ಸ್ಪ್ರಿಂಗ್

ಸ್ಪ್ರಿಂಗ್

[ಗಿರಿಯಪ್ಪ ಗೋವಿಂದ ಮುದ್ರಣಾಲಯಕ್ಕೆ ಬರುತ್ತಾನೆ. ಮುದ್ರಣಾಲಯದಲ್ಲಿ ಟೆಲಿಫೋನು ಮೊದಲಾಗಿರುವ ಆಫೀಸು. ಹೆಸರಿನ ಹಲಗೆ ದೊಡ್ಡದಾಗಿರುತ್ತೆ. ಅದನ್ನು ಓದುತ್ತಾ ಒಳಗೆ ಬರುವನು.]

ಗಿರಿಯಪ್ಪ :- ಇದೇನೆ, ಗೋವಿಂದ ಮುದ್ರಣಾಲಯ! ಯಾಕೇಂದೆ ಇಷ್ಟು ದೊಡ್ಡ ಬೋರ್‍ಡು ಈ ಪ್ರೆಸ್ಸಿಗೆ ಓಹೋ, ನೆನೆದವರ ಮನದಲ್ಲೆ. ಬಂದೆಯ ಗೋಂದು, ಗೋಂದಪ್ಪ, ಇದೇನು ಇಲ್ಲೇ ಇದ್ದು ಬಿಟ್ಟಿದ್ದಿ? ಯಾಕೆ ತಪ್ಪಿಸಿಕೊಳ್ಳುವುದಕ್ಕೆ ಗಂಟೆ ಗೊತ್ತಾಗಲಿಲ್ಲವೆ.

ಗೋವಿಂದಪ್ಪ:- ಏನೋ ಗಿರಿಯಪ್ಪ ನೀನೂ ಬಂದು ಹಾಸ್ಯ ಮಾಡುತೀಯ ? ಮೊಳೆ ಜೋಡಿಸುವರಿಲ್ಲ, ಮಿಷನ್ ತುಳಿಯುವರಿಲ್ಲ, ಬಂದು ಹೋಗುವ ಜನ ಬಹಳ ಹೆಚ್ಚಾಯ್ತು. ಸುಳ್ಳೇ ಹೇಳಬಾರದು ಎಂತ ನನ್ನ ಹಟ. ಈ ಗಡಿಯಾರ ಸರಿಯಾಗಿದ್ದರೆ ಅದಾದರೂ ಎಚ್ಚರಿಕೆ ಕೊಡುತಿತ್ತು. ನಿನ್ನೆ ನಿಂತು ಹೋಯಿತು. ಸರಿಮಾಡಿಕೊಡೊ ನಿನ್ನ ಗುಮಾಸ್ತಗಿರೀ ಲೇಖಣೀನ ಹಾಗಿಟ್ಟು. ಹೀಗೆ ಬಾ, ಇಕ್ಕುಳ ಹಿಡಿದು ನನ್ನ ಕಾಲದ ಕೂಸಿಗೆ ಜೀವಕೊಡು, ನೀ ಕೇಳಿದ್ದೆಲ್ಲ ಕೊಡುತೇನಯ್ಯ, ಏನೋ ಗಿರಿ!

ಗಿರಿಯಪ್ಪ:- ಹಾಗೆ ಬಾ ತಮ್ಮ! ಮಾಡಿಕೊಡೋಣಂತೆ ಗಡಿ ಯಾರದ ರಿಪೇರಿ, ಆದರೆ ಮೊದಲು ಹೇಳು, ನನ್ನಾಕೆ ಪುಸ್ತಕ ಏನಾಯ್ತು, ಎಲ್ಲಿಗೆ ಬಂತು, ಅದು ಈ ದಿನವೇ ಬೇಕಂತೆ. ಅಚ್ಚು ಮಾಡದಿದ್ದರೆ ಅಷ್ಟೇ ಹೋಯ್ತೋ ಅಚ್ಯುತಾ, ನೀನು ಥೇಟು ಗೋಂದು ಕಣೋ ಗೋಂದು, ಬ್ಯಂಕ, ಅಂಟು! ನಿನ್ನ ಬಲೆ ಒಳಗೆ ಕಾಲಿಟ್ಟು ಕೆಟ್ಟೆ ನಾನು. ನನ್ನ ಜೀವ ಇಲ್ಲಿ ನೀನು ಹೀರುತಿ ಅಲ್ಲಿ ನನ್ನ ಮಾನ ಆಕೆ ಹಿಂಡುತಾಳೆ. ಚಂದ್ರಾವಳಿ ಇಷ್ಟು ಹೊತ್ತಿಗೆ ಅಚ್ಚಾಗಿದ್ದರೆ ಸಾವಿರಾರು ಪ್ರತಿ ಖರ್ಚಾಗಿ ಹೋಗುತಿತ್ತು. ಅದಿರಲಿ ಗಡಿಯಾರ ಯಾವದು, ರಿಪೇರಿಗೆ ಏನು ಕೊಡುತಿ? ಅದರ ರಿಪೇರಿ ಛಾರ್ಜು ಮಾತ್ರ ನಂದಲ್ಲ. ಅದೇ ಬೇರೆ ಲೆಕ್ಕ ನೋಡಪ್ಪ.

ಗೋವಿಂದಪ್ಪ:- ಅದೇನು ಸ್ತ್ರೀ ಧನವೋ ! ಹಾಗೇ ಆಗಲಿ : ಧಾರಾಳವಾಗಿ ಕೊಡೋಣ. ಹದಿನೈದಲ್ಲ, ಇಪ್ಪತ್ತು ರೂಪಾಯಿ ತಗೊಳ್ಳಯ್ಯ. ಅದಕೆಲ್ಲ ತಗಲುವಷ್ಟು ಶಕ್ತಿವರ್ಧಕವೆಲ್ಲ ನಾನೇ ಒದಗಿಸಿಬಿಡುತೇನಯ್ಯ, ಒಂದೇ ರಾತ್ರೀಲಿ ಗಡಿಯಾರ ಸರಿಮಾಡಿ ವಾಪಸುಮಾಡು ನಿನ್ನ ದಮ್ಮಯ್ಯ.

ಗಿರಿಯಪ್ಪ:- ನಿನ್ನ ಕೆಲಸಾಂದರೆ, ಅದೇನೆಲ್ಲ ದಮ್ಮಯ್ಯ ಗುಡ್ಡೆ ಹಾಕುತೀಯೋ ಗೋಂದೂ! ನನ್ನಾಕೆ ಪುಸ್ತಕ ನಿನ್ನಿ ಪ್ರೆಸ್ಸಿಗೆ ಬಂದು ಎಷ್ಟು ದಿನವಾಯ್ತು ಹೇಳು ನೋಡೋಣ. ಬಂದ ಬಂದಾಗೆಲ್ಲ ಮುದ್ದು
ಮುದ್ದಾಗಿ ಮಾತಾಡುತಿ. ಗೊಂದು ಎಂದರೆ ಗೋಂದೇ ನೀನು!

ಗೋವಿಂದಪ್ಪ:- ಲೋ ಗಿರಿ ನೀನಿಲ್ಲದೆ ಇದ್ದರೆ ನಾನೆಲ್ಲೋ! ಗಿರಿಯಿದ್ದರೆ ಗೋವಿಂದ ಅಲ್ಲವೆ? ನಿನ್ನ ಹತ್ತಿರ ಒಂದಾದರೂ ಸರಿಯಾದ ಸುಳ್ಳು ಹೇಳಿದ್ದೇನೆಯೆ?

ಗಿರಿಯಪ್ಪ:- ಓಹೋಹೋ! ಒಂದೇ ಎರಡೇ ಬಗೆ ಸುಳ್ಳು? ನೂರೆಂಟುಬಗೆ ಸುಳ್ಳಿವೆ ನಿನ್ನಲ್ಲಿ. ಪ್ರಸ್ಥಾಯಾಥ ಪ್ರಸ್ಸು ಮಾಲೀಕವದನೇ ಸಾನಂದಮಾಸ್ತೇನೃತಂ-ಎಂದೇ ಇರಬೇಕಾಗಿತ್ತು. ಆ ಸುಳ್ಳಿನ ಮೇಲೆ ಬರೆದಿರುವ ಆ ಶ್ಲೋಕದ ಕಡೆಯ ಸಾಲು.

ಗೋವಿಂದಪ್ಪ:- ಲೋ ಗಿರಿ! ಅಂತು ನಿನ್ನ ಚಂದ್ರಾವಳಿ ಮುಟ್ಟಿದ್ದಕ್ಕೆ ನನ್ನ ಕೊರಳಿಗೆ ಅನೃತಾವಳಿ ನೇತು ಹಾಕಿಬಿಟ್ಟೆ! ನಂದೇ ತಪ್ಪೇ ಅಥವ ನನಗಿರುವ ಸಾವಿರ ತೊಂದರೆಯ ತಪ್ಪೋ, ಕ್ಷಮಿಸಯ್ಯ, ತಪ್ಪಾಯಿತಯ್ಯ!

ಗಿರಿಯಪ್ಪ:- ಇರಲಿ! ಟೆಲಿಫೋನು ಬಳಿ ನಡಿ, ಈದಿನ ನಮ್ಮ ಕೂಸಿಗೆ ಹುಟ್ಟಿದ ಹಬ್ಬ, ಈಗಾಗಲೇ ಎಷ್ಟೋ ಹೊತ್ತಾಗಿ ಹೋಗಿದೆ. ಬೇಗಬೇಗ ಹೋಗಬೇಕು ಮನೆಗೆ, ನಿನ್ನ ಹತ್ತಿರ ಏನಾದರೂ ಕಾಂಚಾಣ ಇದ್ದರೆ ಕೊಡೋಮ್ಮ, ಮನೆಗೆ ಹೋಗೋಣ ನೇವೇದ್ಯಕ್ಕೆ, ರಥ ತರಿಸೋಣ!

ಗೋವಿಂದಪ್ಪ:- ಒಂದು ಬಿಡಿಕಾಸಿಲ್ಲ! ವಿಷ ತಗೊಳ್ಳೋಕ್ಕೂ ಕಾಸಿಲ್ಲ! ನನ್ನ ಮುದ್ರಾಲಯದಲ್ಲಿರೋ ದೇವತೆಗಳೆಲ್ಲ ನೈವೇದ್ಯ ಕಾಣಿಕೆ ಇಲ್ಲಾಂತ ನನ ಮೇರೆಗೆ ಮಂಗಳಾರತಿ ಮಾಡಿದ್ದು ನೀನು ನೋಡಲಿಲ್ಲವೇನೋ! ಹೋಗಲಿ, ನಿನ್ನ ಕೂಸಿನ ನಾಮಧೇಯ ! ವರ್ಧಂತಿಮಾಡಿಸಿ ಕೊಳ್ಳೋ ಪುಟ್ಟ ಬುದ್ದಿಯವರ ನಾಮಕರಣವೇನೊ?

ಗಿರಿಯಪ್ಪ:- ರೇಡಿಯೋ ಕಣಯ್ಯ ಅದರ ಹೆಸರು! ಅದು ಹುಟ್ಟಿದ ಮೇಲೆ ನಮ್ಮಿಬ್ಬರ ಸದ್ದೂ ಉಡಿಗಿಹೋಯ್ತು. ಅದರದೇ ಸದ್ದು ಎಲ್ಲೆಲ್ಲೂ ಯಾವಾಗಲೂ!

ಗೋವಿಂದಪ್ಪ:- ಹಾಗಾದರೇನು, ಒಂದೊಂದು ಸಾರಿ ರಾಗಹಿಡಿದರೂ ಒಂದೊಂದು ದೇಶದ್ದೇನು ಒಳ್ಳೆ ಹೆಸರು ಹಾಹಾಹಾ! ರೇಡಿಯೊ! ಹಾಹಾಹ!

ಗಿರಿಯಪ್ಪ:- ನಿನ್ನೂ ಈದಿನ ಕರಕೊಂಡು ಹೋಗುತ್ತೇನೆ! ಅದೇ ಶಿಕ್ಷೆ ನಿನಗೆ! ನೀನು ಬೇಡಾಂದರೆ ಬಿಡೆ! ನನ್ನ ರೇಡಿಯೋ ಕೂಸನ್ನೂ ನೋಡು, ಅದರ ಒಡತೀನೂ ನೋಡು, ನಿನ್ನ ಸಮಾಧಾನದ ಮಾತೆಲ್ಲ ಅದೇನಿದೆಯೋ ಅದೆಲ್ಲ ಅಲ್ಲೇ ಹೇಳಿಕೊ. ಚಂದ್ರಾವಳಿನ ಅಚ್ಚುಮಾಡುತೀ ಪುಸ್ತಕ ಕಳಿಸಿಬಿಡುತೀ ಎಂತ ಆಕೆ ಕಾದಿದಾಳೆ ಅಲ್ಲಿ. ನನಗಂತು ಮನೆಗೆ ಈದಿನ ಬರಿ ಕೈಲಿ ಹೋಗುವ ಧೈರ್ಯವೇ ಇಲ್ಲ.

ಗೋವಿಂದಪ್ಪ:- ಬರುತೇನಪ್ಪ! ತಾಯಿಂದರ ಹೃದಯ ತಂಪಾಗಿರುತ್ತೆ. ಅಲ್ಲೇ ಹೇಳಿಕೊತೇನಪ್ಪ. ನಡೀಲಾರೆ ನೋಡಪ್ಪ. ನನ್ನ ಗಡಿಯಾರ ಹೇಗೋ ಹಾಗೇ ನಾನೂ ಕೂಡ ನಿಂತಲ್ಲೇ ನಡಿಯೋ ಸ್ವಭಾವ ನನ್ನದು.

