Home / ಕವನ / ಕವಿತೆ / ಏನೆಂದು ಹಾಡಲಿ

ಏನೆಂದು ಹಾಡಲಿ

ಏನೆಂದು ಹಾಡಲೀ ಏನನ್ನು ಹಾಡಲೀ ನಿಮ್ಮ ಮುಂದೆ ನಿಂತು
ಒಡೆದ ಗಂಟಲಿಂದಾ ಬಿರಿದ ಒಣಾ ನಾಲಿಗಿಂದ ||ಪ||

ಕಣ್ಣು ಕಣ್ಣುಗಳ ಚಿಕ್ಕೆ ಕಾಂತಿಗಳು ನಂದಿ ನರಳುತಿರಲು
ಬಾನ ಚಿಕ್ಕೆಗಳ ಬೆಣ್ಣೆ ಚಂದ್ರಮನ ತೋರಿ ಹಾಡಲೇನು
ಮಣ್ಣ ಜೀವಗಳ ಬಳ್ಳಿ ಗಿಡಗಳಿಗೆ ಮುಳ್ಳುಹೋದರು ಮುಚ್ಚಿ
ಚುಚ್ಚುತಿರಲು ಆ ಸಗ್ಗ ನಂದನವ ಕೊಂಡು ಕೊನರಲೇನು ||೧||

ಎಲುಬು ಗೂಡುಗಳ ಹರಿದ ಚಿಂದಿಗಳ ಬಿಟ್ಟು ಸುತ್ತ ಮುತ್ತ
ಗುಲಾಬಿಯ ಕೆನ್ನೆ ತೊಂಡೆಗುಟಿ ಕನ್ಯೆ ಎಂದು ಕನವರಿಸಲೆ
ಕೊಳಚೆ ಕೊಂಪೆಗಳ ಮುರುಕು ಗೂಡುಗಳ ನೋಡೀ ನೋಡದಂತೆ
ಭವ್ಯ ಬಂಗಲೆಯ ದಿವ್ಯ ಗೋಪುರವ ಹಾಡಿ ಹೊಗಳುತಿರಲೆ ||೨||

ತುತ್ತನ್ನಕ್ಕಾಗಿ ಬೇಡಿ ಕಾಡುವ ಪುಟ್ಟ ತಿರುಪ ಕೈಯಿ
ಹೆಜ್ಜೆ ಹೆಜ್ಜೆಗೂ ಕಾಲ ತೊಡರಿರಲು ಹಾಡಲೆಲ್ಲಿ ಬಾಯಿ
ಅಂದದುಡಿಗೆಗಳ ಸೇಬುಗಲ್ಲಗಳ ಮಮ್ಮಿ ಡ್ಯಾಡಿ ಎನುವ
ದುಂಡು ದುಂಡಗಿನ ಧನಿಕ ಮಕ್ಕಳನು ಮೆಚ್ಚಿ ಹಾಡಲೇನು ||೩||

ನೂರು ಸಾವಿರದ ದೇವರುಗಳು ಕಚ್ಚಾಡಿ ಮೆರೆಯುವಿಲ್ಲಿ
ದೇವರುಗಳ ಸೃಷ್ಟಿಸಿದ ಮಾನವನ ಮರೆತ ನರಕದಲ್ಲಿ
ಸುತ್ತ ಜಗಕೆ ಕಿವಿ ಕಣ್ಣು ಮುಚ್ಚಿ ತೇಲ್ಗಣ್ಣ ಭಾವದಲ್ಲಿ
ದೇವ ಭಜನೆಯನು ನಾಮ ಕೀರ್ತನೆಯ ಕಟ್ಟಿ ಹಾಡಲೇನು ||೪||

ದುಡಿದು ದಣಿವ ಮೈ ರಕ್ತ ಬೆವರುಗಳ ಧಾರೆ ಧಾರೆಯಿಂದ
ಭಟ್ಟಿ ಉಳಿದ ಸೆರೆ ತುಂಬಿ ಕುಡಿಯುತಿಹ ದಣಿಯ ಹೊಗಳಲೇನು
ಮರುಳು ಕುರಿಗಳನು ಸವರಿ ನೇಯ್ದ ಕಂಬಳಿಯ ಗದ್ದುಗೆಯಲಿ
ಮೆರೆಯುತಿರುವ ನರಭಕ್ಷಕರನು ನಾ ಹೊಗಳಿ ಹಾಡಲೇನು ||೫||

ಸುತ್ತ ಮುತ್ತಿರಲು ಅಂಧಕಾರತೆಯು ಕತ್ತಲಲ್ಲಿ ಕುಳಿತು
ಎಲ್ಲ ಬೆಳ್ಳಗಿದೆ ಇದೇ ಬೆಳಕು ಎನ್ನುತ್ತ ಹಾಡಲೇನು
ಎಲ್ಲ ತೋಟಗದ್ದೆಗಳ ಚೆಲುವ ಹಲ ಹದ್ದು ಮುಕ್ಕುತಿರಲು
ಎಲ್ಲ ಅಂದ ಸುಂದರವು ಎಂದು ನಾ ಬಣ್ಣಿಸಿ ಹಾಡಲೇನು ||೬||

