ಏನೆಂದು ಹಾಡಲಿ

ಏನೆಂದು ಹಾಡಲೀ ಏನನ್ನು ಹಾಡಲೀ ನಿಮ್ಮ ಮುಂದೆ ನಿಂತು
ಒಡೆದ ಗಂಟಲಿಂದಾ ಬಿರಿದ ಒಣಾ ನಾಲಿಗಿಂದ ||ಪ||

ಕಣ್ಣು ಕಣ್ಣುಗಳ ಚಿಕ್ಕೆ ಕಾಂತಿಗಳು ನಂದಿ ನರಳುತಿರಲು
ಬಾನ ಚಿಕ್ಕೆಗಳ ಬೆಣ್ಣೆ ಚಂದ್ರಮನ ತೋರಿ ಹಾಡಲೇನು
ಮಣ್ಣ ಜೀವಗಳ ಬಳ್ಳಿ ಗಿಡಗಳಿಗೆ ಮುಳ್ಳುಹೋದರು ಮುಚ್ಚಿ
ಚುಚ್ಚುತಿರಲು ಆ ಸಗ್ಗ ನಂದನವ ಕೊಂಡು ಕೊನರಲೇನು ||೧||

ಎಲುಬು ಗೂಡುಗಳ ಹರಿದ ಚಿಂದಿಗಳ ಬಿಟ್ಟು ಸುತ್ತ ಮುತ್ತ
ಗುಲಾಬಿಯ ಕೆನ್ನೆ ತೊಂಡೆಗುಟಿ ಕನ್ಯೆ ಎಂದು ಕನವರಿಸಲೆ
ಕೊಳಚೆ ಕೊಂಪೆಗಳ ಮುರುಕು ಗೂಡುಗಳ ನೋಡೀ ನೋಡದಂತೆ
ಭವ್ಯ ಬಂಗಲೆಯ ದಿವ್ಯ ಗೋಪುರವ ಹಾಡಿ ಹೊಗಳುತಿರಲೆ ||೨||

ತುತ್ತನ್ನಕ್ಕಾಗಿ ಬೇಡಿ ಕಾಡುವ ಪುಟ್ಟ ತಿರುಪ ಕೈಯಿ
ಹೆಜ್ಜೆ ಹೆಜ್ಜೆಗೂ ಕಾಲ ತೊಡರಿರಲು ಹಾಡಲೆಲ್ಲಿ ಬಾಯಿ
ಅಂದದುಡಿಗೆಗಳ ಸೇಬುಗಲ್ಲಗಳ ಮಮ್ಮಿ ಡ್ಯಾಡಿ ಎನುವ
ದುಂಡು ದುಂಡಗಿನ ಧನಿಕ ಮಕ್ಕಳನು ಮೆಚ್ಚಿ ಹಾಡಲೇನು ||೩||

ನೂರು ಸಾವಿರದ ದೇವರುಗಳು ಕಚ್ಚಾಡಿ ಮೆರೆಯುವಿಲ್ಲಿ
ದೇವರುಗಳ ಸೃಷ್ಟಿಸಿದ ಮಾನವನ ಮರೆತ ನರಕದಲ್ಲಿ
ಸುತ್ತ ಜಗಕೆ ಕಿವಿ ಕಣ್ಣು ಮುಚ್ಚಿ ತೇಲ್ಗಣ್ಣ ಭಾವದಲ್ಲಿ
ದೇವ ಭಜನೆಯನು ನಾಮ ಕೀರ್ತನೆಯ ಕಟ್ಟಿ ಹಾಡಲೇನು ||೪||

ದುಡಿದು ದಣಿವ ಮೈ ರಕ್ತ ಬೆವರುಗಳ ಧಾರೆ ಧಾರೆಯಿಂದ
ಭಟ್ಟಿ ಉಳಿದ ಸೆರೆ ತುಂಬಿ ಕುಡಿಯುತಿಹ ದಣಿಯ ಹೊಗಳಲೇನು
ಮರುಳು ಕುರಿಗಳನು ಸವರಿ ನೇಯ್ದ ಕಂಬಳಿಯ ಗದ್ದುಗೆಯಲಿ
ಮೆರೆಯುತಿರುವ ನರಭಕ್ಷಕರನು ನಾ ಹೊಗಳಿ ಹಾಡಲೇನು ||೫||

ಸುತ್ತ ಮುತ್ತಿರಲು ಅಂಧಕಾರತೆಯು ಕತ್ತಲಲ್ಲಿ ಕುಳಿತು
ಎಲ್ಲ ಬೆಳ್ಳಗಿದೆ ಇದೇ ಬೆಳಕು ಎನ್ನುತ್ತ ಹಾಡಲೇನು
ಎಲ್ಲ ತೋಟಗದ್ದೆಗಳ ಚೆಲುವ ಹಲ ಹದ್ದು ಮುಕ್ಕುತಿರಲು
ಎಲ್ಲ ಅಂದ ಸುಂದರವು ಎಂದು ನಾ ಬಣ್ಣಿಸಿ ಹಾಡಲೇನು ||೬||