ಗಿರಿಯಪ್ಪ:- ಆಗಲೋ ಹಾಗೇ ಆಗಲಿ, ಘೋನುಬಳಿ ಹೋಗಿ ಮಾತಾಡಿಸೋಣ, ಮನೆಯಲ್ಲಿ ಏನಾಗಿ ಹೋಗಿದೆಯೋ ಕಾಣೆ.

ಗೋವಿಂದ:- ಮಕ್ಕಳ ತಾಯಂದಿರು ಮನೆ ಮನೆಯಲ್ಲೂ ಇರೋವರೆಗೂ ಪರವಾಯಿಲ್ಲಾಪ್ಪ ಏನೇನೂ ಬೆದರಬೇಡ ಅವರಲ್ಲಿ ಭಕ್ತಿ ಇಟ್ಟು ಅವರನ್ನೇ ನಂಬಿದರೆ ಇಹದಲ್ಲೇ ಸ್ವರ್ಗ.

ಗಿರಿಯಪ್ಪ:- ಫೋನು ಮುಟ್ಟಿ ಕರೀಬೇಕಾದರೇ, ಬೆದರಿಕೆಯಾಗುತಲ್ಲೊ. ಕೈ ನಡುಗುತ್ತೆ. ಎಂಟು, ನಾಲ್ಕು, ಎರಡು, ಎಂಟು, ಆರು! ಯಾರ್ರಿ, ಸರಿ ಸರಿ ನಮ್ಮ ನೆರೆಮನೆಯವರಲ್ಲವೆ, ಸರೀರಿ ದಯವಿಟ್ಟು ನಮ್ಮ ಮನೆಯವರನ್ನ ಕರೀತೀರಾ! ನಾನು ಇಲ್ಲೇ ಇದ್ದೇನಲ್ಲ……. ನಮ್ಮಾಕೆಯನ್ನ ದಯಮಾಡಿ ಕರೀರಿ, ಕಾದಿರುತೇನ್ರೀ, ಬೇಗ ಬರ ಹೇಳಿ………ಬಂದೆಯಾ, ಕಾವೂ, ಏನು ಮಾಡೋಣೆ ? ಈದಿನ ನಿನ್ನ ಊಟದ ಹೊತ್ತಿಗೆ ನಾನು ಬರಲಾರೆ. ನೀವೆಲ್ಲ ಊಟಮಾಡಿ, ನಾನು ಗೋವಿಂದರಾಯರನ್ನ ಕರಕೊಂಡು ಬರುತ್ತೇನೆ….ಎಲ್ಲೆ ಇದ್ದದ್ದು? ಇಷ್ಟು ಹೊತ್ತೂ ಪೇಟೆ ತಿರುಗಿಬಂದು ಇಲ್ಲೇ ಈ ಮುದ್ರಾರಾಕ್ಷಸನ ಕೋಟೆಯಲ್ಲಿ ಸೇರಿಕೊಂಡಿದ್ದೇನೆ. ಚಂದ್ರಾವಳಿ ನನ್ನ ಸಂಗಡ ಬರುವಂತಿಲ್ಲ. ಇನ್ನೂ ಮೇಲು ಹೊದ್ದಿಕೆವರೆಗೆ ಬಂದಿಲ್ಲ. ಅದಿಲ್ಲದೆ ಚಂದ್ರಾವಳಿ ಈಗ ನಿನ್ನ ಬಳಿ ಬರುವಂತಿಲ್ಲ. ಇಲ್ಲಿರುವಾತ ಅಚೂಹಾಕಲ್ಲ, ಕಚ್ಚೂ ಹಾಕುಲ್ಲ! ಈ ಗೋವಿಂದ ಕಾಗೆಯೂ ಅಲ್ಲ ಹುಲಿಯೂ ಅಲ್ಲ, ಥೇಟು ನರಿ. ಈಗ ರಿಪೇರಿಗೆಂದು ಗಡಿಯಾರ ತರಲೆ, ಸರಿ. ನಮ್ಮ ಗೋವಿಂದಪ್ಪ ರೇಡಿಯೋ ನೋಡಬೇಕಂತೆ. ಅವನೂ ಬರುತ್ತಾನೆ. ಹೊತ್ತಿಗೆ ಸರಿಯಾಗಿ ಬರಬೇಕೆ? ಟ್ಯಾಕ್ಸಿಮಾಡಿಕೊಂಡು ಬರುವಷ್ಟು ಐಶ್ವರ್ಯ ಎಲ್ಲಿದೆ. ಫೋನುಮಾಡಿದರೆ ಬರುತ್ತೆ, ದಿಟ, ಆದರೆ ಮುಂಗಡ ಹಣ ಬೇಕಲ್ಲ ಅಯ್ಯೋ, ನಿಮ್ಮ! ಎಂದರೆ ನಾನೇನು ಮಾಡಲೆ? ಇಲ್ಲಿ ಯಾರ ಜೇಬಲ್ಲಿ ಹಣವಿಲ್ಲ. ಗೋವಿಂದನೇ ಅವನು ಮುದ್ರಣ ಮಾಡುವುದೆಲ್ಲ ಓದಬಾರದ ಹಾಳೆಗಳೇ, ನೋಟಗಳಲ್ಲ. ಅವನಿಗೂ ಪರದಾಟ ಪಾಪ, ಏನು ನನ್ನ ಅಂಗಿಯಲ್ಲಿ! ನಾನು ಹಳೇ ಅಂಗಿ ಹಾಕಿಕೊಂಡು ಬಂದಿದೇನೆ. ಇದರಲ್ಲೇ ಇದೆಯೆ ? ಸರಿ ಎಲ್ಲಿ ಒಳಗಡೆ ಜೇಬಲ್ಲೆ ? ಅದನ್ನ ಹೊಲಿದೇ ಬಿಟ್ಟಿದ್ದಿಯಲ್ಲ ರೇಶ್ಮೀದಾರದಲ್ಲಿ! ದಾರ ಕೀಳಲೆ, ಹೂ, ಎಳೆದೆ ಒಳಗಿದೆ ಒಂದು ನೋಟು ಹತ್ತು ರೂಪಾಯಿ ನೋಟು ! ಯಾವಾಗ ಇಟ್ಟಿದ್ದೆನೆ ಇಲ್ಲಿ ನಾನು ? ನಾನಲ್ಲವೆ ? ತಪ್ಪಾಯ್ತು ನೀನೋ, ಆಗಲಿ ! ಸಾಹುಕಾರ ಹೆಂಡರ ಗಡಿಯಾರ ರಿಪೇರಿಮಾಡಿದ್ದಕ್ಕೆ ಬಂತೇ ? ಬಿಡು ಈ ಸಮಯಕ್ಕೆ ಸಿಕ್ಕಿತಲ್ಲ. ಗಮಘಮವಾಸನೆ ಫೋನಲ್ಲೂ ಬರುತ್ತಲ್ಲೆ? ನಿನ್ನ ಧನಿಯಲ್ಲೇ ಆವಾಸನೆ ಇದೆಯೋ ಏನೊ ಯಾವುದಾದರೂ ವಾಹನದಲ್ಲಿ ಇಕ್ಕೊ ಬರುತ್ತೇವೆ. ಇದೊ ಹೊರಟೆ ಜೈ ಪತಿಪಾವನೀ ಕಾವೇರೀ!………… ಗೋಂದು, ಏ ಗೋಂದೂ, ನಿನ್ನ ಗಡಿಯಾರದ ರೀಪೇರೀಗೆ ಏನೇನು ಸಾಮಾನು ಕೊಡಿಸುವೇ ಕೊಡಿಸು. ಅದರ ಸ್ಪ್ರಿಂಗೇ ಕಿತ್ತು ಹೋಗಿದೆ. ಅದನ್ನು ಸುತ್ತಿ ಒಳಗಿಡಬೇಕಾದರೆ ಕೇಳು ಬಲ ಉಡುಗುತ್ತೆ ನನ್ನ ಕರುಳೇ ಎದ್ದು ಬರುತ್ತೆ. ಇಡೀ ರಾತ್ರಿ ಕೂತು ಸರಿಮಾಡಬೇಕು ನೋಡು. ಅಲ್ಲದೆ ರಿಪೇರೀ ಛಾರ್ಜಿಗೆ ಬಿಲ್ಲು ಬೇರೆ ಒಂದೇ ಬರುತ್ತೆ, ಇಪ್ಪತ್ತು ರೂಪಾಯಿ ಸಿದ್ದವಾಗಿರಲಿ.

ಗೋವಿಂದಪ್ಪ:- ಆಗಲೋ ಆಗಲಿ! ನೀನು ಯಾವುದಾದರೂ ಗಾಡಿ ನೋಡು, ನಾನು ಉಳಿದ ವಿಚಾರ ನೋಡುತ್ತೇನೆ. ಬೇಗ ಹೋಗೋಣ. ನಿನ್ನ ರೇಡಿಯೋ ಮರಿ ಹಸೆಮೇಲಿದ್ದಾಗಲೆ ಹೋಗೋಣ!
ಅವನಿಗೊಂದು ಉಡುಗರೆ ಕೊಡೋಣಂತೆ.

-೨-
[ಕಾವೇರಮ್ಮ ಮತ್ತು ಗಿರಿಯಪ್ಪ ಇಬ್ಬರೂ ಇದ್ದಾರೆ ಮನೆಯಲ್ಲಿ, ರೇಡಿಯೋ ಅವರ ಕೂಸು, ಮೇಜಿನ ಮೇಲೆ ಗಡಿಯಾರದ ಸಾಮಾನು, ಒಂದು ಗಡಿಯಾರ ದೊಡ್ಡದು.]

ಕಾವೇರಮ್ಮ:- ಅಲ್ಲಾಂದ್ರೆ ನಿನ್ನೆದಿನ ಅದೇನು ಹಾಗೆ ಮಾಡಿದಿರಿ. ಎಲ್ಲರ ಮುಂದೆ ಮಾನ ಕಳೀಬಾರದು ಎಂತ ಸುಮ್ಮನಿದ್ದೆ, ಈಗ ಒಳ್ಳೇ ಮಾತಿನಲ್ಲಿ ನನ್ನ ಕಳ್ಳ ಜೇಬಿನ ಸಾಲ ಅದರ ಮೇಲಿನ ಸರಳಬಡ್ಡಿ, ಸುಸ್ತಿ ಬಡ್ಡಿ ಎಲ್ಲ ಒಟ್ಟಾಗಿ ಒಂದೇ ಗಂಟಲ್ಲಿ ಕೊಡುತೀರೋ ಇಲ್ಲವೋ, ಈ ಕ್ಷಣವೇ ಅದೆಲ್ಲಬೇಕು. ಪುನಹಾ ನಮ್ಮ ಬ್ಯಾಂಕಿಗೆ ಆ ಹಣ ಸೇರಿಸಬೇಕು.

ಗಿರಿಯಪ್ಪ:- ಗಡಿಯಾರ ಹೊತ್ತುಕೊಂಡು, ಗೋವಿಂದಪ್ಪನ ಕರಕೊಂಡು ನಡುರಾತ್ರಿ ಹೊತ್ತಿಗೆ ನಡುಕೊಂಡೇ ಬರುತ್ತಿದ್ದೆ. ನಿನ್ನ ಕಳ್ಳ ಜೇಬಿನ ಹಣ ಸಿಗದಿದ್ದರೆ, ಆಗ ನೋಡು ನಿನ್ನ ಮಜ್ಜಿಗೆ ಹುಳಿ, ನಿನ್ನ ಖೀರು, ನಿನ್ನ ಸಬ್ಜಾ ಭಾತೆಲ್ಲ ತಿನ್ನೋರಿಲ್ಲದೆ ಮೂಲೆಹಿಡಿದು ಗೋಳಾಡುತಿದ್ದುವು. ಇಷ್ಟರ ಮೇಲೆ ನಿನ್ನ ರೇಡಿಯೊ ವರ್ಧಂತಿಗೆ ಕಾತರಿಸಿ ಕರೆಸಿಕೊಂಡೆ. ಅಲ್ಲದೆ, ಮನೆ ಗಂಡಸರನ್ನ ಅತಿಥಿಗಳ ಹಾಗೆ ಕಂಡು ಕೊಳ್ಳಬೇಕಂತೆ. ಅದೆಲ್ಲ ತಿಳಿದು ತಿಳಿದೂ ಹೀಗೆ ಪೀಡಿಸ್ತಾ ಇದ್ದೀಯಲ್ಲ!

ಕಾವೇರಮ್ಮ:- ಪಾಪ ಅತಿಥಿಗಳಾಗೇ ಇರಿ. ಅತಿಥಿಗಳನ್ನೆಲ್ಲಾ ಕಳಿಸಿಬಿಟ್ಟ ಹಾಗೆ ನಿಮ್ಮನ್ನೂ ಆ ರಾತ್ರಿ ಹೊರಗಟ್ಟಿದ್ದರೆ, ಆಗ್ಗೆ ಗೊತ್ತಾಗುತಿತ್ತು ನಮ್ಮ ದೇವರ ಸತ್ಯ.

ಗಿರಿಯಪ್ಪ:- ಸಾಕು ಎಳೇ ಹುಡುಗಿ ಹಾಗೆ, ಹೇಳಿದ ಮಾತೇ ಹೇಳುತಿ. ಈ ರಾತ್ರಿಯಾದರೂ ಆ ಗಡಿಯಾರ ಸರಿಮಾಡಬೇಕು. ನಿನ್ನ ಸಹಾಯವೇನಾದರೂ ಉಂಟೇನು ಈ ಕೆಲಸಕ್ಕೆ ?

