Home / ಕವನ / ಕವಿತೆ / ವಿದ್ಯಾರಣ್ಯ

ವಿದ್ಯಾರಣ್ಯ

ಪರಶಿವನು ವರತಪವನೆಸಗಿದನು ವನದಲ್ಲಿ
ಗಿರಿಕನ್ಯೆ ಪಾರ್ವತಿಯ ಶುಶ್ರೂಷೆಯಲ್ಲಿ!
ಚಿರಕಾಲ ಸಾಗದೆಯೆ ಮನಸೋತ ವನಿತೆಯಲಿ
ಜಗವ ಮುಳುಗಿಸಿದ ಬೆಂಕಿ ಬೇಗುದಿಯಲ್ಲಿ ೧

ಯತಿಯೆ! ವಿದ್ಯಾರಣ್ಯ! ಕುಳಿತಿರುವೆ ತಪದಲ್ಲಿ
ತರುಣಿಮಣಿ ತುಂಗಭದ್ರೆಯ ಸೇವೆಯಲ್ಲಿ!
ಮನವಿನಿತು ಚಲಿಸದೆಯೆ ವರಯೋಗ ಮೌನದಲಿ
ಸಾಧಿಸಲು ಮುಕ್ತಿಯನು ಸ್ವಾತಂತ್ರ್ಯದಲ್ಲಿ ೨

ತುಂಗಭದ್ರೆಯ ತೆರೆಯ ಮಂಜುಳದ ನಾದದಲಿ
ಗಿಳಿವಿಂಡಿನಾ ಚಿಲಿಮಿಲಿಯ ಮೆಲ್ಲುಲಿಯಲಿ
ಕೋಗಿಲೆಯ ಕಲಕಂಠ ಮಧುರತರ ಗಾನದಲಿ
ವೈರಾಗ್ಯ ಸಾಧನೆಯ ಹಿಡಿದೆ ಯೋಗದಲ್ಲಿ ೩

ನದಿಯ ಕಲರವ ನಿನ್ನ ಜಪಮಾಲೆ ಮಂತ್ರಗಳು
ಅರಗಿಣಿಯ ಸವಿನುಡಿಯೆ ವೇದಘೋಷಗಳು
ಕೋಗಿಲೆಯ ಸವಿಗಾನ ಮೊರೆಯುತಿಹ ಓಂಕಾರ
ಸಂನ್ಯಾಸಿ ನಿನ್ನ ಮನವೇ ನಿರ್ವಿಕಾರ! ೪

ಹಿಂದಲ್ಲಿ ಪರಶಿವನು ತಪಗೆಟ್ಟ ಕತದಿಂದ
ಬಂದಿಹರೊ! ವಿದ್ಯಾರಣ್ಯ ರೂಪದಲಿಂದು!
ತಪಗೆಯ್ದು ಪರಿಪೂರ್ಣ ಸಿದ್ಧಿಯನು ಪಡೆಯಲೆಂದು
ಕರ್ಣಾಟದೇಕೀಕರಣವೇ ಗುರಿಯೆಂದು. ೫

ಪಂಪಾಸರಸಿನಲಿ ಈಜುತಿರುವಾ ಕಲಹಂಸ
ಪದಗತಿಯ ವೈಖರಿಯ ನರಿಯೆ ಪರಮಹಂಸ!
ನಿನ್ನ ವೈರಾಗ್ಯ ಗುರಿಯೇನೊ! ಯತಿರಾಜಹಂಸ!
ರಾಜಯೋಗವ ಹಿಡಿದೆ ಯತಿಕುಲೋತ್ತಂಸ! ೬

ಹುಕ್ಕ ಬಕ್ಕರ ಹೂಡಿದೆಯ ರಾಜ್ಯರಥದಲ್ಲಿ!
ಸಂನ್ಯಾಸಿ ಸಾರಥಿಯು ನೀನೆ ಜಗದಲ್ಲಿ!
ಒಕ್ಕಲಿಕ್ಕಿದೆ ಧರ್ಮದ್ರೋಹಿಗಳ ಛಲದಲ್ಲಿ
ಕನ್ನಡದ ಸಾಮ್ರಾಜ್ಯ ದೇವಿಯಡಿಯಲ್ಲಿ ೭

ರಾಜಯೋಗವು ಭಕ್ತಿಯೋಗವು ಕರ್ಮಯೋಗವು
ಕೂಡಿದಾ ಬ್ರಹ್ಮತೇಜೋಮೂರ್ತಿ ನಮಿಪೆ!
ಹರಸು ಕನ್ನಡನಾಡಿನೇಳ್ಗೆಯನು ಯತಿವರನೆ!
ಶಿರಬಾಗಿ ನಮಿಸುವೆನು ವೈರಾಗ್ಯಮೂರ್ತಿಯೇ ೮
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...