Home / ಕವನ / ಅನುವಾದ / ಲೀಡಾ ಮತ್ತು ಹಂಸ

ಲೀಡಾ ಮತ್ತು ಹಂಸ

ಹಠಾತ್ತನೆರಗಿತು ಹಕ್ಕಿ; ಬಲಿಷ್ಠ ರೆಕ್ಕೆಯ ಬಿಚ್ಚಿ
ಬಡಿವ ಪಟಪಟಸದ್ದು. ಬೆಚ್ಚಿದ ಹುಡುಗಿಯನ್ನ
ಕೊಕ್ಕಿಂದ ಹಿಡಿದೆತ್ತಿ, ಮುದ್ದಿಸಿತು ಅಸಹಾಯ ಎದೆಗೆ ಎದೆಯನೊತ್ತಿ
ಸವರುತ್ತ ಅವಳ ತೊಡೆಬೆತ್ತಲೆಯ ಕಪ್ಪಾದ ಜಾಲಪಾದ.

ಗರಿತೆರೆದ ಇಂಥ ಅದ್ಭುತವ ಸಡಲುತ್ತಿರುವ
ತೊಡೆಯಿಂದ ಹೊರಗೆ ತಳ್ಳುವುದು ಹೇಗೆ ?
ಹಂಸತೂಲದ ತೆಕ್ಕೆಯೊಳಗೆ ಸಿಕ್ಕಿರುವ ಮೈ
ಮಿಡಿಯದಿರುವುದು ಹೇಗೆ ಬೆರಗುಕವಿಸಿದ ಎದೆಯ ಬಡಿತಗಳಿಗೆ ?

ತೊಡೆ ಕಂಪಿಸಿದ ಗಳಿಗೆ ಸೃಷ್ಟಿಯಾಯಿತೊ ಹೇಗೆ
ಬಿರಿಬಿಟ್ಟ ಗೋಡೆ, ಉರಿಬಿದ್ದ ಛಾವಣಿ, ಕೋಟೆ,
ಬಲಿಹೋದ ರಾಜ ಅಗಮೆಮ್ನನ್?
ಕಾವು ತೀರಿದ ಹಕ್ಕಿಕೊಕ್ಕು ಕಳಚುವ ಮುಂಚೆ,
ದಿವದ ಪಶುಬಿಗಿತಕ್ಕೆ ಒಳಪಟ್ಟ ಕ್ಷಣದಲ್ಲೆ,
ದತ್ತವಾಯಿತೊ ಹೇಗೆ ಶಕ್ತಿ ಜೊತೆ ಜ್ಞಾನವೂ ಶುಕ್ತಿಯೊಳಗೆ?
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಸ್ಯೂಸ್ (ಗ್ರೀಕ್ ಪುರಾಣದ ಪ್ರಕಾರ) ದೇವತೆಗಳ ರಾಜ. ಅವನು ಹಂಸದ ರೂಪದಲ್ಲಿ ಬಂದು ಮರ್‍ತ್ಯಕನ್ನಿಕೆಯಾದ ಲೀಡಾಳ ಮೇಲೆ ಎರಗಿ ಅವಳನ್ನು ಬಲಾತ್ಕಾರವಾಗಿ ಭೋಗಿಸುತ್ತಾನೆ. ಈ ಕೂಟದಿಂದ, ಹುಟ್ಟಿದ ಇಬ್ಬರು ಹೆಣ್ಣುಮಕ್ಕಳು ಹೆಲೆನ್ ಮತ್ತು ಕ್ಲೈಟಮ್ನೆಸ್ಟ್ರಾ. ಹೆಲೆನ್ ಗಂಡನನ್ನು ಬಿಟ್ಟು ಪ್ಯಾರಿಸ್ ಜೊತೆ ಟ್ರಾಯ್‌ಗೆ ಓಡಿಹೋಗುತ್ತಾಳೆ. ಅವಳ ಸಲುವಾಗಿ ಗ್ರೀಕ್ ಮತ್ತು ಟ್ರೋಜನ್ನರ ನಡುವೆ ಘೋರಯುದ್ಧ ನಡೆದು ಟ್ರಾಯ್‌ನಗರ ಉರಿದುಹೋಗುತ್ತದೆ. ಕ್ಲೈಟಮ್ನೆಸ್ಟ್ರಾ ಗಂಡನಾದ ಅಗ್‌ಮಮ್ನನ್ ಯುದ್ಧಕ್ಕೆ ಹೋದಾಗ ಬೇರೆ ಸಂಬಂಧ ಬೆಳೆಸಿ, ಗಂಡ ಹಿಂತಿರುಗಿ ಬಂದಾಗ ಮೋಸದಿಂದ ಕೊಲ್ಲಿಸುತ್ತಾಳೆ. ದೇವಮೂಲದ್ದೇ ಆದರೂ ಸ್ಯೂಸನ ಕಾಮ ಪರಾಪೇಕ್ಷೆಯನ್ನು ಲೆಕ್ಕಿಸದ್ದು; ಹಿಂಸಾತ್ಮಕವಾದದ್ದು; ಕೇವಲ ಸ್ವಾರ್ಥನಿಷ್ಠವಾದದ್ದು. ಧರ್‍ಮವಿರುದ್ಧವಾದ ಇಂಥ ಕಾಮದಿಂದ ಜನಿಸಿದ ಸಂತಾನ ಲೋಕಮಾರಕವಾದ ಹೊಸ ಅನಾಹುತಗಳಿಗೆ ದಾರಿಮಾಡಿದ್ದನ್ನು ಕವನ ಸೂಚಿಸುವಂತಿದೆ. ಏಟ್ಸನ ಚಿತ್ರಕಶಕ್ತಿಗೆ ಸೊಗಸಾದ ನಿದರ್‍ಶನ ಈ ಪದ್ಯ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...