ಕಾವೇರಮ್ಮ:- ಸಹಾಯ ಬೇಕೋ ? ನಾನು ರೇಡಿಯೋ ಮಲಗಿಸಿ ಕೊಂಡು ಮಲಗಿಬಿಡುತ್ತೇನೆ. ಮನೆಯಲ್ಲಿ ಗದ್ದಲವೇ ಆಗದಂತೆ ಕಾದು ಕೊಳ್ಳುತ್ತೇನೆ. ನಾನು ಬಂದರೆ ನಿಮ್ಮ ಸಾಮಾನೆಲ್ಲ ಹಾಳಾಗುತ್ತೆ ಅದಕ್ಕೆ ದೂರ ಇದ್ದು ಸಹಾಯಮಾಡೋಣ ಎಂತ ಯೋಚನೆ.

ಗಿರಿಯಪ್ಪ:- ಅಷ್ಟಕ್ಕೆ ಎಷ್ಟಾಗುತ್ತೊ ಆಷ್ಟೆ ಛಾರ್ಜು ನಿನಗೆ ನಿನ್ನ ಪಾಲಿಗೆ.

ಕಾವೇರಮ್ಮ:- ಓಹೋಹೋ ! ನಿಮ್ಮ ಗಡಿಯಾರ ಕೊಟ ಕೊ ಟಾಂದು, ಅದರ ರಿಪೇರಿ ಛಾರ್ಜಿನಲ್ಲಿ ನನ್ನ ಪಾಲಿನ ಹಣಬಂದು ಅಯ್ಯೋ ನೋಡಿಕೊಳ್ಳೋಣ ಬಿಡೀಂದ್ರೆ!

ಗಿರಿಯಪ್ಪ:- ಹಾಗೆನ್ನ ಬೇಡ ಚಾರ್ಜು ತುಂಬ ಬರುತ್ತೆ! ಇನ್ನು ಮೇಲೆ ಒಂದರ ಮೇಲೆ ಒಂದಲ್ಲ ನೂರೆಂಟು ಗಡಿಯಾರ ತಂದು ಸರಿಮಾಡಿ ಕೊಟ್ಟು ತುಂಬ ಹಣ……..

ಕಾವೇರಮ್ಮ:- ತುಂಬಹಣ, ತಂಬಿಗೆ ಅಷ್ಟೊ, ಬಿಂದಿಗೆ ಅಷ್ಟೋ! ಬಂತಲ್ಲ ಗುಮಾಸ್ತೆಗಿರೀಲಿ ಒಂದು ಅರಳೀಕಟ್ಟೆಗೆ ಹಾಕುವಷ್ಟು ಸವರನ್ ಸವರನ್ ಸರಸರವಾಗಿ! ಹಾಗೇನೇ ಇದೂನೂ.

ಗಿರಿಯಪ್ಪ:- ಹಾಗೆಲ್ಲ ಹೇಳಿ ನನ್ನ ರೇಗಿಸಬೇಡ, ಗುಮಾಸ್ತಗಿರಿಯೇ ಸಾಕು ಈ ಗಿರಿಯಪ್ಪನಿಗೆ, ನನ್ನ ಗದ್ದುಗೆ ಬಳಿಗೆ ಬಾಯಿಗೆ ಬೀಗ ಹಾಕಿಕೊಂಡು ಬರಬೇಡವೇ ಭಕ್ತಾದಿಗಳು! ಇವತ್ತೊಬ್ಬ ಸಾವುಕಾರ ಬರುತ್ತಾನೆ. ಅವನ ಹಿಂಡಿದರೆ ಸಾಕು, ಸುರಿದು ಹೋಗುತ್ತೆ ಹೂನ್ನು ಹೂಳೆ.

ಕಾವೇರಮ್ಮ:- ನಡುವೆ ಏನಾದರೂ ಕೀಲು ತಪ್ಪಿದರೆ ನಿಲ್ಲಿಸಿ ಬಿಡುತಾರೆ ಕಂಬಿ ಹಿಂದೆ! ಬೇಡ ನನ್ನ ದೊರೆ, ಅಂಥಾದ್ದೆಲ್ಲ ಉಂಡು ತಿಂದು, ಉಟ್ಟು ತೊಟ್ಟು ಕಡೆಗೆ ನಿಮ್ಮನ್ನ ಕಳಕೊಂಡರೆ, ಆಗೇನುಗತಿ. ಹಿಂದಿನ ಕಾಲದಲ್ಲಾಗಿದ್ದರೆ ಮುಂದಿನ ಜನ್ಮ ಎನ್ನಬಹುದಾಗಿತ್ತು. ಹಾಗಲ್ಲ ಈಗ ಸ್ವರ್ಗ ನರಕ ಅಡಿಗೆಮನೆ ನಡುಮನೆ. ಮಾಡಿದ್ದುಣ್ಣೊ ಮಹಾ ರಾಯ, ಒಂಬತ್ತು ಗಂಟೇಲಿ ಕುದಿಸಿದ್ದನ್ನೇ ಹನ್ನೊಂದು ಗಂಟೇಲಿ ಉಣ ಬೇಕಾದೀತು. ಹಾಗೇನೂ ಅನ್ಯಾಯದ ಹಣ ಹೊಸಲೊಳಗೆ ತರಬೇಡಿ ನನ್ನ ದೇವರೇ, ಕಷ್ಟ ಪಟ್ಟು ದುಡಿಯೋಣ, ಅದೇ ಗಟ್ಟಿ ವರಹ. ಅದೇ ಸಾಕು.

ಗಿರಿಯಪ್ಪ:- ಹಾಗಾದರೆ ನಿನ್ನ ಸ್ಪ್ರಿಂಗ್ ಬಿಚ್ಚಿಕೊಂಡು ನಾನು ಹೇಳಿದಲ್ಲಿಗೇ ಬಂತಲ್ಲ ಬಿಡು. ಮುಂದಿನ ತಿಂಗಳು ಮುಂದಿನ ಮಳಿಗೆ ಬಿಡಿಸಿಕೊಂಡು ಮಗುವಿನ ಹೆಸರಲ್ಲಿ ಒಂದು ಬೋರ್‍ಡು ಹಾಕುತ್ತೇನೆ…. ಗುಮಾಸ್ತಗಿರೀಗೇ……..

ಕಾವೇರಮ್ಮ:- ರಾಜೀನಾಮೆಯೋ ಗುಮಾಸ್ತಗಿರೀಗೆ…….ಸಧ್ಯಕ್ಕೆ ಹಾಗೆ ಬೇಡ, ಅದೆಲ್ಲ ಸರಿ, ನಿಮ್ಮ ಬೋರ್ಡಿನಲ್ಲಿ ಕಾಲಪುರಷಂ ಎಂಡ್ ಕೋ……..ಎಂತ ಬರೆಸಿಬಿಡಿ……..

ಗಿರಿಯಪ್ಪ:-….ಡಾಕ್ಟರ್ ಆಫ್ ಟೈಂಸ್ ಅಥವ ಕೋನೋ ಫಾರ್ಮ ಸೀ-ಎಂತ ಇಡಬಹುದು; ಆದರೆ ನಮ್ಮ ದೇಶದವರು ಅಷ್ಟು ಮುಂದುವರಿದಿಲ್ಲ! ಇರಲಿ ಏನೋ ಇಡೋಣ, ಆಗ ಮನೆಮನೆಯಿಂದ ದುರಸ್ತಾಗ ಬೇಕಾದ ಗಡಿಯಾರಗಳೆಲ್ಲ ಸಾಲಿಟ್ಟು ಬರಬೇಡವೆ……..

ಕಾವೇರಮ್ಮ:- ಸರಿ ಸರೀ, ಆಗ ಊರೆಲ್ಲರ ಗಡಿಯಾರದ ಕಳು ಬಳ್ಳಿಗಳೂ ಹೂತು, ಕಾತು, ಹಣ್ಣಾಗಿ, ನಿಮ್ಮ ಕಂಪೆನಿ ಗೋಡೆಮೇಲೆ ನೋಡುನೋಡೆಲೆ ಮುಂಗಡೆ ನೇತಾಡುತಿರ್ಪವು ನೋಡಲೆ…. ಎಂತ ಇರುತ್ತವೆ. ಆ ಗಡಿಯಾರದ ಸ್ಪ್ರಿಂಗುಗಳೆಲ್ಲ ಕೈಗೆ ಕಾಲಿಗೆ ಸುತ್ತಿಕೊಂಡು…

ಗಿರಿಯಪ್ಪ:- ಆಹಾಹಾ, ನೋಡಿದೆಯಾ, ನಿನ್ನೊಂದೊಂದು ಮಾತೂ, ಒಂದೊಂದು ಹೊನ್ನು ಕಣೆ ಕಾವೇರಿ! ಆ ಹಳೇ ಅಂಗಿ ಜೇಬಲ್ಲಿ ನೋಟು ಬಚ್ಚಿಟ್ಟು ಕೊಂಡಿತ್ತು ನೋಡು, ಹಾಗೇ ಈ ನಿನ್ನ ಮಾತಿನಲ್ಲೂ….

ಕಾವೇರಮ್ಮ:- ನಾನು ಮೋಸಹೋಗಿ ನದಿಯಾಗಿ ಹಾರಿ ಬಿದ್ದಲ್ಲಿ, ನಿಮಗೆ ಮಿಂಚಿನ ಶಕ್ತಿ ಅಲ್ಲವೆ. ಅದೇನು ಹೊಳೀತು ಈಗ ಹೇಳಿನೋಡೋಣ.

ಗಿರಿಯಪ್ಪ:- ಸ್ಟ್ರಿಂಗಿನ ವಿಚಾರವೆ! ಭಾರಿ ಯೋಚನೆ ಅದು. ನಿನಗೆ ಹಿಡಿಸುಹಾಗಿಲ್ಲ.

ಕಾವೇರಮ್ಮ:- ಹಿಡಿಸದೆ ಏನು. ನಾನು ಕೂಡ ಸರಿಮಾಡಿದ್ದೇನೆ ಗಡಿಯಾರ. ಸ್ಪ್ರಿಂಗ್ ಸುತ್ತಿದ್ದೇನೆ. ಬಿಚ್ಚಿದ ಗಡಿಯಾರ ಜೋಡಿಸಿದ್ದೇನೆ. ನಮ್ಮ ತಂದೆಯವರ ಆಸ್ತಿಯೆಲ್ಲ ಗಡಿಯಾರದಲ್ಲೇ ದುಡಿದದ್ದಲ್ಲವೆ? ಆದರೆ ಅವರ ಹತ್ತಿರ ಆಯುಧಸಾಮಗ್ರಿ ಸಾಮಾನೆಲ್ಲ ತುಂಬ ಇತ್ತು. ನೀವೋ ಬರೀ ಕೈಲಿ…….

ಗಿರಿಯಪ್ಪ:- ಬರೀ ಕೈಲೇ ಮೊಳ ಹಾಕಬೇಕು ಒಂದೆರಡುದಿನ. ಅನಂತರ ಸರಿಹೋಗುತ್ತೆ. ಅದಲ್ಲದೆ ಜೊತೆಗೆ ನೀನಿದ್ದೀ ಎಂತ ಧೈರ್ಯದ ಮೇಲೆ, ನಾನೂ ಕೂಡ ಹತ್ತಾರು ಗಡಿಯಾರ ಬಿಚ್ಚಿಟ್ಟು ಹಾಳುಮಾಡಿದ್ದೇನಲ್ಲ ಆಗಲೆ. ಅಮೆರಿಕದಲ್ಲಿ ಒಬ್ಬನ ಹತ್ತಿರ ತುಂಬ ಗಡಿಯಾರಗಳು ಇವೆಯಂತೆ. ಅವಕ್ಕೆಲ್ಲ ಹಾಗೆ ಹೀಗೆ ಕೀಲು ಕೊಡುತ್ತಾ ಹೋದರೆ ಎರಡು ದಿನ ಹಿಡಿಯುತ್ತಂತೆ, ಹಿಂದಿನ ಚಕ್ರವರ್ತಿಗಳ ಹತ್ತಿರ………

ಕಾವೇರಮ್ಮ:- ಅದೆಲ್ಲ ಇರಲಿ. ನಿಮ್ಮ ಹೊಸ ಯೋಚನೆ ಏನದು?

ಗಿರಿಯಪ್ಪ:- ಹೊಸ ವಿಚಾರವೆ? ಕೇಳು ಹಾಗಾದರೆ – ನನಗೆ ತುಂಬ ಹಣ ಸಿಕ್ಕಿದಾಗ ತುಂಬ ಉಕ್ಕಿನ ತಗಡೆಲ್ಲ ಖರೀದಿಮಾಡಿ, ಸ್ಪ್ರಿಂಗ್ ಪಟ್ಟಿಯಾಗಿ ಕತ್ತರಿಸಿ, ಚಕ್ರಗಳಿಗೆಲ್ಲ ಸುತ್ತಿ ಸುತ್ತಿ…….

