Home / ಕವನ / ನೀಳ್ಗವಿತೆ / ಕಾಸೀ ದೇಸಾಂತ್ರೀ ನೆಡುದಾನೇ

ಕಾಸೀ ದೇಸಾಂತ್ರೀ ನೆಡುದಾನೇ

ಬಾವಾ ನಂಟನು ಕೂಡೀ ಶಂಗಡ ಬೇಟಿಗೆ ಹೋಗೀ
ಶಂಗಡ ಗುಲಗಂಜೀ ಬಲಬಂದೂ ||೧||

ಶಂಗಡ ಗುಲಗಂಜಿ ಬಲಬಂದೂ “ಬಾವಯ್ಯಾ,
ನಿನತಂಗೀ ಮಾಲಕ್ಷ್ಮಿ ಕೊಡಬೇಕೂ” ||೨||

“ನನ ತಂಗೀ ಮಾಲಕ್ಷ್ಮಿ ಕೊಡಬೇಕು || ಕೊಡುವದಾದ್ರೇ
ಹನ್ನೆರಡೆ ವರುಶೀನ ತಲ ದಂಡೂ ||೩||

ಹನ್ನೆರಡು ವರುಶೀನ ತಲದಂಡ್‌ ಹೋಗಿ ಬರುತೇನೇ
ಅವಗೆ ಮಾಲಕ್ಷ್ಮೀ ಕೊಡತೇನೇ’ ||೪||

ಅಟ್ಟಂಬೂ ಮಾತಾ ಹೇಳಾನೆ ಲಣ್ಣಯ್ಯಾ
ತಂಗೀ ಮಾಲಕ್ಷ್ಮಿ | ಕರೂದಾನೇ ||೫||

“ಗೆಂಟ ಕಟ್ಟಲು ಬೇಡಾ ಪಟ್ಟೀ ಉಡಲುಬೇಡಾ
ಕಲ್ಲೂ ಮಾಳುಗೀಯಾ ಇಳಿಬೇಡಾ || ತಂಗಮ್ಮಾ ||೬||

ಹನ್ನರಡ್‌ ವರುಶೀನಾ ತಲದಂಡೂ
ಹನ್ನೆರಡ್‌ ವರುಶೀನಾ ತಲದಂಡ್ಗ್‌ ಹೋಗಿ ಬರುತೇ” ||೭||

ಅಟ್ಟಂಬೂ ಮಾತಾ ಕೇಳಾನ ಸಲೂಜಾಣಾ
ಕೊಟ್ಟೂಗೀ ಕದವಾ ಜಡೂದಾನೇ || ಸಲೂಜಾಣ ||೮||

ಐದ್‌ಕಂಡ್ಗ ಹೊಲಕೇ ಹೊಡೂದಾನೇ
“ಅದುವೇನೇ ಮಾಲಕ್ಷ್ಮೀ, ಇದುವೇನೇ ಮಾಲಕ್ಷ್ಮೀ ||೯||

ಹೋಕ್ಕಾಲದ ನಿದ್ರೀ ನಿನಗೇನೇ
ಹೋಕ್ಕಾಲದಾ ನಿದ್ರಿ ನಿನಗೇನೇ ಮಾಲಕ್ಷ್ಮೀ ||೧೦||

ಐದ್‌ಕಂಡ್ಗ್ ಹೊಲವಾ ಕಾಯವೇನೇ?”
ಅಟ್ಟಂಬೂ ಮಾತಾ ಕೇಳಾಳ ಮಾಲಕ್ಷ್ಮೀ
ಬಣ್ಣಾದಾ ದಾಬಾ ಬಲಗೈಲೀ ||೧೧|

ಬಣ್ಣದಾ ದಾಬಾ ಬಲಗೈಲೀ ಲಿಡಕಂಡೀ
ಕಲ್ಲೂ ಮಾಳಿಗಿಯಾ ಇಳದಾಳೇ ||೧೨||

ಕಲ್ಲಾಲೂ ಮಾಳುಗೀ ಇಳದಾಳೇ ಮಾಲಕ್ಷ್ಮೀ
ಐದ ಕಂಡಗ ಹೊಲಕೇ ನೆಡುದಾಳೇ ||೧೩||

ಲಿಂಬಿ ಮರದಡಿಗೇ ನಿತ್ತಿರುವ ಸುಲೂಜಾಣಾ
“ಹಾಂಗ್‌ ಹೋಗಾ ಕದವಾ ತಿರಗಯ್ಯಾ” ||೧೪||

“ಅತ್ತೀಯಾ ಮಗನಲ್ಲ ಮತ್ತು ಸೋದರವಲ್ಲಾ
ಹಾಂಗ್‌ ಹೋಗಾ ಕರವಾ ತಿರಗಯ್ಯ” ||೧೫||

“ಅತ್ತೀಯಾ ಮಗಾ ಹೌದು ಮತ್ತೂ ಸೋದರ ಹೌದು
ಹಾಂಗ್‌ ಹೋಗಾ ಕರವಾ ತಿರಗಯ್ಯಾ” ||೧೬||

ಅಟ್ಟಂಬೂ ಮಾತಾ ಕೇಳಾನೆ ಸುಲೂಜಾಣಾ
ಕೊಟ್ಟೂಗೀಗ ಕರವಾ ಜಡದಾನೇ ||೧೭||

ಕೊಟ್ಟೂಗೀಗೇ ಕರವಾ ಜಡದಾನೆ ಸುಲೂಜಾಣಾ
ಬೆಳ್ಳೀ ದಾಬುನಲ್ಲಿ ಬಿಗುದಾನೇ ಸುಲೂಜಾಣಾ ||೧೮||

ಕಲ್ಲೂ ಮಾಳುಗಿಗೇ ನೆಡದಾನೆ
ಕಲ್ಲಲೂ ಮಾಳುಗಿಗೇ ನೆಡದಾನೆ ಸುಲೂಜಾಣಾ
ಅಲ್ಲೀ ಉಂಡಿದುರೂ ವಡನೂಟಾ ||೧೯||

