Home / ಕವನ / ಕವಿತೆ / ಮಧುವನ

ಮಧುವನ

ಚಾಮುಂಡಿಗಿರಿಯ ತಪ್ಪಲಲಿ ಮೈಸೂರು ಪುರ-
ನಂಜನಗುಡಿಯ ರಾಜಮಾರ್ಗದಲಿ
ರಂಜಿಪುದು ತಾರುಣ್ಯ ತುಂಬಿರುವ ಕನ್ನೆವೊಲು
ಮೈಸೂರಿನುದ್ಯಾನ ಮಧುವನವು ೧

ರಂಗುರಂಗಿನ ಹೂಗಳಾಭರಣ ಒಪ್ಪಿರಲು
ಕಂಗಳನು ಮೋಹಿಸುವ ಹಸುರುಡುಗೆಯ
ಸಿಂಗರಿಸಿ ನಿಂತಿರುವ ಅಂಗನೆಯ ತೆರದಲ್ಲಿ
ಕಾಂಬುವುದು ಸೊಗವಡೆದ ಮಧುವನವು ೨

ಕುಲವನಿತೆ ಸೂಸುತಿಹ ಎಳೆನಗೆಯ ರೀತಿಯಲಿ
ಅರಳಿರಲು ಕೊಳದಲ್ಲಿ ತಾವರೆಗಳು
ಬಂಡುಂಡು ಝೇಂಕರಿಪ ಮರಿದುಂಬಿ ತಂಡಗಳು
ಹಾಡುವುವು ಮಧುರ ಸಂಗೀತಗಳನು ೩

ತಂಗಾಳಿ ಸುಳಿಯುತಿರೆ ತನಿಗಂಪು ಬೀರುತಿರೆ
ಗಿಳಿವಿಂಡು ತನಿರಸವ ನೀಂಟುವುವು-
ಹಾರುವುವು ಬಿಳಿಮುಗಿಲ ತೆರೆತೆರೆಯ ಜೊತೆಯಲ್ಲಿ
ಪಚ್ಚೆತೆನೆಗಳ ಸಾಲು ತೋರಣದಂತೆ ೪

ಹೂಬಿಟ್ಟು ಬಳುಕುತಿಹ ಬಳ್ಳಿ ಮಾಲೆಯಲ್ಲಲ್ಲಿ
ತೂಗುವುವು ಮಾಮರದ ಕೊಂಬೆಯಲ್ಲಿ
ಚೆಲುವು ಕಂಗಳ ನವಿಲು ಕುಣಿಯುತಿರೆ ಸಂತಸದಿ
ಕೋಗಿಲೆಯು ಹಾಡುವುದು ಸವಿದನಿಯಲಿ ೫

ದನಿಯೆತ್ತಿ ಕೂಗುತಿಹ ಹಕ್ಕಿಗಳ ಕಲರವದ
ಮಾರ್ದನಿಯು ಸೆಲೆಯುತಿರೆ ಮಧುವನದಲಿ
ಆಡುವುವು ಅರಸಂಚೆ ತಿಳಿನೀರ ಕೊಳದಲ್ಲಿ
ತಾವರೆಯ ಬನದಲ್ಲಿ ಅನುದಿನವು ೬

ಪರಿಸರಿಯ ಹೂಗಳನು ಮುಡಿದಿರುವ ಬನದೇವಿ
ಕೋಗಿಲೆಯ ಗಾನವನು ಉಲಿಯುತಿಹಳು
ಮಧುಪಗಳ ಝೇಂಕಾರ ಕಾಲಋಳಿ ಘಲ್ಲೆನಲು
ಮಲ್ಲಿಕಾರತಿಮಾಲೆ ಬೆಳಗುತಿಹಳು ೭

ಅಚ್ಚಹಸುರಿನ ಹಾಸಿನಲಿ ಅಂಚು ಬರೆದಂತೆ
ಕಂಗೊಳಿಸೆ ಬಣ್ಣ ಬಣ್ಣದ ಹೂಗಳು
ಕಾಂಬುಪವುದು ಮಧುವನವು ವನಲಕ್ಷ್ಮಿ ಸಿಂಗರಿಪ
ಮಧುರಾಜನರಮನೆಯ ಸೆಜ್ಜೆಯಂತೆ ೮

ಹಬ್ಬಿರುವ ಬಳ್ಳಿಯಲಿ ರಚಿಸಿರುವ ನವಿಲು ಹುಲಿ
ಗಂಡಭೇರುಂಡ ಸಿಂಹ ಶರಭಗಳು
ಕಾಣುವುವು ವೈಹಾರ ಕೇಳಿಯಲಿ ನಲಿವಂತೆ
ಜಾತಿ ವೈರವಬಿಟ್ಟು ಬಾಳುವಂತೆ ೯

