Home / ಕವನ / ಕವಿತೆ / ಮಣ್ಣಿನ ಹಾಡು

ಮಣ್ಣಿನ ಹಾಡು

ಬೆಂಕಿಯುದರ ಹಡೆದ ತಂಪು ತೇಜ ಇವಳು
ಯಾರ ತಪೋಮಣಿಯೋ!
ಯಾವ ಆಟದ ಚೆಂಡೋ!
ಗೋಲಿ ಗುಂಡೋ!
ಬೈಗು ಬೆಳಗುಗಳಲ್ಲಿ ಲಜ್ಜೆಯೇರಿ
ಹಗಲೆಲ್ಲ ಕಾವೇರಿ ಇರುಳೆಲ್ಲ ಇನಿಯನ ಸೆಜ್ಜೆಯೇರಿ
ಪ್ರದಕ್ಷಿಣೆಯ ನೇಮವ ಚಾಚೂ ತಪ್ಪದೆ ಪಾಲಿಸಿ
ಪ್ರಿಯನನೋಲೈಸಿ ಪ್ರಣಯಕೇಳಿಯಲನವರತ
ರಮಿಸಿ ದಣಿಯದವಳು
ಹಾಲುನಗುತ್ತ ಇವಳ ಮುದ್ದಿನ ಕಂದ
ಇವಳ ಸೆರಗನೇ ಹಿಡಿದಾಡುವನು
ವಿರಹದಲ್ಲೊಣಗಿ ತಪತಪ ತಪಿಸಿದಾಗಿವಳು
ಮೇಲಿಂದೊಲವಿಳಿಯೆ ಹನಿಹನಿ
ಬಾಯ್ದೆರೆದು ಸವಿದು ಮೈ ಪುಲಕಗೊಂಡು
ಹಸಿರುಟ್ಟು ಹೂಮುಡಿದು ಹಣ್ಣ ನೆಡೆಮಾಡುವಳು

ಉಸಿರ ಚೀಲಗಳ ಹೆತ್ತು ಹೊತ್ತ ತುತ್ತಿಟ್ಟು ಸಲಹುವಳು
ಉಂಡು ಉಣಿಸಿ ಮಡಿಲಿಂಗದವಳು
ಹುಳುಗಳ ಕಚ್ಚಾಟ ಕಡಿದಾಟಗಳನೆಲ್ಲ
ನಸುನಗುತ ತಾಳಿಕೊಂಡು ಬಾಳುವಳು
ಆಗಾಗ ಆಯೆಂದು ನುಂಗಿ ನೀರುಕುಡಿದು
ಬೆಂಕಿ ಸೀನುಗಳ ಸೀನಿ
ಮತ್ತೆ ಏನೂ ಆಗಿಲ್ಲವೆಂಬಂತೆ ಮೌನತಾಳುವಳು

ಹಳೆಕತೆಗಳ ಮೆಲುಕು ಹಾಕುತ್ತ ತಾಂಬೂಲದಂತೆ
ಪಿಚಕ್ಕೆಂದುಗುಳಿ ಮೇಲೆ ಮಣ್ಣು ಮುಚ್ಚಿ
ಎಂದಿನಂತೆ ನಿರ್ಲಿಪ್ತ ಬೀಗುವಳು
ನಾನೆಂದೆಂಬ ದೊಂಬಿಗರನು ತಿಂದು ತೇಗುವಳು
ಅಮಲೇರಿ ಬುಗುರಿಯಾಡುವಳು

ಮುಪ್ಪರಿಯದ ಮುದುಕಿ ಇವಳಿಗೆ
ದಿನದಿನಕೂ ಹೊಸ ಹರೆಯ ಎಲ್ಲಿಂದ ಬರುವುದೋ?
ದಣಿದು ಬಂದವರ ತನ್ನ ಮಡಿಲಲ್ಲಿ ತಟ್ಟಿ
ಚಿರನಿದ್ರೆಯ ಸೆರಗು ಹೊದಿಸಿ
ಲಾಲಿ ಹಾಡಿ ಮಲಗಿಸುವಳು

ಈ ಜೋಗಿತಿಯ ಜೋಗುಳ ಹಾಡಿನಲ್ಲಿ
ಎಬ್ಬಿಸುವ ಹಾಡಾವುದೋ!
ಮಲಗಿಸುವ ಹಾಡಾವುದೋ!
ತಿಳಿಯದು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...