Home / ಕವನ / ಕವಿತೆ / ಟೇಮ್ಸ ನದಿಯ ಮೇಲೆ ರಾಜಹಂಸ!

ಟೇಮ್ಸ ನದಿಯ ಮೇಲೆ ರಾಜಹಂಸ!

ನಿರಭ್ರವಾದ ನಭೋಮಂಡಲ!
ಮಧ್ಯರಾತ್ರಿಯಲ್ಲಿ ಸಹ ನೀನು
ನಿಚ್ಚಳವಾಗಿ ಕಾಣುವೆಯಲ್ಲ!
ಕುಳಿರನ್ನು ಪಾತಾಳಕಟ್ಟಿದೆ ನೀನು,
ತಳಿರೊಡೆದ ನೆಲವನ್ನು ಎವೆಯಿಕ್ಕದೆ
ನೋಡಿ ನಿಂತಿರುವೆ!
ಸಾಗರವು ಸಹ ಸಾಗರಬೀಳುವದು,-
ಈ ನಿನ್ನ ಚೆಲುವನ್ನು ನೋಡಿ!
ಚಿಕ್ಕಮಕ್ಕಳಂತೆ ಸ್ವಚ್ಚಂದವಾಗಿ ತಿರುಗುವವು,-
ಹೆಣ್ಣುಗಂಡು ಕೂಡಿ!

ಅಲ್ಲಿ ನೋಡು!
ನಿನ್ನ ಚಿಕ್ಕ ಚಿಕ್ಕೆವೆಳಕಿನ
ಕೆಳಗೆ ಬೆಳ್ಳಿಯ ಮೈ ಮಾಡಿಕೊಂಡು
ತೇಲುತಿಹುದು ರಾಜಹ೦ಸ!
ಅಂಚೆಯಿದು ನದಿಯೊಡನೆ ಮುಂಬರಿಯುವದು.
ಈ ಅರಸಂಚೆಯಂತೆ ನನ್ನ ಬಾಳ್ವೆಯಿರಲಿ, ತಂದೆ!
ಇದರಂತೆ ನದಿಯು ನನ್ನನ್ನು ತೇಲಿಸಲಿ!
ನಭದ ಹರಕೆಯ ಹೊತ್ತು
ಸಾಗಿರಲಿ ನನ್ನ ಸಂಸಾರ!

ಏಕಾಕಿಯಾಗಿ ನಡುಗತ್ತಲೆಯಲ್ಲಿ-
ನಡುನದಿಯ ಸೆಳವಿನಲ್ಲಿ-ಚಿಕ್ಕೆಗಳ
ಕಿರುವೆಳಕಿನಲ್ಲ-ಇನಿಸೊಂದು ಚಿಂತೆಯಿಲ್ಲದೆ
ಸಾಗಿಹುದಲ್ಲ ರಾಜಹಂಸ!
ಅಹಾ! ಏನು ಗಾಂಭೀರ್ಯವಿದು!
ಎಂತಹ ಸಹಜ ರಮಣೀಯತೆಯಿದು!
ಇದರ ಕಳೆಯನ್ನು ನನಗೆ ಕರುಣಿಸು, ತಂದೆ!
ಈ ತಿಮಿರಸಮಾಧಿಯ
ಸಮಾಧಾನವನ್ನು ಕೊಡು ನನಗೆ!
ಜನರಿಲ್ಲದ ರಹದಾರಿಯ ಮೇಲೆ ಏಕಾಕಿಯಾಗಿ
ನಡೆದಿಹೆನು ಮುಂದೆ.
ದಿಕ್ಕಿಲ್ಲದ ಕತ್ತಲೆಯು ಬಂದು ಮುತ್ತಿಹುದು ನನ್ನ.
ಹೃದಯವಿದು ಕಳವಳಿಸುವದು.

ಅರಸಂಚೆಗೆ ನದಿಯೇ ರಹದಾರಿ;
ನನಗೆ ರಹದಾರಿಯೇ ನದಿ.
ಅಮರತೆವೆತ್ತ ಕಂಗಳು ನಮ್ಮನ್ನು
ದಿಟ್ಟಿಸಿ ನೋಡುತಿವೆಯಲ್ಲ!
ಆದರೆ ಆರಸಂಚೆಯ ಪುಣ್ಯಸಂಚಯವಿಲ್ಲ ನನಗೆ.
ಆ ದಿವ್ಯಶಾಂತಿಯಿಲ್ಲ ನನಗೆ.
ಅದನ್ನೊಂದು ಕರುಣಿಸು ತಂದೆ!
ಆಗ ಕಾಲೆತ್ತಿ ನಡೆಯುವದಿಲ್ಲ ನಾನು,-
ನೀರು ಹರಿದತ್ತ ರೆಕ್ಕೆಯನು ಮುಚ್ಚಿ ತೇಲುವೆನು!
ಕಂಡಿದ್ದೇ ಗುರಿ; ಉಂಡಿದ್ದೇ ಅಮೃತ;
ಅರಸಂಚೆಯಾಗುವೆನು ನಾನು!

ಶೇಕ್ಸಪಿಯರ್‌ ಮಹಾಕವಿಯು ಏವ್ಹನ್‌ ನದಿಯ ರಾಜಹಂಸವಂತೆ. ಅವನ ಕಾವ್ಯಗಳನೋದಿ ಕೊನೆಯಿಲ್ಲದ ದುಃಖವನ್ನರಿತೆ ನಾನು. ಟೇಮ್ಸ ನದಿಯ ಅರಸಂಚೆಯಿದು,-ಮಧ್ಯರಾತ್ರಿಯಲ್ಲಿ ಬೆಳ್ಳಿ ಬೆಳ್ಳಿಯಾಗಿ ಹೊನಲಂತೆ ಸಾಗಿಹುದು; ಇದನ್ನು ನೋಡಿ ಶಾಂತಿಪಾಠವನ್ನು ಕಲಿತೆ ನಾನು!
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...