ನಿಂಬ ಕುರುವಕ ಜಂಬು ನೇರಿಳೆ ಹಲಸು ಬೇವು
ರಸಾಲ ಸುರಹೊನ್ನೆ ತಮಾಲ ಕೌಂಗು
ದಾಳಿಂಬೆ ಬಾಳೆ ಸಂಪಿಗೆ ಬೇಲ ಚಕ್ಕೋತ
ತೆಂಗು ಮಾದಳ ವೃಕ್ಷ ಬೆಳೆದಿರುವುವು ೧೦

ಮಧುಮಾಸ ಬಂದಿರಲು ವನದೇವಿ ಸುಖಿಸುವಳು
ಮೃದು ತಳಿರ ಶಯ್ಯೆಯಲಿ ಮಧುವನದಲಿ
ಮೈಮರೆತು ನಿದ್ರಿಪಳು ಕೋಗಿಲೆಯ ಗಾನದಲಿ
ಮಂದ ಮಾರುತ ಬೀಸೆ ಚಾಮರವನು ೧೧

ಗ್ರೀಷ್ಮಋತು ಬಂದಿರಲು ಕುಳ್ಳಿಹಳು ಮಧುಲಕ್ಷ್ಮಿ
ತಂಪೀವ ಹೊಂಗೆಯಾ ನೆರಳಿನಲ್ಲಿ
ತಣ್ಣೆಲರು ಬೀಸುತಿರೆ ಎಳನೀರ ನೀಂಟುವಳು
ಜಲಕೇಳಿಯಾಡುವಳು ಮಧುವನದಲಿ ೧೨

ವರ್ಷಋತು ಸಮನಿಸಲು ಕಾರ್ಮುಗಿಲ ಗರ್ಭದಲಿ
ಸೆಳೆಮಿಂಚು ಹೊಳೆಯುತಿರೆ ನೋಡುತಿಹಳು
ಬನಲಕುಮಿ ಗರಿಗೆದರಿ ಕುಣಿಯುತಿಹ ಕೊರಲೆತ್ತಿ
ಕೇಕೆಹಾಕುತಿಹ ನವಿಲು ಬಳಗವನು ೧೩

ಮಳೆಮುಗಿಲ ಮಾಲೆಯನು ಧರಿಸಿರಲು ಚಾಮುಂಡಿ
ಕಾಳ ಮಹಿಷನ ಸದೆವ ವಿರೂಪದಲಿ
ವನಲಕ್ಷ್ಮಿ ನಡುಗುತಿಹ ತೆರದಲ್ಲಿ ಕಾಂಬುವಳು
ಮಳೆಗಾಳಿ ಬೀಸುತಿರೆ ಮಧುವನದಲಿ ೧೪

ಶರದೃತು ಕಾಲಿಡಲು ಕೆರೆಕಟ್ಟೆ ತುಂಬಿರಲು
ವನಲಕ್ಷ್ಮಿ ನಲಿಯುವಳು ಕೌಮುದಿಯಲಿ
ರಾಜ್ಯಲಕ್ಷ್ಮಿಯ ಹರಸಿ ಕಳುಹುವಳು ಜಯಮೆಂದು
ಚತುರಂಗ ಬಲದಿ ವಿಜಯದಶಮಿಯಲಿ ೧೫

ಹೇಮಂತ ಋತುಬರಲು ಚಳಿಗಾಳಬೀಸುತಿರೆ
ಕಾರಂಜಿ ನೀರೆಲ್ಲ ಕೊರೆಯುತಿರಲು
ಬನದೇವಿ ಕೋಗಿಲೆಯ ಗಾನವನು ಮರೆಯುವಳು
ಹಿಮಮುಸುಕ ಹಾಕುವಳು ವಧುವನದಲಿ ೧೬

ಶಿಶಿರಋುತು ತಲೆದೋರೆ ಬನದೇವಿ ಅನುವರಿತು
ತರುಗಣದ ಸಿಂಗರವ ಮಾಡುತಿಹಳು
ಮಧುರಾಜ ಬರುವುದನು ಸಡಗರದಿ ಕಾಯುವಳು
ಹೊಸ ಕಳೆಯ ಬೀರುತ್ತ ಮಧುವನದಲಿ ೧೭

ಮಧುವನದ ಸೌಂದರ್ಯ ಜಲಧಿಯಲಿ ವನಲಕ್ಷ್ಮಿ
ಯೋಲಾಡಿ ಮನದಣಿಯೆ ನಲಿಯುತಿರಲು
ಸಮರಾತ್ರಿ ಸಮನಿಸಲು ಕಾಂಬುವಳು ಋಷಿಯಂತೆ;
ಯೋಗನಿದ್ರೆಯ ತಳೆದ ಯೋಗಿಯಂತೆ! ೧೮
*****

Tagged:

Leave a Reply

Your email address will not be published. Required fields are marked *

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೀಲಿಕರಣ: ಎಂ ಎನ್ ಎಸ್ ರಾವ್