Home / ಬಾಲ ಚಿಲುಮೆ / ಕಥೆ / ಸೋಮೇಗೌಡ

ಸೋಮೇಗೌಡ

ಕತ್ತಲಾಗಿತ್ತು. ದನಕರುಗಳನ್ನು ಆಟ್ಟಿಕೊಂಡು ಆರಂಬಗಾರರೆಲ್ಲರೂ ಹೊಲ ಗದ್ದೆಗಳಿಂದ ಆಗತಾನೇ ಹಿಂದಿರುಗಿ ಬರುತ್ತಿದ್ದರು. ಪಟೇಲ ಸೋಮೇಗೌಡನು ಮಳೆಬೆಳೆ ವಿಚಾರವಾಗಿ ಮಾತನಾಡುತ್ತ ಚಾವಡಿಯಲ್ಲಿ ಕುಳಿತಿದ್ದನು. ಆಗ ಯಾರೋ ಕುದುರೆಯ ಮೇಲೆ ಕುಳಿತವರು “ಈ ಊರಿನ ಪಟೇಲನು ಯಾರು?” ಎಂದು ವಿಚಾರಿಸಿಕೊಂಡು ಬಂದರು. ಗೌಡನು ತಾನೇ ಮುಂದೆ ಬಂದು “ನೀವು ಯಾರಪ್ಪಾ?” ಎಂದು ಕೇಳಿದನು. ಬಂದವರು “ಅಯ್ಯಾ! ನಾನೊಬ್ಬ ದಾರಿಗನು. ಹಾದಿ ತಪ್ಪಿ ಬಂದಿರುವೆನು. ಈ ರಾತ್ರಿ ತಂಗುವುದಕ್ಕೆ ನನಗೆ ಕೊಂಚ ತಾವನ್ನು ಕೊಡಬೇಕು” ಎಂದರು. ಗೌಡನು “ಅದಕ್ಕೇನಪ್ಪ! ಬಾ!” ಎಂದು ಮನೆಗೆ ಕರೆದುಕೊಂಡು ಹೋದನು.

ಮನೆಯೊಳಗೆ ದೀಪದ ಬೆಳಕಿಗೆ ಹೋಗುತ್ತಲೇ ಬಂದಿರುವವರು ಯಾರು ಎಂಬುದು ಗೌಡನಿಗೆ ತಿಳಿಯಿತು. ಅವನು ಕೂಡಲೆ ಕಾಲಿಗೆ ಬಿದ್ದು “ನನ್ನ ಮನೆ ದೇವರು ಬಂದಿತು; ನನ್ನ ಮನೆ ದೇವರು!” ಎಂದು ಉಬ್ಬಿಹೋದನು; ಅವರ ಕಾಲಿಗೆ ಬಿಸಿನೀರು ಎರೆದನು. ಹಾಲು ಹಣ್ಣು ತಂದೊಪ್ಪಿಸಿದನು. ಬೆಚ್ಚಗೆ ಇರುವೆಡೆಯಲ್ಲಿ ಹಾಸಿ, ಮಲಗಿಸಿದನು. ಮನೆಯ ಮಂದಿ ಮಕ್ಕಳೆಲ್ಲರೂ ಬಂದು ಉಪಚರಿಸಿದರು. ಗೌಡನು ಕುದುರೆಗೆ ಚನ್ನಾಗಿ ಮೈತಿಕ್ಕಿಸಿ, ಬೇಯಿಸಿದ ಹುರುಳಿಯನ್ನು ಇಟ್ಟು, ಹೊಸಹುಲ್ಲನ್ನು ಹಾಕಿ ಆದರಿಸಿದನು. ಬಂದಿದ್ದವರು ಮಹಾರಾಜರು.

ಬೆಳಗಾಗುವ ವೇಳೆಗೆ ದಂಡು ದಾಳಿಯವರೆಲ್ಲರೂ ದೊರೆಗಳನ್ನು ಹುಡುಕಿಕೊಂಡು ಬಂದು ಗೌಡನ ಮನೆಯ ಬಾಗಿಲಲ್ಲಿ ನಿಂತಿದ್ದರು. ದೊರೆಗಳು ಎದ್ದು ಈಚೆಗೆ ಬರುತ್ತಲೆ ಎಲ್ಲರೂ ಒಬ್ಬೊಬ್ಬರಾಗಿ ಬಂದು ಕಾಣಿಸಿಕೊಂಡು ಕೈ ಮುಗಿದರು.

ದೊರೆಗಳು ಗೌಡನನ್ನು ಹತ್ತಿರಕ್ಕೆ ಕರೆದು, “ಗೌಡ! ನೀನು ನಮಗೆ ಬಲು ಉಪಕಾರ ಮಾಡಿದೆ” ಎಂದು ಬಹಳವಾಗಿ ಹೊಗಳಿದರು. ಗೌಡನು “ಬಿಡು ನಮ್ಮಪ್ಪ! ನೀನು ನಮಗೆಲ್ಲ ಹೆತ್ತತಾಯಿಗಿಂತೆ ಹೆಚ್ಚು. ಸಮಯ ಬಂದರೆ ಪ್ರಾಣ ಕೂಡಾ ನಿನ್ನ ಪಾದಕ್ಕೆ ಒಬ್ಬಸಬೇಡವೇ? ಅಂಥಾದ್ದರಲ್ಲಿ ಇದೇನು ಹೆಚ್ಚು?” ಎಂದನು. ದೊರೆಗಳು ಅವನ ರಾಜಭಕ್ತಿಗೆ ಮೆಚ್ಚಿ ಆ ಹಳ್ಳಿಯನ್ನೇ ಅವನಿಗೆ ಮಾನ್ಯವಾಗಿ ಕೊಟ್ಟರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...