ಕೆಂಪು ಸಮುದ್ರದ ನೀರು ಕತ್ತಲೆಯಂತೆ ಕರ್ರಗಿರಲು
ಆಫ್ರಿಕದ ಕಾಡಿಗೆಯ ಮೇಲೆ ಸಂಜೆಗೆಂಪು ಮೂಡಿತ್ತು.
ಕರಿಬೆಟ್ಟಗಳ ಹೊದರಿನಲ್ಲಿ ಹುದುಗುತ್ತಿದ್ದನು ರವಿಯು.
ಅಬಿಸೀನಿಯದ ಕೊಲೆ, ನಿಗರ್ವಿಗಳ ದಾಸ್ಯ, ಸುಮಾಲಿಗಳ ಕೊರಗು,-
ಕಪ್ಪುಹಚ್ಚುವ ಕೃತಿಗಳಿವು,-ರಕ್ತವರ್ಣದವು!
ಆಫ್ರಿಕಖಂಡದ ಜನರ ಮೆಯ್ಯಲ್ಲಿಲ್ಲ ಮಾಂಸಖಂಡ,-
ಗುಲಾಮರ ಲೋಕವದು-ಮಾನವನು ಮೆಟ್ಟಿದ ಪಾತಾಳವದು-
ಅಂಧಂತಮಸ್ಸದು–ಕೊಲೆಗಡಕರಡುಮನೆಯದು-
ಅಲ್ಲಿ ಮುಳುಗುವ ರವಿಯು ಕೂಡ ರಕ್ತದ ಮಡುವಿನಲೀಸುತಿದ್ದ!
ಇ೦ತಿರಲು ಆಫ್ರಿಕದ ಮುಳುಗು,-ಮೂಡಿತೊಂದಾಸೆಯಲ್ಲಿ.
ಬೆಳ್ಳಿಯ ಕಡ್ಡಿಯನು ಬಿಳಿ ಬೆಳಕಿನಲೆದ್ದಿ ಬರೆದ ಗೆರೆಯಂತೆ
ಮುಗಿಲ ಪಟದ ಮೇಲೆ ವಿರಾಜಿಸಿದ ಬಿದಿಗೆಯ ಚಂದ್ರಮನು.
ಕಳೆಯೇರಿದನು, ಕರೆತಂದನು ಕೆಲವು ಚಿಕ್ಕೆಗಳನು,
ಹಿಡಿದ ಕೊಂಬಿನಲ್ಲಿ ಬಿಂಬಿಸಿದನು ಬೆಳಕನೆಲ್ಲ,
ಆಸೆಯಿದೆಯೆಂದನು, ಕೃಷ್ಣೋದಕದ ಹೃದಯವ ಕೂಡ
ಭೇದಿಸಿದನು ಹೊಳೆವ ಕಿರಣಗಳ ಕೂರಲಗಿನಿಂದ.
ಅರೆನಿಮಿಷ ಬೆಳಗಿರಲಿಲ್ಲ,-ಕಳೆಗುಂದಿದನು ಚಂದ್ರ.
ಕಂದಿತೆಲ್ಲ ಅವನ ಬಣ್ಣ! ಕೇದಿಗೆಯ ಬಿಳುಪು ಬಂತು:
ಬಾಗಿದನು, ಮೊಗ ತಗ್ಗಿಸಿದನು, ಹುದುಗಿದನು ಬೆಟ್ಟಗಳ ಹೊದರಿನಲ್ಲಿ.
ಹೆದರಬೇಡ ಆಫ್ರಿಕವೆ! ಬರಬಹುದು ನಿನ್ನ ಹುಣ್ಣಿಮೆ ನಾಳೆ.
ಹುಣ್ಣಿಮೆಯಿದ್ದಲ್ಲಿ ಅಮಾವಾಸ್ಯ,-ಅಮಾವಾಸ್ಯವಿದ್ದಲ್ಲಿ ಹುಣ್ಣಿಮೆ;
ಇಂತಿಹುದು ಕಾಲಚಕ್ರ, ಕದಲಬಹುದು ನಿನ್ನ ಕತ್ತಲೆ!
*****

















