Home / ಕವನ / ಕವಿತೆ / ಮಡಿಕೇರೀಲಿ ರತ್ನ

ಮಡಿಕೇರೀಲಿ ರತ್ನ

ಮಡಿಕೇರೀಲಿ ರತ್ನ
ಕಂಡಾ ವೊಸಾ ಮತ್ನ. ೧

‘ಮಡಿಕೇರೀಲಿ ಮಡಿಕೆ ಯೆಂಡ
ಯೀರ್ದಿದ್ರ್ ಅಲ್ಲೀಗ್ ವೋದ್ದೂ ದಂಡ’
ಅಂದಿ ರತ್ನ ಪಡಕಾನೇಗೆ
ವೊಂಟಿ, ಬೆಟ್ಟದ ನೆತ್ತಿ ಮೇಗೆ
ವೋಯ್ತಿದ್ದಂಗೆ ನಿಂತ!
ಕಲ್ಲಾದಂಗೆ ಕುಂತ! ೨

ಸುತ್ತ ಸಾಯೋ ಬಿಸಿಲಿನ್ ಚಾಪೆ!
ಅಲ್ಲಲ್ಲಿ ವೊಸಿ ನೆರಳಿನ್ ತೇಪೆ!
ಅಲೆಯಲೆಯಾಗಿ ಬಿಸಿಲಿನ್ ಜೊತೆಗೆ
ಸುತ್ತಿನ್ ಗುಡ್ಡಗೊಳ್ ಕುಣದರ್ ಮೆತ್ಗೆ
ಮನಸೀಗ್ ಅರ್‍ಸ ತರ್‍ತ-
ರತ್ನ ಯೆಂಡ ಮರ್‍ತ! ೩

‘ಮುದಕನ್ ಸಾವೇ ನೋಡಾಕ್ ಚಂದ!’
ಅಂದ್ರೆ ಸೂರ್‍ಯ ಸಾಯಾಲ್ಲೇಂದ;
‘ಸಾಯೋ ಮುದುಕ ಸಂಜೆ ಸೂರ್‍ಯ
ನೆಗತ ನಿಲ್ಲೋಕ್ ಇವ್ಗೇನ್ ಕಾರ್‍ಯ?’
ಅಂತ ಹಿಂದಕ್ಕ್ ತಿರ್‍ಗಿ
ನೋಡ್ದ್ರೆ-ಬತ್ತು ಗಿರ್‍ಕಿ! ೪

ದೇವರದೊಂದು ಚೆಂದದ್ ಸೋತ್ರ
ಕೊಡಗಿನ್ ಮೇಗಿನ್ ಒಂದ್ ನಕ್ಸತ್ರ
ಕೊಡಗಿನ್ ಒಂದ್ ಊ ಗಾಳೀಲ್ ತೇಲ್ತ
ಬಂದಂಗಿದ್ಲು ಅತ್ರ ಕಾಲ್ತಾವ್
ಒಂದು ಕೊಡಗೀನುಡಗಿ!
ಐದಾರೊರಸದ್ ವುಡಗಿ! ೫

ಕೊಡಗಿನ್ ತೋಟದ್ ಕಾಪೀ ಅಣ್ಣು
ತುಟಿಗೊಳ್! ಇಳ್ಳಿನ್ ಬೆಳಕೆ ಕಣ್ಣು!
ಕೆನ್ನೆ ಅನಕ ಕೊಡಗಿನ್ ಕಿತ್ಲೆ!
ಔಳೇಳಿದ್ಲು ನಾ ಕೇಳೂತ್ಲೆ :
‘ನಿಂಗೆ ಯೆಸರೇನಮ್ಮ?’
‘ನನ್ನೆಸರು ಪೂವಮ್ಮ!’ ೬

‘ಪೂವಮ್ಮ!’ ಹಾ ! ಯೆಂತಾ ಯೆಸರು!
ಕಣ್ಣಿಗೆ ಚಿತ್ರ ಕಟ್ಟೋ ಯೆಸರು!
ರೂಪು ರಾಗಕೆ ತಕ್ಕಂತ್ ಯೆಸರು!
ಯಂಗ್ ನೋಡಿದ್ರು ವೊಪ್ಪೋ ಯೆಸರು!
‘ಪೂವಮ್ಮಾ! ಪೂವಮ್ಮಾ!’
‘ಪೂವಮ್ಮಾ! ಪೂವಮ್ಮಾ!’

ಔಳ್ ನೋಡೂತ್ಲೆ ನಂಗ್ ಮತ್ತಾಯ್ತು!
ಔಳ್ ಮಾತ್ಕೇಳಿ ಒಂದ್ ಅತ್ತಾಯ್ತು!
ಔಳ್ ಮಾತ್ ಇನ್ನಾ ಕೇಳ್ಬೇಕೂಂತ
‘ನಾನ್ಯಾರ್ ಗೊತ್ತೆ?’ ಅಂದ್ರೆ ‘ಹೂ’ತ
‘ನೀ ಯೆಂಡಕುಡಕ’ ಅಂದ್ಲು
ನೆಗ್ತ ಅತ್ರ ಬಂದ್ಲು. ೮

‘ನೀ ನಾ ಕುಡಿಯೋದ್ನ್ ಎಲ್ ನೋಡ್ದೇಮ್ಮ?’
ಅಂದ್ರೆ, ‘ಯಾವೋನ್ಗೈತೆ ಜಮ್ಮ
ಔನ್ಗೆ ಯೋಳ್ತಿವ್ ಕೊಡವಾಂತಂದಿ!
ಕುಡದಂಗ್ ಆಡೋನ್ ಕುಡುಕಾಂ’ತ್ ಅಂದಿ
ತೊಡೇನ್ ಅತ್ತಿದ್ಲು ಮೆಲ್ಗೆ!
ಕುಡದೋನ್ ಅಂದ್ರೆ ಸಲ್ಗೆ! ೯

ಕತ್ತಿನ್ ಸುತ್ತ ಕೈ ಆಕ್ಕೊಂಡಿ
‘ಅಣ್ಣ ರತ್ನ’ ಅಂತ್ ನೆಕ್ಕೊಂಡಿ
‘ಯೆಂಡದ ಪದಗೊಳ್ ಏಳ್ ನೋಡಾನೆ!
ನಾನೂ ನಿನ್ನಂಗ್ ಕಲ್ತ್ ಆಡಾನೆ!’
ಅಂದ್ಲು ಮೊಕಾನ್ ನೋಡಿ!
ಕಣ್ಣ ದೊಡ್ದು ಮಾಡಿ! ೧೦

ಇಲ್ದಿದ್ ತಂಗಿ ಆಗ್ ವುಟ್ಟಿದ್ಲು
ಪೂವಮ್ಮಾನೆ ನಂಗೆ ಮೊದಲು!
ತಂಗಿ ವುಟ್ಟಿದ್ ದಿವಸಾಂತೇಳಿ
ಆಡ್ದೆ ಯೆಂಗೀಸ್ ಇಡದಂಗ್ ತಾಲಿ-
ಸೂರ್‍ಯ ಮುಳಗಿದ್ ಕಾಣ್ದೆ!
ಯೆಂಡ ಬೇಕಂತ್ ಅನ್ದೆ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...