ಕಾವೇರಮ್ಮ:- ನಮ್ಮ ರೇಡಿಯೋ ಕೈಕಾಲಿಗೆಲ್ಲ ಸುತ್ತಿ ಸುತ್ತಿ, ನನಗೆ ಸಾಕಾದಷ್ಟು ಸುಸ್ತು ಮಾಡಿ…….. ಏನು ಹಾಗಾದರೆ…….. ಇದೂ ಒಂದು ತಾತನ ಕಂಪೆನಿಯೇ ಆಗಿಬಿಡುತ್ತೆ. ಬಿಡೀಂದ್ರೆ, ಗಗನಕ್ಕೆ ಹಾರಬೇಡಿ. ಈಗಿರೋ ಕೋಲು ಕರಟ ಚಾಪೆನೇ ಸಾಕಾಗಿದೆ.

ಗಿರಿಯಪ್ಪ:- ಆಗಲೂ ಹೀಗೇ ಇರುತ್ತೇನೆಯೆನೇ ಕಾವೇರಿ ? ಆಗ ಅರಮನೆಯಂಥ ಪ್ರಾಸಾದವನ್ನು ಕಟ್ಟಿಸಿ, ನಮ್ಮ ಘಟಿಕಾ ಯಂತ್ರಕ್ಕೊಂದು ಅಂತಸ್ತನ್ನು ಕಟ್ಟಿಸಿ, ಅಲ್ಲಿ ಚಿಮ್ಮುವ ಸ್ಪ್ರಿಂಗುಗಳಿಗಾಗಿ ಒಂದುನೆಲೆ ಯನ್ನೇ ಮಾಡಿಸುತ್ತೇನೆ. ಆ ಚಿಮ್ಮುವ ಸ್ಪ್ರಿಂಗುಗಳೆಲ್ಲ ನನ್ನ ಹೊಸ ನಿರ್ಮಾಣದ ಮಹಾ ಮೂಲ ಯಂತ್ರದಲ್ಲಿ ಚಕ್ರ ಚಿಮ್ಮಿಗಳಾಗಿ…….. ಇತ್ಯಾದಿ ನಮ್ಮ ಆಗಿನ ವೈಭವ……..

ಕಾವೇರಮ್ಮ:- ಅದೇನೋ ಅರ್ಥವೇ ಆಗುವುದಿಲ್ಲ. ಬಾಪೂಜಿ ಯವರ ಸತ್ಯಾಗ್ರಹದ ಮರ್ಮವನ್ನಾದರೂ ಅರ್ಥಮಾಡಿಕೊಂಡೇನು, ಆದರೆ ನಿಮ್ಮ ಚಿಮ್ಮಿಯ ಮರ್ಮ ಉಕ್ಕಿನ ಕಡಲೆಯಾಗಿಬಿಟ್ಟಿದೆ. ನಿಮ್ಮ ಧರ್ಮಕ್ಕೆ ಸಧ್ಯ ಸಾಕು ಸುಮ್ಮನಿರಿ. ಕೂಸಿಗೆ ರೇಡಿಯೋ ಎಂತ ಹೆಸರಿಟ್ಟಿರಿ…. ಅದರ ಕಿರುಚಾಟ ಕೇಳಲಾರೆ. ಇನ್ನು ನಿಮ್ಮ ವಿಶ್ವಾಮಿತ್ರ ಸೃಷ್ಟಿಯಾದ, ಆ ಚಿಮ್ಮಿ ಚಕ್ರಗಳೋ, ಸ್ಪ್ರಿಂಗ್ ಚಕ್ರಗಳೋ, ಅದೇನೋ ನನಗೆ ಭಯವಾಗುತ್ತೆ ಊಹಿಸಿಕೊಂಡರೆ.

ಗಿರಿಯಪ್ಪ:- ಕಾವೇರಿಯ ಕೂಸು ರೇಡಿಯೋ, ಗಿರಿಯಪ್ಪನ ಕೂಸು ಹೊಸ ಸ್ಪ್ರಿಂಗ್ ಯೋಜನೆಯ ಚಕ್ರ ಚಿಮ್ಮಿ. ನಿನ್ನ ಕೂಗು ಮನೆ ಉದ್ದಾರಕ್ಕೆ, ನನ್ನ ಕೂಸು ದೇಶೋದ್ದಾರಕ್ಕೆ. ನಾನು ಈಗ ಉಕ್ಕಿನ ಚಕ್ರ ಚಿಮ್ಮಿಗಳ ವಿಚಾರವನ್ನೇ ಹೇಳುತ್ತೇನೆ ಕೇಳು. ಪೂಜ್ಯ ಬಾಪೂಜಿ ಇದ್ದಾರಲ್ಲ ಅವರೇ ಭಾರತದ ಹಿರಿಯ ಸ್ಪ್ರಿಂಗ್. ದೇವರು ಅವರನ್ನ, ಒಂದು ಸಜೀವ ಚಕ್ರ ಚಿಮ್ಮಿಯನ್ನ ಮಾಡಿ, ನಮ್ಮ ದೇಶಕ್ಕೆ ಕಳಿಸಿದ್ದಾನೆ. ಇಂಡಿಯಾ ದೇಶದ ಸಣ್ಣ ದೊಡ್ಡ ಚಕ್ರಗಳೆಲ್ಲ, ಅವರ ಚಿಮ್ಮುವ ಶಕ್ತಿಯಿಂದ ತಿರುಗುತ್ತವೆ. ಹಾಗಿರುವುದರಿಂದಲೇ, ಭಾರತದ ಮೊರೆಯ ಮೇಲೆ ಜಗತ್ ಸಂಸ್ಕೃತಿಯ ಗಂಟೆ…..

ಕಾವೇರಮ್ಮ:- ಎಲ್ಲಿಂದೆಲ್ಲಿಗೆ……. ಅಯ್ಯೋ ಸಾಕು ಬಿಡೀಂದ್ರೆ ಉಪನ್ಯಾಸ.

ಗಿರಿಯಪ್ಪ:- ಶ್ರೀಮಾನ್ ಅಧ್ಯಕ್ಷರೆ, ಎರಡೇ ನಿಮಿಷ ಅವಕಾಶ ಕೊಟ್ಟರೆ ಸಾಕು, ನನ್ನ ಉದ್ಯಮವನ್ನು ವಿವರಿಸಿ ಈ ಸ್ಪ್ರಿಂಗುಪನ್ಯಾಸವನ್ನು ಮುಗಿಸಿಬಿಡುತ್ತೇನೆ.

ಕಾವೇರಮ್ಮ:- ಅಧ್ಯಕ್ಷರಂತೆ ಅಧ್ಯಕ್ಷರು! ಮುಗಿಸಿಬಿಡಿ, ಸಾರಿಗೆ ಒಗ್ಗರಣೆ ಹಾಕಿ ಆಯಿತು. ನಮ್ಮ ರೇಡಿಯೋ ರಾಜ ಹಾಲು ಕುಡಿದು ಮುಗಿಸುವಷ್ಟೇ ಕಾಲ ಇನ್ನುಳಿದಿದೆ ನಿಮ್ಮ ಚಿಮ್ಮಿ ಭಾಷಣಕ್ಕೆ.

ಗಿರಿಯಪ್ಪ:- ಈ ನಮ್ಮ ಮಾತೆ ಭಾರತದಲ್ಲಿರುವ ನರನಾರಿಯರೆಲ್ಲ ವರುಷದಲ್ಲಿ ಒಂಬತ್ತು ತಿಂಗಳೇ ಕೆಲಸವಿಲ್ಲದೆ ಇರುತ್ತಾರೆ. ಅವರೆಲ್ಲರಿಗೆ ನನ್ನಿಂದ ಸುಲಭ ಸಂಪಾದನೆಯಾಗುತ್ತದೆ, ನಮ್ಮ ಚಿಮ್ಮಿ ಕಂಪನಿಯ ಚಕ್ರ ಚಿಮ್ಮಿಗಳನ್ನು ತಲೆಗೆ ಹತ್ತೂಹತ್ತರಂತೆ ಪ್ರತಿ ಸಂಸಾರಕ್ಕೂ ಹಂಚಿ ಬಿಡುತ್ತೇವೆ. ಮನೆಯ ಮಕ್ಕಳು ಮುದುಕರೆಲ್ಲ ಕೂತಾಗ ನಿಂತಾಗ ಅವುಗಳನ್ನು ದಿನವೂ ಸುತ್ತಿ ಕೊಟ್ಟು ಬಿಡುತ್ತಾರೆ. ಹಾಗೆ ಸುತ್ತಿ ಕೊಟ್ಟ ಸ್ಪ್ರಿಂಗ್ ಚಕ್ರಗಳನ್ನು ನಮ್ಮ ಕೇಂದ್ರ ಕಾರ್ಖಾನೆಯಲ್ಲಿರುವ ಮೂಲ ಯಂತ್ರಕ್ಕೆ ಜೋಡಿಸಿಬಿಟ್ಟರೆ ಅಲ್ಲಿ ಅವು ಶಕ್ತಿ ಬೀಜಗಳಾಗುತ್ತವೆ. ಆ ನಮ್ಮ ಕಾರ್ಖಾನೆಗೆ ಇನ್ನಾವ ಜಲ, ತೈಲ, ವಿದ್ಯುತ್ ಶಕ್ತಿಗಳೂ ಬೇಕಿಲ್ಲ. ಅಲ್ಲಿರುವ ಚಕ್ರಗಳೆಲ್ಲ ಕೇವಲ ಮಾನವರ ನರಬಲ ಸ್ನಾಯ ಬಲಗಳಿಂದಲೇ ಶಕ್ತಿ ಪಡೆದು ಮಹತ್ತಾದ……..

ಕಾವೇರಮ್ಮ:- ಇದೇಕೊ ರಬ್ಬರ್ ಭಾಷಣವಾಗುವಂತಿದೆ. ಎಳೆದಷ್ಟೂ ಬರುತ್ತಾ ಇದೆ.

ಗಿರಿಯಪ್ಪ:- ಮಹತ್ತಾದ, ಆಶ್ಚರ್ಯಕರವಾದ, ತೀವ್ರ ವಿದ್ಯುತ್ ಶಕ್ತಿಯನ್ನು ನಮ್ಮ ನಾಡಿನ ಸಲುವಾಗಿ ಉತ್ಪತ್ತಿ ಮಾಡುತ್ತವೆ. ಕೆಲಸವಿಲ್ಲದವರಿಗೆ ಕೆಲಸ, ಪದಾರ್ಥಗಳಿಲ್ಲದವರಿಗೆ ಪದಾರ್ಥ, ಹಣವಿಲ್ಲದವರಿಗೆ ಹಣ, ಅನ್ನವೇ ಇಲ್ಲದವರಿಗೆ ಅನ್ನ………

ಕಾವೇರಮ್ಮ:- ಸಾಕಂದ್ರೇ, ಅನ್ನ ಕಾಯಿಸಬಾರದು ಏಳಿ.

ಗಿರಿಯಪ್ಪ:- ಅಲ್ಲವೇ, ನಾನು ಹೇಳುವುದನ್ನು ಕೇಳಿಯಾದರೂ ಕೇಳು, ಭಾರತೀಯ ಕಾರ್ಮಿಕರಿಗೂ, ಪಾಶ್ಚಾತ್ಯ ಕೂಲಿಕಾರರಿಗೂ, ವ್ಯತ್ಯಾಸವಿನ್ನೇನೂ ಇಲ್ಲ. ಅವರೆಷ್ಟು ಅಶ್ವಶಕ್ತಿಯನ್ನು ಕೊಡಬಲ್ಲರೋ, ಅಷ್ಟೇ ಅಶ್ವಶಕ್ತಿಯನ್ನು ಇವರೂ ಹೂಡಿಕೊಡಬಲ್ಲರು, ಆದರೆ ಭಾರತೀಯರಿಗೆ ಸಾಧನ ಸಾಮಗ್ರಿ ಕಡಿಮೆ. ನನ್ನ ಸ್ಪ್ರಿಂಗ್ ಸಾಧನಗಳಾದ ಚಕ್ರ ಚಿಮ್ಮಿಗಳು ಅಂಥ ಅನಾನುಕೂಲಗಳನ್ನು ಸಾಕಾದಷ್ಟು ಕಡಿಮೆ ಮಾಡಬಲ್ಲವು. ಚರಕದಲ್ಲಿ ದಾರ ನೂತರೆ ಅದೆಷ್ಟು ಲಾಭವೋ, ಅದಕ್ಕೂ ಮಿಗಿಲಾದ ಸಂಪಾದನೆಯುಂಟು ನನ್ನ ಚಕ್ರ ಚಿಮ್ಮಿಗಳಿಂದ. ಒಂದುವೇಳೆ ಇಡೀ ಭಾರತದಲ್ಲಿರುವ ಜಲಪಾತಗಳೆಲ್ಲ ನಿಂತರೂ ಚಿಂತೆಯಿಲ್ಲ. ನಮಗೆ ಬೇಕಾದಷ್ಟು ಮಿಂಚಿನಶಕ್ತಿಯನ್ನೆಲ್ಲ ಭಾರತೀಯರು ವಿರಾಮಕಾಲದಲ್ಲಿ ತಮ್ಮ ಉಸಿರು ಬಲದಿಂದಲೇ ಉತ್ಪತ್ತಿಮಾಡಬಹುದು. ರೈಲು, ರೇಡಿಯೋ, ಗಿರಣಿ, ಸಿನಿಮ ಮುಂತಾದವುಗಳೆಲ್ಲಕ್ಕೂ ನಮ್ಮ ಕೇಂದ್ರ ಯಂತ್ರ ಮಹಲಿನಿಂದ ಶಕ್ತಿಯನ್ನು ಒದಗಿಸಬಹುದು. ದೇವರ ಚಿತ್ರಕ್ಕೆ ಬಂದರೆ ನನ್ನ ಚಕ್ರ ಚಿಮ್ಮಿಗಳಿಂದಲೇ ದೇಶೋದ್ಧಾರ ಮತ್ತೆ ಇತರ ದೇಶಗಳೆಲ್ಲ ಹಿಂದಿನಂತೆ ಭಾರತೀಯರ ಶಿಷ್ಯರಾಗುವುದಕ್ಕೆ ಒಪ್ಪಿದರೆ ಅವರಿಗೂ ಉದ್ದಾರ. ನೋಡಿದೆಯಾ, ಚಿಮ್ಮಿ ಚಕ್ರಗಳಿಂದ ಹೇಗೆ ಜಗದೋದ್ಧಾರವಾಗುತ್ತದೆ!

