‘ಎತ್ತು’ ಭಾರತೀಯ ಸಂಸ್ಕೃತಿಯ ಪೂಜನೀಯ ಸ್ಥಾನದಲ್ಲಿದೆ. ನಾಗರಿಕತೆಯ ಬೆಳವಣಿಗೆಯಲ್ಲಿ ಈ ಎತ್ತಿನ ಪಾತ್ರ ಮಹತ್ವವಾದುದು. ಇವುಗಳ ಸೆಗಣಿಯಿಂದ ಗೋಬರ್ ಗ್ಯಾಸ್, ಎಂಬ ಅನಿಲ ಉತ್ಪತ್ತಿಯಾಗುತ್ತಿರುವುದನ್ನು ಈಗಾಗಲೇ ಬಳಸಿಕೊಳ್ಳಲಾಗಿದೆ. ಆದರೆ ಈದೀಗ ಈ ಎತ್ತುಗಳಿಂದ ವಿದ್ಯುತ್ ಉತ್ಪತ್ತಿಯಾಗುವ ವಿಷಯ ಸಂಶೋಧನೆಗಳಿಂದ ದೃಢ ಪಟ್ಟದೆ. ನಾಲ್ಕು ಎತ್ತುಗಳು ತಮಗೆ ಕಟ್ಟಿದ ಕಂಬಗಳನ್ನು ಒಂದು ಅಕ್ಷ ಪಥದಲ್ಲಿ ಸುತ್ತಹಾಕುತ್ತವೆ. ಈ ಕಂಬಗಳನ್ನು ವೃತ್ತದ ಕೇಂದ್ರದಿಂದ ಒಂದು ಸ್ಥಂಬಕ್ಕೆ ಕಟ್ಟಿರುತ್ತಾರೆ. ಸ್ತಂಭದ ಕೆಳಗೆ ಅಂದರೆ ನೆಲದಾಳದಲ್ಲಿ ಒಂದು ಜನರೇಟರ್ಗೆ ಕಂಬದೊಡನೆ ಸಂಪರ್ಕ ಕಲ್ಪಿಸಲಾಗುತ್ತದೆ. ಎತ್ತುಗಳ ಚಲನೆಯಿಂದ ಜನರೇಟರ್ ಕಾರ್ಯ ಪ್ರವೃತ್ತವಾಗಿ ವಿದ್ಯುತ್ ಉತ್ಪಾದಿಸುತ್ತದೆ. ಉತ್ಪಾದಿತವಾದ ವಿದ್ಯುತ್ ಪವರ್ ಬೋರ್ಡಿಗೆ ತಲುಪಿ ಅಲ್ಲಿಂದ ತಂತಿಗಳ ಮೂಲಕ ಬಳಕೆಗೆ ಬೇಕಾದ ಸ್ಥಳಕ್ಕೆ ತಲುಪುತ್ತದೆ. ನಾಲ್ಕು ಎತ್ತುಗಳು ಪ್ರತಿದಿನ ಮೂರುಪಾಳಿಯಲ್ಲಿ ಕೆಲಸ ಮಾಡಿದರೆ ದಿನಕ್ಕೆ ೫೦ ಯುನಿಟ್ಗಳಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಈಗ ಪ್ರಾಯೋಗಿಕವಾಗಿ ರೂಪಿತವಾದ ಈ ವಿದ್ಯುತ್ ಉತ್ಪಾದನಾ ಫಲಕದ ಸ್ಥಾಪನೆ ೪೦ ಸಾ. ರೂಗಳು. ಆದರೆ ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಸರಳೀಕೃತಗೊಳಿಸಲು ಸಾಧ್ಯವಿದೆ. ಆಗ ವಿದ್ಯುತ್ ಉತ್ಪಾದನಾ ಘಟಕದ ಖರ್ಚು ಒಂದುವರೆ ಸಾವಿರ ರೂ.ಮೀರಲಾರದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಭಾರತದಲ್ಲಿ ಕ್ಷೀರ ಕ್ರಾಂತಿಯು ಅಭಿವೃದ್ದಿಯಾದ ಗುಜರಾತ ರಾಜ್ಯದಲ್ಲಿಯೇ ಈ ಎತ್ತುಗಳ ಶಕ್ತಿ ಉತ್ಪಾದನಾ ಪ್ರಯೋಗ ಆರಂಭಗೊಂಡಿದೆ. ಗುಜರಾತ್ ರಾಜ್ಯದ ವಡೋದರ ಜಿಲ್ಲೆಯ ಚೋಟಾ ಉದಯ ಪುರಕ್ಷೇತ್ರದ ೨೪ ಆದಿವಾಸಿ ಗ್ರಾಮಗಳು ಈಗ ಎತ್ತುಗಳ ಬಲದಿಂದ ವಿದ್ಯುತ್ಶಕ್ತಿಯನ್ನು ಪಡೆದಿವೆ. ಈ ಯೋಜನೆಯನ್ನು ರೂಪಿಸಿದ ಕೈಗಾರಿಕೋದ್ಯಮಿ ಮತ್ತು ವಿಜ್ಞಾನಿ ಕ್ರಾಂತಿಬಾಯಿ ಶ್ರಾಪ್ ಮತ್ತು ಅವರ ಸಂಬಂಧಿ ಶೃತಿ ಬೆನ್ಶ್ರಾಪ್ ಪ್ರತಿ ಷ್ಠಾನವು ಒಂದು ಸಮಾಜ ಸೇವಾ ಸಂಘಟನೆಯಾಗಿದೆ. ಈಗಾಗಲೇ ಈ ಗ್ರಾಮಗಳಲ್ಲಿ ಆರೋಗ್ಯ ಮತು ಶಿಕ್ಷಣವನ್ನು ಕುರಿತ ಹಲವು ಕಾರ್ಯಕ್ರಮಗಳು ನಡೆಯುತ್ತಲಿದೆ.
