Home / ಕವನ / ಅನುವಾದ / ಹಂಸಗಳ ಹಿಂಡು

ಹಂಸಗಳ ಹಿಂಡು

ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ
ಕಾಡುದಾರಿಗಳೆಲ್ಲ ಒಣಗಿವೆ;
ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು
ಶಾಂತ ಆಗಸವನ್ನು ಪ್ರತಿಫಲಿಸಿದೆ;
ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ
ಐವತ್ತೊಂಬತ್ತು ಹಂಸ ತೇಲಿವೆ.

ನಾನು ಮೊದಲೆಣಿಕೆ ಮಾಡಿದ್ದು ನೆನಪಿದೆ, ಅದು
ಹತ್ತೊಂಬತ್ತು ಶರದೃತುಗಳಷ್ಟು ಹಿಂದೆ.
ಕಂಡೆ, ಇದೊ ಎಣಿಸಿಯೇ ಬಿಟ್ಟೆ ಎನ್ನುವ ಮುಂಚೆ
ಥಟ್ಟನೇರಿ ಸವಾರಿ, ಹಾರಿಬಿಟ್ಟವು ಅಂಚೆ,
ಮೊರೆವ ರೆಕ್ಕೆಯ ಬೀಸಿ ಮುರಿದ ಬೃಹದಾಕಾರ
ವೃತ್ತ ಚಿತ್ರಗಳಾಗಿ ಹರಡಿ.

ಪರಿಭಾವಿಸಿದ್ದೆ ಆ ಉಜ್ವಲ ಜೀವಿಗಳ ಹಿಂದೆ
ಘಾಸಿಗೊಂಡಿದೆ ಈಗ ಹೃದಯ.
ಮೊದಲ ಸಲ ಸಂಜೆಬೆಳಕಲ್ಲಿ ಈ ದಡದಲ್ಲಿ
ನಿಂತು ತಲೆಮೇಲೆ
ಹಕ್ಕಿ ರೆಕ್ಕೆಯ ಗಂಟೆಬಡಿತ ಆಲಿಸಿ, ಆಹ!
ನಡೆದಿದ್ದೆ ಹಗುರಾಗಿ ಆಗ,
ಎಲ್ಲ ಬದಲಾಗಿದೆ ಈಗ

ದಣಿಯದಿವೆ ಈ ಪ್ರಣಯ ಜೋಡಿಗಳು ಈಗಲೂ
ಸ್ನೇಹ ಶೀತಳ ತರಂಗಿಣಿಯ ಬಗೆದೀಜುತ್ತ,
ಗಾಳಿಯಲ್ಲೇರುತ್ತ,
ಮುಪ್ಪು ಹೃದಯಕ್ಕೆ ಎಂದೆಂದೂ ತಾಗದಿರುತ್ತ;
ಎಲ್ಲಿ ಹಾರಲಿ ಅವು, ಆರದಿವೆ ಅವಕ್ಕೆ ರತಿಯುದ್ರೇಕ ಇಲ್ಲವೇ
ಗೆದ್ದು ಮೀರುವ ತವಕ,
ನಿಂತ ನೀರಿನ ಮೇಲೆ ಶಾಂತ ತೇಲಿವೆ ಹಕ್ಕಿ
ಏನು ಮೋಹಕ, ಎಷ್ಟು ಗೂಢ!
ಮುಂದೆಂದೊ ಒಂದು ದಿನ ಈ ಹಂಸ ಸಂಕುಲ
ಹಾರಿಹೋಯಿತೆ ಎಂದು ಚಿಂತಿಸುವ ಹೊತ್ತಲ್ಲಿ
ಯಾವ ಕೊಳದಲ್ಲಿ ಸರೋವರದ ತಡಿಯಲ್ಲಿ
ಯಾವ ಜೊಂಡುಗಳಲ್ಲಿ ತಂಗಿರುವುದೋ ಇದು
ಯಾರ ಕಣ್ಣಿಗೆ ಹಬ್ಬವಾಗಿ ನಲಿದಿರುವುದೋ!
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕೂಲೆ ಉದ್ಯಾನ ಲೇಡಿ ಗ್ರೆಗರಿಯ ಮನೆಗೆ ಸೇರಿದ್ದು. ಏಟ್ಸ್ ಅಲ್ಲಿಯ ಕೊಳದಲ್ಲಿ ಹಂಸದ ಹಿಂಡೊಂದನ್ನು ನೋಡುತ್ತಾನೆ. ಹತ್ತೊಂಬತ್ತು ವರ್‍ಷಗಳಷ್ಟು ಹಿಂದೆ ಅಲ್ಲಿಯೇ, ಅಂಥದೇ ದೃಶ್ಯವನ್ನು ನೋಡಿದ್ದು ಅವನಿಗೆ ನೆನಪಾಗುತ್ತದೆ. ಆಗ ಅವನು ಯುವಕನಾಗಿದ್ದ; ಪ್ರೇಮದಲ್ಲಿದ್ದ; ಕುಣಿಯುವ ಹೃದಯ ಹೊತ್ತು ನಡೆದಿದ್ದ. ಈಗ ಅವನ ಮೇಲೆ ಕಾಲ ದಾಳಿಮಾಡಿದೆ, ಪ್ರೇಮ ಭ್ರಮೆಯೆನಿಸಿ ಕುಸಿದಿದೆ, ಹೃದಯ ಭಾರವಾಗಿದೆ. ಹಂಸಗಳು ಮಾತ್ರ ಆಗಿನಷ್ಟೇ ಚೆಲುವಾಗಿ, ಚುರುಕಾಗಿ, ಸಡಗರದ ಜೋಡಿಗಳಾಗಿ ಉಳಿದಿವೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...