ಕಾವೇರಮ್ಮ:- ಅಯ್ಯೋ, ಜಗದೋದ್ದಾರಾ! ನನ್ನ ಗೋಳು ಹುಯ್ಯಬೇಡಿ ಏಳೀಂದ್ರೆ! ತುಂಬಾ ಕೆಲಸ ಇದೆ. ಆ ಗಡಿಯಾರ ಬೇರೆ ನನ್ನ ನಿದ್ದೆಗೆ ಉರುಳಾಗಿ ಬಂದು ಕೂತುಬಿಟ್ಟಿದೆ. ಬೇಗ ಬೇಗ ಏಳ ಬಾರದೆ.

ಗಿರಿಯಪ್ಪ:- ನೋಡು ಕಾವೇರಿ ಇನ್ನೊಂದು ವಿಚಾರ. ಈ ಉಪನ್ಯಾಸವನ್ನೆಲ್ಲ ಬರೆದು ಬಾಪೂಜಿಯವರಿಗೆ ಕಳಿಸಿಬಿಟ್ಟರೆ ಹೇಗಿರುತ್ತೆ? ಏನು ನಿನ್ನ ಅಭಿಪ್ರಾಯ…….

ಕಾವೇರಮ್ಮ:- ನಿತ್ಯ ನಿತ್ಯ ನೋಡು ಕಾವೇರಿಯ ಆಗುತ್ತಾನೆ ಇದೆಯಲ್ಲ ನನ್ನೇನು ಕೇಳುತ್ತೀರಾ! ನಿಮ್ಮ ನರಿಗೊಂದಪ್ಪ ಇದಾನಲ್ಲ, ಅವನ ಕೈಲಿ ಕೊಟ್ಟು ಅಚ್ಚು ಹಾಕಿಸಿ ಎಲ್ಲರಿಗೂ ಹಂಚಿ ಬಿಡಿ. ಈಗಲೋ ನಿಮ್ಮ ಭಾರಮಾತೆಯ ಸುಪುತ್ರರೆಲ್ಲ ಪರದಾಡುತ ಇದಾರೆ ಪೋಸ್ಟ್ ವಾರ್ ಸ್ಕೀಂ ಎಂತ-ನಿಮ್ಮದೂ ಒಂದು ಯುದ್ಧಾನಂತರ ಯೋಜನೆ ಎಂತ ಪಠ ಕಟ್ಟಿ ಹಾರಿಸಿಬಿಡಿ. ನಿಮ್ಮ ಕತೇನೆ ಮೊದಲು ಅಚ್ಚಿಸಿ ಹೆಚ್ಚಿಸಿ ಹಂಚಿಸಿ
ಬಿಡಿ ಅದಾದರೂ ಮೆಚ್ಚಾಗಲಿ…….

ಗಿರಿಯಪ್ಪ:- ಹಾಗಾದರೆ ನಿಜವಾಗಿಯೂ ಹೇಳೆ ನಿನ್ನ ಚಂದ್ರಾವಳೀ ನಿಧಾನವಾದರೂ ಪರವಾಯಿಲ್ಲವೇನೆ? ನನ್ನ ಚಿಮ್ಮಿ ಚರಿತ್ರೆ ಮೊದಲೇ ಮುದ್ರಣ ಮಾಡಿಸಿಬಿಡೋಣವೇನೆ?

ಕಾವೇರಮ್ಮ:- ನಿಮ್ಮ ಮಾತಿ ಸ್ಪ್ರಿಂಗ್ ಸಧ್ಯ ಮೊದಲು ಸುತ್ತಿಡಿ. ಊಟಕ್ಕೇಳಿ ತುಂಬಾ ಕೆಲಸವಿದೆ. ನಾಳಿ ಗುರುವಾರ ಶ್ರೀ ಸಾಯಿಬಾಬನಿಗೆ ಹರಿಕೆ ಹಾಕಿಕೊಂಡಿದ್ದೇನೆ-ಪೂಜೆ, ಪುರಸ್ಕಾರ, ಮೀಸಲು, ಉಪವಾಸ, ಎಂತ ಏನೇನೆಲ್ಲ ಇದೆ.

ಗಿರಿಯಪ್ಪ:- ಇನ್ನೇನೇನೆಲ್ಲ ಇದೆ.

ಕಾವೇರಮ್ಮ:- ಮುಖ್ಯ ಪ್ರಾರ್ಥನೆ ಒಂದಿದೆ-ಸಾಯಿಬಾಬನ ಹತ್ತಿರ.

ಗಿರಿಯಪ್ಪ:- ಅದೇನು ಅಂಥಾ ಪ್ರಾರ್‍ಥನೆ ?

ಕಾವೇರಮ್ಮ:- ಅಪ್ಪಾ ಸಾಯಿಬಾಬ, ನಮ್ಮನೆ ದೊಡ್ಡ ಸ್ಪ್ರಿಂಗೇ ಬಿಚ್ಚಿ ಹೋಗಿದೆ, ಅದನ್ನ ಸುತ್ತಿಕೊಡು ತಂದೆ……..

ಗಿರಿಯಪ್ಪ:- ಸುತ್ತಿಕೊಡು ತಂದೆಯಂತೆ-ಇಷ್ಟು ಹೊತ್ತೂ ಮಾತಾಡಿದ್ದಕ್ಕೋ? ಏನು ಘಾಟೀನೇ ನೀನು! ನನಗೆ ಅರ್ಥವಾಯಿತು. ನಾನೋ ದೊಡ್ಡ ಸ್ಪ್ರಿಂಗು?

ಕಾವೇರಮ್ಮ:- ಅವನಿಗೆ ಅರ್ಥವಾಗುತ್ತೆ……..

-೩-

[ಪೂಜೆಗೆ ಏರ್‍ಪಾಡಾಗಿದೆ, ಸಾಯಿಬಾಬನ ಚಿತ್ರಕ್ಕೆ ಅಲಂಕಾರವಾಗಿದೆ. ಕಾವೇರಮ್ಮ ಒಳಗಿದ್ದಾಳೆ, ಗಿರಿಯಪ್ಪ ಹೊರಗಿನಿಂದ]

ಗಿರಿಯಪ್ಪ:- ಏನ್ರಿ ಏನುಮಾಡುತ್ತಾ ಇದ್ದೀರಿ ಕಾವೇರಿಗಳೆ?

ಕಾವೇರಮ್ಮ:- ಯಾರ್ರೀ ಕರೆದವರು? ಬನ್ನಿ ಅರಸಿನ ಕುಂಕುಮ ಸ್ವೀಕರಿಸಿ, ಪೂಜೆಗೆ ಅಣಿಯಾಗಿದೆ. ಮಂಗಳಾರತಿ ಬಾಕಿ……..ಬೇಗ ಹೋಗುವಿರಂತೆ ಬನ್ನಿ!

ಗಿರಿಯಪ್ಪ:- ಯಾರೂಂತೀ ಕರೆದವರು? ನಾನು ಕಣೆ!

ಕಾವೇರಮ್ಮ:- ಅಯ್ಯೋ ನಿಮ್ಮ ಹುಡುಗಾಟವೇ! ಹೀಗೆ ಬಂದು ಒಂದೆರಡು ಹೂವೇರಿಸಿ. ಒಳ್ಳೆ ಬುದ್ದಿ ಕೊಡುತ್ತಾನೆ ಸಾಯಿನಾಥ.

ಗಿರಿಯಪ್ಪ :-ಆಫೀಸು ದೇವರ ನೇವೇದ್ಯಕ್ಕೆ ತಂಗಳ ಕಾಗದಗಳನೆಲ್ಲ ಜೋಡಿಸಿ ಒಗ್ಗರಣೆ ಹಾಕುತ್ತಾ ಇದ್ದೇನೆ. ಇವೆಲ್ಲ ಬೇಗ ಮುಗಿದರೆ ಮುಂದೆ ಗೋಂದಪ್ಪನ ಗಡಿಯಾರದ ರಿಪೇರಿಗೆ ಪುರಸತ್ತು! ಅದಕ್ಕೇ ಇಲ್ಲೇ ಕೂತೆ. ನೀನು ಹಾಡ ಹೇಳು, ಪೂಜೆಮಾಡು, ಮಂಗಳಾರತಿ ವೇಳೆಗೆ ಕರೆದುಬಿಡು.

ಕಾವೇರಮ್ಮ:- ಬಾರೋ ಬಾಬಾರೋ ದಯೆತೋರೋ ||
ತಾಯ್ ತಂದೆಯು ನೀನ್
ಕಾಯುವಾತನೆ ನೀನ್
ಸಾಯ್‌ನಾಥನೆ ನೀನ್
ಬಾರೋ ಬಾ ಬಾರೋ ದಯೆತೋರೊ||
ಇದೇನೂಂದ್ರೆ ಹೀಗೆ ಹಿಂದುಗಡೆಯಿಂದ ಬಂದು ಕಣ್ಣು ಮುಚೋದು. ದೇವರ ಪೂಜೆಮಾಡುವಾಗ ಗಂಭೀರವಾಗಿ ದೂರ ನಿಂತಿರಿ. ಮನೆಯಲ್ಲಿ ಹೇಳೋರು ಕೇಳೋರು ಇಲ್ಲಾಂತ ತಿಳುಕೊಂಡಿರಾ ಹೇಗೆ ?

ರೇಡಿಯೋ:- ದೆದ್ದೆದ್ದೇ, ಗಿಗ್ಗಿ, ಪೆಪ್ಪೆ, ಊ ಊ!

ಕಾವೇರಮ್ಮ:- ಬಾರೋ ಬಾಬಾರೋ ದಯೆತೋರೋ ||
ತಾಯಿ ತಂದೆಯು ನೀನ್
ಕಾಯ್‌ವಾತನೆ ನೀನ್
ಸಾಯ್‌ನಾಥನೆ ನೀನ್
ಬಾರೋ ಬಾ ಬಾರೋ ದಯೆತೋರೋ ||

ಗಿರಿಯಪ್ಪ:- ಬಂದನಲ್ಲ ಸಾಯ್‌ನಾಥ, ನಿನ್ನ ಕಾಯುವುದಕ್ಕೆ, ಬಾರೋ ಬಾಬಾರೋ ಸಾಯ್‌ನಾಥನೆ ನೀನ್……..

ಕಾವೇರಮ್ಮ:- ಹೌದೇ ಹೌದು, ಅವನೇ ಸಾಯಿನಾಥ, ನನ್ನ ಕಾಪಾಡುವ ದೊರೆಯೇ ಅವನು. ಬಾರೋ ಬಾ ಬಾರೋ……..

ರೇಡಿಯೋ:- ದೆ ದ್ದೆ ದ್ದೆ! ಗಿ ಗ್ಗಿ ! ಪೆ ಪ್ಪೆ ! ಊ ಊ ಊ !

ಕಾವೇರಮ್ಮ:- ಎದ್ದೆಯಾ ತಂದೆ, ನನ್ನ ಕಂದಕಣೇ, ಹುಗ್ಗೀ, ಪೆಪ್ಪೆಂಟು ಅಪ್ಪಚ್ಚೀ, ಉಂಡೇ ಎಲ್ಲ ಮಾಡಿ ನನ್ನ ಸಾಯ್‌ನಾಥನಿಗೆ ನಾಳೆ ಬೆಳಗ್ಗೆ ನೇವೇದ್ಯ ಮಾಡೋಣೇನು? ಬಾಪ್ಪಾ!

ಗಿರಿಯಪ್ಪ :- ನಾನೇ ಮಗುವಾಗಿದ್ದರೆ, ಅಷ್ಟು ಉಪಚಾರವಾದರೂ……

ಕಾವೇರಮ್ಮ:- ಇದಾರು ಮತ್ತೆ, ನಿಮ್ಮ ಬಯಕೆಯೇ! ನಿಮಗೇನೂಂತ ಕಡಿಮೆಯಾಗಿರೋದು? ಇನ್ನು ಮೇಲೆಲ್ಲ ಈ ಸಾಯ್‍ನಾಥನಿಗೇ ಮುತ್ತೂ ಇವನಿಗೆ, ಮುದ್ದೂ ಇವನಿಗೇ…….. ನಿಮ್ಮನ್ನಾರು ಮಾತಾಡಿ ಸೋರು! ಅಲ್ಲವೇನೋ ರೇಡಿಯೊ………

ಗಿರಿಯಪ್ಪ:- ಏನೋ, ಹೋಗಲಿಬಿಡು, ನನ್ನ ಕೆಲಸಕ್ಕೆ ನಾನು ಹೋಗಿ ಕುಕ್ಕರಿಸಿಕೋತೆನೇ!

ಕಾವೇರಮ್ಮ:- ನಿಮಗೆ ಏನು ಕಡಿಮೆಯಾಗಿರೋದು. ಈಗ ತಿಂದಿರೋದರ ಜತೆಗೆ ಒಂದಿಷ್ಟು ಪ್ರಸಾದವನ್ನು ತಿಂದುಬಿಡಿ. ಬನ್ನಿ ಇದೋ ಪ್ರಸಾದ!