ಎತ್ತುಗಳಿಂದ ಉತ್ಪಾದಿಸಲ್ಪಟ್ಟ ವಿದ್ಯುತ್ತನ್ನು ದನಗಳಿಗೆ ಮೇವು ಕತ್ತರಿಸುವ ಯಂತ್ರಕ್ಕೆ ಬಳಸಿಕೊಳ್ಳಲಾಗುತ್ತದೆ. ನೀರೆತ್ತುವ ಪಂಪ್ಸೆಟ್ಟನ್ನು ನಡೆಸಲಾಗುತ್ತದೆ. ಹಿಟ್ಟಿನ ಗಿರಣಿಗಳಿಗೆ ಅಳವಡಿಸಲಾಗಿದೆ. ಮನೆಗಳಿಗೆ ದೀಪ ಬೆಳಗಿಸಲಾಗುತ್ತದೆ. ಎತ್ತುಗಳ ಬಲದಿಂದ ಸ್ಥಂಭವು ನಿಮಿಷಕ್ಕೆ ೫೦ ಸುತ್ತುಗಳನ್ನು ಹಾಕಿದರೆ ಇದಕ್ಕೆ ಹೊಂದಿಕೊಂಡಿರುವ ಫ್ರಿವ್ಹಿಲ್ಗಳು ನಿಮಿಷಕ್ಕೆ ೧,೪೦೦ ನಂತರ ೨,೪೦೦ ಸುತ್ತು ಹಾಕುತ್ತವೆ. ಹಾಗೆಂದ ಮಾತ್ರಕ್ಕೆ ಕೇವಲ ಎತ್ತುಗಳನ್ನು ಇದಕ್ಕಾಗಿ ಬಳಸಿಕೊಂಡು ಶೋಷಣೆ ಮಾಡಿ ಬಳಲಿಸುವುದಿಲ್ಲ, ಪಾಳಿಯ ಪ್ರಕಾರ ಈ ಕಾರ್ಯ ನಡೆಯುತ್ತದೆ. ಬಿಡುವಿನ ವೇಳೆಯಲ್ಲಿ ಎತ್ತುಗಳಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಇದಕ್ಕೂ ಬಿಡುವು ಸಿಕ್ಕರೆ ಕೃಷಿ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ.
ಬ್ರಿಟೀಷರ ಕಾಲದಲ್ಲಿ ಕಟ್ಟಡಗಳನ್ನು ಕಟ್ಟಲು ಗಾರೆಯನ್ನು ತಯಾರಿಸುವಲ್ಲಿ ಇದೇ ರೀತಿ ಎತ್ತು ಕತ್ತೆಗಳನ್ನು ಬಳಸಿ ವೃತ್ತಹೂಡಿಸಿ ಗಾರೆಯನ್ನು ನುರಿಸುವುದನ್ನು ಓದಿರಬಹುದು. ಅದೇ ತಾಂತ್ರಿಕ ಮಾದರಿಯದಿಂದಲೇ ಹೀಗೆ ಮಾಡಿರುಲೂಬಹುದು. ಕೋಣ, ಕತ್ತೆಗಳು ವೃತ್ತ ತಿರುಗುವಾಗ ಏಕಚಿತ್ತದಿಂದ ತಿರುಗಲಾರವು. ಅದಕ್ಕಾಗಿ ಈ ಕೆಲಸಕ್ಕೆ ಎತ್ತುಗಳೇ ಸೂಕ್ತವೆಂದು ಬಗೆಯಲಾಗಿದೆ. ಈ ಕಾರಣಕ್ಕಾಗಿಯೇ ನಮ್ಮ ಜನಪದರ ಹಂತಿ, ಹೊಡೆಯುವ ಕಲೆಯನ್ನು ಕಲೆತಿದ್ದರು. ಈ ಎತ್ತುಗಳಿಂದ ವಿದ್ಯುತ್ ಉತ್ಪಾದನೆಯು ದೊಡ್ಡ ಪ್ರಮಾಣದಲ್ಲಿ ಆಗದಿದ್ದರೂ ಸಣ್ಣ ಪ್ರಮಾಣದಲ್ಲಿಯಂತೂ ಯಶಸ್ವಿಯಾಗುತ್ತಿರುವುದು ರೈತರಪಾಲಿಗೆ ಶುಭ ಸೂಚಕವಾಗಿದೆ.
*****



















