Home / ಕವನ / ಕವಿತೆ / ಇದೆಂತಹ ಗಡಿಗಳು

ಇದೆಂತಹ ಗಡಿಗಳು

ಇದೆಂತಹ ಗಡಿಗಳು
ಎಂತಹ ವಿಭಾಜಕ ರೇಖೆಗಳು
ಕಾವೇರಿಯ ತಟದಲಿ
ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ
ಕೂಡಿ ಬೆಳೆದವಳು ನಾನು
ಇಲ್ಲಿ ಮುಹಾಜಿರಳಾಗಿರುವೆ.

ಅಲ್ಲಿ ಮಾಮರಗಳ ಹತ್ತಿ
ಮರಕೋತಿ ಆಡಿದ್ದವಳು
ಆ ನದಿ, ಬೆಟ್ಟ, ಗಿಳಿ, ಕೋಗಿಲೆ
ಹಿಂಡು ಹಿಂಡು ಗೆಳತಿಯರನು
ಅಲ್ಲಿಯೇ ಬಿಟ್ಟು ಬಂದಿರುವೆ,
ಅಲ್ಲಿ ಕಾವೇರಿಯ ತಟದಲ್ಲಿಯೇ.

ನೋಟು ಬುಕ್ಕಿನ ಪುಟಗಳ ಮಧ್ಯೆ
ಅಂದು ಬಚ್ಚಿಟ್ಟ ಆ ನವಿಲುಗರಿಯಿದೆ
ಚಾಚಾನ ಪುಟ್ಟ ಮಗಳೀಗ
ಬೆಳೆದು ದೊಡ್ಡವಳಾಗಿರಬೇಕು
ಮರ್‍ಯಾದೆಯ ದುಪಟ್ಟಾ
ತಲೆ ಮೇಲೆ ಹೊದೆಯುತ್ತಿರಬೇಕು.

ಅಲಿಂದ ಬಿಟ್ಟು ಬರುವಾಗ
ಅವಳಿನ್ನೂ ಪುಟ್ಟ ಮಗು
ತೊಟ್ಟಿಲ್ಲಲಿ ಒಂದೇ ಸಮ ಅಳುತ್ತಿದ್ದಳು.
ಅಮ್ಮನ ಜಹಾಜಿನಾಕಾರದ ಪಾನ್‌ದಾನ್‌೧
ಸುಂದರ ಉಗಾಲ್ದಾನ್೨
ಅಪ್ಪನ ಸುರಾಯಿಯಾಕಾರದ
ಕುಸುರಿ ಕೆತ್ತನೆಯ ಮುರಾದಾಬಾದಿ ಹುಕ್ಕಾ
ಎಲ್ಲ ಅಲ್ಲಿಯೇ ಬಿಟ್ಟು ಬಂದಿರುವೆ.

ಆ ಪಡಸಾಲೆ ನನಗಿನ್ನೂ ನೆನಪಿದೆ
ಮುಂದಿರುವ ಛಪ್ಪರದಲ್ಲಿಯೇ ಬಿಟ್ಟು ಬಂದಿದ್ದೆ
ನನ್ನ ಪುಟ್ಟ ಪುಟ್ಟ ಚಪ್ಪಲಿಗಳು
ಒಮ್ಮೆಲೇ ಏನಾಯಿತೋ ಗೊತ್ತಿಲ್ಲ
ದೇಶ ವಿಭಜನೆಯಾಗುತ್ತದೆಯೆಂದರು.
ಅಪ್ಪ ದಡದಡ್ಡನೇ ರೈಲು ಹತ್ತಿಸಿದ್ದರು
ನನ್ನೊಡನೆ ಆಡುತ್ತಿದ್ದ ಗೆಳತಿಯರ
ಕೈ ಕೊಸರಿ ಅಪ್ಪನ ಕೈ ಹಿಡಿದಿದ್ದೆ.

ರೈಲಿನ ಡಬ್ಬ ಹಿಡಿದು ಅಳುತ್ತಿದ್ದ
ಅಜ್ಜಿಯನು ಅಲ್ಲಿಯೇ ಬಿಟ್ಟು ಬಂದಿದ್ದೆ
ಅಮ್ಮಿ, ಅಬ್ಬಾ, ಭಯ್ಯಾನೊಂದಿಗೆ
ಕರಾಚಿಯ ರೈಲು ಹತ್ತಿದ್ದೆ.
ಅಲ್ಲಿಂದ ಯಾರಾದರೂ ಬಂದರೆ ಸಾಕು
ನನ್ನ ಹಳೆಯ ನೆನಪಿನ ಬುತ್ತಿ ಬಿಚ್ಚಿಕೊಳ್ಳುವೆ

ಕಾವೇರಿಯ ತಟದ ಆ ಮನೆ ಕಿಟಕಿಯಲಿ
ಬಿಟ್ಟು ಬಂದಿರುವ ನನ್ನ ಪುಟ್ಟಗೊಂಬೆ
ಅಮ್ಮನ ಪಾನದಾನ, ಅಪ್ಪನ ಹುಕ್ಕಾ
ನೋಟುಬುಕ್ಕಿನಲ್ಲಿನ ನವಿಲುಗರಿ
ಗೆಳತಿಯರ ದಂಡು, ಅವರ ಮದುವೆ
ಮಕ್ಕಳು, ಇತರೇ ಕುಶಲ ವಿಚಾರಿಸುವೆ.

ಮೊಹರಂ ಬಂದಿತೆಂದರೆ ಸಾಕು
ನನ್ನೂರು ಮದುಮನೆಯಂತೆ ಕಂಗೊಳಿಸುತ್ತಿತ್ತು
ಪಶ್ಚಿಮ ಘಟ್ಟದಿಂದ ಹರಿಯುವ
ಪ್ರತಿಯೊಂದು ನದಿಯೂ ನನಗೆ
ವಜು ಮಾಡು ಬಾ ಎಂದು ಕರೆಯುತ್ತಿದ್ದವು
ಚಿನಾಬ್ ನದಿಯ ನೀರನ್ನು ಮುಟ್ಟದಿರು
ನೀನು ಮುಹಾಜಿರಳು ಎಂದಾಗ
ನೋವಿನಿಂದ ಮನಸು ಮಿಡಿಯುತ್ತಿತ್ತು

ಗಾಲಿಬ್, ಇಕ್ಬಾಲ್, ಸೂರ್, ಕಬೀರ,
ಸಂತ ಶರಣರ ಗ್ರಂಥಗಳೆಲ್ಲ
ಅಲ್ಲಿಯೇ ಬಿಟ್ಟು ಬಂದಿರುವೆ
ನನ್ನ ಜೀವವೆಲ್ಲ ಅಲ್ಲಿಯೇ ಇದೆ
ದೇಹ ಮಾತ್ರ ಇಲ್ಲಿದೆ ಸುಮ್ಮನೆ
ಮನಸಿಗೆಂತಹ ಗಡಿಗಳು
ಎಂತಹ ವಿಭಾಜಕ ರೇಖೆಗಳು?
*****
೧ ಎಲೆ ಅಡಿಕೆ ಇಡುವ ಪುಟ್ಟ ಪೆಟ್ಟಿಗೆ
೨ ಉಗುಳುವ ಪೀಕದಾನಿ

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...