Home / ಕವನ / ಕವಿತೆ / ಬಯಕೆಯ ಹಾಡು

ಬಯಕೆಯ ಹಾಡು

ಕಸಕಸಿ ಕೊಬ್ಬರಿ ಹಸನುಳ್ಳ ಜಿಲಿಬಿಲಿ|
ಬಿಸಿಯ ಹೂರಣಗಡಬ ಬಿಳಿಯ ಬೆಲ್ಲಽಽ|
ರಸಬಾಳಿ ಖಬ್ಬ ಸುಲಿದು ಮುಂದಿಟ್ಟರ|
ಇಸಮಾಡಿ ಒಂದ ತುತ್ತ ತಿಂದೇನ ತಾಯಿ|
ಬಂಕಿ ಕಾಡತಾವ ತಾಯಿ ಪರಿಪರಿಯಿಂದ
ಬಂಕಿ ಕಾಡತಾವ ||೧||

ಆಕಳ ಹಾಲಾಗ ದುಮ್ಮಸ ಮಾಡ|
ಪರಡಿ ಸವತೀಬೀಜ ಪಾಯಸ ಮಾಡ|
ಯಾಲಕ್ಕಾಯ ಪತ್ತುರಿ ಜಾಜಿಕಾಯಿ ಮೊದಲುಮಾಡಿ|
ಇಷ್ಟ ಸಾಹಿತನೆಲ್ಲ ಹದಮಾಡ ತಾಯಿ|
ಬಂಕಿ ಕಾಡತಾವ ||೨||

ಗಂಗಾಳ ಝರಗಿ ಝಳಝಳ ಬೆಳಗ|
ತೆಂಬೀಗಿ ತುಂಬಿ ಬದಿಯಲ್ಲಿ ಇಡಽ|
ಡೊಣ್ಣಿ ತುಂಬ ತುಪ್ಪ ತಂದು ಮುಂದಿಟ್ಟಿರ|
ಬಟ್ಟೆದ್ದಿ ಬಾಯಾಗ ಇಟ್ಟೀನ ತಾಯಿ|
ಬಂಕಿ ಕಾಡತಾವ ||೩||

ಎಳ್ಳ ಹಚ್ಚಿದ ರೊಟ್ಟಿ ಎಣ್ಣಿ ಬದನೀಕಾಯಿ|
ಮಸರ ಕಲಸಿದ ಬುತ್ತಿ ಬಿಸಿಯ ಬಾನ|
ಅಲ್ಲ, ಮಾಗುಣಿ ಬೇರ, ಬೆಲ್ಲ, ಬೆಳವಲದ್ಹಣ್ಣ|
ಮನ ಬೇಡಿ ನನ ಜೀವ ಬಗಸ್ಯಾದ ತಾಯಿ|
ಬಂಕಿ ಕಾಡತಾವ ||೪||

ಹೋಳಿಹೆಣ್ಣಿವಿ ಸುತ್ತ ತನುಗಾಳಿ ಬೀಸ್ಯಾವ|
ಮಾಳೀಗಿ ಏರಿ ಬೆಳಖಿಂಡಿ ಮುಚ್ಚ|
ಬಣ್ಣಽದ ಹಚ್ಚಡ ಬಿಗಿಬಿಗಿದು ಹೊಚ್ಚಿದರ|
ಕಣ್ತುಂಬ ಒಂದು ನಿದ್ದಿ ಮಾಡೇನ ತಾಯೀ|
ಬಂಕಿ ಕಾಡತಾವ ||೫||

ಕುಂತಽರ ಆಕಡಿಕಿ ನಿಂತರ ತೂಕಡಿಕಿ|
ತಾಳಲಾರೆನೆ ತಾಯಿ ತೋಳಾರೆ ತಾರ|
ಮಂಚಕ ಒಪ್ಪತ ಹಾಸೀಗಿ ಮಾಡ|
ಮಂಚಕ ಎನ್ನ ಎಳದ್ಹಾಕ ತಾಯೀ|
ಬಂಕಿ ಕಾಡತಾವ ||೬||
*****
ಬಯಕೆಯ ಹಾಡು

ಒಬ್ಬ ಗರ್ಭಿಣಿಗೆ ಬಯಕೆಗಳು ಕಾಡುತ್ವೆ. ಅವಳು ತಾಯಿಯಲ್ಲಿ ತನ್ನ ಬಯಕೆಗಳನ್ನೆಲ್ಲ ಬೇಡುತ್ತಾಳೆ. ಅವಳ ಸಲಿಗೆಯ ಮಾತು ಹೇಳುವ ಬಗೆ ಎಶ್ಟು ಸೊಗಸಾಗಿವೆ; `ಕಸಕಸಿ ಕೊಬ್ಬರಿ, ಹೆಸನುಳ್ಳ ಜಿಲಿಬಿಲಿ, ಬಿಳಿಯ ಬೆಲ್ಲದ ಬಿಸಿಯ ಹೊರಣಗಡುಬು… ಇವನ್ನು ಮುಂದಿಟ್ಟರೆ ಇಸಮಾಡಿ ಒಂದು ತುತ್ತ ತಿಂದೇನು’ ಎನ್ನುತ್ತಾಳೆ! ಇದರಂತೆಯೆ `ಬಟ್ಟೆದ್ದಿ ಬಾಯಾಗ ಇಟ್ಟೇನು ತಾಯಿ’ `ತಾಳಲಾರೆನೆ ತಾಯಿ ತೋಳಾರೆ ತಾರ’-ಮೊದಲಾದುವು.

ಛಂದಸ್ಸು:- ಕುಸುಮಷಟ್ಟದಿಗೆ ಹೊಂದುತ್ತದೆ.

ಶಬ್ದ ಪ್ರಯೋಗಗಳು:- ಇಸ=ವಿಷ. ದುಮ್ಮಸ ಮಾಡ=ಅದರಲ್ಲಿ ಅಡಿಗೆ ಮಾಡು. ಮಸರ=ಮೊಸರು. ಬಾನ=ಬೋನ. ತನುಗಾಳಿ=ತಂಪುಗಾಳಿ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...