Home / ಕವನ / ಕವಿತೆ / ಬೈರಾಗಿಯ ಜಡೆ

ಬೈರಾಗಿಯ ಜಡೆ


ಹೊತ್ತು ಕಂತುವ ಮೊದಲೇ
ನಿನಗೆ ಜಡೆ ಹೆಣೆದು
ಮುಗಿಸಲೇಬೇಕೆಂಬುದಿವರ
ಉಗ್ರ ಆದೇಶ.
ನೀನೋ ಅಂಡಲೆವ ಬೈರಾಗಿ!

ನಿಂತಲ್ಲಿ ನಿಲ್ಲುವವನಲ್ಲ
ಕೂತಲ್ಲಿ ಕೂರುವವನಲ್ಲ
ಕ್ಷಣಕ್ಕೊಮ್ಮೆ ಧಿಗ್ಗನೆದ್ದು
ಗರಗರ ದಿಕ್ಕು ತಪ್ಪಿ ತಿರುಗುವ
ವಾಚಾಳಿ ಪಾದದವನು!
ನನ್ನ ಯಾವ ಮಿಕ್ಕುಳಿದ ಋಣವೋ
ನನಗೆ ಮೆಟ್ಟಿದ ಪ್ರಿಯ ಪಿಶಾಚಿ ನೀನು!


ಪುಸಲಾಯಿಸಿ ಗೋಗರೆದು
‘ಬಾರಪ್ಪ ಬಾ ಜಾಣ
ಸುಮ್ಮನೆ ಕೂರೋ ನನ ದೇವಾ
ದಮ್ಮಯ್ಯ ಅತ್ತಿತ್ತ ಅಲುಗಬೇಡ’
ಕಾಡಿಬೇಡಿ ಎಳೆ ತಂದು
ಕುಕ್ಕರ ಬಡಿಸಿದರೂ
ಕತ್ತು ಆಕಾಶಕ್ಕೊಮ್ಮೆ
ಇನ್ನೊಮ್ಮೆ ಭೂಮಿಗೆ
ನನ್ನ ಸಹನೆ ಬೆಂಕಿಗೆ!

ಅದೆಷ್ಟೋ ಕಾಲದಿಂದ
ಎಣ್ಣೆ ಬಾಚಣಿಗೆ ಸೋಕದೇ ಸೊಕ್ಕಿ
ಜಡೆಗಟ್ಟಿದ ನಿನ್ನ ಕೂದಲೋ
ದಂಡಕಾರಣ್ಯ
ಎಲ್ಲಿ ಹೊಕ್ಕು ಹೇಗೆ ಬಿಡಿಸುವುದೋ
ಪರಮ ಸಿಕ್ಕು.


ಇವರದೋ ಒಂದೇ ಆಗ್ರಹ
ಹೊತ್ತು ಮುಳುಗುತ್ತಿದೆ
ಬೇಗ ಮುಗಿಸು
ಬೇಗ ಮುಗಿಸು.

ಅದೇನು ಅಂತಿಂಥಾ ಜಡೆಯೇ
ಹೆಣೆದು ಬಿಸಾಡಲು?
ಹೆಣೆಯ ಬೇಕೀಗ
ಸಹಸ್ರ ಕಾಲಿನ ಜಡೆಯೇ
ಸಹಸ್ರ ನಡೆಯ ಪಾದದೆಜಮಾನನಿಗೆ!

ತಲೆ ಅಲುಗಿಸದೇ
ಸುಮ್ಮನೆ ಕೂರೋ ಮಹಾರಾಯ
ಈಗಿನ್ನೂ ಪುಂಡ ಕೂದಲಿಗೆ
ಎಣ್ಣೆ ಮಿದಿಯುತ್ತಿದ್ದೇನೆ.
ಉಂಡೆಗಟ್ಟಿದ ಸುರುಳಿ
ಗುಂಗುರು ಕೂದಲ
ಎಳೆ ಎಳೆ ಬಿಡಿಸಿ
ಹುಡಿ ಮಾಡಿ
ನಯಗೊಳಿಸಬೇಕಿದೆ.
ಇನ್ನಾಮೇಲೆ ತಾನೇ
ಜಡೆ ಹೆಣಿಗೆ?


ಛೇ! ಕೊಂಚ ತಾಳಿಕೊಳ್ಳಿ
ಬೈರಾಗಿಯೇನೋ ಸರಿಯೇ ಸರಿ
ನಿಮ್ಮದೂ ವರಾತವೇ?
ಕಾಣುತ್ತಿಲ್ಲವೇ ನನ್ನ
ಸಮರ ತಯಾರಿ!
ಕೈ ಕಾಲು ಹರಿಯುತ್ತಲೇ ಇಲ್ಲ.
ಅಯ್ಯೋ ಹೊತ್ತು ಮೀರುತ್ತಿದೆಯಲ್ಲಾ.


ಅದೇನು ಶುಭಲಗ್ನವೋ
ಈಗ ನೀನೂ ಸುಮ್ಮನೆ ಕುಳಿತಿದ್ದೀಯ
ಹಠಮಾರಿ ಕೂದಲೂ ನೋಡು
ಮೆತ್ತಗಾಗಿ ಹೇಳಿದಂತೆ ಬಾಗಿ ಬಳುಕುತ್ತಿದೆ.
ಕೂದಲ ಜೊಂಪೆ ಇಷ್ಟಿಷ್ಟೇ ವಿಂಗಡಿಸಿ
ಒಂದು ಪಾದ, ಎರಡು ಪಾದ
ಮೂರು ಪಾದ, ನಾಲ್ಕನೆಯದು…….
ನೂರು ಇನ್ನೂರು
ಹ್ಹಾ.. ಸಹಸ್ರವೋ ಮತ್ತೂ ಮೇಲೆಷ್ಟೋ……..
ಜಡೆ ಹೆಣೆಯುತ್ತಾ ಹೆಣೆಯುತ್ತಾ
ಎಚ್ಚರದಲಿ ಮುಳಗಿ ಹೋಗಿದ್ದೇನೆ.
ಬೈರಾಗಿಗೇ ಮೈಮರೆವ ಜೊಂಪು!
ಯಾವ ಮಂಕುಬೂದಿಯೋ
ಇವರೋ ಮೂರ್ಚೆಹೋಗಿದ್ದಾರೆ
ಸೂರ್ಯ ಜ್ವಲಿಸುತ್ತಲೇ ಇದ್ದಾನೆ
ಹೊತ್ತಿಗೆ ಮುಳುಗುವುದೇ
ಮರೆತು ಹೋಗಿದೆ!


ಬೈರಾಗಿಗೆ
ಜಡೆ
ಹೆಣೆಯುತ್ತಲೇ
ಇದ್ದೇನೆ….
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...