ಗಿರಿಯಪ್ಪ:- ಈ ಪ್ರಸಾದವೇನೋ ರುಚಿಯಾಗಿದೆ. ಆದರೆ ಇಷ್ಟು ಸಾಕೆ?

ಕಾವೇರಮ್ಮ:- ನಾನು ಅಷ್ಟೂ ಕೂಡ ತಿನ್ನೋದಿಲ್ಲವಲ್ಲ. ನನಗೆ ನೇಮ, ನಾಳೆ ಬೆಳಗಿನವರಿಗೆ.

ಗಿರಿಯಪ್ಪ:- ಇಷ್ಟು ಶಕ್ತಿ ಸಾಕೆ, ನನ್ನ ದೇಹದಲ್ಲಿರೋ ಶಕ್ತಿ? ಆ ಗಡಿಯಾರದ ಸ್ಪ್ರಿಂಗ್ ಸುತ್ತುವುದಕ್ಕೆ, ಒಳ್ಳೆ ತಿಂಡಿ ಮಾಡಿ, ತುಂಬಾ ಕೊಟ್ಟರೆ, ಚಿಮ್ಮಿ ಸುತ್ತುವುದಕ್ಕೆ ದಮ್ಮುಸಿಕ್ಕುತ್ತೆ.

ಕಾವೇರಮ್ಮ:- ಏನಂದ್ರೇ! ಇಷ್ಟು ದಿನ ತಿಂದಿರಲ್ಲ-ಸುಲಿದಕ್ಕಿ ಅನ್ನ, ಹೊಟ್ಟಿ ಗೋಧಿ ರೊಟ್ಟಿ, ಟೊಮೋಟೋ ಬಜ್ಜಿ, ಮೊಳಕೆ ಹೆಸರು ಪಾಯಸ, ಮಂಡ್ಯದ ಬೆಣ್ಣೆ-ಇತ್ಯಾದಿಯಾಗಿ, ಅವೆಲ್ಲ ಎಲ್ಲಿ ಹೋದವು?

ಗಿರಿಯಪ್ಪ:- ಅದೆಲ್ಲ ಇವತ್ತು ಮಾಡಿದ್ದೆಯೇನೆ?

ಕಾವೇರಮ್ಮ:- ನೀವೇ ಹೇಳಿದ್ದಿರಿ ಓದಿ……. ಮಹಾತ್ಮರು ಉಪಾಸ ಮಾಡುತ್ತಾರಲ್ಲ ಅದಕ್ಕೆಲ್ಲ ಶಕ್ತಿ ಹಿಂದೆತಿಂದ ಒಳ್ಳೆ ತಿಂಡೀನೇ….ಎಂತ. ಇವತ್ತು ತಿಂದ ಆಹಾರ ಇನ್ನು ನಲವತ್ತೆಂಟು ದಿನಕ್ಕೆ ಶಕ್ತಿ ಕೊಡುತ್ತೇಂತ, ನೀವೇ ಹೇಳಿದ್ದಿರಿ. ಇವತ್ತಿಗೆ ಸರಿಯಾಗಿ ನಲವತ್ತೆಂಟು ದಿನದ ಹಿಂದೆ ಚಿರೋಟಿ, ವಾಂಗೀಭಾತು, ಮುಂತಾದ್ದೆಲ್ಲ ಮಾಡಿದ್ದೆ ಅದೆಲ್ಲ ನೀವೂ ತಿಂದಿದ್ದೀರಿ. ಈಗ ಆ ಶಕ್ತಿ……..

ಗಿರಿಯಪ್ಪ:- ನಾನೇನು ಮಹಾತ್ಮನೆ, ಆಗಿನ ಚಿರೋಟಿ ನೆನೆಸಿ ಕೊಂಡು, ಈಗ ಶಕ್ತಿ ಪಡಿಯೋಕೆ……..ಏನೆ……..

ಕಾವೇರಮ್ಮ:- ಈ ದಿನ ನೀವೂನು ಪುಟ್ಟ ಮಹಾತ್ಮರಾಗಿ ಗೋವಿಂದಪ್ಪನ ಸ್ಪ್ರಿಂಗ್ ಸುತ್ತಿಡಿ, ಆ ಗಡಿಯಾರ ನಡೀಲಿ.

ಗಿರಿಯಪ್ಪ:- ಇಡೀದೊಂದು ಮದ್ದಾನೆ ಶಕ್ತಿಯೇ ಬೇಕು ಅದಕ್ಕೆ, ಹತ್ಯಾರಿಲ್ಲದೇ ಒಳ್ಳೆ ಕೆಲಸಕ್ಕೆ ಒಪ್ಪಿಕೊಂಡೆನಲ್ಲಪ್ಪಾ!

ಕಾವೇರಮ್ಮ:- ಅದೇನೋ ನಿಮ್ಮ ಪಾಡು! ಬೆಳಗ್ಗೆ ನನ್ನ ಕೊಂಡು ಹೋಗೋ ಅಷ್ಟು ಕೆಲಸ ನನಗೆ ಕಾದಿದೆ? ಬಾರೋ ರೇಡಿಯೋ. ಮಲಗಿ ಬಿಡೋಣ ಮೆತ್ತನೆ ಲೇಪಿನ ಮೇಲೆ, ಬೆಚ್ಚಗೆ ಪವಡಿಸಿಬಿಡೋಣ.

ಗಿರಿಯಪ್ಪ:- ಇದೇನೆ, ನಡು ನೀರೊಳು ಕೈಯ್ಯ ಬಿಡುವರೇ-ಎಂತ ಮಾಡಿಬಿಟ್ಟೆಯಲ್ಲ! ನಿನ್ನ ಸಹಾಯ, ಗಿಹಾಯ, ಕಡೆಹಾಯ್ ಸೋಕೆ…….?

ಕಾವೇರಮ್ಮ:- ಇದೋ ಈ ನಿಮ್ಮ ಶುಂಟರಗಾಳಿ, ತುಂಟಪೋರನ್ನ ಹಿಡಿದು ಅವಚಿಕೊಂಡು ಮಲಗಿರುತ್ತೇನಲ್ಲ…….. ನಿಮ್ಮ ಗಡಿಯಾರದ ಯಜ್ಞ ಮುಗಿಯುವತನಕ……..

ಗಿರಿಯಪ್ಪ:- ಅಷ್ಟೇನೇ……..

ಕಾವೇರಮ್ಮ:- ಅಷ್ಟೇ ಮತ್ತೆ!

-೪-
[ಗಡಿಯಾರದ ಸಾಮಾನೆಲ್ಲ ಹರಡಿಕೊಂಡು ಗಿರಿಯಪ್ಪ ಕೂತಿದ್ದಾನೆ. ಮೇಜ ಕುರ್ಚಿ ಇದ್ದರೊಳ್ಳೆಯದು. ಅವನ ಕೈ ಮೈಯೆಲ್ಲ ಮಸಿ ಶರಟಿನ ತೋಳು ಹಿಂದಕ್ಕೆ ಮಡಿಚಿದೆ. ಕಾವೇರಮ್ಮ ಒಳಗಿಂದ ಕಣ್ಣೊರಸಿಕೊಳ್ಳುತ್ತ ಬರುತ್ತಾಳೆ. ಬಿಸ್ಕತ್ತು, ಸಿಗರೇಟು, ಟಾನಿಕ್ಕು ಸೀಸಿ, ಪ್ರಾಮುಖ್ಯವಾಗಿವೆ.]

ಗಿರಿಯಪ್ಪ:- ಗಂಟೆ ಎಷ್ಟಾಯಿತೆ? ಕಾವೇರೀ! ಏ ಕಾವೇರಿ!

ಕಾವೇರಮ್ಮ:- ಗಂಟೆ ನನಗೇನುಗೊತ್ತು, ನಿಮ್ಮ ಗಡಿಯಾರ ನಡೀತಾ ಇದ್ದ ಹಾಗೇ ಕನಸಾಯಿತು ದಿಗ್ಗನೆ ಎದ್ದುಬಂದೆ.

ಗಿರಿಯಪ್ಪ:- ಇನ್ನು ಸರಿಯಾಗಿಲ್ಲ ಇದೇಕೊ ಬಹಳ ತೊಂದರೆ ಕೊಡುತಾ ಇದೆ.

ಕಾವೇರಮ್ಮ:- ಇದೇನೂಂದರೆ! ರಾತ್ರಿ ಎರಡು ಗಂಟೆಯಾಗುತಾ ಇದೆ. ಇನ್ನೂ ಕೂತಿದ್ದೀರಿ. ಇದೇನು ಇಷ್ಟೊಂದು ಹೊಗೆ, ಇದೇನೋ ಬಾಯಾಡುತ್ತಾ ಇದ್ದೀರಿ?

ಗಿರಿಯಪ್ಪ:- ಅದೆಲ್ಲ ನಿನಗೇಕೆ, ಹೆಂಗಸರು ಇಲ್ಲಿಗೆಲ್ಲ ಬರಬಾರದು. ನೋಡು ನನ್ನ ಕೈ ಮೈ ಮಸಿಯಾಗಿದೆ. ಮುಖವೂ ಮಸಿಯಾಗಿದೇಂತ ಕಾಣುತ್ತೆ. ಸಾಮಾನೆಲ್ಲ ಎಲ್ಲ ಉಜ್ಜಿ ತಿಕ್ಕಿ ಲೋಲಕಪಟ್ಟಿ, ಗಂಟಿ ಸ್ಪ್ರಿಂಗೆಲ್ಲ ಸರಿಹೋಗಿಸಿದೇನೆ. ದೊಡ್ಡದೊಂದು ಸ್ಪ್ರಿಂಗ್ ಹಾಗೇ ಉಳಿದಿದೆ. ಅದನ್ನ ಸುತ್ತಿ ಚಕ್ರ ಡಬ್ಬಿಲಿ ಇಡುವುದೇ ಕಷ್ಟವಾಗಿದೆ. ಹತ್ತು ಸಾರಿ ಪ್ರಯತ್ನ ಮಾಡಿದ್ದೇನೆ ನೋಡು.

ಕಾವೇರಮ್ಮ:- ಕಾವೇರಿಯಿಂದ ಮಿಂಚಿನ ಶಕ್ತಿ ಬಂದಹೊರತು, ಯಾವ ಕೆಲಸವೂ ಆಗುವಹಾಗಿದಿಲ್ಲ. ಅಷ್ಟೊಂದೆಲ್ಲ ಹೊಗೆಬತ್ತಿ ಸೇದಿದ್ದೀರಿ, ಬಿಸ್ಕತ್ತೋ ಅದೇನೋ ತಿಂದಿದ್ದೀರಿ, ಅದೇನೋ ಟಾನಿಕ್ಕೋ ಏನೋ ಕುಡಿದಿದ್ದೀರೋ ಎಂತೋ, ಎದ್ದು ಬನ್ನಿ ಹೀಗೆ, ಇದಕ್ಕೆ ಬರ ಬೇಡಾಂತೀರಿ! ಅರ್ಧ ಡಬ್ಬಿ ಸಿಗರೆಟ್ ಸೇದಿದ್ದೀರಿ. ಏನಾಗೋಣ ನಾಳೆ, ಮೇಲಕ್ಕೆದ್ದು ಒಡಾಡಬೇಡವೆ, ಸ್ಪ್ರಿಂಗುಪನ್ಯಾಸ ಮುದ್ರವಾಗಬೇಡವೆ. ಆ ನರಿಗೊಂದಪ್ಪನ ಆಫೀಸಿನಲ್ಲಾದರೂ ಹಾಜರಿಹಾಕಬೇಡವೆ.

ಗಿರಿಯಪ್ಪ:- ಹಾಗಾದರೆ ನಾನು ಹೋಗಿ ಕೈ ಕಾಲು ತೊಳಕೊಂಡು ಬರಲೆ. ದೇವರಿಗೊಂದು ದೀಪಹಚ್ಚಿಡು.
[ಗಿರಿಯಪ್ಪ ಒಳಗೆ ಹೋಗುವನು.]

ಕಾವೇರಮ್ಮ:- [ತನ್ನಲ್ಲಿ ತಾನೆ] ಪಾಪ! ಹೋಗಿಬರಲಿ. ಇದೇನೆಲ್ಲ ಸಾಮಾನು, ಇದೇನೋ ಬಲವಂತ್ ಕಲ್ಪ, ಇದೆಂಥದೋ ಬಿಸ್ಕತ್, ಹೊನ್‍ಹಾರ್ ಹೊಗೇಬತ್ತಿ! ಇವರಿಗಾರು ಹೇಳಿದ್ದಾರು. ಇದೆಲ್ಲ ಬೇಕೆಂತ, ಅಯ್ಯೋ ಗಡಿಯಾರದ ರಿಪೇರಿಯೆ! ಇದೆಲ್ಲ ಕೊಡಿಸಿದ ಸ್ನೇಹಿತ ನಿನ್ನೆಂಥಾ ಕುಚೋದ್ಯವರೋ ನಾಕಾಣೆ……. ನಾನು ಉಪವಾಸದಲ್ಲಿದ್ದೇ ಇದೆಲ್ಲ ಸುತ್ತಿಟ್ಟು, ಸುಳಿಸಿಟ್ಟು, ಜೋಡಿಸಬಲ್ಲೆ. ಪಾಪ ಮಲಗಿಬಿಡಲಿ. ನಾನಾದರೂ ಮುಂದಿಂದೆಲ್ಲ ಮುಗಿಸಿಬಿಡುತ್ತೇನೆ……….. [ಒಳಗೆ ಹೋದ ಗಿರಿಯಪ್ಪನಿಗೆ] ಬಂದಿರಾ, ಏನೂಂದರೆ, ಕಡ್ಡಿ ಸುಟ್ಟವಾಸನೆ… ಯಾಕೇಂದರೆ ಬೆಂಕಿಕಡ್ಡಿ ಕೆರೆಯೋದು, ತುಪ್ಪದ ದೀಪ ಸಣ್ಣಗೆ ನೀಲಮಣಿಯಾಗಿ ಉರೀತಾ ಇಲ್ಲವೆ. ಬನ್ನಿ ಸಾಕು, ಕಾಗದ, ಕಡ್ಡಿ, ಮಸಿ ತನ್ನಿ ಹಾಗೇನೆ. [ಒಳಗಿದ್ದ ಗಿರಿಯಪ್ಪನಿಗೆ ಹೇಳಿದಾಗ ಆತನು ಒಳಗಿಂದ ಮಾತಾಡುತ್ತ ಬರುವನು.]

