Home / ಕವನ / ಕವಿತೆ / ತ್ಯಾವಣನಾಯಕ

ತ್ಯಾವಣನಾಯಕ

(೧)

ಇದೊ! ನನ್ನ ಸ್ಮತಿಪಧದಿ ಎಸದನೀ ನಾಯಕನ
ಹಾಳುಹಂಪೆಯಲಿರುವ ಮೂಲಗುಂಪೆಯನೊಂದ
ಶೋಧಿಸುತ ನಡೆದಿರಲು ಹಾಳು ದೇಗುಲವೊಂದ
ಕಂಡೆ ಜನರಗಿಯುತಿಹುದನು ಅವರ ಕಾಯಕವ-
ನೀಕ್ಷಿಸುತ ನಿಂತಿರಲು ಗುಡಿಯ ಕಲ್ಲಂಬದಡಿ-
ಗಿರುವ ಗುಹೆಯೊಂದರಲಿ ಓರ್‍ವ ವ್ಯಕ್ತಿಯ ಕಂಡೆ,
ಸುತ್ತುವರಿದಿರೆ ಜನರ ಸಂದಣಿಯು, ಏನೆಂಬೆ!
ಅಂಕುರಿಸಿತೆನ್ನೆದೆಯೊಳನುರಾಗದೊಂದು ಮಿಡಿ

ಆಗ ಬಂದಿತು ಮುಂದೆ ವ್ಯಕ್ತಿ ಮತ್ತೆಂದಿತದು!
ಮೂರು ಶತಮಾನದಾಚೆಗೆ ಜೀವಿಸಿದ ಬೊಂಬೆ-
ಯೆನಬೇಡಿ! ಮಾನಿಸನೆ ನಾನಿಹೆನು ಕಂದಿತದು
ವಿಜಯನಗರದ ವೆಂಪು ಆ ಬನಸಿರಿಯ ರೆಂಬೆ
ನಾನೊರ್‍ವನುಳಿದಿಹೆನು, ಅದರ ಸಂದೇಶವನು
ತಂದು ಮುಟ್ಟಿಸಲೆಂದು ನಿಮ್ಮ ಹೃದ್ದೇಶವನು!

(೨)

ತಾಳಿಕೋಟೆಯ ರಣದಿ ಕಣಕಣವು ಸಹ ಹೋಗಿ
ಸಾಮ್ರಾಜ್ಯವಳಿದಿರುವ ಪರಿಯ ನಾ ಧೇನಿಸಿದೆ
ನರಪತಿಯನುಳಿಸಲೆಂದತಿಯಾಗಿ ಹವಣಿಸಿದೆ
ಮಾಡಲೇನಹುದಿನ್ನು, ಕಾಲಬಂದಿರೆ ಮಾಗಿ
ಅಸಹಾಯನಾಗಿರಲು ಇಂಥ ವೇದನೆ ತಾಗಿ
ರಾಜಧಾನಿಗೆ ಮರಳಿ ಕ್ಲೇಶವನು ಗಮನಿನದ
ರಾಣಿವಾಸವನುಳುಹಿ ಕ್ಲೇಶವನು ಸಮನಿಸಿದೆ.
ಅಂದಿನಿಂದಿನ್ನುವರಗಿರುವೆ ನಾ ಬೈರಾಗಿ!

ವಿಜಯನಗರದಿ ಮೂರು ದಿನವು ನಡದಿಹ ಕೊಲೆಯ
ನೋಡಲೆಂದವಿತು ಕುಳಿತಿದ್ದೆ ನೆಲಮನೆಯೊಳಕೆ!
ಅಂತ ನಿಮ್ಮನು ನಾನು ಕಾಂಬುದಕೆ ಕಾರಣನು!
ಅದಕಂತೆ ಕಾಯ್ದು ಕೊಂಡಿದ್ದೆ ನನ್ನಯ ತಲೆಯ.
ಇನಿತು ದಿನವಿರಲಿಲ್ಲವೆನಗೆ ಜನತೆಯ ಬಳಕೆ!
ಇಂದು ನಿಂತಿಹೆ ಬಂದು ನಿಮ್ಮೆದುರು,-ತ್ಯಾವಣನು!

(೩)

ಅಡಗಿದೆನು ಮೂರು ದಿನವೀ ಗುಹಾಭಾಗದಲಿ,
ತುಂಗಭದ್ರೆಯು ಹರಿದು ರಕ್ತಾನುರಕ್ತೆಯಿರ,
ಯವನನೇನೆಗೆ ಯಮನ ಸೇವೆಯಾಸಕ್ತಿಯಿರ
ಬಾಳಿದೆನು ಬಲು ಬಳಲಿ ನಾ ಭೀತಿರೋಗದಲಿ
ಆ ಮೇಲೆ ಬಂದು ಸುತ್ತೆಲ್ಲ ದಿಟ್ಟಿಯ ಚೆಲ್ಲೆ
ಸೂರ್‍ಯಾಸ್ತವಾಗಿತ್ತು ವರರಾಜ ಹಸ್ತವದು
ರಾಜ್ಯರಮೆಗಿಹ ದುಕೂಲವ ಸೆಳೆಯೆ, ಗ್ರಸ್ತವದು
ಅಭಿಮಾನಧನವೆಂದು ಒರಲಿದಳು ಆ ನಲ್ಲೆ!

ವಿಜಯನಗರವದಂದು ಅಪಜಯನಗರವಾಗಿ
ಸುಖಕಿರುವ ನೆಲೆವೀಡು ದುಃಖದಾಗರವಾಗಿ
ಕೆನ್ನೀರು ಕಣ್ಣೀರು ನಿಲಲು ಸಾಗರವಾಗಿ,
ಮನದಿ ಮಲ್ಲಳಿಗೊಂಡೆ: ಎಲೆ! ಸ್ಮಶಾನವಿದೇನು?
ಕನ್ನಡದ ಮೈಸಿರಿಯು ಬತ್ತಲಾಗಿಹುದೇನು?
ಕೊನೆವರೆಗು ನಮ್ಮ ನಾಡಿನಲ್ಲಿ ದುರ್‍ಗತಿಯೇನು?

(೪)

ಇಂತಲ್ಲ ಹೊಸತೊಂದು ಸ್ಫೂರ್ತಿಯದು ಜನಿಸುವದು
ನಾಡಿನೊಳು, ಹೊಸತೊಂದು ಸಾಮ್ರಾಜ್ಯವೇಳುವದು
ಕನ್ನಡಕೆ ಹೃದಯವಿರುವನಕ ನೆರೆ ಬಾಳುವದು
ನಾಡ ಹಸುಮಕ್ಕಳಿಗೆ ಇದು ಕಾರ್‍ಯವೆನಿಸುವದು
ನಾಡಿನವರೆದೆಯಲ್ಲಿ ಹೊನ್ನಕ್ಕರದಿ ಬರದು
ಬಾಳುವರು ಕಬ್ಬಿಗರು, ತಮ್ಮ ಸಾಹಸಗಳನು
ಅವರ ಸುಖ ದುಃಖವನು, ಉಮ್ಮಳುಲ್ಲಸಗಳನು
ನೆನೆಯುವರು ನೆರೆನಾಡಿನವರು ತಮ್ಮನು ಮರೆದು

ಅದಕಂತ ಕರುನಾಡ ತುಂಬೆಲ್ಲ ಸಂಚರಿಸುವೆನು
ಹಿಂದಿನವರೆಸಕ ತಣಿಸದಿಹ ಬೆಂತರದಂತೆ
ಇಂದಿನವರನು ಕನಸಿನಲಿ ಹೋಗಿ ಹರಸುವನು
ಅವರೆದೆಯು ಪುಟಿಯುವದ ನೋಡಿ ತುಂತುರದಂತೆ
ಹಿಂದಿನಿರವನು ನೆನೆದು ಮುಂದಿಹುದ ಸ್ಮರಿಸುವೆನು
ಕಂಡುಬರುತಿಹುದೊಂದು ಯುಗ-ಯುಗಾಂತರದಂತೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...