ಕೋಟೆ ಅರಮನೆಯ ಶಿಲ್ಪ ಸಿರಿಗಳನು ಕಟ್ಟಿದವರ ಮರೆತು
ಲೂಟಿ ಮಾಡಿ ಮೆರೆದಂಥ ರಾಜರುಗಳ ಚರಿತೆ ಹೊಗಳಲೇನು
ಕ್ರೌರ್ಯ ಹಿಂಸೆಗಳ ಬಾಯ್ಗಳಲ್ಲಿ ಜನ ಜೀವ ಮಿಡುಕುತಿರಲು
ದಯೆಯೆ ಧರ್ಮಕ್ಕೆ ಮೂಲವೆಂದು ಒಣ ಶಾಂತಿ ಪಠಿಸಲೇನು ||೭||

ಜಾತಿ ಭಾಷೆ ಕುಲ ಧರ್ಮ ದೈವಗಳ ಛಿದ್ರ ಛಿದ್ರ ನೆಲವ
ಭವ್ಯ ದಿವ್ಯ ಭಾರತವೆ ಎಂದು ಎದೆ ತುಂಬಿ ಹಾಡಲೇನು
ತಲೆತಲಾಂತರದ ಮೌಢ್ಯಬಳುವಳಿಯ ಕೊಳೆತು ನಿಂತ ಕೊಳವ
ಗಂಗೆ ತುಂಗೆಯರ ಪುಣ್ಯರಂಗೆಂದು ಹಾಡಿ ಹರಸಲೇನು ||೮||

ಬೆನ್ನಿಗಂಟಿರುವ ಬರಿಯ ಹೊಟ್ಟೆಗಳು ಬಿಕ್ಕಿ ಬಿಕ್ಕುತಿರಲು
ಬೊಜ್ಜು ಹೊಟ್ಟೆಗಳ ಕಮರು ಡೇಗು ಹಾಡುಗಳ ತೇಗಲೇನು
ಹಳ್ಳಿಪಾಡು ಹಾಡುವಾ ಹಕ್ಕಿ ಕುತ್ತಿಗೆಯ ಹಿಚುಕುತಿರಲು
ಡಿಳ್ಳಿದರಬಾರು ಮೋಡಿ ಮೆರಗುಗಳ ಹಾಡು ಕಿರುಚಲೇನು ||೯||

ಸತ್ಯ ಹೇಳಿದರೆ ಕುತ್ತು ಹೊರಿಸುವರು ಕತ್ತಿಯೊತ್ತಿ ಶಿರಕೆ
ಅದಕೆ ಹೆದರಿ ಬರಿ ಸುಳ್ಳು ಗೊಳ್ಳು ಶಬ್ದಗಳ ಬುರುಗು ಬಿಡಲೆ
ಹೇಳುವುದು ಒಂದು ಮಾಡುವುದು ಒಂದು ನಮ್ಮ ಧರ್ಮ ನೀತಿ
ಎಂದಿನಿಂದಲೋ ಬಂದ ರೀತಿ ಅದರಂತೆ ಬುರುಡೆ ಬಿಡಲೆ ||೧೦||

ಜನತೆ ಗಂಡ ಜನನೀತಿ ಹೆಂಡತಿಯು ಗಂಡನೆದುರೆ ಅವಳ
ಸೀರೆ ಹರಿದು ವ್ಯಭಿಚಾರ ಮಾಡಿದರು ಗಂಡ ಸುಮ್ಮನಿರಲು
ಜನರ ತಾಯಿಯನು ಕಿತ್ತಿತಿನುವ ತಾಯ್ಗಂಡರಾಳುತಿರಲು
ನಮ್ಮದೇಶ ಜನತಂತ್ರದೇಶ ಎನ್ನುತ್ತ ಹಾಡಲೇನು ||೧೧||

ಹಾಡು ಬೇಡ ಹಣ ಹೆಂಡ ತಿಂಡಿಕೊಡು ಓಟು ಹಾಕುತೀವಿ
ಓಟು ಹಾಕಿ ನೆಲ ಗೋರಿ ಗೋರಿ ಮುಲುಗುತ್ತ ಮಲಗುತೀವಿ
ಬಹಳ ಹಳೆಯ ಹುಳಿ ಹೆಂಡ ಧರ್ಮವಿದೆ ನಿಶೆಯಲ್ಲಿ ಬಾಳುತೀವಿ
ನಮ್ಮ ನಡೆಸಲಿಕೆ ಗುರುವು ಮಠವು ದೇವರುಗಳಿರುವರಲ್ಲ ||೧೨||

ಆಗಾಗ ಅವನು ಅವತರಿಸಿ ಬರುವ ನಮಗೇಕೆ ಚಿಂತೆಯೆಲ್ಲ
ಎನುತ ಮಲಗಿ ಸತ್ತಿಲ್ಲದಿರುವ ಈ ಜನರ ಮುಂದೆ ನಾನು
ಏನು ಹಾಡಲೀ ಎಂತು ಹಾಡಲೀ ಒಡೆದ ಗಂಟಲಿಂದ
ಬಿರಿದಾ ಒಣಾ ನಾಲಿಗಿಂದ ||೧೩||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...