Home / ಕವನ / ಅನುವಾದ / ‘ತಪ್ಪು’ ಮಾಡಿದ ಒಬ್ಬ ಸೋದರನಿಗೆ

‘ತಪ್ಪು’ ಮಾಡಿದ ಒಬ್ಬ ಸೋದರನಿಗೆ

ಮೂಲ: ನಜರುಲ್ ಇಸ್ಲಾಂ

ಅಯ್ಯೋ ಪೆದ್ದಣ್ಣ
ಯಾರು ಹೇಳಿದ್ದೊ ನೀ ಕಳ್ಳ ಅಂತ?
ಖದೀಮ ಅಂತ ?

ನೋಡು ಇಲ್ಲಿ
ಸುತ್ತ ಕೂತಿದೆ ಹೇಗೆ
ಮೆತ್ತೆ ಪೀಠದ ಮೇಲೆ ಅಸಲುಗಳ್ಳರ ತಂಡ!
ರಾಜ್ಯಸೂತ್ರವ ಹಿಡಿದು ರಕ್ತ ಹೀರಿದೆ ಹೇಗೆ
ಎಲ್ಲರಿಗು ಮೇಲೆ ಅತಿ ಭಂಡ!
ಯಾರಪ್ಪ ಡೇನಿಯಲ್, ಎಲ್ಲಿದ್ದಾನೆ ಹೇಳು
ಗುಟ್ಟು ಹೊರತೆಗೆವಂಥ ಧೀರ ಈ ಠಕ್ಕಿಗರ ಹೊಟ್ಟೆ ಸೀಳಿ?
ಯಾರಪ್ಪ ನಿಷ್ಕಳಂಕ.
ಯಾರ ಮನೆಯಯ್ಯ ಗುಡಿ?
ದಪ್ಪ ಹೇಗಾದಾರು ಇಷ್ಟು, ನುಂಗದೆ ಇವರು ಬಡವರನ್ನ?
ಎಷ್ಟು ದೊಡ್ಡದೊ ಲೂಟಿ, ಎಷ್ಟು ದೊಡ್ಡದೊ ಚಾಟಿ
ಅಷ್ಟೆ ದೊಡ್ಡದೊ ಅಣ್ಣ ವಿಶ್ವಸಂಸ್ಥೆಗಳಲ್ಲಿ ಇವರ ದನಿ ಧಾಟಿ.
ತುಳಿದು ಮಣ್ಣಾದವನ ಹೀರಿ ಏರಿದ ಮಹಲು,
ಲಕ್ಷ ಕುಲುಮೆಯ ಮೆಟ್ಟಿ ಎದ್ದಿದೆಯೊ ಕಾರ್ಖಾನೆ ತಡೆದು ಬಿಸಿಲು.
ನರಮಾಂಸ ಉಂಡು ಬೆಳೆಯುವ ದೈತ್ಯಯಂತ್ರ ಇದು ಯಾವುದಯ್ಯ,
ಯಾವುದಯ್ಯಾ ಗೆಳೆಯ? ಯಾವುದಯ್ಯಾ ಒಳಗೆ
ಹರಿವ ಪ್ರಾಣದ ಹೊಳೆಯ ಹೀರಿ ಕಬ್ಬಿನ ಸಿಪ್ಪೆ
ಮಾಡಿ ಎಸೆಯುವ ತಂತ್ರ?
ಲಕ್ಷ ಲಕ್ಷ ಕುಟುಂಬ ದುಡಿದು ತುಂಬುತ್ತವೋ
ಕಳ್ಳಿ ಕರಿಸಿರಿಯ ಬಸಿರು.
ನೆನಪಿದೆಯ, ಅಲ್ಲಿ ಗ್ಯಾರೇಜು ಸಾಲಿರುವ ಕಡೆ
ಚಳಿಮಳೆಗೆ ತಡೆ ನಿಂತ
ಅಷ್ಟಿಷ್ಟು ಹರಿದ ಕೊಡೆ ಥರದ ಗುಡಿಸಲ ಸಾಲು ಇದ್ದದ್ದು?
* * *

ನಿಜ ಕಣೋ, ಈ ಗ್ರಹ
ವ್ಯಾಪಾರಿ ಠಕ್ಕು ರೂಪಾಯಿ ಮಾಟಕೆ ಮೆಚ್ಚಿ
ಕಟ್ಟಿಸಿದ ವೇಶ್ಯಾಗೃಹ.
ಖುಷಿಹತ್ತಿ ಸೈತಾನ ತುಟಿ ಬಳಿಗೆ ತಂದು
ಬಗ್ಗಿಸುತ್ತಿದ್ದಾನೆ ಮಧುಬಟ್ಟಲ.
ಆಸೆ ಎಲ್ಲಿದೆ? ಎಲ್ಲಿ ಅನ್ನ? ಭರವಸೆ? ಭಾಷೆ
ಮೋಸ ಗೆದ್ದಿತೊ ಅಣ್ಣ ಭವಿಷ್ಯವನ್ನ.
ಬಳಗವಿದೆ ಕಳ್ಳರಿಗೆ
ಬಲಗಳಿವೆ ಠಕ್ಕರಿಗೆ
ಭೋಳೆರಾಮರು ನೀವು ಹೊಕ್ಕ ಜೈಲಿನ ಸುತ್ತ
ಕಳ್ಳರದ ತಂಡವಿದೆ ಹಗಲಿರುಳ ಗಸ್ತಿಗೆ!
* * *

ಯಾರು ಕರೆದರೊ ನಿನ್ನ ಕಳ್ಳ ಅಂತ,
ಖದೀಮ ಅಂತ?
ತೆಗೆದಿದ್ದರೂ ಪಾಪ! ಮಹಲ ಮಾಳಿಗೆಯಿಂದ
ಒಂದೆರಡು ಲೋಟ
ನಾಲ್ಕು ನಾಣ್ಯ
ಹಸಿದ ಮಧ್ಯಾಹ್ನಕ್ಕೆ ಪಾವು ಧಾನ್ಯ.
ಇರಿಯಲಿಲ್ಲಲ್ಲ ನೆರೆಯವನನ್ನ ಬೆನ್ನಲ್ಲಿ?
ಬರೆಯಲಿಲ್ಲಲ್ಲ ಅದ ಹೊಗಳಿ ಪುಸ್ತಕದಲ್ಲಿ?

ಯಾಕೆ ಕೊರಗುವೆ ತಮ್ಮ?
ನಿನ್ನ ತಪ್ಪೆಲ್ಲವೂ ಬರಿಯ ಕತ್ತಲ ಗುಮ್ಮ.
ಯಾರಿಗಾಗಿಯೊ ದುಡಿದ, ಹೊಡದ, ತಲೆಗಳನೊಡೆದ
ವಾಲ್ಮೀಕಿಗಾದಂತೆ ಸ್ಥಿತ್ಯಂತರ
ಸಿಕ್ಕ ಪಕ್ಷಕ್ಕೆ ನಿಜವಾದ ಮಾನವನೊಬ್ಬ
ಆಗದಿರುವುದೆ ನಿನಗು ಸ್ಥಾನಾಂತರ?
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...