ಗಿರಿಯಪ್ಪ:- ಯಾಕೆ, ಕಾಗದ ಲೇಖಣಿ!

ಕಾವೇರಮ್ಮ:- ಗಡಿಯಾರದ ರಿಪೇರಿ ಚಾರ್ಜನ್ನ ನಮ್ಮ ಮನೆಯವರು ಯಾರೂ ಹೇಳಿಕಳಿಸಿದರೂ ಕೂಡಲೆ ಕಳಿಸಿಬಿಡಿ-ಎಂತ ಒಂದು ಕಾಗದ. ಇನ್ನೊಂದರಲ್ಲಿ-ನಾಳೆದಿನ ರಜಕ್ಕೆ ಬರಕೊಳ್ಳಿ ಇಷ್ಟು ಹೊತ್ತೂ ಎಚ್ಚರವಾಗಿದ್ದೀರಲ್ಲ ಈ ಹೊಗೇಲಿ, ಇನ್ನೂ ಬೆಳಗ್ಗೆದ್ದು ಹನ್ನೊಂದು ಗಂಟೆಗೆ ಅವಸರದೂಟಮಾಡಿ ಆಫೀಸಿಗೆ ಹೋಗುವುದಕ್ಕಾದೀತೆ ಅದಕ್ಕೇ ಹೇಳಿದ್ದು ರಜಕ್ಕೆ ಬರಕೊಳ್ಳಿ ಎಂತ.

ಗಿರಿಯಪ್ಪ:- ನಿಜವೇಸರಿ. ಗೋವಿಂದಪ್ಪನ ಪ್ರೆಸ್ಸಿಗೂ ಬರಿಯ ಬೇಕು ಆಫೀಸಿಗೂ ಬರಿಯಬೇಕು. ಆಫೀಸಿನಲ್ಲಿ ನಿದ್ದೆ ಬೆನ್ನ ಹತ್ತಿದರೆ ಫೀಸುಬರೋದೇ ಕಷ್ಟ. ಬರಿತೇನೆ……. ಈ ಗಡಿಯಾರದ ರಿಪೇರಿ ಈ ರಾತ್ರಿಗೆ ಮುಗಿಯುವದೇ ಇಲ್ಲ. ಸರಿಯಾದ ರಿಪೇರಿ ಸಾಮಾನಿಲ್ಲದೆ ನಾನೊಪ್ಪಿದ್ದೇಕೋ ಕಾಣೆ. ನೀನೋ ಈದಿನವೆಲ್ಲ ಮಡಿ, ಉಪವಾಸ, ಪೂಜೆ, ಮಂಗಳಾರತಿಯಲ್ಲೇ ಇದ್ದೀಯೆ. ನನಗ್ಯಾರು ದಿಕ್ಕು.

ಕಾವೇರಮ್ಮ:- ಸಾಯ್‍ನಾಥ!

ಗಿರಿಯಪ್ಪ:- ದೇವರೂಂತ ಎತ್ತರದಲ್ಲಿ ಕೂರಿಸಿ ಹೂವೇರಿಸಿದ್ದಿ! ಈಗ ಕೆಳಗಿಳಿದುಬಾಪ್ಪ ಸಾಯ್‍ನಾಥ, ನನ್ನ ಗಡಿಯಾರ ರಿಪೇರಿ ಮಾಡಪ್ಪಾ…..

ಕಾವೇರಮ್ಮ:- ರಿಪೇರಿ ಮಾಡಪ್ಪಾ ಎಂತಲೇ ಕೇಳಿಕೊಳ್ಳಬೇಕು. ನಮ್ಮ ಕಷ್ಟ ಏನೇ ಇರಲಿ ಅದರಲ್ಲಿ ಹೊಕ್ಕು ಬಳಸುವಂಥಾ ಮಹಾತ್ಮನನ್ನೇ ನಾವು ಪೂಜಿಸುವುದು. ನನಗಿದೆ ಆ ಶಕ್ತಿ ನಾನು ಕರೆದರೆ ಬರುತ್ತಾನೆ. ನೀವು ಹತ್ತಿರ ಇರಿ ಸಾಕು ನಾನು ಮುಗಿಸಿಬಿಡುತ್ತೇನೆ.

ಗಿರಿಯಪ್ಪ:- ನೀನು ಮಡಿಯಲ್ಲವೆ. ಇದೆಲ್ಲ ಹೊಲಸಲ್ಲವೆ. ಸೀಮೆ ಎಣ್ಣೆ, ಪೆಟ್ರೋಲು, ಇದೆಂಥದೋ ಎಣ್ಣೆ, ಈ ಕಬ್ಬಿಣದ ಚೂರುಪಾರು….

ಕಾವೇರಮ್ಮ:- ಆದೇ ಮಡಿಯಾಗುತ್ತೆ, ಅದೆಲ್ಲ ಪೂಜೆ ಸಾಮಾನು ಕೆಲಸಗಾರರಿಗೆ. ಬನ್ನಿ ಕೂತುಕೊಳ್ಳಿ……….

ಗಿರಿಯಪ್ಪ:- ಎರಡು ಕಾಗದಾನೂ ಗೀಚಿಹಾಕಿಬಿಟ್ಟೆ. ನಿನ್ನ ಹತ್ತಿರ ಕೂತಿದ್ದು. ಆಮೇಲೆ ಗಡಿಯಾರದ ಸ್ಪ್ರಿಂಗ್ ಕೈಲಿ ತೆಗೆದುಕೊಳ್ಳುತ್ತೇನೆ. ಆಗಬಹುದೋ, ಆಗಬೋದೋ, ಏನೇ! ಏನೇ!

ಕಾವೇರಮ್ಮ:- ಶ್, ಶ್, ಶ್, ಸುಮ್ಮನೆ ಇರಬಾರದೆ ಕೊಂಚ! ಕೈಲಿ ಸ್ಪ್ರಿಂಗಿದೆ ನೋಡಿ!

ಗಿರಿಯಪ್ಪ:- ಹಾ ಆ ಜಾ ಆ! ಆಕಳಕೆ ನನಗೆ! (ಅಲ್ಲೇ ಒರಗಿ ಕೊಳ್ಳುವನು)

ಕಾವೇರಮ್ಮ:- ಮಲಗಿಬಿಟ್ಟಿರಾ! ಹೋಗಲಿ. ನಿದ್ದೆಯಾದರೂ ಆಗಲಿ!

ಗಿರಿಯಪ್ಪ:- ರೇಡಿಯೋ ಬಂತು, ಹಿಡುಕೊ ಇಲ್ಲಿ ಬಿಡಬೇಡ ಹಿಡುಕೊಳ್ಳೆ! ಹೋಯಿತು ಹೋಯಿತೂ!

ಕಾವೇರಮ್ಮ:- ಅಯ್ಯೋ, ಕನವರಿಕೇನೆ! ಕನಸಲ್ಲಿ ಮನಸಲ್ಲಿ ಗಡಿಯಾರ, ಯಾರನ್ನ ಹಿಡುಕೊಳ್ಳೋದು? ಏನೂಂದರೆ!

ಗಿರಿಯಪ್ಪ:- ಕೂಸೇ! ರೇಡಿಯೊ! ಹಿಡುಕೋ! ಕಾವೂ! (ಕನಸಿನಲ್ಲಿ)

ಕಾವೇರಮ್ಮ:- ಚಿಮ್ಮೊ ಸ್ಪ್ರಿಂಗ್ ಬಿಟ್ಟು ಸಧ್ಯ, ಕಾವೂಂತಲೂ, ಕೂಸೂಂತಲೂ, ಹೇಳುತೀರಲ್ಲ. ಏನೂಂದರೆ ಎಚ್ಚರವಾಯಿತೆ? ಅವರು ಏಳುಲ್ಲ! ಕೂಸು ಎದ್ದು ಕೂಗುವುದು-ದೇದೇ, ಗೀಗೀ, ಪೇಪೇ ಊ ಊ ರೇಡ್ಯೊ ಹೋಗಮ್ಮ ನಿಮ್ಮಪ್ಪ ಅಲ್ಲಿ ಸುರುಳಿಕೊಂಡು ಕನವರಿಸ್ತಾ ಇದ್ದಾರೆ ಹೋಗು ಗಡಿಯಾರ ರಿಪೇರಿಮಾಡಿಬನ್ನಿ ಎಂತ ಕಿವಿಹಿಡಿದು ಎಳಿ. ಹೋಗು ಹಾಗೇ (ಗಿರಿಯಪ್ಪ ಏಳುವನು.)

ರೇಡಿಯೊ:- ದ್ದೆದ್ದೆ! ಪ್ಪಪ್ಪಪ್ಪಾ! ಊ ಊ!

ಗಿರಿಯಪ್ಪ:- ಅಬ್ಬಬ್ಬಾ! ಅದೇನು ಸ್ಪ್ರಿಂಗೆ! ಚಿಮ್ಮಿಕೊಂಡು ಹೋಗುತಾ ಇತ್ತು.

ಕಾವೇರಮ್ಮ:- ರೇಡಿಯೋ, ನೀನು ನನ್ನ ಪಕ್ಷಕ್ಕೆ ಅಂಕುಶವಾಗಿ ಬಿಟ್ಟಿದ್ದೀಯಾ? ಇಂಥಾ ಆನೆಗೆ ಅಂಕುಶಬೇಡವೆ? ಅದಿರಲಿ ಹಾವೂಂದಿರಲ್ಲ ಹಾವು ಕಾಣಬಾರನು ಕನಸಲ್ಲಿ! ಹೆಡೆಬಿಡತೊ ಇಲ್ಲವೊ! ಎಚ್ಚರವಾಯಿತೆ?

ಗಿರಿಯಪ್ಪ:- ಹಾವೇನೋ ಸರಿ! ಆ ವಿಚಾರವಲ್ಲ ನಾನು ಹೇಳೋದು. ಆ ಸ್ಪ್ರಿಂಗ್ ಉಪನ್ಯಾಸ ಮುಂದುವರಿಸಬಹುದು ಹೀಗೆಂತ ಕನಸನಲ್ಲಿ ಕಂಡೆ ಮಹನೀಯರೆ, ನಮ್ಮ ಈಗಿನ ನೂತನ ವಿಚಾರಗಳನ್ನೆಲ್ಲ ನಮ್ಮ ಸನಾತನ ಅಭಿಪ್ರಾಯಗಳಿಗೆ ಹೋಲಿಸಬಹುದು. ಮಹನೀಯರೆ ಮತ್ತು ಮಹಿಳೆಯರೆ! ಆದಿಶೇಷನೆಂದರೇನು? ಅವನು ಸುರುಳಿಸುತ್ತಿ ಕೊಂಡಿದ್ದಾನೆಂದರೇನು! ಆ ಸುರುಳಿಯಮೇಲೆ ಶ್ರೀ ಮಹಾ ವಿಷ್ಣುವೇ ಮಲಗಿರುವನು ಎಂದರೇನು? ಯೋಚಿಸಿದ್ದೀರಾ? ಆಶ್ಚರ್ಯ ಆಶ್ಚರ್ಯ! ಎನೇ ಎಲ್ಲಿ ಹೋಗಿಬಿಟ್ಟಿಯೆ, ಕೇಳು ನನ್ನ ಉಪನ್ಯಾಸ, ಕೇಳುತ್ತೆಯೆ….

ಕಾವೇರಮ್ಮ:- (ಒಳಗೆ ಹೊರಗೆ ಕೆಲಸದ ಗದ್ದಲದಲ್ಲಿ ಓಡಾಡುತ್ತಾ ……..) ಕೇಳುತ್ತಾನೇ ಇದ್ದೇನೇಂದ್ರೆ ಹೇಳಿಕೊಳ್ಳಿ………

ಗಿರಿಯಪ್ಪ:- ಎಲ್ಲಿದ್ದೆ, ಏನು ಹೇಳುತ್ತಾ ಇದ್ದೆ? ಹೂ, ಗೊತ್ತಾಯಿತು-ಶ್ರೀ ಮಹಾವಿಷ್ಣು ಶಕ್ತಿಯೇ, ಎಂದರೇನು, ಇಡಿಯ ಜಗತ್ತನ್ನೇ ನಡೆಸಿಕೊಂಡು ಹೋಗುವ ವಿಷ್ಣು ಶಕ್ತಿಯು ಸುರುಳಿಸುತ್ತಿರುವ ಆದಿಶೇಷನಲ್ಲಿದೆ. ಆದಿಶೇಷನೇ ಮಹತ್ತಾದ ಒಂದು ಸ್ಪ್ರಿಂಗ್! ಅಹಹಹಹಾ! ಏನು ಸನಾತನರ ಅಭಿಪ್ರಾಯ! ಕಾವೂ, ನಾವು ಪೂಜೆಮಾಡುತ್ತಿರುವುದಾದರೂ ಏನೆಂದು ತಿಳಿದೆ. ಹೇಳು, ಹೇಳು ನೋಡೋಣ……..

