Home / ಕವನ / ಕವಿತೆ / ಬೈರಾಗಿಯ ಜಡೆ

ಬೈರಾಗಿಯ ಜಡೆ


ಹೊತ್ತು ಕಂತುವ ಮೊದಲೇ
ನಿನಗೆ ಜಡೆ ಹೆಣೆದು
ಮುಗಿಸಲೇಬೇಕೆಂಬುದಿವರ
ಉಗ್ರ ಆದೇಶ.
ನೀನೋ ಅಂಡಲೆವ ಬೈರಾಗಿ!

ನಿಂತಲ್ಲಿ ನಿಲ್ಲುವವನಲ್ಲ
ಕೂತಲ್ಲಿ ಕೂರುವವನಲ್ಲ
ಕ್ಷಣಕ್ಕೊಮ್ಮೆ ಧಿಗ್ಗನೆದ್ದು
ಗರಗರ ದಿಕ್ಕು ತಪ್ಪಿ ತಿರುಗುವ
ವಾಚಾಳಿ ಪಾದದವನು!
ನನ್ನ ಯಾವ ಮಿಕ್ಕುಳಿದ ಋಣವೋ
ನನಗೆ ಮೆಟ್ಟಿದ ಪ್ರಿಯ ಪಿಶಾಚಿ ನೀನು!


ಪುಸಲಾಯಿಸಿ ಗೋಗರೆದು
‘ಬಾರಪ್ಪ ಬಾ ಜಾಣ
ಸುಮ್ಮನೆ ಕೂರೋ ನನ ದೇವಾ
ದಮ್ಮಯ್ಯ ಅತ್ತಿತ್ತ ಅಲುಗಬೇಡ’
ಕಾಡಿಬೇಡಿ ಎಳೆ ತಂದು
ಕುಕ್ಕರ ಬಡಿಸಿದರೂ
ಕತ್ತು ಆಕಾಶಕ್ಕೊಮ್ಮೆ
ಇನ್ನೊಮ್ಮೆ ಭೂಮಿಗೆ
ನನ್ನ ಸಹನೆ ಬೆಂಕಿಗೆ!

ಅದೆಷ್ಟೋ ಕಾಲದಿಂದ
ಎಣ್ಣೆ ಬಾಚಣಿಗೆ ಸೋಕದೇ ಸೊಕ್ಕಿ
ಜಡೆಗಟ್ಟಿದ ನಿನ್ನ ಕೂದಲೋ
ದಂಡಕಾರಣ್ಯ
ಎಲ್ಲಿ ಹೊಕ್ಕು ಹೇಗೆ ಬಿಡಿಸುವುದೋ
ಪರಮ ಸಿಕ್ಕು.


ಇವರದೋ ಒಂದೇ ಆಗ್ರಹ
ಹೊತ್ತು ಮುಳುಗುತ್ತಿದೆ
ಬೇಗ ಮುಗಿಸು
ಬೇಗ ಮುಗಿಸು.

ಅದೇನು ಅಂತಿಂಥಾ ಜಡೆಯೇ
ಹೆಣೆದು ಬಿಸಾಡಲು?
ಹೆಣೆಯ ಬೇಕೀಗ
ಸಹಸ್ರ ಕಾಲಿನ ಜಡೆಯೇ
ಸಹಸ್ರ ನಡೆಯ ಪಾದದೆಜಮಾನನಿಗೆ!

ತಲೆ ಅಲುಗಿಸದೇ
ಸುಮ್ಮನೆ ಕೂರೋ ಮಹಾರಾಯ
ಈಗಿನ್ನೂ ಪುಂಡ ಕೂದಲಿಗೆ
ಎಣ್ಣೆ ಮಿದಿಯುತ್ತಿದ್ದೇನೆ.
ಉಂಡೆಗಟ್ಟಿದ ಸುರುಳಿ
ಗುಂಗುರು ಕೂದಲ
ಎಳೆ ಎಳೆ ಬಿಡಿಸಿ
ಹುಡಿ ಮಾಡಿ
ನಯಗೊಳಿಸಬೇಕಿದೆ.
ಇನ್ನಾಮೇಲೆ ತಾನೇ
ಜಡೆ ಹೆಣಿಗೆ?


ಛೇ! ಕೊಂಚ ತಾಳಿಕೊಳ್ಳಿ
ಬೈರಾಗಿಯೇನೋ ಸರಿಯೇ ಸರಿ
ನಿಮ್ಮದೂ ವರಾತವೇ?
ಕಾಣುತ್ತಿಲ್ಲವೇ ನನ್ನ
ಸಮರ ತಯಾರಿ!
ಕೈ ಕಾಲು ಹರಿಯುತ್ತಲೇ ಇಲ್ಲ.
ಅಯ್ಯೋ ಹೊತ್ತು ಮೀರುತ್ತಿದೆಯಲ್ಲಾ.


ಅದೇನು ಶುಭಲಗ್ನವೋ
ಈಗ ನೀನೂ ಸುಮ್ಮನೆ ಕುಳಿತಿದ್ದೀಯ
ಹಠಮಾರಿ ಕೂದಲೂ ನೋಡು
ಮೆತ್ತಗಾಗಿ ಹೇಳಿದಂತೆ ಬಾಗಿ ಬಳುಕುತ್ತಿದೆ.
ಕೂದಲ ಜೊಂಪೆ ಇಷ್ಟಿಷ್ಟೇ ವಿಂಗಡಿಸಿ
ಒಂದು ಪಾದ, ಎರಡು ಪಾದ
ಮೂರು ಪಾದ, ನಾಲ್ಕನೆಯದು…….
ನೂರು ಇನ್ನೂರು
ಹ್ಹಾ.. ಸಹಸ್ರವೋ ಮತ್ತೂ ಮೇಲೆಷ್ಟೋ……..
ಜಡೆ ಹೆಣೆಯುತ್ತಾ ಹೆಣೆಯುತ್ತಾ
ಎಚ್ಚರದಲಿ ಮುಳಗಿ ಹೋಗಿದ್ದೇನೆ.
ಬೈರಾಗಿಗೇ ಮೈಮರೆವ ಜೊಂಪು!
ಯಾವ ಮಂಕುಬೂದಿಯೋ
ಇವರೋ ಮೂರ್ಚೆಹೋಗಿದ್ದಾರೆ
ಸೂರ್ಯ ಜ್ವಲಿಸುತ್ತಲೇ ಇದ್ದಾನೆ
ಹೊತ್ತಿಗೆ ಮುಳುಗುವುದೇ
ಮರೆತು ಹೋಗಿದೆ!


ಬೈರಾಗಿಗೆ
ಜಡೆ
ಹೆಣೆಯುತ್ತಲೇ
ಇದ್ದೇನೆ….
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...