Home / ಕವನ / ಅನುವಾದ / ‘ತಪ್ಪು’ ಮಾಡಿದ ಒಬ್ಬ ಸೋದರನಿಗೆ

‘ತಪ್ಪು’ ಮಾಡಿದ ಒಬ್ಬ ಸೋದರನಿಗೆ

ಮೂಲ: ನಜರುಲ್ ಇಸ್ಲಾಂ

ಅಯ್ಯೋ ಪೆದ್ದಣ್ಣ
ಯಾರು ಹೇಳಿದ್ದೊ ನೀ ಕಳ್ಳ ಅಂತ?
ಖದೀಮ ಅಂತ ?

ನೋಡು ಇಲ್ಲಿ
ಸುತ್ತ ಕೂತಿದೆ ಹೇಗೆ
ಮೆತ್ತೆ ಪೀಠದ ಮೇಲೆ ಅಸಲುಗಳ್ಳರ ತಂಡ!
ರಾಜ್ಯಸೂತ್ರವ ಹಿಡಿದು ರಕ್ತ ಹೀರಿದೆ ಹೇಗೆ
ಎಲ್ಲರಿಗು ಮೇಲೆ ಅತಿ ಭಂಡ!
ಯಾರಪ್ಪ ಡೇನಿಯಲ್, ಎಲ್ಲಿದ್ದಾನೆ ಹೇಳು
ಗುಟ್ಟು ಹೊರತೆಗೆವಂಥ ಧೀರ ಈ ಠಕ್ಕಿಗರ ಹೊಟ್ಟೆ ಸೀಳಿ?
ಯಾರಪ್ಪ ನಿಷ್ಕಳಂಕ.
ಯಾರ ಮನೆಯಯ್ಯ ಗುಡಿ?
ದಪ್ಪ ಹೇಗಾದಾರು ಇಷ್ಟು, ನುಂಗದೆ ಇವರು ಬಡವರನ್ನ?
ಎಷ್ಟು ದೊಡ್ಡದೊ ಲೂಟಿ, ಎಷ್ಟು ದೊಡ್ಡದೊ ಚಾಟಿ
ಅಷ್ಟೆ ದೊಡ್ಡದೊ ಅಣ್ಣ ವಿಶ್ವಸಂಸ್ಥೆಗಳಲ್ಲಿ ಇವರ ದನಿ ಧಾಟಿ.
ತುಳಿದು ಮಣ್ಣಾದವನ ಹೀರಿ ಏರಿದ ಮಹಲು,
ಲಕ್ಷ ಕುಲುಮೆಯ ಮೆಟ್ಟಿ ಎದ್ದಿದೆಯೊ ಕಾರ್ಖಾನೆ ತಡೆದು ಬಿಸಿಲು.
ನರಮಾಂಸ ಉಂಡು ಬೆಳೆಯುವ ದೈತ್ಯಯಂತ್ರ ಇದು ಯಾವುದಯ್ಯ,
ಯಾವುದಯ್ಯಾ ಗೆಳೆಯ? ಯಾವುದಯ್ಯಾ ಒಳಗೆ
ಹರಿವ ಪ್ರಾಣದ ಹೊಳೆಯ ಹೀರಿ ಕಬ್ಬಿನ ಸಿಪ್ಪೆ
ಮಾಡಿ ಎಸೆಯುವ ತಂತ್ರ?
ಲಕ್ಷ ಲಕ್ಷ ಕುಟುಂಬ ದುಡಿದು ತುಂಬುತ್ತವೋ
ಕಳ್ಳಿ ಕರಿಸಿರಿಯ ಬಸಿರು.
ನೆನಪಿದೆಯ, ಅಲ್ಲಿ ಗ್ಯಾರೇಜು ಸಾಲಿರುವ ಕಡೆ
ಚಳಿಮಳೆಗೆ ತಡೆ ನಿಂತ
ಅಷ್ಟಿಷ್ಟು ಹರಿದ ಕೊಡೆ ಥರದ ಗುಡಿಸಲ ಸಾಲು ಇದ್ದದ್ದು?
* * *

ನಿಜ ಕಣೋ, ಈ ಗ್ರಹ
ವ್ಯಾಪಾರಿ ಠಕ್ಕು ರೂಪಾಯಿ ಮಾಟಕೆ ಮೆಚ್ಚಿ
ಕಟ್ಟಿಸಿದ ವೇಶ್ಯಾಗೃಹ.
ಖುಷಿಹತ್ತಿ ಸೈತಾನ ತುಟಿ ಬಳಿಗೆ ತಂದು
ಬಗ್ಗಿಸುತ್ತಿದ್ದಾನೆ ಮಧುಬಟ್ಟಲ.
ಆಸೆ ಎಲ್ಲಿದೆ? ಎಲ್ಲಿ ಅನ್ನ? ಭರವಸೆ? ಭಾಷೆ
ಮೋಸ ಗೆದ್ದಿತೊ ಅಣ್ಣ ಭವಿಷ್ಯವನ್ನ.
ಬಳಗವಿದೆ ಕಳ್ಳರಿಗೆ
ಬಲಗಳಿವೆ ಠಕ್ಕರಿಗೆ
ಭೋಳೆರಾಮರು ನೀವು ಹೊಕ್ಕ ಜೈಲಿನ ಸುತ್ತ
ಕಳ್ಳರದ ತಂಡವಿದೆ ಹಗಲಿರುಳ ಗಸ್ತಿಗೆ!
* * *

ಯಾರು ಕರೆದರೊ ನಿನ್ನ ಕಳ್ಳ ಅಂತ,
ಖದೀಮ ಅಂತ?
ತೆಗೆದಿದ್ದರೂ ಪಾಪ! ಮಹಲ ಮಾಳಿಗೆಯಿಂದ
ಒಂದೆರಡು ಲೋಟ
ನಾಲ್ಕು ನಾಣ್ಯ
ಹಸಿದ ಮಧ್ಯಾಹ್ನಕ್ಕೆ ಪಾವು ಧಾನ್ಯ.
ಇರಿಯಲಿಲ್ಲಲ್ಲ ನೆರೆಯವನನ್ನ ಬೆನ್ನಲ್ಲಿ?
ಬರೆಯಲಿಲ್ಲಲ್ಲ ಅದ ಹೊಗಳಿ ಪುಸ್ತಕದಲ್ಲಿ?

ಯಾಕೆ ಕೊರಗುವೆ ತಮ್ಮ?
ನಿನ್ನ ತಪ್ಪೆಲ್ಲವೂ ಬರಿಯ ಕತ್ತಲ ಗುಮ್ಮ.
ಯಾರಿಗಾಗಿಯೊ ದುಡಿದ, ಹೊಡದ, ತಲೆಗಳನೊಡೆದ
ವಾಲ್ಮೀಕಿಗಾದಂತೆ ಸ್ಥಿತ್ಯಂತರ
ಸಿಕ್ಕ ಪಕ್ಷಕ್ಕೆ ನಿಜವಾದ ಮಾನವನೊಬ್ಬ
ಆಗದಿರುವುದೆ ನಿನಗು ಸ್ಥಾನಾಂತರ?
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...