ಕಾವೇರಮ್ಮ:- ಕಾಫಿ ಸೋಸುತ್ತಾ ಇದ್ದೇನೆ. ನಿಮ್ಮ ಮಾತು ಕೇಳುತ್ತಾ ಕೈ ಸುಟ್ಟುಕೊಂಡೆ. ಏನೂಂತ ಹೇಳಿಬಿಟ್ಟು ಎದ್ದೇಳಿ, ಮುಖ ತೊಳೆಯಿರಿ! ಅಥವ ಕಾಲಪುರುಷರಿಗೇನು ಬೆಡ್ ಕಾಫೀ, ಗೀಫೀನೋ? (ಕುಚೋದ್ಯ ಮಾಡುತ್ತಾ)

ಗಿರಿಯಪ್ಪ:- ನನ್ನ ಅಭಿಪ್ರಾಯ ಅರ್ಥವಾಯಿತೆ? ನಾವು ಪೂಜಿಸುತ್ತ ಇರುವುದಾದರೂ……..ಏನೇ…….. ಕಾವೂ……..

ಕಾವೇರಮ್ಮ:- ಅದೇ ಸ್ಪ್ರಿಂಗ್, ಗಡಿಯಾರದ ಸ್ಪ್ರಿಂಗ್!

ಗಿರಿಯಪ್ಪ:- ಹಾಗೇ ! ನಿನಗೂ ಅರ್ಥವಾಯಿತು ಬಿಡು! ಅನಂತಸಾಗರದ ಅಲೆಗಳ ಮೇಲೆ ಸುರುಳಿ ಸುತ್ತಿ ಹೆಡೆಯೆತ್ತಿಕೊಂಡಿರುವ ಆದಿಶೇಶನೇ ಸ್ಪ್ರಿಂಗ್. ಅದರನಂತರ-ಶೇಷಶಾಯಿಯೇ ಪ್ರಪಂಚದ ಆಗು-ಹೋಗುಗಳನ್ನು ಕಾದುಕೊಳ್ಳುವ ಮಹಾಶಕ್ತಿ-ನಮಸ್ತೆ ಸ್ಪ್ರಿಂಗು ರೂಪೀ, ನಮಸ್ತೇ ಮಹಾಚಿಮ್ಮಿ ಪ್ರತಾಪೀ ನಮಸ್ತೆ ಗಡಿಯಾರ ರೂಪೀ….

ಕಾವೇರಮ್ಮ:- ನಮಸ್ತೇ ರಿಸ್ಟ್ ವಾಚು ರೂಪೀ……..! ಏಳೀಂದ್ರೆ, ಗೋವಿಂದಪ್ಪನ ಗಡಿಯಾರದ ಗತಿಯೇನಾಯಿತೆಂತ ನೋಡಿಕೊಳ್ಳಿ.

ಗಿರಿಯಪ್ಪ:- ಹೌದು ಹೌದೂ! ಮರೆತುಬಿಟ್ಟಿದ್ದೆ! ಇವತ್ತು ನನ್ನ ಉಪನ್ಯಾಸಕ್ಕೆ ದುಡ್ಡು ಕೊಡೋರು ಯಾರು? ಗಡಿಯಾರ ಕೊಟಕೊಟಾಂದರೆ ಗೋಂದಪ್ಪನಾದರೂ ಇಪ್ಪತ್ತು ರೂಪಾಯಿ ಕೊಟ್ಟಾನು. ಹೌದೇ, ಕಾವೂ! ಈದಿನ ರಜ ತಗೊಬೇಕಲ್ಲ!

ಕಾವೇರಮ್ಮ:- ಪಾಪ ಗಂಡಸರೇ ಹಾಗೆ. ಯಾರೇನೆಂದರೆ ಅದನ್ನೆ ನಂಬಿಬಿಡುತ್ತಾರೆ. ಬೆಳ್ಳಗಿದ್ದರೆ ಹಾಲು, ತೆಳ್ಳಗಿದ್ದರೆ ರೇಶ್ಮಿ, ಬಣ್ಣಗಿದ್ದರೆ ಬಂಗಾರ, ಮಿಣ್ಣಗಿದ್ದರೆ ಹೆಣ್ಣು. ನಿನ್ನೆ ರಾತ್ರಿಯೆಲ್ಲ ನಿದ್ದೆಗೆಟ್ಟು ಈಗ ಮಲಗಿದ್ದಾರೆ ಸಧ್ಯ, ನಾನು ನಡುವೆ ಉಪಾಯ ಹೂಡದಿದ್ದರೆ ಬೆಳಗೇ ಆಗಿಬಿಡುತಿತ್ತು ಈ ಗಡಿಯಾರದ ಮಂಗಳ ಮುಗಿಯೋಹೊತ್ತಿಗೆ ಒಂದು ಡಬ್ಬಿ ಹೊಗೆ ಬತ್ತಿಯೆಲ್ಲ ಸೇದಿ ಸೇದಿ ಕಣ್ಣು ಕೆಟ್ಟು ಮೈ ಕೆಟ್ಟು ರಗಳೆಯಾಗಿ ಹೋಗುತಿತ್ತು. ಆ ಟಾನಿಕ್ಕೂ ಬಿಸ್ಕತ್ತೂ ಹಾಗೇ ಇರಲಿ. ಗಡಿಯಾರವಂತೂ ಠೀಕುಠಾಕಾಗಿ ಕೂತಲ್ಲೆ ನಡೀತಾ ಇದೆ. ಅವರೆದ್ದರೆ ನೋಡಿ ಸಂತೋಷ ಪಟ್ಟಾರು. ಆ ಸ್ಪ್ರಿಂಗು ಅದೆಷ್ಟು ಬಿಗಿಯಾಗಿರೋಣ! ಅವರಿಗಿಂತ ಅದು ಬಿರುಸು, ಅದನ್ನು ಅದರ ಡಬ್ಬಿಯೊಳಗೆ ಸುತ್ತಿ ಸೇರಿಸುವುದೇ ಕಷ್ಟವಾಗಿತ್ತು. ಗುರುವಾರದ ಉಪವಾಸ ಸಾರ್ಥಕವಾಯಿತು. ಬಿಡು. ಸಾಯ್‍ನಾಥನ ಅನುಗ್ರಹ ಈ ರೀತಿಯಾಗಿಯೂ ನೆರವಾಯಿತಲ್ಲ……… ಲೇ ಮಹಡಿ ಮನೆ ಗೋಪಿ, ಗೋಪೀ, ಬಾಪ್ಪ ಇಲ್ಲಿ. ನಿಮ್ಮ ತಂದೆಮನೇಲಿ ಇದ್ದಾರೆಯೆ? ಇಲ್ಲವೆ! ಸರಿಬಿಡು. ಈ ಚೀಟಿತಗೊ. ಇದರಲ್ಲಿ ಇರುವುದನ್ನ ಗೋವಿಂದ ಮುದ್ರಣಾಲಯದವರಿಗೆ ರಿಂಗ್ ಮಾಡಿ ಕರೆದು ಟೆಲಿಫೋನ್‌ನಲ್ಲಿ ಹೇಳಿಬಿಡು. ವಿಷಯ ಇಷ್ಟೆ-ಗೋಡೆ ಗಡಿಯಾರ ಸರಿಯಾಯ್ತು. ರಿಪೇರಿ ಚಾರ್‍ಜು ಆಳಿನ ಕೈಲಿ ಕಳಿಸಿದರೆ ಗಡಿಯಾರ ಈ ಕ್ಷಣವೇ ಕಳಿಸಿಕೊಡುತ್ತೇಂತ ನಮ್ಮ ಮನೆಯವರ ಹೆಸರಲ್ಲಿ ಹೇಳು. ಹೌದು ಗೋವಿಂದ ಮುದ್ರಣಾಲಯ! ಹೇಳಿಬಿಡು ಅರ್ಜಟಂತ. ಹೇಳತೀಯ! ಜಾಣ, ನೀನು!

ಕಾವೇರಮ್ಮ:- ಎದ್ದಿರಾ ಏಳಿ, ಬಲಮಗ್ಗುಲಲ್ಲಿ ಏಳಿ, ಈಗ ಬೆಳಗಾಯಿತೇ, ಹೆಚ್ಚೇನು ಹೊತ್ತಾಗಿಲ್ಲ ಹತ್ತೇಗಂಟೆ. ಇಲ್ಲ, ಇಲ್ಲ, ಅವಸರವೇನೂ ಇಲ್ಲ. ನಿಮ್ಮ ಆಫೀಸರು ಹೇಳಿಕಳಿಸಿದ್ದಾರೆ ರಜಕೊಟ್ಟಿದ್ದಾರಂತೆ, ಆದರೆ ಇದಿಷ್ಟು ಕಾಗದಕ್ಕೆಲ್ಲ ಅದೇನೋ ಮಾಡಿಡಬೇಕಂತೆ. ಎದ್ದು ಬಿಡಿ. ಸಾಯಿಬಾಬನಿಗೆ ನಮಸ್ಕಾರಮಾಡಿ, ಸ್ನಾನಮಾಡಿ, ಪಾರಣೆ ಮಾಡಿಬಿಡಿ.

ಗಿರಿಯಪ್ಪ:- ಸಾಯಿನಾಥನ ಎದುರಿಗೆ ನಿಲ್ಲುವುದಕ್ಕೆ ಶಕ್ತಿಯಿಲ್ಲ ನನಗೆ ಹಿಡಿದ ಕೆಲಸ ಮುಗಿಸಿಬಿಡದೆ ಮಲಗಿಬಿಟ್ಟೆ ಅದೇ ನನ್ನ ತಪ್ಪು. ಅಕ್ಕೊ, ಅದೆಲ್ಲಿತ್ತೇ ರೇಡಿಯೋ ಕಿವೀಗೆ ಲೋಲಕ್ಕು!

ಕಾವೇರಮ್ಮ:- ಪ್ರೆಸ್ಸಿನಲ್ಲಿ ಒಂದು ಲೋಲಕ್ಕು ಅಲುಗಾಡುತ್ತೆ. ಅದರ ಗುರುತಾಗಿ ಇಲ್ಲಿ ರೇಡಿಯೋ ಕಿವೀಲೂ ಅಲುಗಾಡುತ್ತೆ ಲೋಲಕ್ಕು.

ಗಿರಿಯಪ್ಪ:- ಗಡಿಯಾರ ರಿಪೇರಿ ಮಾಡಿದೆಯಾ, ಮಾಡಿಬಿಟ್ಟೆಯಾ!

ಕಾವೇರಮ್ಮ:- ಗಡಿಯಾರಕ್ಕೆ ಜೀವಬಂದು, ಅದು ಗೋವಿಂದನ ಸನ್ನಿಧಾನಕ್ಕೆ ಹೋಗಿ, ಈ ಲೋಲಕ್ಕೂ ಪ್ರಸಾದ ಕಳಿಸಿದೆ ಎಂದೆ. ನನ್ನ ಚಂದ್ರಾವಳೀಗೆ ಅದೇ ಪೀಠಿಕೆ ಎಂದೆ.

ಗಿರಿಯಪ್ಪ:- ಅಲ್ಲವೆ, ಆ ಗಡಿಯಾರದ ಸ್ಪ್ರಿಂಗ್ ಸುತ್ತಿದವಳೂ ನೀನೆ ಈ ಮನೆ ಸ್ಪ್ರಿಂಗ್ ಸುತ್ತಿದವಳೂ ನೀನೇ ಆದೆಯಲ್ಲೇ!

ಕಾವೇರಮ್ಮ:- ನಾನು ಹೆಂಗುಸು, ನನಗೆಲ್ಲಿ ಆ ಶಕ್ತಿ ಬರತ್ತೇಂದರೆ.

ಗಿರಿಯಪ್ಪ:- ಎಲ್ಲಿ ಬಂತೆ? ಹೇಳುತ್ತೇನೆ ಹತ್ತಿರಬಾ!

ಕಾವೇರಮ್ಮ:- ನಿಮ್ಮ ಹತ್ತಿರ ಯಾವಾಗೆಂದರೆ ಆವಾಗ ಬರೋನು ಇಲ್ಲಿದ್ದಾನೆ. ಹೋಗೋ ಮರಿ, ನಿನ್ನೂ ಕೂಡ ಒಂದು ಮಹಾ ಚಿಮ್ಮಿಯನ್ನೇ ಮಾಡಿಬಿಡುತ್ತಾರೆ; ಅವರು.

ಗಿರಿಯಪ್ಪ:- ಅವನು ಬೇಡ ನೀನು ಬಾ, ಆ ಗಡಿಯಾರದ ಸ್ಪ್ರಿಂಗ್ ಮಾಡಿದ ಗಾಯಾನಾದರೂ ನೋಡೋಣ.

ಕಾವೇರಮ್ಮ:- ಈಗ ಬೇಡಾಂದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧರ್‍ಮ ಮತ್ತು ಸೇಡು
Next post ರಾಮ-ಕೃಷ್ಣ-ಶಿವ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys