Home / ಕವನ / ಕವಿತೆ / ಇದೆಂತಹ ಗಡಿಗಳು

ಇದೆಂತಹ ಗಡಿಗಳು

ಇದೆಂತಹ ಗಡಿಗಳು
ಎಂತಹ ವಿಭಾಜಕ ರೇಖೆಗಳು
ಕಾವೇರಿಯ ತಟದಲಿ
ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ
ಕೂಡಿ ಬೆಳೆದವಳು ನಾನು
ಇಲ್ಲಿ ಮುಹಾಜಿರಳಾಗಿರುವೆ.

ಅಲ್ಲಿ ಮಾಮರಗಳ ಹತ್ತಿ
ಮರಕೋತಿ ಆಡಿದ್ದವಳು
ಆ ನದಿ, ಬೆಟ್ಟ, ಗಿಳಿ, ಕೋಗಿಲೆ
ಹಿಂಡು ಹಿಂಡು ಗೆಳತಿಯರನು
ಅಲ್ಲಿಯೇ ಬಿಟ್ಟು ಬಂದಿರುವೆ,
ಅಲ್ಲಿ ಕಾವೇರಿಯ ತಟದಲ್ಲಿಯೇ.

ನೋಟು ಬುಕ್ಕಿನ ಪುಟಗಳ ಮಧ್ಯೆ
ಅಂದು ಬಚ್ಚಿಟ್ಟ ಆ ನವಿಲುಗರಿಯಿದೆ
ಚಾಚಾನ ಪುಟ್ಟ ಮಗಳೀಗ
ಬೆಳೆದು ದೊಡ್ಡವಳಾಗಿರಬೇಕು
ಮರ್‍ಯಾದೆಯ ದುಪಟ್ಟಾ
ತಲೆ ಮೇಲೆ ಹೊದೆಯುತ್ತಿರಬೇಕು.

ಅಲಿಂದ ಬಿಟ್ಟು ಬರುವಾಗ
ಅವಳಿನ್ನೂ ಪುಟ್ಟ ಮಗು
ತೊಟ್ಟಿಲ್ಲಲಿ ಒಂದೇ ಸಮ ಅಳುತ್ತಿದ್ದಳು.
ಅಮ್ಮನ ಜಹಾಜಿನಾಕಾರದ ಪಾನ್‌ದಾನ್‌೧
ಸುಂದರ ಉಗಾಲ್ದಾನ್೨
ಅಪ್ಪನ ಸುರಾಯಿಯಾಕಾರದ
ಕುಸುರಿ ಕೆತ್ತನೆಯ ಮುರಾದಾಬಾದಿ ಹುಕ್ಕಾ
ಎಲ್ಲ ಅಲ್ಲಿಯೇ ಬಿಟ್ಟು ಬಂದಿರುವೆ.

ಆ ಪಡಸಾಲೆ ನನಗಿನ್ನೂ ನೆನಪಿದೆ
ಮುಂದಿರುವ ಛಪ್ಪರದಲ್ಲಿಯೇ ಬಿಟ್ಟು ಬಂದಿದ್ದೆ
ನನ್ನ ಪುಟ್ಟ ಪುಟ್ಟ ಚಪ್ಪಲಿಗಳು
ಒಮ್ಮೆಲೇ ಏನಾಯಿತೋ ಗೊತ್ತಿಲ್ಲ
ದೇಶ ವಿಭಜನೆಯಾಗುತ್ತದೆಯೆಂದರು.
ಅಪ್ಪ ದಡದಡ್ಡನೇ ರೈಲು ಹತ್ತಿಸಿದ್ದರು
ನನ್ನೊಡನೆ ಆಡುತ್ತಿದ್ದ ಗೆಳತಿಯರ
ಕೈ ಕೊಸರಿ ಅಪ್ಪನ ಕೈ ಹಿಡಿದಿದ್ದೆ.

ರೈಲಿನ ಡಬ್ಬ ಹಿಡಿದು ಅಳುತ್ತಿದ್ದ
ಅಜ್ಜಿಯನು ಅಲ್ಲಿಯೇ ಬಿಟ್ಟು ಬಂದಿದ್ದೆ
ಅಮ್ಮಿ, ಅಬ್ಬಾ, ಭಯ್ಯಾನೊಂದಿಗೆ
ಕರಾಚಿಯ ರೈಲು ಹತ್ತಿದ್ದೆ.
ಅಲ್ಲಿಂದ ಯಾರಾದರೂ ಬಂದರೆ ಸಾಕು
ನನ್ನ ಹಳೆಯ ನೆನಪಿನ ಬುತ್ತಿ ಬಿಚ್ಚಿಕೊಳ್ಳುವೆ

ಕಾವೇರಿಯ ತಟದ ಆ ಮನೆ ಕಿಟಕಿಯಲಿ
ಬಿಟ್ಟು ಬಂದಿರುವ ನನ್ನ ಪುಟ್ಟಗೊಂಬೆ
ಅಮ್ಮನ ಪಾನದಾನ, ಅಪ್ಪನ ಹುಕ್ಕಾ
ನೋಟುಬುಕ್ಕಿನಲ್ಲಿನ ನವಿಲುಗರಿ
ಗೆಳತಿಯರ ದಂಡು, ಅವರ ಮದುವೆ
ಮಕ್ಕಳು, ಇತರೇ ಕುಶಲ ವಿಚಾರಿಸುವೆ.

ಮೊಹರಂ ಬಂದಿತೆಂದರೆ ಸಾಕು
ನನ್ನೂರು ಮದುಮನೆಯಂತೆ ಕಂಗೊಳಿಸುತ್ತಿತ್ತು
ಪಶ್ಚಿಮ ಘಟ್ಟದಿಂದ ಹರಿಯುವ
ಪ್ರತಿಯೊಂದು ನದಿಯೂ ನನಗೆ
ವಜು ಮಾಡು ಬಾ ಎಂದು ಕರೆಯುತ್ತಿದ್ದವು
ಚಿನಾಬ್ ನದಿಯ ನೀರನ್ನು ಮುಟ್ಟದಿರು
ನೀನು ಮುಹಾಜಿರಳು ಎಂದಾಗ
ನೋವಿನಿಂದ ಮನಸು ಮಿಡಿಯುತ್ತಿತ್ತು

ಗಾಲಿಬ್, ಇಕ್ಬಾಲ್, ಸೂರ್, ಕಬೀರ,
ಸಂತ ಶರಣರ ಗ್ರಂಥಗಳೆಲ್ಲ
ಅಲ್ಲಿಯೇ ಬಿಟ್ಟು ಬಂದಿರುವೆ
ನನ್ನ ಜೀವವೆಲ್ಲ ಅಲ್ಲಿಯೇ ಇದೆ
ದೇಹ ಮಾತ್ರ ಇಲ್ಲಿದೆ ಸುಮ್ಮನೆ
ಮನಸಿಗೆಂತಹ ಗಡಿಗಳು
ಎಂತಹ ವಿಭಾಜಕ ರೇಖೆಗಳು?
*****
೧ ಎಲೆ ಅಡಿಕೆ ಇಡುವ ಪುಟ್ಟ ಪೆಟ್ಟಿಗೆ
೨ ಉಗುಳುವ ಪೀಕದಾನಿ

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...