ಕೋಟೆ ಅರಮನೆಯ ಶಿಲ್ಪ ಸಿರಿಗಳನು ಕಟ್ಟಿದವರ ಮರೆತು
ಲೂಟಿ ಮಾಡಿ ಮೆರೆದಂಥ ರಾಜರುಗಳ ಚರಿತೆ ಹೊಗಳಲೇನು
ಕ್ರೌರ್ಯ ಹಿಂಸೆಗಳ ಬಾಯ್ಗಳಲ್ಲಿ ಜನ ಜೀವ ಮಿಡುಕುತಿರಲು
ದಯೆಯೆ ಧರ್ಮಕ್ಕೆ ಮೂಲವೆಂದು ಒಣ ಶಾಂತಿ ಪಠಿಸಲೇನು ||೭||

ಜಾತಿ ಭಾಷೆ ಕುಲ ಧರ್ಮ ದೈವಗಳ ಛಿದ್ರ ಛಿದ್ರ ನೆಲವ
ಭವ್ಯ ದಿವ್ಯ ಭಾರತವೆ ಎಂದು ಎದೆ ತುಂಬಿ ಹಾಡಲೇನು
ತಲೆತಲಾಂತರದ ಮೌಢ್ಯಬಳುವಳಿಯ ಕೊಳೆತು ನಿಂತ ಕೊಳವ
ಗಂಗೆ ತುಂಗೆಯರ ಪುಣ್ಯರಂಗೆಂದು ಹಾಡಿ ಹರಸಲೇನು ||೮||

ಬೆನ್ನಿಗಂಟಿರುವ ಬರಿಯ ಹೊಟ್ಟೆಗಳು ಬಿಕ್ಕಿ ಬಿಕ್ಕುತಿರಲು
ಬೊಜ್ಜು ಹೊಟ್ಟೆಗಳ ಕಮರು ಡೇಗು ಹಾಡುಗಳ ತೇಗಲೇನು
ಹಳ್ಳಿಪಾಡು ಹಾಡುವಾ ಹಕ್ಕಿ ಕುತ್ತಿಗೆಯ ಹಿಚುಕುತಿರಲು
ಡಿಳ್ಳಿದರಬಾರು ಮೋಡಿ ಮೆರಗುಗಳ ಹಾಡು ಕಿರುಚಲೇನು ||೯||

ಸತ್ಯ ಹೇಳಿದರೆ ಕುತ್ತು ಹೊರಿಸುವರು ಕತ್ತಿಯೊತ್ತಿ ಶಿರಕೆ
ಅದಕೆ ಹೆದರಿ ಬರಿ ಸುಳ್ಳು ಗೊಳ್ಳು ಶಬ್ದಗಳ ಬುರುಗು ಬಿಡಲೆ
ಹೇಳುವುದು ಒಂದು ಮಾಡುವುದು ಒಂದು ನಮ್ಮ ಧರ್ಮ ನೀತಿ
ಎಂದಿನಿಂದಲೋ ಬಂದ ರೀತಿ ಅದರಂತೆ ಬುರುಡೆ ಬಿಡಲೆ ||೧೦||

ಜನತೆ ಗಂಡ ಜನನೀತಿ ಹೆಂಡತಿಯು ಗಂಡನೆದುರೆ ಅವಳ
ಸೀರೆ ಹರಿದು ವ್ಯಭಿಚಾರ ಮಾಡಿದರು ಗಂಡ ಸುಮ್ಮನಿರಲು
ಜನರ ತಾಯಿಯನು ಕಿತ್ತಿತಿನುವ ತಾಯ್ಗಂಡರಾಳುತಿರಲು
ನಮ್ಮದೇಶ ಜನತಂತ್ರದೇಶ ಎನ್ನುತ್ತ ಹಾಡಲೇನು ||೧೧||

ಹಾಡು ಬೇಡ ಹಣ ಹೆಂಡ ತಿಂಡಿಕೊಡು ಓಟು ಹಾಕುತೀವಿ
ಓಟು ಹಾಕಿ ನೆಲ ಗೋರಿ ಗೋರಿ ಮುಲುಗುತ್ತ ಮಲಗುತೀವಿ
ಬಹಳ ಹಳೆಯ ಹುಳಿ ಹೆಂಡ ಧರ್ಮವಿದೆ ನಿಶೆಯಲ್ಲಿ ಬಾಳುತೀವಿ
ನಮ್ಮ ನಡೆಸಲಿಕೆ ಗುರುವು ಮಠವು ದೇವರುಗಳಿರುವರಲ್ಲ ||೧೨||

ಆಗಾಗ ಅವನು ಅವತರಿಸಿ ಬರುವ ನಮಗೇಕೆ ಚಿಂತೆಯೆಲ್ಲ
ಎನುತ ಮಲಗಿ ಸತ್ತಿಲ್ಲದಿರುವ ಈ ಜನರ ಮುಂದೆ ನಾನು
ಏನು ಹಾಡಲೀ ಎಂತು ಹಾಡಲೀ ಒಡೆದ ಗಂಟಲಿಂದ
ಬಿರಿದಾ ಒಣಾ ನಾಲಿಗಿಂದ ||೧೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಗಮಲ್ಲಿ ದಿಗಮಲ್ಲಿ
Next post ರಸದೊಳಗೆ ಕಸ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys