ತ್ಯಾವಣನಾಯಕ

(೧)

ಇದೊ! ನನ್ನ ಸ್ಮತಿಪಧದಿ ಎಸದನೀ ನಾಯಕನ
ಹಾಳುಹಂಪೆಯಲಿರುವ ಮೂಲಗುಂಪೆಯನೊಂದ
ಶೋಧಿಸುತ ನಡೆದಿರಲು ಹಾಳು ದೇಗುಲವೊಂದ
ಕಂಡೆ ಜನರಗಿಯುತಿಹುದನು ಅವರ ಕಾಯಕವ-
ನೀಕ್ಷಿಸುತ ನಿಂತಿರಲು ಗುಡಿಯ ಕಲ್ಲಂಬದಡಿ-
ಗಿರುವ ಗುಹೆಯೊಂದರಲಿ ಓರ್‍ವ ವ್ಯಕ್ತಿಯ ಕಂಡೆ,
ಸುತ್ತುವರಿದಿರೆ ಜನರ ಸಂದಣಿಯು, ಏನೆಂಬೆ!
ಅಂಕುರಿಸಿತೆನ್ನೆದೆಯೊಳನುರಾಗದೊಂದು ಮಿಡಿ

ಆಗ ಬಂದಿತು ಮುಂದೆ ವ್ಯಕ್ತಿ ಮತ್ತೆಂದಿತದು!
ಮೂರು ಶತಮಾನದಾಚೆಗೆ ಜೀವಿಸಿದ ಬೊಂಬೆ-
ಯೆನಬೇಡಿ! ಮಾನಿಸನೆ ನಾನಿಹೆನು ಕಂದಿತದು
ವಿಜಯನಗರದ ವೆಂಪು ಆ ಬನಸಿರಿಯ ರೆಂಬೆ
ನಾನೊರ್‍ವನುಳಿದಿಹೆನು, ಅದರ ಸಂದೇಶವನು
ತಂದು ಮುಟ್ಟಿಸಲೆಂದು ನಿಮ್ಮ ಹೃದ್ದೇಶವನು!

(೨)

ತಾಳಿಕೋಟೆಯ ರಣದಿ ಕಣಕಣವು ಸಹ ಹೋಗಿ
ಸಾಮ್ರಾಜ್ಯವಳಿದಿರುವ ಪರಿಯ ನಾ ಧೇನಿಸಿದೆ
ನರಪತಿಯನುಳಿಸಲೆಂದತಿಯಾಗಿ ಹವಣಿಸಿದೆ
ಮಾಡಲೇನಹುದಿನ್ನು, ಕಾಲಬಂದಿರೆ ಮಾಗಿ
ಅಸಹಾಯನಾಗಿರಲು ಇಂಥ ವೇದನೆ ತಾಗಿ
ರಾಜಧಾನಿಗೆ ಮರಳಿ ಕ್ಲೇಶವನು ಗಮನಿನದ
ರಾಣಿವಾಸವನುಳುಹಿ ಕ್ಲೇಶವನು ಸಮನಿಸಿದೆ.
ಅಂದಿನಿಂದಿನ್ನುವರಗಿರುವೆ ನಾ ಬೈರಾಗಿ!

ವಿಜಯನಗರದಿ ಮೂರು ದಿನವು ನಡದಿಹ ಕೊಲೆಯ
ನೋಡಲೆಂದವಿತು ಕುಳಿತಿದ್ದೆ ನೆಲಮನೆಯೊಳಕೆ!
ಅಂತ ನಿಮ್ಮನು ನಾನು ಕಾಂಬುದಕೆ ಕಾರಣನು!
ಅದಕಂತೆ ಕಾಯ್ದು ಕೊಂಡಿದ್ದೆ ನನ್ನಯ ತಲೆಯ.
ಇನಿತು ದಿನವಿರಲಿಲ್ಲವೆನಗೆ ಜನತೆಯ ಬಳಕೆ!
ಇಂದು ನಿಂತಿಹೆ ಬಂದು ನಿಮ್ಮೆದುರು,-ತ್ಯಾವಣನು!

(೩)

ಅಡಗಿದೆನು ಮೂರು ದಿನವೀ ಗುಹಾಭಾಗದಲಿ,
ತುಂಗಭದ್ರೆಯು ಹರಿದು ರಕ್ತಾನುರಕ್ತೆಯಿರ,
ಯವನನೇನೆಗೆ ಯಮನ ಸೇವೆಯಾಸಕ್ತಿಯಿರ
ಬಾಳಿದೆನು ಬಲು ಬಳಲಿ ನಾ ಭೀತಿರೋಗದಲಿ
ಆ ಮೇಲೆ ಬಂದು ಸುತ್ತೆಲ್ಲ ದಿಟ್ಟಿಯ ಚೆಲ್ಲೆ
ಸೂರ್‍ಯಾಸ್ತವಾಗಿತ್ತು ವರರಾಜ ಹಸ್ತವದು
ರಾಜ್ಯರಮೆಗಿಹ ದುಕೂಲವ ಸೆಳೆಯೆ, ಗ್ರಸ್ತವದು
ಅಭಿಮಾನಧನವೆಂದು ಒರಲಿದಳು ಆ ನಲ್ಲೆ!

ವಿಜಯನಗರವದಂದು ಅಪಜಯನಗರವಾಗಿ
ಸುಖಕಿರುವ ನೆಲೆವೀಡು ದುಃಖದಾಗರವಾಗಿ
ಕೆನ್ನೀರು ಕಣ್ಣೀರು ನಿಲಲು ಸಾಗರವಾಗಿ,
ಮನದಿ ಮಲ್ಲಳಿಗೊಂಡೆ: ಎಲೆ! ಸ್ಮಶಾನವಿದೇನು?
ಕನ್ನಡದ ಮೈಸಿರಿಯು ಬತ್ತಲಾಗಿಹುದೇನು?
ಕೊನೆವರೆಗು ನಮ್ಮ ನಾಡಿನಲ್ಲಿ ದುರ್‍ಗತಿಯೇನು?

(೪)

ಇಂತಲ್ಲ ಹೊಸತೊಂದು ಸ್ಫೂರ್ತಿಯದು ಜನಿಸುವದು
ನಾಡಿನೊಳು, ಹೊಸತೊಂದು ಸಾಮ್ರಾಜ್ಯವೇಳುವದು
ಕನ್ನಡಕೆ ಹೃದಯವಿರುವನಕ ನೆರೆ ಬಾಳುವದು
ನಾಡ ಹಸುಮಕ್ಕಳಿಗೆ ಇದು ಕಾರ್‍ಯವೆನಿಸುವದು
ನಾಡಿನವರೆದೆಯಲ್ಲಿ ಹೊನ್ನಕ್ಕರದಿ ಬರದು
ಬಾಳುವರು ಕಬ್ಬಿಗರು, ತಮ್ಮ ಸಾಹಸಗಳನು
ಅವರ ಸುಖ ದುಃಖವನು, ಉಮ್ಮಳುಲ್ಲಸಗಳನು
ನೆನೆಯುವರು ನೆರೆನಾಡಿನವರು ತಮ್ಮನು ಮರೆದು

ಅದಕಂತ ಕರುನಾಡ ತುಂಬೆಲ್ಲ ಸಂಚರಿಸುವೆನು
ಹಿಂದಿನವರೆಸಕ ತಣಿಸದಿಹ ಬೆಂತರದಂತೆ
ಇಂದಿನವರನು ಕನಸಿನಲಿ ಹೋಗಿ ಹರಸುವನು
ಅವರೆದೆಯು ಪುಟಿಯುವದ ನೋಡಿ ತುಂತುರದಂತೆ
ಹಿಂದಿನಿರವನು ನೆನೆದು ಮುಂದಿಹುದ ಸ್ಮರಿಸುವೆನು
ಕಂಡುಬರುತಿಹುದೊಂದು ಯುಗ-ಯುಗಾಂತರದಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭರತವಾಕ್ಯ
Next post ತಾತನ ಗಡ್ಡ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…