆ, ರಕ್ಷಕನು.
ದೈನ್ಯದಲಿ, ಮೌನದಲಿ
ತನ್ನ ಪಾಪವನೊಪ್ಪಿ
ಮರೆಹೊಗುವನಾಥೆಯನು
ಎದೆಯಲ್ಲಿ ಕೈಮುಗಿಸಿ
ಅವನ ಬಳಿ ಕಳುಹು.
*****
HOOD (1799 – 1845): Bridge of sighs
Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...