ಅಟ್ಟಂಬೂ ಮಾತಾ ಕೇಳಾವ್ನೆ ಲಣ್ಣಯ್ಯ
ಹನ್ನೆರಡ ವರುಶೀನಾ ತಲದಂಡೂ ||೨೦||

ಹನ್ನೆರಡೂ ವರುಶೀನಾ ತಲದಂಡೂ ಹಿಂದಾಲೆ ಬಂದೀ
ತಂಗೀಯಾ ಕರದೇ ನುಡೀದಾನೆ ||೨೧||

“ಮೊಕವೇಕೇ ಬಾಡೀತೇ? ನೆರಿಯಾಕೇ ಕುಂದೀತೇ?
ಸೀರಿ ನೆರಿಮುಡಿಯೂ ಸಡಲೀತೇ? ||೨೨||

ಸೀರೀಯೂ ನೆರಿಮುಡಿ ಸಡಲಾಯ್ತು ತಂಗಮ್ಮಾ
ಗೋವೇ ಜಂಗಮ್ಮಾಗೊಲಿದ್ಯೇನೇ ||೨೩||

ಹಂಡನೂ ಹಾದೀತೂ ಹುಂಡಿನೂ ಲೊದ್ದೀತೂ
ಶಣ್ಣಾಕೂಡಿನ್ಯೇಮ್ಮೇ ಶಳುದೀತೂ” ||೨೪||

“ಶಣ್ಣಲೂ ಕೋಡೀನ್ಯೆಮ್ಮೇ ಶಳುದೀತೂ ಲಣ್ಣಯ್ಯ
ಸೀರೀ ನೆರಿಮುಡಿಯೂ ಸಡಲಾಯೂ” ||೨೫||

ಅಟ್ಟಂಬೂ ಮಾತಾ ಕೇಳಾನೆ ಲಣ್ಣಯ್ಯ
ಅರವತ್ತೂ ಗೆಣ್ಣೀನಾ ಹರಕೋಲಾ | ಹರಕೋಲಾ ತಡಕಂಡೀ
ಅರೂಮುರುಪೆಟ್ಟಾ ಹೂಡದಾನೀ ||೨೬||

“ನನಗೇಕೇ ಹೊಡುತೀಯೊ? ನನಗೇಕೇ ಬಯ್ದೀಯೋ
ನನ್ನಾ ಕೋಡ್ಯೇಕೇ ಕೊಯ್ದಿಯೋ? ||೨೭||

ನನ್ನಾಲೂ ಕೋಡ್ಯಾಕೆ ಕೊಯ್ದಿಯೋ ಲಣ್ಣಯ್ಯಾ,
ಗೋವೀ ಜಂಗಮ್ಮಾಗೊಲೀದಾಳೇ” ||೨೮||

ಅಟ್ಟಂಬೂ ಮಾತಾ ಕೇಳಾನೇ ಲಣ್ಣಯ್ಯಾ
ತಮ ಬಾವಾನಾ ಕರದಾನೇ ||೨೯||

“ಹಾದಿಗೆ ಹಂದರ ನೀಡೂ ಬೀದಿಗೆ ಚಪ್ಪರ ನೀಡು
ಮದವೇ ಸಂಗ್ರಮ್ಮಾ ಕನಕೊಳ್ರೋ ||೩೦||

ಮದವೀಯಾ ಸಂಗ್ರಮ್ಮಾ ಕನಕೊಳೋ” ಲಂದ ಹೇಳೀ
ಕಾಸೀ ದೇಸಾಂತ್ರೇ ನೆಡುದಾನೇ ||೩೧||
*****

ಕೆಲವು ಪದಗಳ ವಿವರಣೆ:

ಜಡುದಾನೆ = ಜಡಿದನು, ಶಬ್ದವಾಗುವಂತೆ ಬಾಗಿಲು ಹಾಕಿದನು
ಹೊಕ್ಕಾಲ = ಹೋಗುವ ಕಾಲ, ಹಾಳಾಗುವ ಕಾಲ
ನೆರಿ = ಸೀರೆಯ ನಿರಿ
ಶಳುದೀತು = ಸೆಳೆಯಿತು
ಗೆಣಲ್ಲಿ = ಗಂಟು
ಸಂಗ್ರಮ್ಮ = ಸಂಗ್ರಹ
ಅವಶ್ಯ ಸಿದ್ಧತೆ ಅನಕೊಳ್ಳೊ = ಅನುವಾಗು
ದಾಬು = ಪಶುವನ್ನು ಕಟ್ಟುವ ಹಗ್ಗ

ಹೇಳಿದವರು: ಮಾದೇವಿ ನಾರಾಯಣ ನಾಯ್ಕ, ಗೇರಸೊಪ್ಪೆ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...